ಸರಸ್ವತಿ ಜಾಗೀರ್ದಾರ್*
ಕೆ.ಜಿ.ಎಫ್, ಸಲಾರ್, ಭೈರತಿ ರಣಗಲ್, ಉಗ್ರಂ ನಂಥಹ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರವಿ ಬಸ್ರೂರು, ಈಗ ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಕಲೆಯ ಹಿರಿಮೆಯನ್ನು ಜಗತ್ತಿಗೆ ಹೇಳಲು ಹೊರಟಿದ್ದಾರೆ, ಯಕ್ಷಗಾನ ಪ್ರಸಂಗ ಆಧಾರಿತ "ವೀರ ಚಂದ್ರಹಾಸ" ಎಂಬ ಚಿತ್ರವನ್ನು ಅವರು ನಿರ್ದೇಶಿಸಿದ್ದು, ಆ ಚಿತ್ರ ಇದೇ ತಿಂಗಳ 18 ರಂದು ಬಿಡುಗಡೆಯಾಗುತ್ತಿದೆ.
ಎಸ್ ಎಸ್ ರಾಜಕುಮಾರ್ ನಿರ್ಮಾಣದ, ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ಈ ಚಿತ್ರದ ಮೂಲಕ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ, ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು ಬೆಳ್ಳಿ ಪರದೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಯಕ್ಷಗಾನ ಕಲಾವಿದರನ್ನು ಗೌರವಿಸುವ ಸಮಾರಂಭ ಕುಂದಾಪುರದ ಆನೆಗುಡ್ಡೆ ಶ್ರೀವಿನಾಯಕನ ಸನ್ನಿಧಿಯಲ್ಲಿ ನಡೆಯಿತು.
ವೇದಿಕೆಯಲ್ಲಿ ನಿರ್ದೇಶಕ ರವಿ ಬಸ್ರೂರ್ ಮಾತನಾಡುತ್ತಾ, ಇದು ನನ್ನ ಸುಮಾರು ವರ್ಷಗಳ ಕನಸು. ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂದು ಈ ಚಿತ್ರ ಮಾಡಲು ಹೊರಟಾಗ ನಾಗರಾಜ್ ನೈಕಂಬ್ಳಿ, ನವೀನ್ ಶೆಟ್ಟಿ ಅವರುಗಳು ನನ್ನ ಬೆನ್ನಿಗೆ ನಿಂತರು. ಚಂದ್ರಹಾಸನಾಗಿ ಶಿತಿಲ್ ಶೆಟ್ಟಿ, ದುಷ್ಟಬುದ್ದಿಯಾಗಿ ಪ್ರಸನ್ನ ಶೆಟ್ಟಿಗಾರ್ ಅಲ್ಲದೆ ಪ್ರತಿಯೊಬ್ಬರೂ ಚಿತ್ರಕ್ಕಾಗಿ ಕೊಟ್ಟ ಡೆಡಿಕೇಶನ್ ದೊಡ್ಡದು. ಚಿತ್ರದ ಎಲ್ಲಾ ಪಾತ್ರಗಳನ್ನು ನಿಜವಾದ ಯಕ್ಷಗಾನ ಕಲಾವಿದರೇ ಮಾಡಿದ್ದಾರೆ. ಹಿಂದೆಂದೂ ನೋಡಿರದ ಅದ್ಭುತವಾದ
ಸಾಹಿತ್ಯ ಚಿತ್ರದಲ್ಲಿದ್ದು, ಹಿನ್ನೆಲೆ ಸಂಗೀತಕ್ಕಾಗಿ 600 ರಿಂದ 700 ಮ್ಯೂಸಿಕ್ ಟ್ರ್ಯಾಕ್ಸ್ ಬಳಸಿದ್ದೇವೆ.
400 ರಿಂದ 500 ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಲಾನಿರ್ದೇಶಕ ಪ್ರಭು ಬಡಿಗೇರ್ ನಮ್ಮ ಕಲ್ಪನೆಗೂ ಮೀರಿ ಕಲಾ ನಿರ್ದೇಶನ ಮಾಡಿಕೊಟ್ಟರು. ವಿಶೇಷವಾಗಿ ಸಿನಿಮಾದಲ್ಲಿ ಸೆಟ್ ಲೈಟ್ ಬಳಸದೆ, ನೈಜ ಬೆಳಕಲ್ಲೇ ಶೂಟ್ ಮಾಡಿದ್ದೇವೆ. 8 ರಿಂದ 10 ಕೋಟಿ ಬಜೆಟ್ ನಲ್ಲಿ ಹೆಬ್ಬಾಳದ ಬಳಿ ಒಂದು ಗ್ರೌಂಡ್ ನಲ್ಲಿ ಬೇರೆ ಬೇರೆ ಸೆಟ್ ಹಾಕಿ 35 ರಿಂದ 40 ದಿನ ಶೂಟ್ ಮಾಡಿದ್ದೇವೆ ಎಂದು ವಿವರಿಸಿದರು.
ನಾಗರಾಜ್ ನೈಕಂಬ್ಳಿ ಮಾತನಾಡಿ ಜೈಮಿನಿ ಭಾರತದ ಒಂದು ಭಾಗವಾದ ವೀರ ಚಂದ್ರಹಾಸನ ಕಥೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಂಡು ಕಲೆಯನ್ನು ರವಿ ಬಸ್ರೂರ್ ತೆರೆಮೇಲೆ ತೋರಿಸುತ್ತಿದ್ದಾರೆ. ಕೆಲ ಸೋಷಿಯಲ್ ಮೀಡಿಯಾಗಳಲ್ಲಿ ಈ ಕಲೆಯ ಬಗ್ಗೆ ಅವಹೇಳನಕಾರಿಯಾಗಿ ತೋರಿಸಲಾಗುತ್ತಿದೆ. ಈ ಚಿತ್ರವನ್ನು ಶಕ್ತಿಯಿಂದ ಮಾಡಿಲ್ಲ, ಭಕ್ತಿಯಿಂದ ಮಾಡಿದ್ದೇವೆ ಎಂದರು.
ಚಂದ್ರಹಾಸನ ಪಾತ್ರಧಾರಿ ಶಿಥಿಲ್ ಶೆಟ್ಟಿ ಮಾತನಾಡಿ ಕೇವಲ ನಾಲ್ಕೈದು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ನಮ್ಮ ಯಕ್ಷಗಾನ ಕಲೆಯನ್ನು ವಿಶ್ವಮಾನ್ಯ ಮಾಡಬೇಕೆಂದು ರವಿ ಬಸ್ರೂರ್ ಅವರು ಈ ಸಿನಿಮಾ ಮಾಡಿದ್ದಾರೆ. ಪ್ರತಿಭೆ ಇರುವವರಿಗೆ ಕರೆದು ಅವಕಾಶ ನೀಡಿದ್ದಾರಲ್ಲದೆ, ಎಲ್ಲಿಯೂ ಲೋಪವಾಗದ ಹಾಗೆ ಸಿನಿಮಾ ನಿರ್ದೇಶಿಸಿದ್ದಾರೆ. ಅವರು ಸ್ಥಳದಲ್ಲೇ ಸನ್ನಿವೇಶವನ್ನು ವಿವರಿಸುತ್ತಿದ್ದರು. ಸಿನಿಮಾಗಾಗಿ ಅವರ ಡೆಡಿಕೇಶನ್ ದೊಡ್ಡದು. ನಾವೆಲ್ಲ ಕುದುರೆ ಸವಾರಿ ಕಲಿತು ಅಭಿನಯಿಸಿದ್ದೇವೆ. ಯಕ್ಷಗಾನ ವಿಶ್ವಗಾನ ಆಗಬೇಕು ಎಂದು ಹೇಳ್ತಾರಷ್ಟೇ. ಆದರೆ ಅದನ್ನು ರವಿ ಬಸ್ರೂರು ಕಾರ್ಯಗತ ಮಾಡಿ ತೋರಿಸಿದ್ದಾರೆ ಎಂದರು.