- ರಾಘವೇಂದ್ರ ಅಡಿಗ ಎಚ್ಚೆನ್.
'ಕಮಲ್ ಶ್ರೀದೇವಿ' ಎಂಬ ವಿಭಿನ್ನ ಶೀರ್ಷಿಕೆಯಡಿ ಸಿನಿಮಾವೊಂದು ಬರುತ್ತಿದ್ದು, ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಅನಾವರಣಗೊಂಡಿದೆ. ಸಚಿನ್ ಚಲುವರಾಯ ಸ್ವಾಮಿ ಹಾಗೂ ಸಂಗೀತ ಭಟ್ ಅಭಿನಯದ ಚಿತ್ರದ ಫಸ್ಟ್ ಲುಕ್ ಪ್ರೇಕ್ಷಕರ ಗಮನ ಸೆಳೆದಿದೆ. ಚಿತ್ರತಂಡ ಒಂದು ಹೆಣ್ಣಿನ ತಲೆಯನ್ನು ಪಾರಿವಾಳಗಳಿಂದ ಮರೆಸಿ, ಮೈಗೆ ಹಾವು, ಗೂಬೆ, ಕಾಗೆ, ಊಸರವಳ್ಳಿ, ನರಿ ಹೀಗೆ ಪ್ರಾಣಿಗಳು ಸುತ್ತಿಕೊಂಡಿರುವಂತೆ ಪೋಸ್ಟರ್ ರೆಡಿ ಮಾಡಿದೆ.
ಪೋಸ್ಟರ್ ಅನಾವರಣ ಕಾರ್ಯಕ್ರಮದಲ್ಲಿ, ನಾಯಕ ಸಚಿನ್ ಚಲುವರಾಯ ಸ್ವಾಮಿ, ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ಮಾಪಕ ರಾಜವರ್ಧನ್, ಹಿರಿಯ ನಟರಾದ ಉಮೇಶ್, ಮಿತ್ರ, ರಾಘು ಶಿವಮೊಗ್ಗ, ಅಕ್ಷಿತಾ ಬೋಪಯ್ಯ, ನಿರ್ದೇಶಕ ಸುನೀಲ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ, ಸಂಗೀತ ನಿರ್ದೇಶಕ ಕೀರ್ತನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.
ಕಮಲ್ ಶ್ರೀದೇವಿ ಚಿತ್ರಕ್ಕೂ ಕಮಲ್ ಹೆಸರಿಗೂ ಹಾಗೂ ಇತ್ತೀಚಿನ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಕಮಲ್ ಶ್ರೀದೇವಿ ಚಿತ್ರತಂಡ ಸ್ಪಷ್ಟನೆ ನೀಡಿದೆ. ಎನ್.ಚಲುವರಾಯ ಸ್ವಾಮಿ ಅರ್ಪಿಸುತ್ತಿದ್ದು, ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ನಡಿಯಲ್ಲಿ ಬಿ.ಕೆ.ಧನಲಕ್ಷ್ಮೀ ನಿರ್ಮಾಣ ಮಾಡಿದ್ದಾರೆ. ರಾಜವರ್ಧನ್ ಸಹ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ರಾಜವರ್ಧನ್ ಮಾತನಾಡಿ, "ಮಮ್ಮಿ ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ, ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ. ಎರಡು ವರ್ಷದ ಹಿಂದೆ ಪ್ರಾರಂಭವಾದ ಈ ಚಿತ್ರ ಇದೀಗ ಕೊನೆ ಹಂತಕ್ಕೆ ತಲುಪಿದೆ. ಇದೇ ವರ್ಷ ತೆರೆಗೆ ಬರಲಿದೆ" ಎಂದು ತಿಳಿಸಿದರು
.ಸಚಿನ್ ಚಲುವರಾಯಸ್ವಾಮಿ ಅಲ್ಲದೇ ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್, ಹಿರಿಯ ನಟ ಉಮೇಶ್ ಸೇರಿದಂತೆ ಸಾಕಷ್ಟು ಜನರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿ.ಎ.ಸುನೀಲ್ ಕುಮಾರ್ ನಿರ್ದೇಶನವಿರುವ ಈ ಚಿತ್ರಕ್ಕೆ ನಾಗೇಶ್ ವಿ.ಆಚಾರ್ಯ ಅವರ ಕ್ಯಾಮರಾ ವರ್ಕ್ ಇದ್ದು, ಗೀತರಚನೆಕಾರ ಪ್ರಮೋದ್ ಮರವಂತೆ ಬರೆದಿರುವ ಹಾಡುಗಳಿಗೆ ಕೀರ್ತನ್ ಸಂಗೀತ ನೀಡಿದ್ದಾರೆ. ಜ್ಞಾನೇಶ್ ಬಿ.ಮಠದ್ ಸಂಕಲನ, ಗುಣ ಸೆಟ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ
ಸದ್ದಿಲ್ಲದೇ ಸೆಟ್ಟೇರಿ ಅಂತಿಮ ಹಂತ ತಲುಪಿರುವ ಕಮಲ್ ಶ್ರೀದೇವಿ ಪೋಸ್ಟರ್ ಕಾನ್ಸೆಪ್ಟ್ ಮತ್ತು ಕ್ವಾಲಿಟಿ ನೋಡಿ ಕನ್ನಡ ಉದ್ಯಮದ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕನ್ನಡ, ತೆಲುಗು, ತಮಿಳಿನಲ್ಲಿ ಬಿಡುಗಡೆ ಸಜ್ಜಾಗ್ತಿರೋ ಕಮಲ್ ಶ್ರೀದೇವಿ ಸದ್ಯ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಚಿತ್ರದ ಪ್ರಚಾರ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಿದೆ.