ಜಾಗೀರ್ದಾರ್*
ರಾಂಧವ ಸಿನಿಮಾ , "ಬಿಗ್ ಬಾಸ್" ಖ್ಯಾತಿಯ ನಟ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ "ಬುಲ್ಲಿ" ಸಿನಿಮಾದ ಚಿತ್ರೀಕರಣದ ಮೊದಲನೆಯ ಶೆಡ್ಯೂಲ್ ಮುಕ್ತಾಯ ಗೊಂಡಿದೆ. ಈ ಕಾಮೆಡಿ ಚಿತ್ರದಲ್ಲಿ ಬಹುಭಾಷಾ ತಾರೆ ಹಿರಿಯ ನಟಿ ಊರ್ವಶಿ ಅವರು ಭುವನ್ ಒಂದಿಗೆ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಊರ್ವಶಿ ಅವರ ಮಗಳು ತೇಜ ಊರ್ವಶಿ ನಾಯರ್ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಸಮೃದ್ಧ್ ಸ್ಟುಡಿಯೋಸ್ ಹಾಗು ಭುವನಂ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಭರ್ಜರಿಯಾಗಿ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್ ಕುಮಾರ್ ಸಮಾಧಿಗೆ ನಮನ ಸಲ್ಲಿಸುವ ಮೂಲಕ ನಡೆಯಿತು.
ಹತ್ತು ವರ್ಷದ ನಂತರ ನಾನು ಕನ್ನಡ ಚಿತ್ರ ರಂಗಕ್ಕೆ ಮರಳಿದ್ದೇನೆ. ಹಲವಾರು ಕನ್ನಡ ಸಿನಿಮಾಗಳ ಆಫರ್ ಬಂದರೂ ನನಗೆ ಯಾವುದು ಹಿಡಿಸಿರಲಿಲ್ಲ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬಿಜಿ ಇದ್ದೆ. ಭುವನ್ ಮತ್ತು ಹರ್ಷಿಕಾ ತಂಡ ಚೆನೈ ಬಂದು ಸಿನಿಮಾದ ಬಗ್ಗೆ ಹಾಗೂ ಅವರ ಐಡಿಯ ಬಗ್ಗೆ ತಿಳಿಸಿದಾಗ ನನಗೆ ತುಂಬಾ ಖುಷಿ ಆಯಿತು. ಈಗ ಸಿನಿಮಾ ಮುಗಿಸಿದ ಮೇಲೆ ನಾನೇನಾದರೂ ಈ ಸಿನಿಮಾ ಮಾಡದಿದ್ದಿದ್ದರೆ ಇಂಥಾ ಒಂದು ಒಳ್ಳೆಯ ಸಿನಿಮಾವನ್ನು ಮಿಸ್ ಮಾಡಿಕೊಳ್ಳುತ್ತಿದ್ದನಲ್ಲ ಎಂದು ಅನಿಸುತ್ತಿದೆ. ತುಂಬಾ ಅಚ್ಚುಕಟ್ಟಾಗಿ ಒಂದು ಔಟ್ & ಔಟ್ ಕಾಮೆಡಿ ಸಿನಿಮಾವನ್ನು ಈ ತಂಡ ಮಾಡುತ್ತಿದೆ. ಭುವನ್ ಜೊತೆ ನಟನೆ ಮಾಡಿ ತುಂಬಾ ಖುಷಿ ಆಯಿತು. ಅವರು ಮುಂದಿನ ದಿನಗಳಲ್ಲಿ ಒಬ್ಬ ಅಧ್ಬುತ ನಾಯಕ ನಟನಾಗಿ ನಿಮ್ಮ ಮುಂದೆ ಬರುತ್ತಾರೆ. ನಂಬರ್ ೧ ಆಗುವ ಎಲ್ಲಾ ಲಕ್ಷಣಗಳು ಅವರ ಪ್ರತಿಬೆಯಲ್ಲಿದೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತೆ.
ನನಗೂ ಕನ್ನಡ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಂಕರ್ ನಾಗ್, ರವಿಚಂದ್ರನ್, ರಮೇಶ್ ಅವರು ಸೇರಿದಂತೆ ಎಲ್ಲಾ ನಾಯಕನಟರ ಜೊತೆಗೂ ನಟಿಸಿದ್ದೇನೆ. "ರಾಮ ಶ್ಯಾಮ ಭಾಮ" ಚಿತ್ರದ ನಂತರ ನಾನು ನಟಿಸುತ್ತಿರುವ ಕನ್ನಡ ಚಿತ್ರವಿದು. ಕನ್ನಡ ಚಿತ್ರರಂಗ ಯಾವತ್ತೂ ನನ್ನನ್ನು ಬಿಟ್ಟುಕೊಟ್ಟಿಲ್ಲ. ಕನ್ನಡ ಚಿತ್ರದಿಂದಲೇ ನನ್ನ ಮಗಳ ಸಿನಿಮಾಯಾನ ಅರಂಭವಾಗುತ್ತಿರುವುದು ಬಹಳ ಖುಷಿಯಾಗಿದೆ ಎನ್ನುತ್ತಾರೆ ಹಿರಿಯ ನಟಿ ಊರ್ವಶಿ.

ಈವರೆಗೂ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪಂಚಭಾಷಾ ನಟಿ ಊರ್ವಶಿ ಅವರ ಜೊತೆಗೆ ನಟಿಸುವುದು ನನ್ನ ಬಹು ದಿನಗಳ ಆಸೆ. ಅದನ್ನು ನಾನು ಹರ್ಷಿಕಾ ಅವರತ್ತಿರವೂ ಹೇಳಿದ್ದೆ. ಈಗ ಆ ಆಸೆ ಈಡೇರಿದೆ. ಊರ್ವಶಿ ಅವರಿಂದ ತುಂಬಾ ಕಲಿತಿದ್ದೇನೆ. ಇನ್ನೂ, ಈ ಚಿತ್ರದ ಕಥೆ ಅನೂಪ್ ಅವರು ಹೇಳಿದಾಗ ಬಹಳ ಇಷ್ಟವಾಯಿತು. ನಮ್ಮ ಕಷ್ಟದ ಸಮಯದಲ್ಲಿ ಸದಾ ನಮ್ಮ ಜೊತೆಗಿರುವ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಮೂಲಕ ನಿರ್ಮಾಪಕ ನವೀನ್ ಅವರ ಪರಿಚಯವಾಯಿತು. ಅವರು ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾದರು. ಆಕರ್ಶ್ ಹಾಗೂ ಹರ್ಷಿಕಾ ಪೂಣಚ್ಛ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಇದರಲ್ಲಿ ಯಾವುದೇ ಸಂದೇಶ ನೀಡಲು ಹೊರಟಿಲ್ಲ. ಚಿತ್ರದಲ್ಲಿ ಮನೋರಂಜನೆಯ ಪ್ರಧಾನ. ಎಲ್ಲಿಯ ವರೆಗು ಯಾವುದೇ ಸಿನಿಮಾದಲ್ಲಿ ಬಾರದ ತಾಯಿ - ಮಗನ ಒಂದು ಅಪರೂಪದ ಬಾಂಧವ್ಯವನ್ನು ಸಾರುವ ಕಥೆಯೂ ಹೌದು. ನಾನು ಈ ಚಿತ್ರದಲ್ಲಿ ಮಧ್ಯಮ ಕುಟುಂಬದ ಜೆನ್ ಝೀ GEN Z ಹುಡುಗ. ಯಾವುದಕ್ಕೂ ತಲೆ ಕೆಡಸಿಕೊಳ್ಳದೆ, ಯಾವುದೇ ಗುರಿಯಿಲ್ಲದೆ ತನ್ನಷ್ಟಕ್ಕೆ ತಾನು ಜೀವನ ನಡೆಸುವ ಹುಡುಗ ಕೂಡ. ನನ್ನ ಪಾತ್ರದ ಹೆಸರು ಬಲರಾಮ. ಸ್ನೇಹಿತರೆಲ್ಲಾ "ಬುಲ್ಲಿ" ಎಂದು ಕರೆಯುತ್ತಿರುತ್ತಾರೆ. ಹಾಗಾಗಿ ಚಿತ್ರಕ್ಕೆ "ಬುಲ್ಲಿ" ಎಂದು ಹೆಸರಿಟ್ಟಿದ್ದೇವೆ. ಚಿತ್ರದ ಚಿತ್ರೀಕರಣ ಇನ್ನೂ ಮುಕ್ತಾಯವಾಗಿಲ್ಲ. ಒಂದು ಹಂತದ ಚಿತ್ರೀಕರಣ ಮಾತ್ರ ಮುಕ್ತಾಯವಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಊರ್ವಶಿ ಅವರ ಅಭಿನಯದ ಭಾಗದ ಚಿತ್ರೀಕರಣ ಪೂರ್ಣವಾಗಿದೆ ಎಂದರು ನಾಯಕ ಭುವನ್ ಪೊನ್ನಣ್ಣ.





