- ರಾಘವೇಂದ್ರ ಅಡಿಗ ಎಚ್ಚೆನ್.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅರಸು ಅಂತಾರೆ ಕಾಂಬಿನೇಷನಲ್ಲಿ ಹೊಸ ಸಿನಿಮಾ ಬರುತ್ತಿದೆ. ಇಂದು ರಾಮನವಮಿಯ ದಿನ (ಏಪ್ರಿಲ್ 6)) ಬೆಂಗಳೂರಿನ ಬಸವೇಶ್ವರ ನಗರದ ಗಣೇಶ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಲವ್ ಇನ್ ಮಂಡ್ಯ ಖ್ಯಾತಿಯ ನಿರ್ದೇಶಕ ಹಾಗೂ ಚಿತ್ರಸಾಹಿತಿ ಅರಸುಅಂತಾರೆ
ಅವರ ದಶಕದ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.
‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾವೊಂದನ್ನು ಗಣೇಶ್ ಒಪ್ಪಿಕೊಂಡಿದ್ದಾರೆ. ಇಂದು ಈ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಗಣೇಶ್, ಅಮೃತಾ ಅಯ್ಯರ್, ರವಿ ಶಂಕರ ಗೌಡ, ರಂಗಾಯಣ ರಘು, ನಿರ್ಮಾಪಕ ಉದಯ್ ಮೆಹ್ತಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ. ಮಹೂರ್ತದ ನಂತರ ಚಿತ್ರದ ಸುದ್ದಿ ಗೋಷ್ಠಿ ನಡೆಯಿತು.
"ಬರಹಗಾರರು ಹೆಚ್ಚಾಗಿ ನಿರ್ದೇಶನಕ್ಕಿಳಿಯಬೇಕು. ಆಗ ಉತ್ತಮ ಚಿತ್ರಗಳು ಬರುತ್ತದೆ. ಉತ್ತಮ ಚಿತ್ರಗಳು ಬಂದಾಗ ಜನ ಥಿಯೇಟರ್ ಗೆ ಬರುತ್ತಾರೆ. ಉತ್ತಮ ಚಿತ್ರ ಮಾಡದೆ ಜನರು ಥಿಯೇಟರ್ ಗೆ ಬರುತ್ತಿಲ್ಲ ಎಂದರೆ ಅದು ಸರಿಯಲ್ಲ ಇದೊಂದು ಉತ್ತಮ ಕಥೆಯನ್ನು ಹೊಂದಿದ್ದ ಚಿತ್ರ. ಬಹಳ ಹಿಂದೆಯೇ ನಿರ್ದೇಶಕರು ಕಥೆ ಹೇಳಿದ್ದರು. ಆದರೆ ಮುಂದೂಡುತ್ತಾ ಬಂದಿದ್ದೆ. ಈಗ ಮುಹೂರ್ತ ಕೂಡಿ ಬಂದಿದೆ. ಹಾಸ್ಯ ಬೆರೆತ ಕಥೆಯ ಜೊತೆ ಫ್ಯಾಮಿಲಿ ಎಲ್ಲರೂ ಕೂತು ನೋಡಬಹುದಾದ ಚಿತ್ರ ಇದಾಗಲಿದೆ" ಎಂದು ಗಣೇಶ್ ಹೇಳಿದ್ದಾರೆ.
"ಹೊಂದಿಕೊಂಡು ಸಿನಿಮಾ ಮಾಡುವವರು, ಅಂದುಕೊಂಡ ಹಾಗೆ ಸಿನಿಮಾ ಮಾಡುವವರು ಎಂಬ ಎರಡು ವರ್ಗವಿದೆ. ನಾನು ಎರಡನೇ ವರ್ಗಕ್ಕೆ ಸೇರಿದ್ದೇನೆ. ಆದ ಕಾರಣ ಒಂದು ಹಿಟ್ ಚಿತ್ರ ನೀಡಿದ ನಂತರ ಮತ್ತೆ ನಿರ್ದೇಶನ ಮಾಡಲು ಇಷ್ಟು ಸಮಯ ತೆಗೆದುಕೊಂಡೆ. ಮುಂಬರುವ ದಿನಗಳಲ್ಲಿ ಚಿತ್ರದ ಮತ್ತಷ್ಟು ವಿವರ ನೀಡುತ್ತೇನೆ." ನಿರ್ದೇಶಕ ಅರಸು ಹೇಳಿದ್ದಾರೆ.
ಅರಸು ಅಂತಾರೆ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಎಸ್.ಎನ್.ಟಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಎಸ್.ಸಿ.ರವಿ ಅವರು ನಿರ್ಮಾಣ ಮಾಡಲಿದ್ದಾರೆ. ಗಣೇಶ್ಗೆ ನಾಯಕಿಯಾಗಿ ‘ಜೈ ಹನುಮಾನ್’ ಖ್ಯಾತಿಯ ಅಮೃತಾ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಕನ್ನಡಕ್ಕೆ ಅವರು ಎಂಟ್ರಿ ಕೊಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದ ಫಸ್ಟ್ ಶೆಡ್ಯೂಲ್ ಮುಗಿಸಿ ನಂತರ ಟೈಟಲ್ ಅನೌನ್ಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ..