ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ
`ಕಾಂತಾರಾ’ ಸಿನಿಮಾದಲ್ಲಿ ನಟಿಸಿ, ನಿರ್ದೇಶಿಸಿ ದೇಶಾದ್ಯಂತ ಜನಪ್ರಿಯರಾದವರು ರಿಷಬ್ ಶೆಟ್ಟಿ, ಈ ಸಿನಿಮಾ ರಿಲೀಸ್ ಆದ ನಂತರ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಕುಟುಂಬದ ಕಡೆಗೆ ಗಮನಹರಿಸುವುದನ್ನು ಅವರು ಎಂದಿಗೂ ಕಡಿಮೆ ಮಾಡಿಲ್ಲ. ಸಿನಿಮಾದ ಜೊತೆಗೆ ಕುಟುಂಬಕ್ಕೂ ಮೊದಲ ಆದ್ಯತೆ ನೀಡುತ್ತಾರೆ. ಶೂಟಿಂಗ್ ನಲ್ಲಿ ಅದೆಷ್ಟೇ ಬ್ಯುಸಿ ಇದ್ದರೂ ಪತ್ನಿ ಪ್ರಗತಿಯೊಂದಿಗೆ ಆಗಾಗ ಪ್ರವಾಸ ಹೊರಡುತ್ತಾರೆ. ಈ ದಂಪತಿ ತಮ್ಮ ಭಾಗದ ಸಂಪ್ರದಾಯಗಳನ್ನು ತಪ್ಪದೆ ಪಾಲಿಸುತ್ತಾರೆ. ಸಂಸ್ಕೃತಿಯ ಜೊತೆ ಕನೆಕ್ಟ್ ಆಗುವಂತಹ ವಾತಾವರಣ ಸೃಷ್ಟಿಸುತ್ತಾರೆ.
ಪ್ರಗತಿ ಶೆಟ್ಟಿ ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮದುವೆ ಬಳಿಕ ಸಿನಿಮಾ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದರು. ಹಲವು ಚಿತ್ರಗಳಿಗೆ ಕಾಸ್ಟ್ಯೂಮ್ಸ್ ಡಿಸೈನರ್ ಆಗಿರುವ ಪ್ರಗತಿ, `ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು, ಬೆಲ್ ಬಾಟಂ, ಕಥಾಸಂಗಮ, ರುದ್ರಪ್ರಯಾಗ, 777 ಚಾರ್ಲಿ’ ಚಿತ್ರಗಳಿಗೂ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಪತಿಯ ಬಹುತೇಕ ಸಿನಿಮಾಗಳಿಗೆ ಅವರೇ ಕಾಸ್ಟ್ಯೂಮ್ ಡಿಸೈನರ್.

ಡಾಲಿ ಧನಂಜಯ್ ಹಾಗೂ ಧನ್ಯತಾ
ನಟ ರಾಕ್ಷಸ ಡಾಲಿ ಧನಂಜಯ್ ಬಹಳ ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಐಟಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದರು. `ಜಯನಗರ 4ನೇ ಬ್ಲಾಕ್’ ಕಿರುಚಿತ್ರದ ಮೂಲಕ ವಿಶಿಷ್ಟವಾದ ಛಾಪು ಮೂಡಿಸಿದರು. `ಡೈರೆಕ್ಟರ್ ಸ್ಪೆಷಲ್’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ ಅವರು, `ರಾಟೆ, ಬಾಕ್ಸರ್, ಜೆಸ್ಸಿ, ಅಲ್ಲಮ, ಹ್ಯಾಪಿ ನ್ಯೂ ಇಯರ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. `ಟಗರು’ ಚಿತ್ರದಲ್ಲಿ ಡಾಲಿಯಾಗಿ ಖಳನಟನ ಪಾತ್ರದಲ್ಲಿ ಮಿಂಚಿದ್ದು, ಇದೀಗ ಬಹುಭಾಷಾ ನಟರಾಗಿ ಹೊರಹೊಮ್ಮಿದ್ದಾರೆ. ನಾಯಕ ನಟ, ವಿಲನ್ ಆಗಿ ತಮ್ಮ ಪ್ರತಿಭೆ ಸಾಬೀತುಪಡಿಸಿರುವ ಧನಂಜಯ್ `ಬಡವ ರಾಸ್ಕಲ್, ಹೆಡ್ಬುಷ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಡಾ. ಧನ್ಯತಾರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಡಾ. ಧನ್ಯತಾ ಮೂಲತಃ ಚಿತ್ರದುರ್ಗದವರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆಯಾಗಿದ್ದಾರೆ. ವೈದ್ಯಕೀಯ ಪದವಿಯಲ್ಲಿ ರಾಂಕ್ ಪಡೆದಿದ್ದಾರೆ. ಧನಂಜಯ್ ಯಶಸ್ಸಿಗೆ ಕೈಜೋಡಿಸಿದ್ದಾರೆ.

ಯಶ್ ಮತ್ತು ರಾಧಿಕಾ ಪಂಡಿತ್
ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅತ್ಯಂತ ಜನಪ್ರಿಯ ಕಪ್. ಆರಂಭಿಕ ವೃತ್ತಿ ಜೀವನದಲ್ಲಿ ಒಟ್ಟಿಗೆ ಕೆಲಸ ಮಾಡಿದ ಯಶ್, ರಾಧಿಕಾ ಪ್ರೀತಿಸಿ ಮದುವೆಯಾದರು. ಯಶ್ ಮೊದಲು ಕಿರುತೆರೆಯ `ನಂದಗೋಕುಲ, ಮಳೆಬಿಲ್ಲು, ಉತ್ತರಾಯಣ, ಪ್ರೀತಿ ಇಲ್ಲದ ಮೇಲೆ, ಶಿವ’ ಧಾರಾವಾಹಿಗಳಲ್ಲಿ ನಟಿಸಿ, ಜಂಭದ ಹುಡುಗಿ ಮೂಲಕ ಚಿತ್ರರಂಗ ಪ್ರವೇಶಿಸಿದರು.
`ಮೊದಲ ಸಲ, ಕಿರಾತಕ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಮೊಗ್ಗಿನ ಮನಸು, ಗಜಕೇಸರಿ, ಮಿಸ್ಟರ್ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸ್ಟ್ರೈಟ್ ಫಾರ್ವರ್ಡ್, ಕೆಜಿಎಫ್ ಚಾಪ್ಟರ್, ಕೆಜಿಎಫ್ ಚಾಪ್ಟರ್-2′ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಬಹು ನಿರೀಕ್ಷಿತ ಸಿನಿಮಾ `ಟಾಕ್ಸಿಕ್’ ಸದ್ಯ ಬಿಡುಗಡೆಯಾಗಬೇಕಿದೆ.
ರಾಧಿಕಾ ಪಂಡಿತ್ ಸಿನಿಮಾಗಳಿಂದ ದೂರವುಳಿದಿದ್ದರೂ, ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡು, ಸೂಪರ್ ಹಿಟ್ ಸಿನಿಮಾಗಳನ್ನೇ ಕೊಟ್ಟಿದ್ದಾರೆ.

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್
ಡಾರ್ಲಿಂಗ್ ಕೃಷ್ಣ (ನಾಗಪ್ಪ ಸುನೀಲ್ ಕುಮಾರ್) ಜಾಕಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. `ಹುಡುಗರು’ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದರು. ಕಿರುತೆರೆಯ `ಕೃಷ್ಣ ರುಕ್ಮಿಣಿ’ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದರು. `ಮದರಂಗಿ, ರುದ್ರತಾಂಡವ, ಚಾರ್ಲಿ, ದೊಡ್ಮನೆ ಹುಡ್ಗ, ಜಾನ್ ಜಾನಿ ಜನಾರ್ಧನ್, ಹುಚ್ಚ-2′ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. `ಲವ್ ಮಾಕ್ಟೇಲ್, ಲವ್ ಮಾಕ್ಟೇಲ್’ ಚಿತ್ರಗಳ ಮೂಲಕ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಅಡಿಯಿಟ್ಟರು. ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿ `ಕೃಷ್ಣ ಟಾಕೀಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ನಟಿ ಮಿಲನಾ ನಾಗರಾಜ್ `ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ಎನಿಸಿಕೊಂಡರು. `ನಮ್ ದುನಿಯಾ ನಮ್ ಸ್ಟೈಲ್, ಬೃಂದಾವನ, ಚಾರ್ಲಿ, ಜಾನಿ, ಲವ್ ಮಾಕ್ಟೇಲ್, ಮತ್ತೆ ಉದ್ಭವ, ಲವ್ ಮಾಕ್ಟೇವ್, ವಿಕ್ರಾಂತ್ ರೋಣ,’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಮುಗ್ಧ ಮುಖದ ಚೆಲುವೆ ಮಲೈಕಾ
ಮಲೈಕಾ ಟಿ ಸುಪಾಲ್ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯಾಗಿರುವ ನಟಿ. ದಾವಣಗೆರೆಯಲ್ಲಿ ಹುಟ್ಟಿ ಬೆಳೆದ ಈ ಚೆಲುವೆಗೆ ಬಾಲ್ಯದಿಂದಲೂ ಆ್ಯಕ್ಟಿಂಗ್ ಅಂದರೆ ಪ್ರಾಣ. ತಾಯಿ ತಂದೆಯ ಒತ್ತಾಯಕ್ಕೆ ಮಣಿದು ಎಂಜಿನಿಯರಿಂಗ್ ಪದವಿ ಪೂರೈಸಿದರು. ಮಗಳು ನಟನೆಗೆ ಹೋಗುವ ಮೊದಲು ತನ್ನ ಕೆರಿಯರ್ ಗೆ ಸಾಕಾಗುವಷ್ಟು ಶಿಕ್ಷಣ ಪಡೆಯಲಿ ಎಂಬುದು ತಾಯಿ ತಂದೆಯರ ಆಸೆಯಾಗಿತ್ತು. ನಂತರ ಹಲವು ಸೀರಿಯಲ್ ಆಡಿಷನ್ ಗಳಿಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಓಡಾಟ ಆರಂಭಿಸಿದ್ದರು.
ಈ ಸಂದರ್ಭದಲ್ಲಿ ದಿಲೀಪ್ ರಾಜ್ ತಮ್ಮ `ಹಿಟ್ಲರ್ ಕಲ್ಯಾಣ’ಕ್ಕಾಗಿ ಮುಗ್ಧ ಮುಖದ ಸುಂದರಿಯ ಹುಡುಕಾಟದಲ್ಲಿದ್ದರು. ಆಗ ಸಿಕ್ಕಿದ್ದೇ ಎಡವಟ್ಟು ರಾಣಿ ಲೀಲಾ. ಈ ಸೀರಿಯ್ ಮೂಲಕ ಮಲೈಕಾ ಕರ್ನಾಟಕದ ಮನೆಮಾತಾದರು. ಮಲೈಕಾ ಟಿ ಸುಪಾಲ್ ಚಿಕ್ಕಣ್ಣ ಅಭಿನಯದ `ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, `ವಿದ್ಯಾಪತಿ, ಕಲ್ಟ್’ ಸಿನಿಮಾದಲ್ಲಿ ಅಮೋಘವಾಗಿ ಅಭಿನಯಿಸಿದ್ದಾರೆ.

ಭಾಗ್ಯಲಕ್ಷ್ಮೀ ಭೂಮಿಕಾ ರಮೇಶ್
ಭೂಮಿಕಾ ರಮೇಶ್ ಕನ್ನಡ ಕಿರುತೆರೆ ನಟಿ. ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. `ಸೈ ಅಂಟೆ ಸೈ’ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ `ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್’ ವೇದಿಕೆಯಲ್ಲೂ ಹೆಜ್ಜೆ ಹಾಕಿದ್ದರು. ಭೂಮಿಕಾ `ದೊರೆಸಾನಿ’ ಸೀರಿಯಲ್ ಗೆ ಆಡಿಷನ್ ಕೊಟ್ಟಿದ್ದರು. ಆದರೆ, ಚಿಕ್ಕ ವಯಸ್ಸು ಎಂಬ ಕಾರಣಕ್ಕೆ ರಿಜೆಕ್ಟಟ್ ಆಗಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ `ಭಾಗ್ಯಲಕ್ಷ್ಮಿ’ ಸೀರಿಯಲ್ ನಲ್ಲಿ ಲಕ್ಷ್ಮೀ ಪಾತ್ರದ ಮೂಲಕ ಮನೆ ಮಾತಾದರು.
ಚಿಕ್ಕ ವಯಸ್ಸಿನಲ್ಲೇ ಸೀರಿಯಲ್ ಲೋಕದಲ್ಲಿ ಕಾಲಿಟ್ಟ ಅವರು ತಮ್ಮ ವಯಸ್ಸಿಗೂ ಮೀರಿದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಜನರ ಮೆಚ್ಚುಗೆ ಗಳಿಸಿದರು. `ಲಕ್ಷೀ ಬಾರಮ್ಮ, ನನ್ನರಸಿ ರಾಧೆ,’ ತೆಲುಗಿನ `ಮೇಘ ಸಂದೇಶಂ’ ಧಾರಾವಾಹಿಯಲ್ಲೂ ನಟಿಸಿದ್ದಾರೆ. `ಡಿಸೆಂಬರ್-24′ ಎಂಬ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.

ಸೊಗಸುಗಿತ್ತಿ ಸುಷ್ಮಾ ರಾವ್
ಸುಷ್ಮಾ ಕೃಷ್ಣಮೂರ್ತಿ ರಾವ್ ನಟಿ, ನರ್ತಕಿ ಮತ್ತು ದೂರದರ್ಶನ ನಿರೂಪಕಿ. ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಸುಷ್ಮಾ ಮೂಲತಃ ಕಾಫಿನಾಡು ಚಿಕ್ಕಮಗಳೂರಿನ ಕೊಪ್ಪದವರು. ಎಸ್. ನಾರಾಯಣ್ ನಿರ್ದೇಶನದ ಭಾಗೀರಥಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. `ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ’ ಸೇರಿದಂತೆ ಹಲವಾರು ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಮನೆಮಗಳಂತೆ ಗುರುತಿಸಿಕೊಂಡರು. ನಟನೆ ಜೊತೆ ನಿರೂಪಣೆಯಲ್ಲೂ ಸೈ. ಎನಿಸಿಕೊಂಡಿರುವ ಸುಷ್ಮಾ, `ತರಲೆ ನನ್ಮಕ್ಳು, ಜೀನ್ಸ್, ಮನೆ ಮನೆ ಮಹಾಲಕ್ಷೀ’ ಮುಂತಾದ ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಇತ್ತೀಚೆಗೆ ಆರಂಭಗೊಂಡ `ನನ್ನಮ್ಮ ಸೂಪರ್ ಸ್ಟಾರ್ ಸೀಸನ್’ರ ನಿರೂಪಣೆಯನ್ನೂ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಮೋಹಕ ನಟಿ ಮೋಕ್ಷಿತಾ ಪೈ
ಮೋಕ್ಷಿತಾ ಪೈ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಮೂಲತಃ ಮಂಗಳೂರಿನವರಾದ ಇವರು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿದ್ದಾರೆ. ಈಕೆ ಧಾರಾವಾಹಿಗೆ ಆಯ್ಕೆಯಾಗಿದ್ದು ಫೇಸ್ ಬುಕ್ ಮೂಲಕ. ಇವರ ನಟನೆಯ ಮೊದಲ ಸೀರೀಯಲ್ `ಪಾರು,’ ಈ ಧಾರಾವಾಹಿ ಮೂಲಕ ಕರ್ನಾಟಕದ ಜನಮನ ಗೆದ್ದರು. ಕನ್ನಡದ ಮಾತ್ರವಲ್ಲದೇ, ತಮಿಳು, ತೆಲುಗು ಸೀರಿಯಲ್ ಗಳಿಗೂ ಬಣ್ಣ ಹಚ್ಚಿದ್ದಾರೆ.
ನಿರ್ಣಯಾ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ಮೋಕ್ಷಿತಾ ಪೈ ಅವರಿಗೆ ಸಾಕಷ್ಟು ಸಿನಿಮಾ ಆಫರ್ಸ್ ಬರುತ್ತಿವೆ. ಮೋಕ್ಷಿತಾ ಪೈ ಬಿಗ್ ಬಾಸ್ ಕನ್ನಡ ಸೀಸನ್ ರಲ್ಲಿ 16ನೇ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದರು.





