ಸ್ಯಾಂಡಲ್ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ನಿನ್ನೆಯಷ್ಟೇ ಸಂಜು ವೆಡ್ಸ್ ಗೀತಾ-2 ಸಿನಿಮಾ ನಿರ್ದೇಶಕ ನಾಗಶೇಖರ್ ಅವರು ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ಗೆ ದೂರು ಕೊಡುವುದಾಗಿ ಹೇಳಿದ್ದರು. ರಚಿತಾ ರಾಮ್ ಸಿನಿಮಾ ನಾಯಕಿಯಾಗಿ ಪ್ರಮೋಷನ್ಗೆ ಬರಲಿಲ್ಲ ಎಂದು ಆರೋಪಿಸಿದ್ದರು. ಇದೀಗ ರಚಿತಾ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ. ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ನಲ್ಲಿ ಮತ್ತೊಂದು ದೂರು ದಾಖಲಾಗಿದೆ.
ನಿರ್ದೇಶಕ ನಾಗಶೇಖರ್ ಅವರು ರಚಿತಾ ರಾಮ್ ವಿರುದ್ಧ ಆರೋಪ ಮಾಡಿದ್ದರು. ಈಗ ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕರೊಬ್ಬರು ನಟಿಯ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ. ಸಿನಿಮಾಗಾಗಿ ಪಡೆದಿದ್ದ ಅಡ್ವಾನ್ಸ್ ಹಣ ವಾಪಸ್ ಕೊಡದೆ ರಚಿತಾ ರಾಮ್ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಿನಿಮಾವೊಂದರಲ್ಲಿ ನಟಿಸುವುದಾಗಿ ರಚಿತಾ ಅವರು ಅಡ್ವಾನ್ಸ್ ಪಡೆದಿದ್ದರಂತೆ. ಆದರೆ ಆ ಸಿನಿಮಾದಲ್ಲಿ ನಟಿಸದೆ ಅಡ್ವಾನ್ಸ್ ವಾಪಸ್ ಕೊಡದೆ ಮೋಸ ಮಾಡಿದ್ದಾರೆಂದು ಹಿರಿಯ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಆರೋಪಿಸಿದ್ದಾರೆ.
ಇದೇ ವಿಚಾರವಾಗಿ 10 ತಿಂಗಳ ಹಿಂದೆಯೂ ಜಗಳ ನಡೆದಿತ್ತು ಎನ್ನಲಾಗಿದೆ. 8 ವರ್ಷಗಳ ಹಿಂದೆ ನಟ ಉಪೇಂದ್ರ ಹಾಗೂ ರಚಿತಾ ರಾಮ್ ಕಾಂಬಿನೇಷನ್ನಲ್ಲಿ "ಉಪ್ಪಿ ರುಪ್ಪಿ" ಸಿನಿಮಾ ಮೂಡಿಬರಬೇಕಿತ್ತು. ಈ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ರಚಿತಾ ಮೊದಲಿಗೆ ಒಪ್ಪಿಕೊಂಡಿದ್ದರು. ಆಗ ಈ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ಅವರ ನಿರ್ಮಾಣ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಸಿನಿಮಾ ಒಪ್ಪಿಕೊಂಡಿದ್ದ ರಚಿತಾ ಅವರು ಅಡ್ವಾನ್ಸ್ ಆಗಿ ಸುಮಾರು 13 ಲಕ್ಷ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಬಳಿಕ ಚಿತ್ರತಂಡ ಬ್ಯಾಂಕಾಕ್ನಲ್ಲಿ ಶೂಟಿಂಗ್ ಪ್ಲ್ಯಾನ್ ಮಾಡಿತ್ತು. ಆದರೆ ಟಿಕೆಟ್ ಬುಕ್ ಮಾಡಿದರೂ ರಚಿತಾ ರಾಮ್ ಬರಲಿಲ್ಲ, ಕೊನೆಗೆ ಬರ್ತೀನಿ, ಬರ್ತೀನಿ ಎನ್ನುತ್ತಲೇ ಸತಾಯಿಸಿದ್ದರು ಎಂದು ಆರೋಪಿಸಿದ್ದಾರೆ.ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಅವರು ಕೂಡ ಹದಿನೈದು ದಿನಗಳ ಕಾಲ ನಟಿಗಾಗಿ ಕಾದಿದ್ದರು. ಆದರೆ ರಚಿತಾ ರಾಮ್ ಬರದಿದ್ದರಿಂದ ಹೀರೋ ಭಾಗದ ಶೂಟಿಂಗ್ ಮುಗಿಸಿ ಚಿತ್ರತಂಡ ವಾಪಸ್ ಆಗಿತ್ತು. ರಚಿತಾ ರಾಮ್ನಿಂದ ಸುಮಾರು 1.5 ಕೋಟಿ ರೂಪಾಯಿ ಕಳೆದುಕೊಂಡಿದ್ದೇನೆ. ಅಲ್ಲದೆ ಅಂದಿನಿಂದಲೂ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಡ್ವಾನ್ಸ್ ಹಣ ವಾಪಸ್ ಕೊಡಲಿಲ್ಲ ಎಂಬ ಆರೋಪದ ಮೇರೆಗೆ ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ನಲ್ಲಿ ಮತ್ತೊಂದು ದೂರು ದಾಖಲಾಗಿದೆ ಎಂದು ವರದಿಯಾಗಿದೆ. ತಮ್ಮ ಮೇಲಿನ ಈ ಆರೋಪಗಳ ಬಗ್ಗೆ ನಟಿ ರಚಿತಾ ರಾಮ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.