ಶರತ್ ಚಂದ್ರ
ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿರುವ 'ಸೂರ್ಯವಂಶ' 25 ವರ್ಷಗಳ ಹಿಂದೆ ಇದೇ ಜೂನ್ 11 ರಂದು ಬಿಡುಗಡೆಯಾಗಿತ್ತು. ವಿಷ್ಣುವರ್ಧನ್ ನಟಿಸಿರುವ ರಜತೋತ್ಸವ ಕಂಡ ಅನೇಕ ಚಿತ್ರಗಳ ಸಾಲಿಗೆ ಈ ಚಿತ್ರ ಕೂಡ ಸೇರಿತ್ತು.
ಸಿನಿಮಾ ಪ್ರದರ್ಶಕರಾಗಿ, ಹಂಚಿಕೆದಾರರಾಗಿ ಅನುಭವವಿದ್ದ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರ ಸ್ವಾಮಿ ಹೆಸರಲ್ಲಿ ಈ ಚಿತ್ರ ನಿರ್ಮಿಸಿದ್ದರು. ಮಲ್ತಿಪ್ಲೆಕ್ಸ್ ಇರದ ಆ ಕಾಲದಲ್ಲಿ 15 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡಿತ್ತು.
ಶರತ್ ಕುಮಾರ್, ರಾಧಿಕಾ, ದೇವಯಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ತಮಿಳಿನ ಸೂಪರ್ ಹಿಟ್ ಚಿತ್ರ 'ಸೂರ್ಯವಂಶo ಚಿತ್ರದ ರಿಮೇಕ್ ಚಿತ್ರ ಇದಾಗಿದ್ದು, ಎಸ್. ನಾರಾಯಣ್ ಅಚ್ಚು ಕಟ್ಟಾಗಿ ಮೂಲ ಚಿತ್ರ ನೋಡದೇ ಇರುವ ಪ್ರೇಕ್ಷಕರಿಗೆ ಒರಿಜಿನಲ್ ಚಿತ್ರದಂತೆ ಬಾಸವಾಗುವ ಹಾಗೆ ಚಿತ್ರವನ್ನು ತೆರೆಯ ಮೇಲೆ ತಂದಿದ್ದರು.
ತಂದೆ ಮತ್ತು ಮಗನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ವಿಷ್ಣುವರ್ಧನ್ ಅವರ ಅಭಿನಯವೇ ಈ ಚಿತ್ರದ ಯಶಸ್ಸಿಗೆ ಬಹುತೇಕ ಕಾರಣವಾಗಿತ್ತು. ಅನೇಕ ವರ್ಷಗಳ ನಂತರ ವಿಷ್ಣುವರ್ಧನ್ ಜೊತೆ ಕಾಣಿಸಿಕೊಂಡ ಲಕ್ಷ್ಮಿ ಮನೋಜ್ನವಾಗಿ ಅಭಿನಯಿಸಿದ್ದರು.
ಬಾಲಿವುಡ್ ನಲ್ಲಿ ಅಂತ ಯಶಸ್ಸು ಕಾಣದ ನಾಯಕ ನಟಿ ಇಶಾ ಕೋಪಿಕರ್ ಈ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದು, ಉಳಿದಂತೆ ವಿಜಯಲಕ್ಷ್ಮಿ,ಎಸ್. ನಾರಾಯಣ್ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಹೀಗೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿ ಇತ್ತು.
ಈ ಚಿತ್ರದ ಯಶಸ್ಸಿಗೆ ಸಂಗೀತ ಕೂಡ ಪ್ರಮುಖ ಪಾತ್ರ ವಹಿಸಿದ್ದು, ವಿ. ಮನೋಹರ್ ಅವರು ಮೂಲ ಚಿತ್ರದ ಯಾವುದೇ ಹಾಡುಗಳನ್ನು ನಕಲು ಮಾಡದೆ ಅದ್ಭುತ ಹಾಡುಗಳನ್ನು ನೀಡಿದ್ದರು.
ಅದರಲ್ಲೂ 'ಸೇವಂತಿಯೇ' ಮೇಘಗಳ ಬಾಗಿಲಲಿ ಹಾಡುಗಳು ಇಂದಿಗೂ ಗುನುಗುವಂತಿದೆ. ವಿಷ್ಣುವರ್ಧನ್ ಕೂಡ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದರು.
ಈ ಚಿತ್ರದ ತೆಲುಗು ಅವತರಣಿಕೆಯಲ್ಲಿ ವೆಂಕಟೇಶ್ ಮತ್ತು ಹಿಂದಿಯಲ್ಲಿ ಅಮಿತಾಬ್ ಅಭಿನಯಿಸಿದರು ಕೂಡ ಕನ್ನಡದಷ್ಟು ಯಶಸ್ಸು ಕಂಡಿರಲಿಲ್ಲ. ಅಭಿನಯದ ವಿಷಯ ಬಂದಾಗಲೂ ಕನ್ನಡ ದಲ್ಲಿ ವಿಷ್ಣು ಅವರ ಎರಡು ಪಾತ್ರಗಳು ತೆರೆಯ ಮೇಲೆ ವಿಜೃಂಭಿಸಿದ್ದ ರೀತಿ ಆ ಎರಡು ಭಾಷೆ ಗಳಲ್ಲಿ ಮೂಡಿ ಬಂದಿಲ್ಲ.
ವೀರಪ್ಪ ನಾಯಕ ಚಿತ್ರದಲ್ಲಿ ವಿಷ್ಣುವನ್ನು ನಿರ್ದೇಶಿಸಿದ್ದ ಎಸ್ ನಾರಾಯಣ್ ಗೆ, ವಿಷ್ಣುವರ್ಧನ್ ಅವರ ಜೊತೆ ಇನ್ನಷ್ಟು ಚಿತ್ರಗಳನ್ನು ಮಾಡಲು ಈ ಸಿನಿಮಾ ಬುನಾದಿ ಹಾಕಿತ್ತು.
ಈಗಲೂ ಟಿವಿಯಲ್ಲಿ ಈ ಚಿತ್ರ ಪ್ರಸಾರವಾದರೆ ಮನೆ ಮಂದಿಯೆಲ್ಲಾ ಈ ಚಿತ್ರವನ್ನು ನೋಡಿ ಆಸ್ವಾದಿಸುತ್ತಿದ್ದಾರೆ.