ಶರತ್ ಚಂದ್ರ
ಟಿ.ಎನ್ ಸೀತಾರಾಮ್ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ. ಒಂದು ಕಾಲದಲ್ಲಿ ಕಿರುತೆರೆಯ ಸೂಪರ್ ಸ್ಟಾರ್ ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ನಟನಾಗಿ ಕಿರುತೆರೆಯನ್ನು ಇವರು ಆಳಿದ್ದರು. ದೂರದರ್ಶನದಲ್ಲಿ ಬರುತ್ತಿದ್ದ ‘ಮಾಯಾಮೃಗ ‘ಧಾರಾವಾಹಿ ಕಿರುತೆರೆಯಲ್ಲಿ ಒಂದು ದೊಡ್ಡ ಸಂಚಲನ ಮೂಡಿಸಿತ್ತು. ಆ ಕಾಲದಲ್ಲಿ ಅವರು ನಿರ್ದೇಶಿಸುತ್ತಿದ್ದ ಜನಪ್ರಿಯ ಸೀರಿಯಲ್ ‘ಮುಕ್ತ ‘ನೋಡಿದ ನಂತರವೇ ಎಷ್ಟೋ ಮನೆಯಲ್ಲಿ ರಾತ್ರಿಯ ಊಟ ಸಿಗುತ್ತಿತ್ತು.
ಆದರೆ ಹೊಸ ಹೊಸ ಹೊಸ ಚಾನೆಲ್ ಗಳು ಬಂದಮೇಲೆ ಸ್ಪರ್ಧೆಗಳು ಜಾಸ್ತಿಯಾಗಿ ಟಿ.ಎನ್ ಸೀತಾರಾಮ್ ಅವರಿಗೆ ಸ್ಲಾಟ್ ಸಿಗುವುದು ಕಷ್ಟವಾಗಿತ್ತು. ‘ಮಗಳು ಜಾನಕಿ’ ಧಾರಾವಾಹಿಯ ನಂತರ ಸೀತಾರಾಮ್ ನೇಪತ್ಯ ಕ್ಕೆ ಸರಿದಿದ್ದರು.
ಮೀರಾ ಮಾಧವ ರಾಘವ, ಮತದಾನ ಮತ್ತು ಕಾಫಿ ತೋಟ ದಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ಸೀತಾರಾಮ್ ಅವರ ಆ ಚಿತ್ರಗಳು ಕಮರ್ಷಿಯಲ್ ಆಗಿ ವರ್ಕೌಟ್ ಆಗಿರಲಿಲ್ಲ.
ಈಗ ಸುಮಾರು ವರ್ಷಗಳ ನಂತರ ‘ಮಾಯ
ಮರ್ಡರ್ ಕೇಸ್ ‘ ಎನ್ನುವ ವೆಬ್ ಸೀರೀಸ್ ಮೂಲಕ ಹಿಂತಿರುಗಿದ್ದಾರೆ.
ಮಾಜಿ ರೇಡಿಯೋ ಜಾಕಿ ಹಾಗೂ ಕವಲು ದಾರಿ,ಸ್ವಾತಿ ಮುತ್ತಿನ ಮಳೆ ಹನಿಯೇ, ಬ್ಯಾಚುಲರ್ ಪಾರ್ಟಿ ಸಿನಿಮಾಗಳ ಅಭಿನಯದ ಮೂಲಕ ಗಮನ ಸೆಳೆದಿದ್ದ, ಸಿರಿ ರವಿಕುಮಾರ್ ಈ ವೆಬ್ ಸೀರೀಸ್ ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಹೆಸರೇ ಹೇಳುವಂತೆ ಇದೊಂದು ಮರ್ಡರ್ ಮಿಸ್ಟರಿ ಕಥೆ.ಈ ವೆಬ್ ಸೀರೀಸ್ ನ ಪ್ರಮುಖ ಪಾತ್ರಗಳಲ್ಲಿ ಪವನ್ ವಡೆಯರ್, ಹನುಮಂತ ಗೌಡ, ಮಾನಸಿ ಸುಧೀರ್ ಅಭಿನಯಿಸುತ್ತಿದ್ದಾರೆ. ಎಂದಿನಂತೆ ಟಿಎನ್ ಸೀತಾರಾಮ್ ಕೂಡ ಪಬ್ಲಿಕ್ ಪ್ರಾಸಿ ಕೂಟರ್ ಆಗಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಸದ್ಯಕ್ಕೆ ಚಿತ್ರೀಕರಣ ನಡೆಯುತ್ತಿರುವುದರಿಂದ ಯಾವ ಓ ಟಿ ಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಈ ವೆಬ್ ಸೀರೀಸ್ ಸ್ಟ್ರೀಮ್ ಆಗಲಿದೆಯೆಂದು ತಿಳಿದು ಬಂದಿಲ್ಲ.
ಕನ್ನಡದಲ್ಲಿ ಇತ್ತೀಚಿನ ‘ಅಯ್ಯನ ಮನೆ ‘ ಬಿಟ್ಟರೆ ಯಾವ ವೆಬ್ ಸೀರಿಸ್ ಕೂಡ ಹೇಳಿಕೊಳ್ಳುವಷ್ಟು ಕ್ಲಿಕ್ ಆಗಿಲ್ಲ. ಯಾವ ಸಂಸ್ಥೆ ಮುಂದೆ ಬರುತ್ತೆ ಅಥವಾ ಸೀತಾರಾಮ್ ಅವರು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡುತ್ತಾರಾ ಕಾದು ನೋಡಬೇಕು.