ಸಿನಿಮಾರಂಗ ಯಾರ ಸ್ವತ್ತೂ ಅಲ್ಲ. ಪ್ರತಿಭೆ, ಆಸಕ್ತಿ, ಒಲವು ಇರೋರು ಯಾರು ಬೇಕಾದರೂ ಅರಸಿಕೊಂಡು ಬರಬಹುದು. ಬಂದವರೂ ಇದ್ದಾರೆ. ಯಶಸ್ವಿಯಾಗಿ ಬೆಳೆದಿದ್ದಾರೆ. ಅಂತಹ ಆಶಾವಾದಿಗಳಲ್ಲಿ ಯಶಸ್ವಿ ಶಂಕರ್‌ ಕೂಡ ಒಬ್ಬರು. ಮೈಸೂರಿನವರಾದ ಇವರು ಎಂಜಿನಿಯರಿಂಗ್‌ ಮುಗಿಸಿ ಅಮೆರಿಕಾದಲ್ಲಿ ನೆಲೆಸಿ ಸುಮಾರು ಇಪ್ಪತ್ತು ರ್ಷಗಳಿಂದ ಸ್ವಂತ ಐ.ಟಿ. ಕಂಪನಿ ಸಾನ್ವಿ ಟೆಕ್ನಾಲಜೀಸ್‌ ಸ್ಥಾಪಿಸಿ ಅಮೆರಿಕಾದ ಮಿಚಿಗನ್‌ ನಗರದಲ್ಲಿ ನಡೆಸುತ್ತಿದ್ದಾರೆ. ಆದರೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಮೊದಲಿನಿಂದಲೂ ಇತ್ತಂತೆ. ನಟ, ನಿರ್ಮಾಪಕ ಎಂ.ಪಿ. ಶಂಕರ್‌ ಮಗ ತಿಲಕ್‌ ಹಾಗೂ ಇವರು ಬಾಲ್ಯದಿಂದಲೇ ಸ್ನೇಹಿತರು. ನಟಿಸುವ ಅವಕಾಶವಿದ್ದರೂ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಬೇಕು ಎಂಬ ಅಪ್ಪ ಹಾಕಿದ ಗೆರೆ ದಾಟಲಿಲ್ಲವಂತೆ. ಲೈಫ್‌ನಲ್ಲಿ ಸೆಟಲ್ ಆಗಿರುವ ಶಂಕರ್‌ಗೆ ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ಚಿಗುರಿದಾಗ ಬರೀ ಹೊಸಬರನ್ನು ಹಾಕಿಕೊಂಡು `ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌’ ಎನ್ನುವ ಕ್ಯಾಚಿ ಟೈಟಲ್ ನ ಸಿನಿಮಾ ಮಾಡಿದ್ದಾರೆ.

“ಯಶಸ್ವೀ ಡೈರೆಕ್ಟರ್‌ರಿಂದ ಜನಪ್ರಿಯ ನಟರನ್ನು ಹಾಕಿ ಸಿನಿಮಾ ಮಾಡಬಹುದಿತ್ತು. ಆದರೆ ನನಗೆ ಅವಕಾಶಕ್ಕಾಗಿ ಕಾಯುತ್ತಿರುವ ಹೊಸ ಪ್ರತಿಭೆಗಳಿಗೆ ಛಾನ್ಸ್ ಕೊಡಬೇಕು. ಮುಂದೊಂದು ದಿನ ಅವರು ಫೇಮಸ್‌ ಆಗಿ ಮಿಂಚಬೇಕು ಎಂಬ ಆಸೆ ನನ್ನದು. ನಾಲ್ಕು-ಐದು ಸಿನಿಮಾಗಳಿಗೆ ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದ ಶ್ರೀಕಾಂತ್‌ ಎನ್ನುವ ಹುಡುಗನಿಗೆ ನಿರ್ದೇಶನದ ಜವಾಬ್ದಾರಿ ಹೊರಿಸಿದೆ. ಪ್ರತಿಯೊಂದು ಹಂತದಲ್ಲೂ ನಾನು ಜೊತೆಗೆ ನಿಂತು ಗೈಡ್‌ ಮಾಡಿದೆ, ಕಾರ್ಪೋರೇಟ್‌ ಸ್ಟೈಲ್ ನಲ್ಲಿ ಪ್ರೊಡಕ್ಷನ್‌ ಕೆಲಸ ಮಾಡಿದ್ದೇವೆ,” ಎಂದು ಹೇಳುತ್ತಾರೆ ಶಂಕರ್‌.

ಅಮೆರಿಕಾದಲ್ಲಿ ಇದ್ದುಕೊಂಡೇ ಆಡಿಶನ್‌ ಕೂಡಾ ಮಾಡಿದ್ದಾರಂತೆ. ಹೊಸಬರಿಗೆ ಮೊದಲ ಆದ್ಯತೆ ಎಂದು ಮೊದಲೇ ಹೇಳಿದ್ದರಿಂದ ನಾಯಕನ ಪಾತ್ರಕ್ಕೆ ರಾಜೀವ್‌ ಎನ್ನುವ ಹವ್ಯಾಸಿ ಫೋಟೋಗ್ರಾಫರನ್ನು ಆರಿಸಿದರೆ, ಈಗಾಗಲೇ `ವೀಕೆಂಡ್‌’ ಚಿತ್ರದಲ್ಲಿ ನಟಿಸಿರುವ ಸಂಜನಾಳನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರಂತೆ. ಅರ್ಜುನ್‌ ರೆಡ್ಡಿ ಸಿನಿಮಾ ಖ್ಯಾತಿಯ ಗೋಪಿನಾಥ್‌ ಹೆಗ್ಡೆ, ಯಮುನಾ ಶ್ರೀನಿಧಿ, ಗುರುದತ್‌ ಬಿಟ್ಟರೆ ಉಳಿದವರೆಲ್ಲರೂ ಹೊಸಬರು.

ನಿಮಗೆ ಆ್ಯಕ್ಟರ್‌ ಆಗೋ ಆಸೆ ಇತ್ತಲ್ಲ  ನೀವು ನಟಿಸಿದ್ದೀರಾ? ಎಂದು ಕೇಳಿದಾಗ,  ಈ ಸಿನಿಮಾದಲ್ಲಿ ಮೇನ್‌ ರೋಲ್ ಐಪಿಎಸ್‌ ಆಫೀಸರ್‌ ಪಾತ್ರಕ್ಕಾಗಿ ನಾವು ಪ್ರಖ್ಯಾತ ಹಿಂದಿ ನಟನನ್ನು ಅಪ್ರೋಚ್‌ ಮಾಡಿದಾಗ  ಆತ ಕೇಳಿದ ಸಂಭಾವನೆ ತುಂಬಾ ದುಬಾರಿ ಅನಿಸಿತ್ತು. ಆದ್ದರಿಂದ ನಾನೇ ಆ ಪಾತ್ರ ಮಾಡಿದೆ. ಡೈರೆಕ್ಟರ್‌ ಆಸೆಯೂ ಅದೇ ಆಗಿತ್ತು. ನನ್ನ ಪತ್ನಿ ಸವಿತಾ, ಮಗಳು ಸಾನ್ವಿ ಕೂಡ ನಟಿಸಿದ್ದಾರೆ. ಇದೊಂಥರಾ ಫ್ಯಾಮಿಲಿ ಪ್ಯಾಕ್‌, ಎಂದು ಹೇಳಿ ನಗುತ್ತಾರೆ ಶಂಕರ್‌.

ವಿಲನ್‌ ಪಾತ್ರಕ್ಕೂ ಮಲಯಾಳಂ ನಟರೊಬ್ಬರನ್ನು ಆಯ್ಕೆ ಮಾಡಲಾಗಿತ್ತು. ಅವರ ಡಿಮ್ಯಾಂಡ್‌ ಕೇಳಿ ವಾಪಸ್‌ ಕಳುಹಿಸಿಕೊಟ್ಟೆ. ಆತನ ಜಾಗಕ್ಕೆ ಚಿರಾಗ್‌ ಎನ್ನುವ ಹೊಸ ಟ್ಯಾಲೆಂಟ್‌ನ್ನು ಕರೆಸಿದೆ. ತುಂಬಾನೇ ಚೆನ್ನಾಗಿ ವಿಲನ್‌ ಪಾತ್ರ ನಿರ್ಹಿಸಿದ್ದಾನೆ.

ನಿಮ್ಮ ಸಿನಿಮಾ ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌ ಮ್ಯೂಸಿಕ್‌ ಬಗ್ಗೆ ಹೇಳಿ.

ನಮ್ಮ ಸಿನಿಮಾದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಜನಪ್ರಿಯ ಮ್ಯೂಸಿಕ್‌ ಡೈರೆಕ್ಟರ್‌ಗಳ ಪರಿಚಯವಿದ್ದರೂ ಹೊಸಬರಿಂದಲೇ ಹಾಡು ಮಾಡಿಸಬೇಕೆಂದು ಹುಡುಕಿ ಆಂಧ್ರದಲ್ಲಿದ್ದ ನವನೀತ್‌ ಚಾರಿ ಎನ್ನುವ ಸಿಕ್ಕಾಪಟ್ಟೆ ಟ್ಯಾಲೆಂಟ್‌ ಇರುವ ಹುಡುಗನನ್ನು ಹುಡುಕ್ಕಿದ್ದಾಯಿತು. ಎಲ್ಲ ಹಾಡುಗಳನ್ನೂ ಆತನಿಂದಲೇ ಕಂಪೋಸ್‌ ಮಾಡಿಸಲಾಯಿತು. ಎಲ್ಲ ಹಾಡುಗಳೂ ಚೆನ್ನಾಗಿ ಮೂಡಿಬಂದಿವೆ. ಆಲ್ಬಂ ರಿಲೀಸ್‌ ಆದಮೇಲೆ ಈ ಹುಡುಗನಿಗೆ ಸಾಕಷ್ಟು ಆಫರ್ಸ್‌ ಬರುತ್ತದೆ. ನಾವು ಖುಷಿ ಪಡ್ತೀವಿ.

ಒಂದೊಳ್ಳೆ ಸಿನಿಮಾ ಮಾಡಿದ ತೃಪ್ತಿ ನನಗಿದೆ. ಇಡೀ ಫ್ಯಾಮಿಲಿ ಯಾವುದೇ ಮುಜುಗರ ಪಡದೇ ನಮ್ಮ ಸಿನಿಮಾ ನೋಡಬಹುದು. ನನಗೆ ಹಣಕ್ಕಿಂತ ಪ್ರಶಂಸೆ ಸಿಕ್ಕರೆ ಸಾಕು ಎನ್ನುತ್ತಾರೆ.

ಸಾನ್ವಿ ಪಿಕ್ಚರ್ಸ್‌ ಅಂಡ್‌ ಅನಿಮೇಶನ್ಸ್ ಬ್ಯಾನರ್‌ನಲ್ಲಿ ನಿರ್ಮಾಪಕರಾದ ಯಶಸ್ವಿ ಶಂಕರ್‌, ಸವಿತಾ ಯಶ್‌ ಸಹ ನಿರ್ಮಾಣದಲ್ಲಿ ನಿರ್ಮಿಸಿರುವ ಪ್ರಥಮ ಚಲನಚಿತ್ರ `ರಾಧಾ ಸರ್ಚಿಂಗ್‌ ರಮಣ ಮಿಸ್ಸಿಂಗ್‌.’ ಈ ಚಿತ್ರವನ್ನು ಎಂ.ಎನ್‌. ಶ್ರೀಕಾಂತ್‌ ನಿರ್ದೇಶಿಸಿದ್ದಾರೆ. ಇನ್ನು ವಿಶ್ವಜಿತ್‌ ರಾವ್‌ ಛಾಯಾಗ್ರಹಣದ ಜವಾಬ್ದಾರಿ ಹೊತ್ತು ನಿರ್ದೇಶಕರಿಗೆ ಹೆಗಲು ಕೊಟ್ಟಿದ್ದಾರೆ. ತೆಲುಗಿನ ಸಂಗೀತ ನಿರ್ದೇಶಕರಾದ ನವನೀತ್‌ ಚಾರಿ ಸಂಗೀತ ನೀಡಿದ್ದಾರೆ.

ಈ ಚಿತ್ರದ ಪ್ರಮುಖ ತಾರಾಗಣದಲ್ಲಿ `ಅರ್ಜುನ್‌ ರೆಡ್ಡಿ’ ಖ್ಯಾತಿಯ ಕನ್ನಡದ ನಟ ಗೋಪಿನಾಥ್‌ ಭಟ್‌ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಯಶಸ್ವೀ ಶಂಕರ್‌, ಗುರು ಹೆಗ್ಡೆ, ಯಮುನಾ ಶ್ರೀನಿಧಿ, ರೇಖಾ, ಪ್ರದೀಪ್‌ ತಿಪಟೂರು ಈ ಹಿರಿಯ ಕಲಾವಿದರೊಂದಿಗೆ ಬೆಳ್ಳಿತೆರೆಗೆ ಹೊಸದಾಗಿ ಅಪ್ಪಟ ಕನ್ನಡದ ಪ್ರತಿಭೆ ರಾಘವ್ ಎಂಬ ನವಯುವಕನನ್ನು ನಾಯಕ ನಟನಾಗಿ ಪರಿಚಯಿಸಿದ್ದಾರೆ. ಈ ನವ ನಾಯಕನಟನಿಗೆ ನಾಯಕಿಯಾಗಿ ಸಂಜನಾ ಬುರ್ಲಿ ಸಾಥ್‌ ನೀಡಿದ್ದಾರೆ. ಈ ಚಿತ್ರದಲ್ಲಿ ಖಳನಾಯಕನಾಗಿ ಚಿರಾಗ್‌ ಎಂಬ  ಹೊಸ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ ನಿರ್ಮಾಪಕರಾದ ಯಶಸ್ವಿ ಶಂಕರ್‌.

ಚಿತ್ರದ ಬಗ್ಗೆ ನಿರ್ದೇಶಕರು ಹೇಳುವಂತೆ ಇದೊಂದು ಮಹಿಳಾ ಪ್ರಧಾನ ಕುತೂಹಲ ಭರಿತ ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರವಾಗಿದ್ದು, ಈ ಚಿತ್ರಕ್ಕೆ ಗಾಯಕರಾಗಿ ಸೋನು ನಿಗಮ್, ತಮಿಳಿನ ಕಬಾಲಿ ಸಿನಿಮಾದ ನೆರುಪ್ಪುಡ ನೆರುಂಗುಡ ಖ್ಯಾತಿಯ ಅರುಣ್‌ ರಾಜ್‌ ಕಾಮರಾಜ್‌ ಹಾಗೂ ಅನುರಾಧಾ ಭಟ್‌, ನವೀನ್‌ ಸಜ್ಜು ಇವರುಗಳ ಕೈಯಲ್ಲಿ ಹಾಡಿಸಿದ್ದಾರೆ ನಿರ್ಮಾಪಕರಾದ ಯಶಸ್ವಿ ಶಂಕರ್‌.                                       – ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ