– ರಾಘವೇಂದ್ರ ಅಡಿಗ ಎಚ್ಚೆನ್.
ಭಾರತೀಯ ಸಿನಿರಂಗದಲ್ಲಿ ಪೌರಾಣಿಕ ಕಥೆಗಳಿಗೆ ಹೊಸ ರೂಪ ನೀಡಿದ್ದ ಸಾಗರ್ ಪಿಕ್ಚರ್ಸ್ ಎಂಟರ್ಟೈನ್ಮೆಂಟ್, ಇದೀಗ ಮತ್ತೊಂದು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದೆ. ಈ ಬಾರಿ ಕಿರುತೆರೆಯಲ್ಲ, ನೇರವಾಗಿ ಬಿಗ್ ಸ್ಕ್ರೀನ್ನಲ್ಲಿ ‘ಶ್ರೀಮದ್ಭಾಗವತಂ’ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಶ್ರೀಮದ್ಭಾಗವತ ಮಹಾಪುರಾಣದಿಂದ ಪ್ರೇರಣೆ ಪಡೆದ ಈ ಚಿತ್ರವನ್ನು ಸಾಮಾನ್ಯ ಸಿನಿಮಾದಂತೆ ಒಂದೇ ಭಾಗದಲ್ಲಿ ಮುಗಿಸುವ ಬದಲು ಏಳು ಭಾಗಗಳ ಭವ್ಯ ಸಿನಿಮ್ಯಾಟಿಕ್ ಸಾಗಾವಾಗಿ ರೂಪಿಸಲಾಗುತ್ತಿದೆ. ಹೀಗಾಗಿ ಚಿತ್ರದ ಘೋಷಣೆಯಲ್ಲೇ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ.

ರಾಮಾಯಣದ ನಂತರ ಮತ್ತೆ ಪೌರಾಣಿಕ ಲೋಕಕ್ಕೆ
ಸಾಗರ್ ಪಿಕ್ಚರ್ಸ್ ಎಂದರೆ ಮೊದಲು ನೆನಪಾಗುವುದು ‘ರಾಮಾಯಣ’. ಭಾರತೀಯ ದೂರದರ್ಶನದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಈ ಪೌರಾಣಿಕ ಕೃತಿ ಸಾಗರ್ ಕುಟುಂಬದ ಹೆಸರನ್ನು ಮನೆಮನೆಗೂ ತಲುಪಿಸಿತ್ತು. ಇದೀಗ ಹಲವು ವರ್ಷಗಳ ಬಳಿಕ ಅದೇ ಪೌರಾಣಿಕ ಕಥನ ಪರಂಪರೆ ಹೊಸ ತಲೆಮಾರಿನ ಸಿನಿಮ್ಯಾಟಿಕ್ ದೃಷ್ಟಿಕೋನದೊಂದಿಗೆ ಮರಳುತ್ತಿದೆ.

ಈ ಬಾರಿ ಕಥೆಯ ಕೇಂದ್ರದಲ್ಲಿ ಶ್ರೀಮದ್ಭಾಗವತ ಮಹಾಪುರಾಣ.
ಏಳು ಭಾಗಗಳಲ್ಲಿ ಭವ್ಯ ಸಿನಿಮಾ!
ಶ್ರೀಮದ್ಭಾಗವತದ ವಿಶಾಲ ಕಥಾ ಪ್ರಪಂಚವನ್ನು ಒಂದೇ ಸಿನಿಮಾದಲ್ಲಿ ಸೀಮಿತಗೊಳಿಸದೆ, ಏಳು ಭಾಗಗಳಾಗಿ ಕಟ್ಟಿಕೊಡುವ ಯೋಜನೆ ಈ ಪ್ರಾಜೆಕ್ಟ್ನ ಪ್ರಮುಖ ಹೈಲೈಟ್ಗಳಲ್ಲಿ ಒಂದು.

ಕಥೆಯ ವಿವಿಧ ಪಾತ್ರಗಳು, ಘಟನೆಗಳು ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ವಿಸ್ತಾರವಾಗಿ ತೋರಿಸಲು ಈ ಮಾದರಿ ಅವಕಾಶ ನೀಡಲಿದೆ. ಹೀಗಾಗಿ ಇದು ಕೇವಲ ಒಂದು ಸಿನಿಮಾ ಮಾತ್ರವಲ್ಲದೆ, ದೊಡ್ಡ ಸಿನಿಮಾಟಿಕ್ ಯೂನಿವರ್ಸ್ ಆಗಿ ರೂಪುಗೊಳ್ಳುವ ಸಾಧ್ಯತೆಯಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯ ಸಾರಥ್ಯವನ್ನು ಆಕಾಶ್ ಸಾಗರ್ ಚೋಪ್ರಾ ಮತ್ತು ಅಮೃತ್ ಸಾಗರ್ ವಹಿಸಿಕೊಂಡಿದ್ದಾರೆ. ಚಿತ್ರದ ನಿರ್ಮಾಣಕ್ಕೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಾಲನೆ ದೊರೆತಿರುವುದು ಸಿನಿಮಾದ ಪ್ರಮಾಣದ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ. ಭವ್ಯ ಸೆಟ್ಗಳು, ದೊಡ್ಡ ಮಟ್ಟದ ಪ್ರೊಡಕ್ಷನ್, ಆಧುನಿಕ VFX ಮತ್ತು ಅತ್ಯಾಧುನಿಕ ಸಿನಿಮಾಟಿಕ್ ತಂತ್ರಜ್ಞಾನಗಳ ಮೂಲಕ ಶ್ರೀಮದ್ಭಾಗವತದ ಜಗತ್ತನ್ನು ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ನಡೆಯುತ್ತಿದೆ.

ಇದರ ಜೊತೆಗೆ Game of Thrones ಸೇರಿದಂತೆ ಜಾಗತಿಕ ಮಟ್ಟದ ಚಿತ್ರಗಳು ಮತ್ತು ಸರಣಿಗಳಲ್ಲಿ ಕೆಲಸ ಮಾಡಿರುವ ತಾಂತ್ರಿಕ ಪರಿಣತರ ತಂಡವೂ ಈ ಸಿನಿಮಾದಲ್ಲಿ ಕಾರ್ಯನಿರ್ವಹಿಸಿರುವುದು ಚಿತ್ರದ ದೃಶ್ಯ ವೈಭವದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.





