- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ತಮ್ಮ ಸ್ಟಾರ್‌ ಕಾಸ್ಟಿಂಗ್‌, ಬಿಗ್‌ ಬಜೆಟ್‌ ಮೂಲಕ ಸದ್ದು ಮಾಡಿದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಕಂಟೆಂಟ್‌, ಟೈಟಲ್‌ ಮೂಲಕವೇ ಸಿನಿಪ್ರಿಯರನ್ನು ಸದ್ದಿಲ್ಲದೆ ಸೆಳೆಯಲು ಯಶಸ್ವಿಯಾಗಿಬಿಡುತ್ತವೆ. ಇತ್ತೀಚೆಗೆ ಹೀಗೆ ಅಂಥದ್ದೇ ಕಂಟೆಂಟ್‌ ಮತ್ತು ಟೈಟಲ್‌ ಮೂಲಕವೇ ಸ್ಯಾಂಡಲ್‌ವುಡ್‌ ಸಿನಿಪ್ರಿಯರನ್ನು ಸೆಳೆಯುತ್ತಿರುವ ಚಿತ್ರ ʼವಿಕಲ್ಪʼ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ʼವಿಕಲ್ಪʼ ಒಂದು ಸೈಕಾಲಜಿಕಲ್‌-ಥ್ರಿಲ್ಲರ್‌ ಕಥಾಹಂದರದ ಚಿತ್ರ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು ಈ ಚಿತ್ರದ ಮೂಲಕ ತೆರೆಮೇಲೆ ತರುತ್ತಿದ್ದಾರೆ ಯುವ ನಟ ಕಂ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌.

WhatsApp-Image-2025-12-24-at-3.21.10-PM-768x432

ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬರುತ್ತಿವೆ. ಆದರೆ ಇಷ್ಟೊಂದು ಸಿನಿಮಾಗಳ ಪೈಕಿ ಸೈಕಾಲಜಿಕಲ್‌ ಥ್ರಿಲ್ಲರ್‌ ಸಿನಿಮಾಗಳ ಸಂಖ್ಯೆ ಮಾತ್ರ ಕೇವಲ ಬೆರಳೆಣಿಕೆಯಷ್ಟು ಮಾತ್ರ ಎಂದೇ ಹೇಳಬಹುದು. ಅಂಥ ಬೆರಳೆಣಿಕೆಯ ವಿರಳ ಸಿನಿಮಾಗಳ ಸಾಲಿಗೆ ಸೇರುವ ಚಿತ್ರವೇ ʼವಿಕಲ್ಪʼ. ಬಹುತೇಕ ಯುವ ಮನಸ್ಸುಗಳೇ ಸೇರಿ ಮಾಡಲು ಹೊರಟಿರುವ ʼವಿಕಲ್ಪʼ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಅಪರೂಪದ ಚಿತ್ರವಾಗಿ ನಿಲ್ಲದೆ ಎಂಬುದು ಚಿತ್ರತಂಡದ ನಿರೀಕ್ಷೆ.

WhatsApp-Image-2025-12-24-at-3.20.39-PM-768x432

ʼವಿಕಲ್ಪʼ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ನಮ್ಮ ಚಿತ್ರದ ಶೀರ್ಷಿಕೆಯ ಪ್ರಕಾರ, ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಇದು ಒಂದು ಸಂಪೂರ್ಣ ಥ್ರಿಲ್ಲರ್‌ ಚಿತ್ರ ಎನ್ನುವುದು ವಿಶೇಷ. ಸೈಕಾಲಜಿಕಲ್‌-ಥ್ರಿಲ್ಲರ್‌ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಇಡೀ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರಕ್ಕೆ ಚಿತ್ರದ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರಗಳೂ ಮಾತನಾಡುತ್ತವೆ. ಪ್ರತಿ ಪಾತ್ರಗಳೂ ನೋಡುಗರ ಮನಮುಟ್ಟುತ್ತವೆʼ ಎಂದು ಹೇಳುತ್ತಾರೆ ʼವಿಕಲ್ಪʼದ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್.

WhatsApp-Image-2025-12-24-at-3.21.09-PM-768x432

ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಕಾಲ ಹವ್ಯಾಸಿ ರಂಗಭೂಮಿಯಲ್ಲಿ ಅನುಭವಪಡೆದಿರುವ, ಪ್ರತಿಷ್ಠಿತ ಬಹುರಾಷ್ಟ್ರೀಯ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪೃಥ್ವಿರಾಜ್‌ ಪಾಟೀಲ್‌, ತಮ್ಮ ಪರಿಕಲ್ಪನೆಯನ್ನು ʼವಿಕಲ್ಪʼ ಚಿತ್ರದ ಮೂಲಕ ತೆರೆಮೇಲೆ ತರುತ್ತಿದ್ದಾರೆ. ʼಸುರೂಸ್‌ ಟಾಕೀಸ್‌ʼ ಸಂಸ್ಥೆಯ ಅಡಿಯಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಅವರೇ ತೆರೆಮೇಲೂ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ʼಒಂದು ಚಿತ್ರಕ್ಕೆ ಕಥೆ ಮತ್ತು ಬರವಣಿಗೆಯೇ ಮುಖ್ಯ ಎಂದು ಅಪೇಕ್ಷಿಸುವ ಕನ್ನಡದ ಎಲ್ಲಾ ಪ್ರಬುದ್ಧ ಚಿತ್ರ ಪ್ರೇಕ್ಷಕರ ಪಾಲಿಗೆ ಈ ಚಿತ್ರ ಒಂದು ಉಡುಗೊರೆಯಾಗಿ ತೆರೆಮೇಲೆ ಮೂಡಿಬರುತ್ತಿದೆʼ ಎಂಬುದು ನಿರ್ದೇಶಕರ ಮಾತು.

VKP_TP_05-709x1024

ʼವಿಕಲ್ಪʼ ಚಿತ್ರದ ಮತ್ತೊಂದು ವಿಶೇಷತೆಯೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಚಿತ್ರದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿರುವುದು. ಚಿತ್ರದ ದೃಶ್ಯಗಳು ಸಹಜತೆಗೆ ಅತ್ಯಂತ ಹತ್ತಿರವಾಗಿರಬೇಕು ಎಂಬ ಆಶಯದಿಂದ ಚಿತ್ರತಂಡ ಇಂಥದ್ದೊಂದು ಕೆಲಸ ಮಾಡಿದೆ. ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ʼವಿಕಲ್ಪʼ ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದರ್ಲ್ಯಾಂಡ್‌ ಸೇರಿದಂತೆ ವಿದೇಶಗಳಲ್ಲೂ ʼವಿಕಲ್ಪʼದ ಚಿತ್ರೀಕರಣ ಮಾಡಲಾಗಿದೆ.
ʼವಿಕಲ್ಪʼ ಚಿತ್ರದಲ್ಲಿ ಪೃಥ್ವಿರಾಜ್‌ ಪಾಟೀಲ್‌, ನಾಗಶ್ರೀ ಹೆಬ್ಬಾರ್‌, ಸಂಧ್ಯಾ ವಿನಾಯಕ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಪೂಜಾ ಬಚ್ಚ್‌, ಜಯಂತ್‌ ಡೇವಿಡ್‌, ಡಾ. ಪ್ರಕೃತಿ, ಮಾಸ್ಟರ್‌ ಆಯುಷ್ ಸಂತೋಷ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ದ ನಟಿಯರಲ್ಲೊಬ್ಬರಾದ ಹರಿಣಿ ಶ್ರೀಕಾಂತ್‌ ಈ ಚಿತ್ರದ ವಿಭಿನ್ನ ಮತ್ತು ವಿಶೇಷವಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಜೊತೆಗೆ ಮಲೆನಾಡಿನ ಪ್ರಸಿದ್ದ ರಂಗಭೂಮಿ ಕಲಾವಿದ ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಮಾಧವ ಶರ್ಮಾ, ಗಿರೀಶ್‌ ಹೆಗಡೆ, ಗಣಪತಿ ಎ. ಆರ್, ʼರಾಜ್ಯ ಪ್ರಶಸ್ತಿʼ ವಿಜೇತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಮುಂತಾದ ದೊಡ್ಡ ಕಲಾವಿದರ ತಾರಾಗಣವೇ ʼವಿಕಲ್ಪʼದಲ್ಲಿರುವುದು ಮತ್ತೊಂದು ವಿಶೇಷ.
ಇನ್ನು ʼವಿಕಲ್ಪʼ ಚಿತ್ರಕ್ಕೆ ಮಿಥುನ್‌ ತೀರ್ಥಹಳ್ಳಿ ಸಹ ನಿರ್ದೇಶನ ಮಾಡಿದ್ದಾರೆ. ʼವಿಕಲ್ಪʼ ಸುಂದರ ದೃಶ್ಯಗಳನ್ನು ಅಭಿರಾಮ್‌ ಗೌಡ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರೆ, ದಕ್ಷಿಣ ಭಾರತದ ಖ್ಯಾತ ಸಂಕಲನಕಾರ ಸುರೇಶ್‌ ಆರುಮುಗಮ್‌ ಚಿತ್ರಕ್ಕೆ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ʼವಿಕಲ್ಪದʼ ವಿಭಿನ್ನ ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್‌ ಪಾಟಿಲ್‌ ಮತ್ತು ಕೌಂಡಿನ್ಯ ಕುಡ್ಲುತೋಟ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಿದ್ದಾರ್ಥ್‌ ಬೆಳ್ಮಣ್ಣು, ಸಂವತ್ಸರ, ಶ್ರೀರಂಜಿನಿ, ಇಂಚರ ಮೊದಲಾದ ಗಾಯಕರ ಧ್ವನಿಯಲ್ಲಿ ʼವಿಕಲ್ಪʼದ ಹಾಡುಗಳು ಮೂಡಿಬಂದಿವೆ. ಸದ್ಯ ʼವಿಕಲ್ಪʼದ ಚಿತ್ರೀಕರಣ ಮುಕ್ತಾಯಗೊಂಡು, ಚಿತ್ರದ ಅಂತಿಮ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದೆ.
ʼʼವಿಕಲ್ಪʼ ಚಿತ್ರದ ನಿರೂಪಣೆ, ಅತ್ಯುತ್ತಮ ಬರವಣಿಗೆ, ಸೀಟ್‌ ಎಡ್ಜಿಗೆ ಕೂರಿಸುವಂತಹ ಥ್ರಿಲ್ಲಿಂಗ್ ಚಿತ್ರಕಥೆ, ತೀರಾ ಆತ್ಮೀಯರು ಎನಿಸುವಂತಹ ನೈಜ ಪಾತ್ರಗಳು, ಕಚಗುಳಿ ಇಡುವ ನೈಜ ಹಾಸ್ಯ, ಕಲ್ಟ್‌ ಹಾಡುಗಳು, ಹೀಗೆ ಒಂದಷ್ಟು ಹೊಸ ವಿಚಾರಗಳನ್ನು ನಿಜವಾಗಿಯೂ ಹೊಸತನ ಬಯಸುವ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ʼವಿಕಲ್ಪʼ ಚಿತ್ರತಂಡವು ತೀರಾ ವಿನಯ ಮತ್ತು ಜವಾಬ್ದಾರಿಯಿಂದ ಪ್ರೇಕ್ಷಕರನ್ನು ರಂಜಿಸುವ ಆತ್ಮವಿಶ್ವಾಸವನ್ನು ಹೊಂದಿದೆ. ಆದಷ್ಟು ಬೇಗ ʼವಿಕಲ್ಪʼವನ್ನು ಪ್ರೇಕ್ಷಕರ ಮುಂದೆ ತರಲು ಕಾತುರರಾಗಿದ್ದೇವೆʼ ಎಂಬುದು ಚಿತ್ರದ ನಿರ್ದೇಶಕ ಕಂ ನಟ ಪೃಥ್ವಿರಾಜ್‌ ಪಾಟೀಲ್‌ ಮತ್ತು ಚಿತ್ರತಂಡದ ಒಕ್ಕೊರಲ ಮಾತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ