ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಕಲಾ ಪ್ರಕಾರದ ಅನೇಕ ಬಗೆಗಳನ್ನು ತನ್ನದಾಗಿಸಿಕೊಂಡಿರುವ ಡಾ. ಶೃತಿ, ಸೌಂದರ್ಯ ಕ್ಷೇತ್ರದಲ್ಲಿ ಸಾಧಿಸಿದ್ದು ನಿಜಕ್ಕೂ ಅನನ್ಯ. ಇವರ ವಿಶಿಷ್ಟ ವ್ಯಕ್ತಿತ್ವದ ಕುರಿತು ವಿವರವಾಗಿ ತಿಳಿಯೋಣವೇ….?
ಪ್ರತಿಷ್ಠಿತ ವಿಶ್ವ ಬ್ಯೂಟಿ ಪೇಜೆಂಟ್ ನಲ್ಲಿ ಸ್ಪರ್ಧಿಸಿ ಜಯಮಾಲೆ ಧರಿಸಿದ ನಮ್ಮ ಹುಬ್ಬಳಿಯ ಯುವ ವೈದ್ಯೆಗೆ ಸನ್ಮಾನ ಸಮಾರಂಭವಿತ್ತು. ಕಿರೀಟ ಧರಿಸಿದ ಡಾ. ಶೃತಿ ನೀಲಿ ವರ್ಣದ ಸೀರೆಯಲ್ಲಿ ಹಂಸಗಮನೆಯಾಗಿ ವೇದಿಕೆ ಏರಿದಾಗ, ಕಿಕ್ಕಿರಿದ ಸಭಾಂಗಣದಲ್ಲಿ ಕರತಾಡನದ ಅನುರಣನ. ಸ್ಛುಟವಾದ ಕನ್ನಡದಲ್ಲಿ ಅನುಭವದ ಮಾತಗಳನ್ನಾಡಿದ ಆಕೆ ಸುಶ್ರಾವ್ಯವಾಗಿ ಹಾಡಿದ `ಯಾವ ಮೋಹನ ಮುರಳಿ ಕರೆಯಿತು….’ ಸ್ವರ ಮಾಧುರ್ಯಕ್ಕೆ ತಲೆದೂಗುವಂತಾಗಿತ್ತು.
ಆಕೆಯನ್ನು ಮಾತನಾಡಿಸಿದಾಗ, ಯಾವುದೇ ನಖರಾ ತೋರದೆ ಎಲ್ಲರೊಡನೆ ಸಾಮಾನ್ಯಳಂತೆ ಬೆರೆತಿದ್ದರು. ಅಂದಚೆಂದ, ಫ್ಯಾಷನ್ನಿನೆಡೆ ಒಲವಿದ್ದಲ್ಲಿ ಬುದ್ಧಿಮತ್ತೆ ಶೂನ್ಯವೆಂಬ ಪೂರ್ವಾಗ್ರಹ ಪೀಡಿತ ಅಭಿಪ್ರಾಯಕ್ಕೆ ಅಪಾದದಂತಿರುವ ಡಾ. ಶೃತಿಯವರ ಸಾಧನೆಯೇ ಈ ಲೇಖನಕ್ಕೆ ಪ್ರೇರಣೆ. ಬ್ಯೂಟಿ ಬ್ರೇನ್ ಎಂಬುದಕ್ಕೆ ಡಾ. ಶೃತಿ ಸಾಕ್ಷಿ.
ಓದಿನೊಟ್ಟಿಗೆ ಅನ್ಯ ಕ್ಷೇತ್ರಗಳಲ್ಲಿ ಸಾಧಿಸುವ ಜಾಣ್ಮೆ, ತುಡಿತವಿದ್ದರೂ ಸ್ಪರ್ಧಾತ್ಮಕ ಯುಗವೇ ನೆಪವಾಗಿ ಗಳಿಕೆಯನ್ನು ಪೇರಿಸುವ ಶಿಕ್ಷಣಕ್ಕಷ್ಟೇ ಪ್ರಾಮುಖ್ಯತೆ ಕೊಡುವ ಪರಿಸ್ಥಿತಿ ಇಂದಿನ ಯುವಪೀಳಿಗೆಯದ್ದು. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಂತೂ ಎರಡು ದೋಣಿಯಲ್ಲಿ ಕಾಲಿಡದೇ ಶಿಕ್ಷಣಕ್ಕಷ್ಟೇ ಆದ್ಯತೆ ನೀಡುವಂತೆ ಸಲಹೆ, ಉಪದೇಶಗಳಿಗೆ ಅನುಗುಣವಾಗಿ ಬದ್ಧತೆಯಿಂದ ಮುನ್ನಡೆಯಲೇಬೇಕಾದ ಅನಿವಾರ್ಯತೆ.
ಹಾಗೆಂದೇ ಹೈಸ್ಕೂಲಿಗೆ ಕಾಲಿಡುತ್ತಲೇ ನೃತ್ಯ, ಸಂಗೀತ ಮುಂತಾದ ಕಲಿಕೆಗಳಿಗೆ ಪೂರ್ಣವಿರಾಮ, ಓದಿನೆಡೆಗಷ್ಟೇ ಗಮನ! ಈ ವ್ಯವಸ್ಥೆಯಲ್ಲಿ ಸ್ಟೆತಾಸ್ಕೋಪ್ ಆಯ್ದು ಕೊಂಡರೂ ಅಂತಾರಾಷ್ಟ್ರೀಯ ಬ್ಯೂಟಿ ಪೇಜೆಂಟ್ ನಲ್ಲಿ ಸ್ಪರ್ಧಿಸಿ, `ಮಿಸ್ ಯೂನಿವರ್ಸ್ಪೆಟೀಟ್’ ಟಿಯಾರಾವನ್ನು ಮುಡಿಗೇರಿಸಿಕೊಂಡ ಮೊದಲ ಕನ್ನಡತಿಯಷ್ಟೇ ಅಲ್ಲದೇ, ಮೊದಲ ಭಾರತೀಯಳೆಂಬ ಹೆಗ್ಗಳಿಕೆಯೂ ಉತ್ತರ ಕರ್ನಾಟಕದವರಾದ ಡಾ. ಶೃತಿ ಹೆಗಡೆಗೆ ಸಲ್ಲುತ್ತದೆ.
40 ದೇಶದ ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಕಿರೀಟವನ್ನು ತಮ್ಮದಾಗಿಸಿಕೊಂಡ ಇವರದು ಪ್ರಮುಖ ಪ್ರತಿಭೆಯೇ ಸೈ! ಬ್ಯೂಟಿ ವಿತ್ ಬ್ರೇನ್ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ಗಂಡು ಮೆಟ್ಟಿದ ನಾಡೆಂದೇ ಜನಜನಿತವಾಗಿರುವ ಹುಬ್ಬಳ್ಳಿ ನಿವಾಸಿಯಾದ ಇವರು ಸಜ್ಜನಿಕೆ, ಸರಳತೆಗೆ ಹೆಸರಾದ ಹವ್ಯಕ ಬ್ರಾಹ್ಮಣ ಸಮುದಾಯದ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮುಡಿಗೇಸರದ ಮೂಲದವರು.
ಸಂಪ್ರದಾಯದ ಚೌಕಟ್ಟನ್ನು ದಾಟಿ ಸೌಂದರ್ಯ ಸ್ಪರ್ಧೆಯೆಡೆ ಗಮನವಿತ್ತು ಪಾಲ್ಗೊಳ್ಳುವುದು ಡಾ. ಶೃತಿಗೆ ಸುಲಭದ ಮಾತಾಗಿರಲಿಲ್ಲ. ತಂದೆ ಡಾ. ಕೃಷ್ಣ ಹೆಗಡೆ ಮತ್ತು ಅಣ್ಣ ಡಾ. ಸತೀಶ್ (ರೇಡಿಯಾಲಜಿಸ್ಟ್)ರಂತೆ ಸೇವೆಯನ್ನೇ ಗುರಿಯಾಗಿಸಿ ವೈದ್ಯ ವೃತ್ತಿಯನ್ನು ಆಯ್ದುಕೊಂಡರೂ, ಕಾಡುತ್ತಿದ್ದ ಕನಸಿನ ಬೆನ್ನೇರಿ ಛಲದಿಂದ ಸಾಧಿಸಿ ಮನಸ್ಸಿದ್ದಲ್ಲಿ ಮಾರ್ಗವುಂಟು ಎಂಬುದಕ್ಕೆ ನಿದರ್ಶನರಾಗಿದ್ದಾರೆ. ಗೃಹಿಣಿ ಕಮಲಾ ಹೆಗಡೆ ಮಗಳ ಕನಸುಗಳಿಗೆ ಬೆನ್ನೆಲುಬಾಗಿ ಬೆಂಬಲವಿತ್ತು ಪ್ರೋತ್ಸಾಹಿಸುತ್ತಿದ್ದಾರೆ.
“ಎಲ್ಲರಂತೆಯೇ ನನ್ನಲ್ಲೂ ಕನಸಿತ್ತು, ಋಣಾತ್ಮಕ ಮಾತುಗಳಿಂದ ವಿಚಲಿತಳಾಗದೇ ಕನಸನ್ನು ನನಸಾಗಿಸಲು ಛಲದಿಂದ ಮುನ್ನುಗ್ಗಿದ್ದರ ಫಲಶೃತಿಯೇ ಇದು! ಕಸುಗಳೇನೇ ಇದ್ದರೂ ಅದರೆಡೆ ಲಕ್ಷ್ಯವಿಟ್ಟು ದೃಢತೆಯಿಂದ ಸಾಗಿದರೆ ಯಶ ಶತಃಸಿದ್ಧ,” ಎಂಬುದು ಡಾ. ಶೃತಿಯವರ ಮನದಾಳದ ಮಾತು. ಧಾರಾವಾಡದ ಎಸ್.ಡಿ.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ವ್ಯಾಸಂಗದ ನಂತರ ಪ್ರಸ್ತುತ ತುಮಕೂರಿನ ಮೆಡಿಕಲ್ ಕಾಲೇಜಿನಲ್ಲಿ ಚರ್ಮರೋಗ ವಿಷಯದಲ್ಲಿ ಎಂ.ಡಿ ಅಧ್ಯಯನ ಮಾಡುತ್ತಿದ್ದಾರೆ. 2019ರಲ್ಲಿ ಹೊಟ್ಟೆಯ ಟ್ಯೂಮರ್ ನ ಕಾರಣ ತೆರೆದ ಶಸ್ತ್ರಚಿಕಿತ್ಸೆಗೆ ಒಳಪಟ್ಟಾಗ ಚೇತರಿಕೆಯ ಜೊತೆಗೆ ಇಂಟರ್ನ್ ಶಿಪ್, ನೀಟ್ ಪರೀಕ್ಷೆಗೂ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಜೀವನದ ಎರಡು ಅಮೂಲ್ಯ ವರ್ಷಗಳು ಉರುಳಿದವು.
ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಆಗದಿದ್ದರೂ ಭರವಸೆ ಕಳೆದುಕೊಳ್ಳದ ಶೃತಿ, ನುರಿತ ಭರತನಾಟ್ಯ ಕಲಾವಿದೆಯೂ ಹೌದು. ಕಥಕ್ಕಳಿ, ಕೂಚ್ಚುಪುಡಿ, ನೃತ್ಯ ಪ್ರಕಾರಗಳಲ್ಲೂ ಅಭಿರುಚಿ ಇದ್ದು ದೇಶ ವಿದೇಶಗಳಲ್ಲಿ ಅಸಂಖ್ಯ ಪ್ರದರ್ಶನ ನೀಡಿದ್ದಾರೆ.
ಚಲನಚಿತ್ರಗಳಾದ `ಜನುಮದಾತ’ದಲ್ಲಿ ಮುಖ್ಯ ಭೂಮಿಕೆ, `ಶರಣರ ಶಕ್ತಿ’ಯ ನೃತ್ಯಗಾತಿ ಶರಣರ ಸಂಕವ್ವ, ನಾಗಾಭರಣರ `ಜೀನಿಯಸ್ ಮುತ್ತ’ ಹಾಗೂ ಕಿರುತೆರೆಯ ಹಿಟ್ಲರ್ ಕಲ್ಯಾಣ, ಮತ್ತೆ ಮಾಯಾಮೃಗ, ವೆಬ್ ಸೀರೀಸ್ ನಲ್ಲಿಯೂ ನಟನೆಯ ಛಾಪು ಮೂಡಿಸಿದ್ದಾರೆ.
ಸ್ಕೆಚ್, ಪೇಂಟಿಂಗ್, ಕ್ಯಾಲಿಗ್ರಫಿ, ಸಂಗೀತ, ಕಥೆಕವನಗಳ ರಚನೆ, ಪುಸ್ತಕ ಓದುವುದು, ಸ್ಕೇಟಿಂಗ್, ಚೆಸ್ ಮುಂತಾದ ಹವ್ಯಾಸಗಳಾಗಿ ಬಹುಮಾನಗಳೂ ಸಂದಿವೆ. ನುರಿತ ವಯೋಲಿನಿಸ್ಟ್ ಆಗಿರುವ ಯುವ ವೈದ್ಯೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಓಂನಾಮ ಕಲಿತರೂ ಪ್ರಸ್ತುತ ಪಾಶ್ಚಾತ್ಯ ಸಂಗೀತ ನುಡಿಸುವಿಕೆಯ ಕಲಿಕೆಯಲ್ಲಿದ್ದಾರೆ.
ಹೆತ್ತವರು, ಅಣ್ಣನೊಡಗೂಡಿ `ಶ್ರಮ’ ಹೆಸರಿನ ಎನ್ಜಿಓ ನಡೆಸುತ್ತಿದ್ದು ಉಚಿತ ವೈದ್ಯಕೀಯ ಸೇವೆ, ಅಂಗವಿಕಲರಿಗೆ ಧನಸಹಾಯ, ನಿರಾಶ್ರಿತರು, ಬಡವರಿಗೆ ಉಚಿತ ಆಹಾರ ಪೂರೈಸುತ್ತಿದ್ದಾರೆ. ಪ್ರಮುಖವಾಗಿ ಗರ್ಭಕೊರಳಿನ ಕ್ಯಾನ್ಸರ್ ನಂತಹ ಮಾರಕ ರೋಗದ ಕುರಿತು ಜಾಗೃತಿ ಮೂಡಿಸುವುದಷ್ಟೇ ಅಲ್ಲದೆ, ಆ ವೈರಸ್ ನ್ನು ನಿಯಂತ್ರಿಸುವ ವ್ಯಾಯಾಕ್ಸಿನೇಶನ್ ನ ಸಲುವಾಗಿ ಡೊನೇಷನ್ ಕೊಡುತ್ತಿರುವುದು, ಬೇರೆ ಎನ್ಜಿಓಗಳೊಡನೆಯೂ ಕೈ ಜೋಡಿಸಿರುವುದು ಇವರಿಗಿರುವ ಸಾಮಾಜಿಕ ಕಳಕಳಿಗೆ ಉದಾಹರಣೆ.
ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯಾಗಿದ್ದುಕೊಂಡೇ ಸೌಂದರ್ಯ ಕ್ಷೇತ್ರದಲ್ಲೂ ಸಾಧನೆಗೈದು ಅನೇಕ ಬಿರುದುಗಳಿಗೆ ಭಾಜನರಾದ ಡಾ. ಶೃತಿಯವರಿಗೆ ಸಂದಿರುವ ಪ್ರಶಸ್ತಿಗಳಲ್ಲಿ ಪ್ರಮುಖವಾದವು ಇಲ್ಲಿವೆ.
ಮಿಸ್ ಯೂನಿವರ್ಸ್ ಪೆಟೀಟ್ 2024, ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ 2023, ರನ್ನರ್ ಅಪ್, ಮಿಸ್ ಸೌತ್ಇಂಡಿಯಾ 2018, ಮಿಸ್ ಸೌತ್ ಇಂಡಿಯಾ ಟ್ಯಾಲೆಂಟೆಡ್, ಮಿಸ್ ಐಡಿಯ್ ವುಮನ್ ರನ್ನರ್ ಅಪ್, ಮಿಸ್ ಕರ್ನಾಟಕ 2018 ರನ್ನರ್ ಅಪ್, ಮಿಸ್ ಫಿಟ್ನೆಸ್ ಕರ್ನಾಟಕ 2018, `ಪವರ್ ಆಫ್ ವುಮನ್’ ರಾಷ್ಟ್ರಮಟ್ಟದ ಆರ್ಟ್ ಸ್ಪರ್ಧೆಯಲ್ಲಿ ರಜತ ಪದಕ.
ಲೈಫ್ ಸ್ಟೈಲ್ ಪತ್ರಿಕೆಯ ಕವರ್ ಗರ್ಲ್ ಆಗಿದ್ದರೊಟ್ಟಿಗೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಡಾ. ಶೃತಿ 36ನೇ ಜಾಗತಿಕ ಕಲ್ಚರ್ ಫೆಸ್ಟ್ ದುಬೈ, 2019ರಲ್ಲಿ ಭೂತಾನ್, 2021ರಲ್ಲಿ ಮಾಲ್ಡೀವ್ಸ್ ನ ಕಲ್ಚರ್ ಫೆಸ್ಟ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಟ್ಯಾಲೆಂಟ್ ಇದ್ದರಷ್ಟೇ ಸಾಲದು. ಕಠಿಣ ಪರಿಶ್ರಮ, ಸತತಾಭ್ಯಾಸ, ಛಲ ಇದ್ದಲ್ಲಿ ಸಾಧನೆ ನಿಶ್ಚಿತ ಎಂಬುದು ಇವರ ಅನುಭವದ ಮಾತು. ಅಂತೆಯೇ ಕಮ್ಯೂನಿಕೇಶನ್ ಸ್ಕಿಲ್ ಗಾಗಿ ರೀಟಾ ಗಂಗ್ವಾನಿ (ಸುಷ್ಮಿತಾ ಸೇನ್, ಮಾನುಷಿ ಚಿಲ್ಲರ್ಮುಂತಾದ ಸಾಧಕರ ಟ್ರೇನರ್), ಆಕರ್ಷಕ ನಿಲುವು, ನಡೆಗಾಗಿ ತನ್ವಿ ಕರೋಟೆ, ಧ್ವನಿಯ ಮಾಡ್ಯುಲೇಷನ್ ಗಾಗಿ ಪ್ರಾಜಕ್ತಾ ಅಲ್ಬುಕರ್ಕ್ಯೂ, ಎಲಿಗೆಂಟ್ ಮೋನಾರ್ಕ್ ಟೀಮಿನ ಡೈರೆಕ್ಟರ್ ಊರ್ಮಿಮಾಲಾ ಬರುವಾ ಅವರ ದಕ್ಷ ಮಾರ್ಗದರ್ಶನದಡಿ ಓರ್ವ ಆಲ್ ಇಂಪ್ರೂವ್ ಮೆಂಟಿನ ಟ್ರೇನಿಂಗ್ ಪಡೆದು ಪ್ರತಿಷ್ಠಿತ ಟಿಯಾರಾ ಮುಡಿಗೇರಿಸಿಕೊಂಡ ಡಾ. ಶೃತಿಯವರ ಯಶೋಗಾಥೆ ಯುವಪೀಳಿಗೆಗೆ ಮಾದರಿಯಂತಿದೆ.
ನೀಳಕಾಯದವರಷ್ಟೇ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಎಂಬ ನಿಯಮದಿಂದಾಗಿ ಅರ್ಹತೆಗಳಿದ್ದರೂ ಕಡಿಮೆ ನಿಲುವಿನವರು ಅವಕಾಶ ವಂಚಿತರಾಗಬೇಕಿತ್ತು. 2009ರಲ್ಲಿ ನಿಯಮ ಸಡಿಲಿಸಿ 5.6 ಅಡಿಗಿಂತಲೂ ಕಡಿಮೆ ಎತ್ತರದವರು ಮಿಸ್ಯೂನಿವರ್ಸ್ ಪೆಟೀಟ್ ಸ್ಪರ್ಧೆಗೆ ಅರ್ಹರು ಎಂದು ಅಮೆರಿಕಾದ ಫ್ಲೋರಿಡಾದಲ್ಲಿ ಪ್ರಾರಂಭಿಸಲಾಯಿತು.
ಉಳಿದೆಲ್ಲಾ ಹಂತಗಳು `ಮಿಸ್ ಯೂನಿವರ್ಸ್’ ಸ್ಪರ್ಧೆಯದ್ದೇ ಆಗಿ 5.2 ಅಡಿ ನಿಲುವಿನ ಶೃತಿ ಎದುರಿಸಿದ ಹಂತಗಳು ಹೀಗಿವೆ : ನ್ಯಾಷನಲ್ ಉಡುಪು ಸುತ್ತು, ಪ್ರಶ್ನೋತ್ತರ ಸುತ್ತು, ನಿರ್ಣಾಯಕರ ಗಾಲಾ ಸುತ್ತು, ಕಡಲತೀರದ ಸುತ್ತು, ಈಜುಡುಗೆ ಸುತ್ತು, ಈವ್ನಿಂಗ್ ಗೌನ್ ಹಾಗೂ ನಡಿಗೆ ಸುತ್ತು, ಸ್ಪರ್ಧಾಳುವಿನ ನಡೆ, ನುಡಿ ಮುಂತಾದವನ್ನು ತಿಂಗಳುಗಳಿಂದ ಗಮನಿಸುತ್ತಿರುವ ಐದು ನಿರ್ಣಾಯಕರಿಂದ ಬೇರೆ ಬೇರೆಯಾಗಿ ವ್ಯಕ್ತಿಗತ ಪ್ರಶ್ನೋತ್ತರ ಸುತ್ತು (50% ಅಂಕಗಳ ಸುತ್ತು).
ಸೋಲೇ ಗೆಲುವಿನ ಮೆಟ್ಟಿಲೆಂಬಂತೆ ಸೋಲಿನ ಕಹಿಗಳನ್ನು ಅನುಭವಿಸಿದರೂ ಹಿಮ್ಮೆಟ್ಟದೇ ದೃಢ ಸಂಕಲ್ಪ, ನಿರಂತರ ಪರಿಶ್ರಮದಿಂದ ಗುರಿಯ ಬೆನ್ನು ಹತ್ತಿ ಯಶಸ್ವಿಯಾದ ಶೃತಿಯರಿಗೆ `ಸ್ಕೈ ಈಸ್ ದ ಲಿಮಿಟ್’ ಎಂಬುದು ನಿಜಕ್ಕೂ ಅನ್ವರ್ಥ!
– ಲತಾ ಹೆಗಡೆ





