ಜಾಗೀರ್ದಾರ್* .
ಫಸ್ಟ್ ಫ್ರೇಮ್ ಎಂಟರ್ಟೈನ್ಮೆಂಟ್ ನಿರ್ಮಿಸಿರುವ, ಕ್ರಿಶ್ ನಿರ್ದೇಶನದ ಹಾಗೂ ಕನ್ನಡದ ನಟಿ ಅನುಷ್ಕ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ "ಘಾಟಿ" ಚಿತ್ರ ಇದೇ ಸೆಪ್ಟೆಂಬರ್ 5 ರಂದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆಯ ಹಕ್ಕನ್ನು ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್(ನಟ ರಾಕಿಂಗ್ ಸ್ಟಾರ್ ಯಶ್ ತಾಯಿ) ಪಡೆದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ವಿತರಣಾ ವಲಯಕ್ಕೆ ಅಡಿಯಿಟ್ಟಿರುವ ಪುಷ್ಪ ಅವರು ತಮ್ಮ PA ಪ್ರೊಡಕ್ಷನ್ಸ್ ಮೂಲಕ ಕರ್ನಾಟಕದಾದ್ಯಂತ ಈ ಚಿತ್ರವನ್ನು ಅದ್ದೂರಿಯಾಗಿ ಶ್ರೀಧರ್ ಕೃಪ ಕಂಬೈನ್ಸ್ ಥ್ರೂ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಕ್ರಿಶ್, ನಾಯಕ ವಿಕ್ರಮ್ ಪ್ರಭು ಹಾಗೂ ವಿತರಕಿ ಪುಷ್ಪ ಅರುಣ್ ಕುಮಾರ್ ಭಾಗಿಯಾಗಿದ್ದರು.

ನಾನು ಈ ಚಿತ್ರವನ್ನು ನೋಡಿದ್ದೇನೆ. ಬಹಳ ಚೆನ್ನಾಗಿದೆ. ಈ ಚಿತ್ರದ ನಾಯಕಿ ಅನುಷ್ಕಾ ಶೆಟ್ಟಿ ನಮ್ಮ ಕನ್ನಡದ ಹೆಣ್ಣು ಮಗಳು. ಅವರು ನಟಿಸಿರುವ ಚಿತ್ರವನ್ನು ನಾನು ಮೊದಲ ಚಿತ್ರವಾಗಿ ವಿತರಣೆ ಮಾಡುತ್ತಿರುವುದು ಖುಷಿಯಾಗಿದೆ. ಕರ್ನಾಟಕದಾದ್ಯಂತ ಅದ್ದೂರಿಯಾಗಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು PA ಪ್ರೊಡಕ್ಷನ್ಸ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಕನ್ನಡ ವರ್ಷನ್ ಸಹ ಬಿಡುಗಡೆಯಾಗುತ್ತಿದ್ದು, ಅದರ ವಿತರಣೆಯನ್ನು ನಾವೇ ಮಾಡುವ ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು ನಮ್ಮ ಸಂಸ್ಥೆಯ ಮೂಲಕ ವಿತರಣೆ ಮಾಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಪುಷ್ಪ ಅರುಣ್ ಕುಮಾರ್.
ಪಶ್ಚಿಮ ಘಟ್ಟದ ಮಹಿಳೆ ಸ್ವೀಟಿ ಶೆಟ್ಟಿ (ಅನುಷ್ಕಾ ಶೆಟ್ಟಿ), ಪೂರ್ವ ಘಟ್ಟದ ಘಾಟಿಯಾಗಿ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಆಂಧ್ರ ಪ್ರದೇಶ ಮತ್ತು ಒರಿಸ್ಸಾದ ಗಡಿ ಪ್ರದೇಶದಲ್ಲಿ ನಡೆಯುವ ಕಥೆ ಇದು. ಅಲ್ಲಿನ ಘಟ್ಟದ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಘಾಟಿ ಎಂದು ಕರೆಯಲಾಗುತ್ತದೆ. ಅವರ ವಿಶೇಷತೆಯೆಂದರೆ, ಒಬ್ಬೊಬ್ಬ ಘಾಟಿ 120 ರಿಂದ 150 ಕೆಜಿ ತೂಕ ಎತ್ತಿಕೊಂಡು ಬೆಟ್ಟ ಹತ್ತುತ್ತಾರೆ. ಅವರನ್ನು ಗಾಂಜಾ ಸಾಗಿಸುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಅವರ ಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಇದುವರೆಗೂ ಯಾರೂ ಅವರ ಕಥೆಯನ್ನು ಹೇಳಿರಲಿಲ್ಲ. ಅನುಷ್ಕಾ ಇಲ್ಲಿ ಶೀಲಾವತಿ ಎಂಬ ಪಾತ್ರ ಮಾಡಿದ್ದಾರೆ. ದೇಸಿರಾಜು ಎಂಬ ಪಾತ್ರದಲ್ಲಿ ವಿಕ್ರಮ್ ಪ್ರಭು ನಟಿಸಿದ್ದಾರೆ. ಅದ್ಭುತವಾಗಿ ಲೊಕೇಶನ್ಗಳಲ್ಲಿ ನಾವು ಚಿತ್ರೀಕರಣ ಮಾಡಿದ್ದೇವೆ. ಸಾಹಸ ಮತ್ತು ಎಮೋಷನ್ ಅದ್ಭುತವಾಗಿ ಮೂಡಿಬಂದಿರುವ ಚಿತ್ರ ಇದು. ಎರಡೂವರೆ ಗಂಟೆ ಅವಧಿಯ ಈ ಚಿತ್ರ ಒಂದು ಕ್ಷಣ ಬೋರ್ ಹೊಡೆಸುವುದಿಲ್ಲ. ಒಂದು ಕ್ಷಣ ಸಹ ಫೋನ್ ನೋಡುವ ಅವಕಾಶ ಸಿಗದಿರುವಷ್ಟು ಬಿಗಿಯಾದ ಚಿತ್ರಕಥೆ ರಚಿಸಿದ್ದೇವೆ. ಈ ಚಿತ್ರದ ಬಗ್ಗೆ ಬಹಳ ಹೆಮ್ಮೆ ಇದೆ. ಈ ಚಿತ್ರವನ್ನು ಜನ ಸಹ ಸ್ವೀಕರಿಸಿ, ಯಶಸ್ವಿಗೊಳಿಸುತ್ತಾರೆ ಎಂಬ ನಂಬಿಕೆ ಇದೆ. ಕರ್ನಾಟಕದಲ್ಲಿ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿರುವ ಪುಷ್ಪ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಕ್ರಿಶ್.





