ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು ಅವರು ಕನ್ನಡದ ಹೆಸರಾಂತ ಲೇಖಕರಾದರೆ, ಅವರ ಮಗನಾದ ಶ್ರೀ ತೇಜಸ್ವಿಯವರೂ ಸಹಾ ಅಷ್ಟೇ ಪ್ರಸಿದ್ದರು. ಅಂತಹ ಅಪ್ಪನ ಮಗನಾಗಿದ್ದರೂ ಅಪ್ಪನ ಬರವಣಿಗೆಗಿಂತ ವಿಭಿನ್ನವಾಗಿ ತಮ್ಮದೇ ವಿಶಿಷ್ಟವಾದ ಬರವಣಿಗೆಯ ಶೈಲಿಯಿಂದ ತಮ್ಮದೇ ಆದ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿರುವ ಹೆಗ್ಗಳಿಕೆ ಅವರದ್ದು. 70-80ರ ದಶಕದ ಅವರದ್ದೇ ಡೇರ್ ಡೆವಿಲ್ ಮುಸ್ತಾಫಾ ಕಥೆಯನ್ನೇ ಅತ್ಯಂತ ಸೊಗಸಾಗಿ ಸಿನಿಮಾಕರಿಸಿದ ನಿರ್ದೇಶಕರಾದ ಶಶಾಂಕ್ ಸೋಗಾಲ ಮತ್ತು ಅವರ ತಂಡಕ್ಕೆ ನಿಜಕ್ಕೂ ಒಂದು ದೊಡ್ಡ ಅಭಿನಂದನೆ ಹೇಳಲೇ ಬೇಕು. ಅದರಲ್ಲೂ ಪ್ರಸ್ತುತವಾಗಿ ಹಿಂದೂ ಮುಸ್ಲಿಂ ಸಂಬಂಧ ಪಟ್ಟ ಕತೆಯನ್ನು ತೆರೆಯ ಮೇಲೆ ತರುವುದೆಂದರೆ ಎರಡು ಅಲಗಿನ ಕತ್ತಿಯ ಮೇಲೆ ನಡೆದಂತಿದ್ದು, ಸ್ವಲ್ಪ ಹೆಚ್ಚು ಕಡಿಮೆ ಆದರೂ ಅಪಾಯ ತಪ್ಪಿದ್ದಲ್ಲ. ಅಂತಹ ಸೂಕ್ಷ್ಮ್ನವಾದ ವಿಷಯವನ್ನು ಅತ್ಯಂತ ನಾಜೂಕಿನ ರೀತಿಯಲ್ಲಿ ಒಮ್ಮೇ ಅವರು ಹೆಚ್ಚಾಗಿ ತೋರಿಸುತ್ತಿದ್ದಾರೇನೋ ಎಂದೆನಿಸುವಷ್ಟರಲ್ಲಿ ಮತ್ತೊಬ್ಬರನ್ನು ಅದಕ್ಕೆ ಸರಿ ಸಮನಾಗಿ ನಿಲ್ಲಿಸುತ್ತಾ, ಕಡೆಯ ದೃಶ್ಯದವರೆಗೂ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡಿರುವ ನಿರ್ದೇಶಕರ ಸಾಹಸ ನಿಜಕ್ಕೂ ಮೆಚ್ಚುವಂತಾಗಿದ್ದು ಖಂಡಿತವಾಗಿಯೂ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಅನೇಕ ಉದಯೋನ್ಮುಕ ನಟ/ನಟಿಯರು ಮತ್ತು ತಂತ್ರಜ್ಞರನ್ನು ಕೊಡುಗೆಯಾಗಿ ನೀಡುವಲ್ಲಿ ಸಫಲವಾಗಿದೆ ಎಂದರೂ ಅತಿಶಯೋಕ್ತಿ ಎನಿಸಲಾರದು.
ಸಿನಿಮಾ ಆರಂಭ ಆಗೋದೇ ತೇಜಸ್ವಿ ಮತ್ತು ಜಯಂತ್ ಕಾಯ್ಕಿಣಿಯವರ ಸಂದರ್ಶನದಲ್ಲಿ ಇಂದಿನ ಯುವಪೀಳಿಗೆಯು ಮತೀಯವಾದದ ಹಿಂದೆ ಹೋಗುವುದರ ಕುರಿತಾಗಿ ಆತಂಕ ವ್ಯಕ್ತಪಡಿಸಿದ ಒಂದು ಸಣ್ಣ ತುಣಿಕಿನಿಂದಲೇ ಆದರೂ ಸಿನಿಮಾದ ಅಂತ್ಯದವರೆಗೂ ಈ ದೃಶ್ಯವನ್ನು ನಿರ್ದೇಶಕರು ಏಕೆ ತೋರಿಸಿದರು ಎಂಬುದನ್ನು ಕುತೂಹಲಕಾರಿಯಾಗಿ ಇಟ್ಟಿಕೊಂಡು ಹೋಗಿರುವುದು ನಿರ್ದೇಶಕರ ಜಾಣ್ಮೆಯಾಗಿದೆ.

ಕತೆ 80ರ ದಶಕದ್ದಾಗಿರುವುದರಿಂದ ಇಡೀ ಸಿನಿಮಾದಲ್ಲಿ ಅದೇ ದಶಕಕ್ಕೆ ಅನುಗುಣವಾಗಿಯೇ ವಸ್ತ್ರವಿನ್ಯಾಸ್ಯ, ಕಟ್ಟಡಗಳು, ಸಂಭಾಷಣೆ ಮತ್ತು ಸಂಗೀತಗಳನ್ನು ಅಳವಡಿಸಿಕೊಂಡಿರುವುದು ಚಿತ್ರದ ಹೈಲೈಟ್. ಇದರ ಜೊತೆ ಜೊತೆಯಲ್ಲೇ ಬಳಸಿರುವ ಅನಿಮೇಷನ್ ದೃಶ್ಯಗಳು ಅದರಲ್ಲೂ ತಿರುಚುನಾಪಳ್ಳಿಯ ಪೈಲ್ವಾನರನ್ನು ಸೋಲಿಸುವ ರಣಧೀರ ಕಂಠೀರವ ಪಾತ್ರ ವರ ನಟ ಡಾ. ರಾಜಕುಮಾರ್ ಅವರ ಹೋಲಿಕೆಯಲ್ಲಿರುವುದು ಸಿನಿಮಾದ ಓಘವನ್ನು ಹೆಚ್ಚಿಸಿರುವುದಲ್ಲದೇ, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿ ಸಿಳ್ಳೇ ಗಿಟ್ಟಿಸುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಇತ್ತೀಚೆಗೆ ಹಾಸ್ಯದ ಹೆಸರಿನಲ್ಲಿ ಮಾಡುವ ಆಶ್ಲೀಲ ಸಂಭಾಷಣೆ ಮತ್ತು ಆಂಗೀಕ ಅಭಿನಯಗಳ ಸೋಂಕಿಲ್ಲದೇ, ಶುದ್ಧವಾದ ಸಂಭಾಷಣೆ ಮತ್ತು ಅಭಿನಯದಿಂದಲೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿರುವುದು ಸಹಾ ಸಿನಿಮಾದ ಯಶಸ್ವಿಗೆ ಕಾರಣವಾಗಿದೆ.





