ಚಿತ್ರ: ಎಡಗೈಯೇ ಅಪಘಾತಕ್ಕೆ ಕಾರಣ
ನಿರ್ದೇಶನ: ಸಮರ್ಥ ಕಡಕೋಳ
ನಿರ್ಮಾಣ: ಗುರುದತ್ ಗಾಣಿಗ, ರವಿಚಂದ್ರ, ರಾಜೇಶ್ ಕೀಳಂಬಿ
ತಾರಾಂಗಣ: ದಿಗಂತ್, ಅನೂಪ್ ಭಂಡಾರಿ, ನಿಧಿ ಸುಬ್ಬಯ್ಯ , ಧನು ಹರ್ಷ ಮುಂತಾದವರು
ರೇಟಿಂಗ್: 3/5
- ರಾಘವೇಂದ್ರ ಅಡಿಗ ಎಚ್ಚೆನ್.
ನಟ ದಿಗಂತ್, ನಿಧಿ ಸುಬ್ಬಯ್ಯ , ಧನು ಹರ್ಷ ಮುಂತಾದವರು ಅಭಿನಯಿಸಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಂದಿನಿಂದ (ಜೂನ್ 13) ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ. ಖ್ಯಾತ ನಿರ್ದೇಶಕ ಗುರುದತ್ ಗಾಣಿಗ, ಬ್ಲಿಂಕ್ ನಿರ್ಮಾಪಕ ರವಿಚಂದ್ರ ಮತ್ತು ಶಾಖಾಹಾರಿ ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ತನ್ನ ವಿಭಿನ್ನ ಪ್ರಚಾರ ಜೊತೆಗೆ ಟೈಟಲ್, ಟೀಸರ್, ಟ್ರೈಲರ್ ಮೂಲಕ ಭರವಸೆ ಹುಟ್ಟಿಸಿದ್ದ ಸಮರ್ಥ ಕಡಕೋಳ ನಿರ್ದೇಶನದ ಈ ಚಿತ್ರ ಹೇಗಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಎಡಗೈ ಬಳಸುವವರ ಕಷ್ಟ ಸುಖಗಳನ್ನು ಈ ಚಿತ್ರದ ಮೂಲಕ ನಿರ್ದೇಶಕ ಹೇಳಲು ಮುಂದಾಗಿದ್ದಾರೆ. ವಿಶಿಷ್ಟ ಕಥಾ ಹಂದರದ ಸಿನಿಮಾ ಇದಾಗಿದ್ದು ಲೋಹಿತ್ ಅಲಿಯಾಸ್ ಲೊಡ್ಡೆ ಲೋಹಿತ್ (ದಿಗಂತ್) ಒಬ್ಬ ಎಡಚರ ಅಥವಾ ಎಡಗೈ ಬಳಸುವ ವ್ಯಕ್ತಿ. ಹಾಗಾಗಿ ಅವನಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗಿರುತ್ತದೆ. "ಈ ಪ್ರಪಂಚವಿರುವುದು ಬರೇ ಬಲಗಿ ಬಳಕೆಯವರೊಗೆ "ಎನ್ನುವ ವೇದನೆಯಲ್ಲೇ ಅವನ ಜೀವನ ಸಾಗುತ್ತಿರುತ್ತದೆ ಆ ಸಮಯದಲ್ಲಿ ಅವನು ತನ್ನ ಗೆಳತ್ತಿ ಪೂಜಾ(ನಿಧಿ ಸುಬ್ಬಯ್ಯ) ಭೇಟಿಗಾಗಿ ಒಂದು ಐಷಾರಾಮಿ ಫ್ಲ್ಯಾಟ್ ಗೆ ಬರುತ್ತಾನೆ. ಒಂದು ರೊಮ್ಯಾಂಟಿಕ್ ಡೇಟಿಂಗ್ ಆಗಬೇಕಿದ್ದ ಆ ಭೇಟಿ ಪೂಜಾಳ ಸಾವಿನಿಂದ ಬೇರೆಯ ರೀತಿಯಲ್ಲಿ ತಿರುವು ಪಡೆಯುತ್ತದೆ. ಲೋಹಿತ್ ಕೈಗೆ ರಕ್ತ ಅಂಟಿಕೊಳ್ಳುತ್ತದೆ. ಅದಾದ ನಂತರದಲ್ಲಿ ಒಂದು. ಎರಡು.. ಮೂರು... ಹೀಗೆ ಸರಣಿ ಸಾವುಗಳು ನಡೆಯುತ್ತಾ ಹೋಗುತ್ತದೆ. ಅದಕ್ಕೆಲ್ಲಾ ಲೋಹಿತ್ ಎಡಗೈನೇ ಕಾರಣವಾ? ಅದರಿಂದ ಅವನು ಹೇಗೆ ಬಚಾವಾಗಿ ಬರುತ್ತಾನೆ? ತಿಳಿಯಲು ನೀವು ಈ ಸಿನಿಮಾ ನೋಡಬೇಕು.
ಡಾರ್ಕ್ ಕಾಮಿಡಿ ಕಥಾನಕವಿದಾಗಿದ್ದು ಇದನ್ನು ನಿರ್ದೇಶಕರು ಸಂಭಾಷಣೆ ಹಾಗೂ ಚಿತ್ರಕಥೆಯ ಮೂಲಕ ಮನರಂಜನಾತ್ಮಕವಾಗಿ ಹೇಳಲು ತೊಡಗಿದ್ದಾರೆ. ರಕ್ತ, ಕೊಲೆ ನಡೆಯುತ್ತಿದ್ದರೂ ಪ್ರೇಕ್ಷಕರು ನಾಯಕನ ಪೇಚಾಟ ಕಂಡು ನಗುತ್ತಾರೆ. ಪ್ರದ್ಯೋತನ್ ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದು. ಜೊತೆಗೆ ಛಾಯಾಗ್ರಹಣ, ಸಂಕಲನ ಸಹ ಉತ್ತಮವಾಗಿದೆ.
ದಿಗಂತ್ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಸಂಕಟಕ್ಕೆ ಸಿಕ್ಕಿ ಒದ್ದಾಡುವ ಯುವಕನಾಗಿ ಅವರ ಅಭಿನಯ ಪ್ರೇಕ್ಷಕರಿಗೆ ಮಜಾ ಕೊಡುತ್ತದೆ. ನಿಧಿ ಸುಬ್ಬಯ್ಯ ಪಾತ್ರ ಬರುವುದು ಕೆಲವೇ ಸಮಯವಾಗಿದ್ದರೂ ಕಥೆಯಲ್ಲಿ ಮಹತ್ವದ ತಿರುವು ಕಾಣಲು ಇದು ಕಾರಣವಾಗುತ್ತದೆ. ನಾಯಕಿ ಧನು ಹರ್ಷತಮ್ಮ ಮೊದಲ ಚಿತ್ರದಲ್ಲೇ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದು ಗಮನ ಸೇಳೆಯುತ್ತಾರೆ. . 'ಭಜರಂಗಿ' ಲೋಕಿ, ಕೃಷ್ಣ ಹೆಬ್ಬಾಳೆ ಪಾತ್ರಗಳು ಅಚ್ಚುಕಟ್ತಾಗಿ ಮೂಡಿ ಬಂದಿದೆ. ನಿರೂಪ್ ಭಂಡಾರಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಇನ್ನು ಕೆಲವೊಂದು ಕಡೆ ಲಾಜಿಕ್ ಇಲ್ಲದಂತಾಗೆ ಜೊತೆಗೆ ಚಿತ್ರದ ಮೊದಲಾರ್ಧದಲ್ಲಿ ಕಂಡ ವೇಗ ದ್ವಿತೀಯಾರ್ಧದಲ್ಲಿ ಮಾಯವಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳಬಹುದಾಗಿದೆ ಹಾಗಾಗಿ ಸ್ವಲ್ಪ ಸ್ಪಷ್ಟತೆ ಇರಬೇಕಿತ್ತು. ಇದರ ಹೊರತಾಗಿ ಡಾರ್ಕ್ ಹ್ಯೂಮರ್ ಜೊತೆಗೆ ಕಾಮಿಡಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಮಿಸ್ಟರಿ ಸಿನಿಮಾ ಪ್ರೇಕ್ಷಕರಿಗೆ ಈ ಸಿನಿಮಾ ಎಂದೂ ಮೋಸ ಮಾಡುವುದಿಲ್ಲ.