ಸ್ವಾತಿ ಮುತ್ತಿನಂಥ ಅಮೂಲ್ಯಾ ಗೌಡ
ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮುದ್ದು ಮುಖದ ನಟಿ ಅಮೂಲ್ಯಾ ಗೌಡ. ಮೈಸೂರಿನಲ್ಲಿ ಹುಟ್ಟಿದ ಈಕೆ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಪದವಿ ಪಡೆದರು. ಅಮೂಲ್ಯಾ 2014ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ `ಸ್ವಾತಿ ಮುತ್ತು' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು. ನಂತರ `ಪುನವಿರ್ವಾಹ, ಅರಮನೆ' ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದರು. ಮುಂದೆ `ಕಮಲಿ' ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಜನಪ್ರಿಯತೆ ಗಳಿಸಿದರು. ನಂತರ ತೆಲುಗು ಧಾರಾವಾಹಿಗಳಲ್ಲಿ ಬಿಝಿಯಾದರು. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಶ್ರೀಗೌರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್-9ಕ್ಕೆ ಸ್ಪರ್ಧಿಯಾಗಿಯೂ ಭಾಗಹಿಸಿದ್ದರು.

ಮನೆಗೆ ಬಂದ ಮಹಾಲಕ್ಷ್ಮಿ ರಶ್ಮಿ ಪ್ರಭಾಕರ್
ಕಿರುತೆರೆ ಹಾಗೂ ಹಿರಿತೆರೆ ನಟಿ ರಶ್ಮಿ ಪ್ರಭಾಕರ್. ಕನ್ನಡ, ತಮಿಳು ಮತ್ತು ತೆಲುಗು ಕಿರುತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಮೂಲತಃ ಹೊಸಕೋಟೆ ತಾಲ್ಲೂಕಿನ ಕೋಡಿ ಎಂಬ ಪುಟ್ಟ ಹಳ್ಳಿಯಲ್ಲಿ ಬೆಳೆದ ರಶ್ಮಿ ಕೃಷಿ ಕುಟುಂಬದಿಂದ ಬಂದರು. ಕ್ರೀಡೆ, ನೃತ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಮೂಲಕ ಜನಪ್ರಿಯರಾದರು. `ಶುಭ ವಿವಾಹ' ಧಾರಾವಾಹಿಯಲ್ಲಿ ನಾಯಕನ ಸಹೋದರಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಪ್ರವೇಶಿಸಿದರು. ನಂತರ ಪೌರಾಣಿಕ ಧಾರಾವಾಹಿ `ಮಹಾಭಾರತ'ದಲ್ಲಿ ಅವಕಾಶ ಪಡೆದರು. ಕನ್ನಡದ `ಜೀವನ ಚೈತ್ರ, ಲಕ್ಷ್ಮಿ ಬಾರಮ್ಮ, ಮನಸೆಲ್ಲಾ ನೀನೇ' ತಮಿಳಿನ `ಅರುಂಧತಿ, ಕಣ್ಣೇ ಕಲೈಮಾನೇ' ಹಾಗೂ ತೆಲುಗಿನ `ಪೌರ್ಣಮಿ, ಕಾವ್ಯಾಂಜಲಿ, ಕೃಷ್ಣ ಮುಕುಂದ ಮುರಾರಿ' ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಪಕ್ಕದ ಮನೆ ಹುಡುಗಿಯಾದರು. ಇನ್ನು ಸ್ಯಾಂಡಲ್ ವುಡ್ ನ `ಬಿಬಿ5 ಹಾಗೂ ಮಹಾಕಾವ್ಯ' ಚಲನಚಿತ್ರಗಳಲ್ಲೂ ರಶ್ಮಿ ನಟಿಸಿದ್ದಾರೆ.

ದಕ್ಷಿಣದ ಮೀನಾಕ್ಷಿ ರಚಿತಾ ಮಹಾಲಕ್ಷ್ಮಿ
ದಕ್ಷಿಣ ಭಾರತದ ನಟಿ ರಚಿತಾ ಮಹಾಲಕ್ಷ್ಮಿ. ಮುದ್ದು ಮುಖ, ಸಹಜ ಸೌಂದರ್ಯದಿಂದಲೇ ಎಲ್ಲರ ಕಣ್ಮನ ಸೆಳೆಯುವ ಈ ನಟಿ ಹುಟ್ಟಿದ್ದು ಬೆಂಗಳೂರಿನಲ್ಲಿ. ಕನ್ನಡ, ತಮಿಳು, ತೆಲುಗು ಹಾಗೂ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ರಚಿತಾ, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಮೆಗಾ ಮಂಡಲ'ದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸ್ಟಾರ್ ವಿಜಯ್ ನಲ್ಲಿ ಪ್ರಸಾರವಾದ `ಸರವಣನ್ ಮೀನಾಕ್ಷಿ' ಧಾರಾವಾಹಿಯಲ್ಲಿ ಮೀನಾಕ್ಷಿಯ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಜನಪ್ರಿಯರಾದರು. ರಿಯಾಲಿಟಿ ಶೋ ಬಿಗ್ ಬಾಸ್ ತಮಿಳು ಸೀಸನ್ ರ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ಕನ್ನಡದ `ಗಣಿ, ಪಾರಿಜಾತ, ರಂಗನಾಯಕ, ಎದ್ದೇಳು ಮಂಜುನಾಥ-2' ಚಲನಚಿತ್ರಗಳಲ್ಲಿ ನಟಿಸಿದ್ದು, ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ವೆಬ್ ಸಿರೀಸ್ ನಲ್ಲೂ ಅಭಿನಯಿಸಿ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕನ್ನಡದ ಹೊಸ ಚಿಗುರು ಮೌನಾ ಗುಡ್ಡೆಮನೆ
ಮೌನಾ ಗುಡ್ಡೆಮನೆ ಕನ್ನಡ ಕಿರುತೆರೆ ನಟಿ. ಮೂಲತಃ ಮಂಗಳೂರಿನವರಾದ ಮೌನಾ ಗುಡ್ಡೆಮನೆ, ಮೊದಲ ಬಾರಿಗೆ ಮಡೆನೂರು ಮನುರೊಂದಿಗೆ `ಕುಲದಲ್ಲಿ ಕೀಳ್ಯಾವುದೋ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ.ಕೆ. ಮತ್ತು ವಿದ್ಯಾ ಜಂಟಿಯಾಗಿ ನಿರ್ಮಿಸಿದ್ದಾರೆ. ಡಿಗ್ರಿ ಓದುತ್ತಿರುವ ಮೌನಾಗೆ ಹಲವಾರು ಆಫರ್ ಗಳು ಬರಲಾರಂಭಿಸಿದ್ದು, ನಟನೆ ಹಾಗೂ ಶಿಕ್ಷಣ ಎರಡನ್ನೂ ಒಟ್ಟೊಟ್ಟಿಗೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ.





