– ರಾಘವೇಂದ್ರ ಅಡಿಗ ಎಚ್ಚೆನ್.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ರಾಣಿ’ ಇದೀಗ ಒಂದು ಮಹತ್ವದ ಮತ್ತು ಸ್ಫೂರ್ತಿದಾಯಕ ತಿರುವಿಗೆ ಸಾಕ್ಷಿಯಾಗಿದೆ. ಇದುವರೆಗೆ ಕೌಟುಂಬಿಕ ಸವಾಲುಗಳನ್ನೇ ಎದುರಿಸುತ್ತಿದ್ದ ರಾಣಿ, ಇದೀಗ ತನ್ನ ಅರ್ಧಕ್ಕೆ ನಿಂತ ಬಾಲ್ಯದ ಓದಿನ ಕನಸನ್ನು ನನಸು ಮಾಡಿಕೊಳ್ಳಲು ಮುಂದಾಗುವ ಮೂಲಕ ಹೊಸ ಪಯಣ ಆರಂಭಿಸಿದ್ದಾಳೆ.
ತಾಯಿಯ ಜೈಲುವಾಸದ ಅನಿವಾರ್ಯತೆಯಿಂದಾಗಿ ವಿದ್ಯಾಭ್ಯಾಸದಿಂದ ವಂಚಿತಳಾಗಿದ್ದ ರಾಣಿ, ಈಗ ಸಮಾಜದ ಟೀಕೆಗಳನ್ನು ಮೆಟ್ಟಿ ನಿಂತು ಶಾಲೆಯ ಮೆಟ್ಟಿಲು ಹತ್ತಲು ಸಿದ್ಧಳಾಗಿದ್ದಾಳೆ. ತನ್ನ ಶಾಲೆಯ ಆವರಣ ಪ್ರವೇಶಿಸಿದಾಗ ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಾಣಿಯನ್ನು ಹೇಗೆ ಬರಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ತನ್ನ ವಯಸ್ಸಿನ ಮಕ್ಕಳ ಜೊತೆ ಬೆಂಚಿನ ಮೇಲೆ ಕುಳಿತು ಪಾಠ ಕೇಳುವಾಗ ರಾಣಿ ಅನುಭವಿಸುವ ಭಾವನೆಗಳು ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುವುದರಲ್ಲಿ ಸಂಶಯವಿಲ್ಲ. ಈ ಪಯಣ ಕೇವಲ ಅಕ್ಷರ ಕಲಿಯುವುದಲ್ಲ, ಬದಲಾಗಿ ಅವಳ ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಸಾಹಸವಾಗಿದೆ. “ಕಲಿಯಲು ವಯಸ್ಸಿನ ಹಂಗಿಲ್ಲ, ಸಾಕ್ಷರತೆ ಎಲ್ಲರ ಹಕ್ಕು” ಎಂಬ ಸತ್ಯವನ್ನು ರಾಣಿ ತನ್ನ ನಿರ್ಧಾರದ ಮೂಲಕ ಸಾರುತ್ತಿದ್ದಾಳೆ.
ಆದರೆ, ರಾಣಿಯ ಈ ಹಾದಿ ಸುಗಮವಾಗಿಲ್ಲ. ಮನೆಯಲ್ಲಿ ಎಲ್ಲರ ಸಹಮತವಿಲ್ಲದಿರುವುದು ಒಂದೆಡೆಯಾದರೆ, ಸಮಾಜದ ಅಪಹಾಸ್ಯ ಹಾಗೂ ಸರಳಾ ಅಂತಹ ಪಾತ್ರಗಳು ಒಡ್ಡುತ್ತಿರುವ ಅಡೆತಡೆಗಳು ಮತ್ತೊಂದೆಡೆ. ಸಮಾಜ ಏನೆಂದುಕೊಂಡೀತು ಎಂಬ ಭಯದ ನಡುವೆಯೂ, ತನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ರಾಣಿ ಹೋರಾಡುತ್ತಿದ್ದಾಳೆ. ಶಾಲೆಯ ಮೊದಲ ದಿನದ ಆತಂಕ, ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವಳನ್ನು ಬರಮಾಡಿಕೊಳ್ಳುವ ರೀತಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ʻರಾಣಿʼ ಧಾರಾವಾಹಿಯ ಈ ಹೊಸ ತಿರುವು ಕೇವಲ ಮನರಂಜನೆಗೆ ಸೀಮಿತವಾಗದೆ, ಶಿಕ್ಷಣದ ಮಹತ್ವದ ಬಗ್ಗೆ ಸಮಾಜಕ್ಕೆ ಪ್ರಬಲ ಸಂದೇಶ ನೀಡುತ್ತಿದೆ. ಮನೆಯ ಜವಾಬ್ದಾರಿಗಳ ನಡುವೆ ತಮ್ಮ ಆಸೆಗಳನ್ನು ಹತ್ತಿಕ್ಕಿಕೊಂಡಿರುವ ಎಷ್ಟೋ ಹೆಣ್ಣುಮಕ್ಕಳಿಗೆ ರಾಣಿಯ ಪಾತ್ರ ಇಂದು ದೊಡ್ಡ ಪ್ರೇರಣೆಯಾಗಿದೆ. ಅಡೆತಡೆಗಳನ್ನು ಮೀರಿ ರಾಣಿಯ ಜ್ಞಾನದ ಪಯಣ ಯಶಸ್ವಿಯಾಗುತ್ತದೆಯೇ? ಅವಳ ಓದಿಗೆ ಅಡ್ಡಿಪಡಿಸುವವರಿಗೆ ರಾಣಿ ಹೇಗೆ ತಕ್ಕ ಉತ್ತರ ನೀಡುತ್ತಾಳೆ? ಎಂಬುದನ್ನು ನೋಡಲು ಪ್ರತಿ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ರಾಣಿ’ ಧಾರಾವಾಹಿಯನ್ನು ವೀಕ್ಷಿಸಬಹುದು.





