– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ದೇಶದೊಳ್ ಹಾಗೂ ಕಲಿವೀರ ಚಿತ್ರಗಳ ಖ್ಯಾತಿಯ ನಿರ್ದೇಶಕ ಅವಿರಾಮ್ ಕಂಠೀರವ ಅವರು ನಿರ್ದೇಶನ ಮಾಡಿರುವ ಸಿನಿಮಾ ಕರಳೆ ಚಿತ್ರದ ವಿವಾದಿತ ಪೋಸ್ತರ್ ಇದೀಗ ಬ್ಯಾನ್ ಆಗಿದೆ. ನಟಿ ಕುಂಕುಮ್ ಹರಿಹರ ಅವರಿದ್ದ ಈ ಪೋಸ್ಟರ್ ಅನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಜೊತೆಗೆ ಮಾತುಕತೆಯ ನಂತರ ಬ್ಯಾನ್ ಮಾಡಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟಿ ಸೇರಿದಂತೆ ಚಿತ್ರತಂಡ ಮಾದ್ಯಮದವರಿಗೆ ಮಾಹಿತಿ ನೀಡಿದೆ.
ನಟಿ ಕುಂಕುಮ್ ಅವರ ಒಪ್ಪಿಗೆ ಪಡೆಯದೆ ಚಿತ್ರದ ಪೋಸ್ಟರ್ ಬಿಡುಗಡೆ ಆಗಿತ್ತು. ಅದೊಂದು ಸೂಕ್ಷ್ಮ ವಿಷಯವಾಗಿರುವ ಕಾರಣದಿಂದ ನಟಿ ಕುಂಕುಮ್ ಅವರು ವಾಣಿಜ್ಯಮಂಡಳಿಗೆ ದೂರು ಸಲ್ಲಿಸಿದ್ದು ಈ ಸಂಬಂಧ ಇಂದು ವಿವಾದ ಬಗೆಹರಿಸಿದ ವಾಣಿಜ್ಯ ಮಂಡಳಿ ಪೋಸ್ಟರ್ ಅನ್ನು ಬ್ಯಾನ್ ಮಾಡಿದೆ.
ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ ನಿರ್ದೇಶಕ ಅವಿರಾಮ್ ಕಂಠೀರವ ” ಈ ಪೋಸ್ಟರ್ ವಿವಾದ ಬೇಡವಾದ ವಿವಾದವಾಗಿದೆ, ನಾನು ನನ್ನ ದೃಷ್ಟಿಕೋನದಿಂದ ಈ ಪೋಸ್ಟರ್ ರಚಿಸಿದ್ದೆ. ಈ ಪೋಸ್ಟರ್ ನಿಂದ ಇಷ್ಟು ದೊಡ್ಡ ವಿವಾದ ಆಗಲಿದೆ ಎನ್ನುವ ಕಲ್ಪನೆ ನನಗಿರಲಿಲ್ಲ. ನಾನು ನನ್ನ ಸಿನಿಮಾವನ್ನು ಬಹಳ ಬಲವಾಗಿ ಪ್ರಸ್ತುತ ಪಡಿಸುವ ಕಾರಣಕ್ಕಾಗಿ ಈ ಪೋಸ್ಟರ್ ಮಾಡಿದ್ದೆ. ಅದರಲ್ಲಿ ತಾಯಿ ಮಗುವಿನ ಸಂಬಂಧ ತೋರಿಸಲಾಗಿದೆ. ಹಾಗಾಗಿ ನನ್ನ ದೃಷ್ಟಿಯಿಂದ ಅದು ವಿವಾದಿತ ಪೋಸ್ಟರ್ ಆಗಿರಲಿಲ್ಲ. ಆದರೆ ನಟಿ ಕುಂಕುಮ್ ಈ ಪೋಸ್ಟರ್ ಬಿಡುಗಡೆಗೆ ಮುನ್ನ ತನಗೆ ತೋರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾಗ ನಿರ್ದೇಶಕನಾಗಿ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಎಂದು ನಾನು ಭಾವಿಸಿದೆ. ಆದರೆ ಇಂದು ವಾಣಿಜ್ಯ ಮಂಡಳಿ ಅಧ್ಯಕ್ಷರು, ನಿರ್ಮಾಪಕರ ಸಂಘದ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ ನಂತರ ನಾನು ಇದೀಗ ನಟಿಯ ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆಗೆ ಮುನ್ನ ಅದನ್ನು ಅವರಿಗೆ ಹಾಗೂ ಮಂಡಳಿಯ ಅಧ್ಯಕ್ಷರಿಗೂ ತೋರಿಸಲು ಸಮ್ಮತಿಸಿದ್ದೇನೆ.” ಎಂದರು.
“ಸಿನಿಮಾ ಈ ಕಾಲಘಟ್ಟದಲ್ಲಿ ಜನರಿಗೆ ತಲುಪುವಂತೆ ಮಾಡಲು ಇಂತಹಾ ಪೋಸ್ಟರ್ ಅಗತ್ಯವಿದೆ ಎನ್ನುವುದು ನನ್ನ ಭಾವನೆಯಾಗಿತ್ತು. ನನ್ನ ದೃಷ್ಟಿಕೋನದ ಪ್ರಕಾರ ಇದು ಬೇಕಿತ್ತು ” ಎಂದು ನಿರ್ದೇಶಕ ಹೇಳಿದ್ದು “ಮುಂದೆ ಬಿಡುಗಡೆ ಆಗಲಿರುವ ಪೋಸ್ಟರ್ ಇಂತಹಾ ಯಾವ ವಿವಾದಕ್ಕೆ ಆಸ್ಪದ ನೀಡುವಂತಿರುವುದಿಲ್ಲ ” ಎನ್ನುವ ಭರವಸೆಯನ್ನು ನಿಡಿದ್ದಾರೆ.
ನಟಿಯಾದ ಕುಂಕುಮ್ ಹರಿಹರ ಅವರು ಮಾತನಾಡಿ “ನಾನಿಂದು ಈ ವಿಚಾರವನ್ನು ವಾಣಿಜ್ಯ ಮಂಡಳಿವರೆಗೆ ತಂದಿರುವ ಬಗೆಗೆ ನನಗೂ ಬೇಸರವಿದೆ. ಆದರೆ ನಾನು ಈ ಚಿತ್ರದ ಭಾಗವಾಗಿರುವ ಕಾರಣಕ್ಕೆ ಚಿತ್ರದ ಪೋಸ್ಟರ್ ಬಿಡುಗಡೆಯಂತಹಾ ವಿಷಯಗಳು ನನಗೂ ತಿಳಿಯಬೇಕಿದೆ.ಎನ್ನುವುದು ನನ್ನ ಮಾತು. ಆದರೆ ಈಗ ನಿರ್ದೇಶಕರು ಪೋಸ್ಟರ್ ಗೆ ಸಂಬಂಧಿಸಿ ಸ್ಪಷ್ಟನೆ ಕೊಟ್ಟಿರುವುದರಿಂದ ನಾನು ಸಹ ಅವರ ಮುಂದಿನ ನಡೆಗೆ ಒಪ್ಪಿಗೆ ಸೂಚಿಸಿದ್ದೇನೆ. ” ಎಂದರು.
“ನಾನೊಬ್ಬ ಕಲಾವಿದೆಯಾಗಿ ಈ ಪೋಸ್ಟರ್ ನೋಡಿದರೆ ನನಗೆ ಈ ಪೋಸ್ಟರ್ ಬಹಳ ಚೆನ್ನಾಗಿ ಕಾಣುತ್ತದೆ. ಆದರೆ ಪೋಸ್ಟರ್ ನೋಡುವವರೆಲ್ಲಾ ಇದನ್ನು ಕಲಾವಿದರ ದೃಷ್ಟಿಕೋನದಿಂದಲೇ ನೋಡುತ್ತಾರೆ ಎನ್ನಲಾಗುವುದಿಲ್ಲ. ಕೆಟ್ಟದಾಗಿ ನೋಡುವವರಿಗೆ ಅದು ಕೆಟ್ಟದಾಗಿಯೇ ಕಾಣುತ್ತದೆ. ನನಗೀಗಾಗಲೇ ಸಾಕಷ್ಟು ಜನರು ಕರೆ ಮಾಡಿ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸಿನಿಮಾ ಅದೆಷ್ಟು ಚೆನ್ನಾಗಿ ಬಂದಿದೆ ಎನ್ನುವುದು ನನಗೆ ತಿಳಿದಿದೆ. ಆದರೆ ಈ ಪೋಸ್ಟರ್ ನೋಡಿದರೆ ಜನರಿಗೆ ತಪ್ಪು ತಿಳುವಳಿಕೆ ಮೂಡಿಸುತ್ತದೆ. ಇದರ ಬಗ್ಗೆ ನಿರ್ದೇಶಕರು ಸ್ಪಷ್ಟನೆ ಕೊಡಬೇಕಾಗಿತ್ತು. ಹಾಗೆ ಸ್ಪಷ್ಟನೆ ಕೊಟ್ಟಿದ್ದೇ ಆಗಿದ್ದರೆ ನಾನಿಲ್ಲಿಗೆ ಬರುವ ವಿಷಯವೇ ಇರುತ್ತಿರಲಿಲ್ಲ, ಇಷ್ಟು ದೊಡ್ಡ ವಿವಾದವೂ ಆಗುತ್ತಿರಲಿಲ್ಲ.” ನಟಿ ಹೇಳಿದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ “ನಿರ್ದೇಶಕ ಅವಿರಾಮ್ ಈ ಹಿಂದಿನ ಚಿತ್ರ ಮಾಡಿದಾಗಲೂ ವಿವಾದ ಏರ್ಪಟ್ಟಿತ್ತು. ಆದರೆ ಈ ವಿವಾದವೀಗ ಶಮನವಾಗಿದೆ. ನಿರ್ದೇಶಕರು ಹಾಗೂ ದೂರು ಕೊಟ್ಟ ಕಲಾವಿದೆ ಸಹ ರಾಜಿ ಮಾಡಿಕೊಂಡಿದ್ದಾರೆ. ಹಾಗಾಗಿ ಇದನ್ನು ನಾವೀಗ ಅಂತಿಮವಾಗಿ ಬಗೆಹರಿಸಿದ್ದೇವೆ. ಮುಂದಿನ ದಿನದಲ್ಲಿ ನಿರ್ದೇಶಕರು ಯಾವುದೇ ಪೋಸ್ಟರ್ ಮಾಡಿದರೂ ಕಲಾವಿದರೆಲ್ಲರಿಗೆ ತೋರಿಸಿಯೇ ಮಾಡುತ್ತೇನೆಂದು ಒಪ್ಪಿಕೊಂಡಿದ್ದಾರೆ. ಹಾಗಾಗಿ ವಿವಾದ ಸುಖಾಂತವಾಗಿದೆ.” ಎಂದರು. “ಇಂದಿನ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಇಂತಹಾ ನಿರ್ದೇಶಕರಿಗೆ ಪಾಠವಾಗಬೇಕು” ಎಂದು ಬಣಕಾರ್ ಹೇಳಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹುಲು ಮಾತನಾಡಿ “ನಾವೆಂದೂ ಇಂತಹಾ ಸೂಕ್ಷ್ಮ ವಿಚಾರಗಳನ್ನು ಸಹಿಸುವುದಿಲ್ಲ. ಹೆಣ್ಣು ಮಕ್ಕಳಿಗೆ ನೋವಾಗುವ ಯಾವ ವಿಚಾರವನ್ನೂ ತೋರಿಸಲು ವಾಣಿಜ್ಯ ಮಂಡಳಿ ಒಪ್ಪಿಗೆ ಸೂಚಿಸಿರುವುದಿಲ್ಲ” ಎಂದಿದ್ದಾರೆ.
ಚಿತ್ರದ ನಿರ್ಮಾಪಕ ಫಾಲಾಕ್ಷ ಮಾತನಾಡಿ ” ಪೋಸ್ಟರ್ ವಿವಾದ ಈಗ ಸುಖಾಂತವಾಗಿದೆ. ಆದರೆ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಇದರಲ್ಲಿ ಯಾವ ಅಶ್ಲೀಲತೆ ಇಲ್ಲ.. ಇಂದು ಈ ವಿವಾದ ಬಗೆಹರಿದಿದ್ದು ಮುಂದಿನ ದಿನದಲ್ಲಿ ಯಾವ ಅಡ್ಡಿ ಆತಂತವಿಲ್ಲದೆ ಚಿತ್ರ ಪೂರ್ಣವಾಗುತ್ತದೆ ಎನ್ನುವ ಭರವಸೆ ಇದೆ. . ಇಂತಹಾ ಉತ್ತಮವಾದ ಚಿತ್ರಕ್ಕೆ ಮಾಧ್ಯಮದವರು, ಜನರು ಬೆಂಬಲಿಸಿ ಪ್ರೋತ್ಸಾಹಿಸಬೇಕು.” ಎಂದು ಅವರು ಮನವಿ ಮಾಡಿದರು.
ವಿಭಿನ್ನ ಕಥೆ ಹೊಂದಿರುವ ‘ಕರಳೆ’ ಸಿನಿಮಾ ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಸಮಾಜದ ವಾಸ್ತವ ಅಂಶಗಳೊಂದಿಗೆ ಚಿತ್ರೀಕರಿಸಲಾಗುತ್ತಿದೆ. ಎಮೋಷನಲ್, ರಾ, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ. ಸಿನಿಮಾ ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದೆ. ಇನ್ನು ಮೂರರಿಂದ ನಾಲ್ಕು ತಿಂಗಳಿನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.