ಕಥೆ ಶುಭಾ ಶ್ರೀನಾಥ್

ಕತ್ತಲೆಯಲ್ಲಿ ದೀಪದಂತೆ, ಗುಡಿಗೆ ಕಲಶದಂತೆ ಗೃಹಿಣಿಯೇ ಮನೆಯ ಕೇಂದ್ರಬಿಂದು. ಅವಳ ಜೀವನ ಯಾವುದೋ ಕಾರಣಕ್ಕೆ ಅಸ್ತವ್ಯಸ್ತವಾದಾಗ, ಅದನ್ನು ತಾನಾಗಿ ಸರಿಪಡಿಸಿಕೊಂಡು, ತನ್ನದು ನೆಮ್ಮದಿಯ ಸಂಸಾರ ಎಂಬಂತೆ ಮಾಡಿಕೊಳ್ಳುವುದು ಹೇಗೆ……?

ಬೆಳಗ್ಗೆ ಅಲಾರಂ ಹೊಡೆದಾಗ, ಭುವನಾಳಿಗೆ ಕಣ್ಣು ಬಿಡಲು ಕಷ್ಟ ಅನಿಸುತ್ತಿತ್ತು. ಆದರೆ ಏಳಲೇ ಬೇಕಲ್ಲ, ಏಳದಿದ್ದರೆ ಆಗದು, ಕಣ್ಣು ಕೀಳಲು ಆಗುತ್ತಿರಲಿಲ್ಲ. ಆದರೆ ಮಾಡಬೇಕಾದ ಕೆಲಸಗಳನ್ನು ನೆನೆದಾಗ ಏಳಲೇ ಬೇಕು ಅನ್ನಿಸಿತು.

ಕರಾಗ್ರೇ ಸತೇ ಲಕ್ಷ್ಮಿ ಹೇಳಿಕೊಂಡು, ನಿತ್ಯ ಕರ್ಮಗಳನ್ನು ಮುಗಿಸಿ, ಅಂಗಳಕ್ಕೆ ಬಂದು ಕಸ ಗುಡಿಸಿ, ನೀರು ಹಾಕಿ ಬಾಗಿಲಿಗೆ ರಂಗೋಲಿ ಎಳೆ ಬಿಟ್ಟಳು. ತಾನು ತವರಿನಲ್ಲಿ ಎಷ್ಟೊಂದು ರಂಗೋಲಿ ಹಾಕುತ್ತಿದ್ದೆ…… ಎಂಟನೇ ತರಗತಿಯಲ್ಲಿದ್ದಾಗ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದೆ. ಆದರೆ ಈಗ ಆ ರಂಗೋಲಿಗಳು ಹಾಕಲು ಪುರಸತ್ತಿಲ್ಲ, ಒಂದೆರಡು ಗೆರೆ ಎಳೆದರೆ ಸಾಕು, ಕರ್ತವ್ಯ ಮುಗಿಯಿತು ಅನಿಸುತ್ತದೆ. ಅತ್ತೆಯವರು ದೊಡ್ಡ ರಂಗೋಲಿ ಹಾಕುವುದಿಲ್ಲ ಎಂದು ಒಂದೆರಡು ಸಾರಿ ಸಿಡಿಮಿಡಿ ಮಾಡಿದರು. ಆದರೆ ಏನು ಮಾಡುವುದು….. ದೊಡ್ಡ ರಂಗೋಲಿ ಹಾಕಲು ಟೈಮ್ ಇರುವುದಿಲ್ಲ.

ಯೋಚನೆಗಳ ಲಹರಿಯಿಂದ ಹೊರಬಂದ ಭುವನಾ, ಸ್ನಾನ ಮುಗಿಸಿದವಳೇ ನೇರ ಅಡುಗೆಮನೆಗೆ ಬಂದು ಕಾಫಿ ಮಾಡಲು ಡಿಕಾಕ್ಷನ್‌ ಗೆ ನೀರಿಟ್ಟು, ಹಾಲು ಕಾಯಿಸಿ, ತರಕಾರಿ ಹೆಚ್ಚಿಕೊಂಡು ಕುಕ್ಕರ್‌ ಜೋಡಿಸಿದಳು. ಎಲ್ಲರಿಗೂ ಒಂದೊಂದು ಬಗೆಯ ಕಾಫಿ. ಅತ್ತೆಗೆ ಸಕ್ಕರೆ ರಹಿತ ಕಾಫಿ, ಮಾವನಿಗೆ ಕೃತಕ ಸಕ್ಕರೆ ಹಾಕಿ ಕಾಫಿ, ಯಜಮಾನರಿಗೆ ಸಕ್ಕರೆ ಹಾಕಿ ಕಾಫಿ, ಮಕ್ಕಳಿಬ್ಬರಲ್ಲಿ ಒಬ್ಬರಿಗೆ ಬೋರ್ನ್‌ ವಿಟಾ, ಒಬ್ಬರಿಗೆ ಹಾರ್ಲಿಕ್ಸ್ ಬೆರೆಸಿ ಮಕ್ಕಳನ್ನು ಎಬ್ಬಿಸಿದಳು. ಮಕ್ಕಳಿಬ್ಬರು ಬರುವಷ್ಟರಲ್ಲಿ ಬೆಳಗಿನ ಕಾಫಿ ಸಮಾರಾಧನೆ ಮುಗಿದಿತ್ತು. ಆರಾಮವಾಗಿ ಕುಳಿತು ಹದವಾಗಿ ಹಾಲು, ಸಕ್ಕರೆ ಬೆರೆಸಿದ ನೊರೆ ನೊರೆ ಕಾಫಿ ಕುಡಿಯಲು ಇಷ್ಟ. ಆದರೆ ಹಾಗೆ ಕುಡಿಯಲು ಸಮಯವಾದರೂ ಎಲ್ಲಿದೆ? ಸ್ವಲ್ಪ ಉಳಿದಿದ್ದ ಸಕ್ಕರೆ ರಹಿತ ಕಾಫಿಯನ್ನು ಕುಡಿದು ಬೆಳಗಿನ ಕಾಫಿ ಸಮಾರಾಧನೆಯನ್ನು ಮುಗಿಸಿದಳು.

ಇನ್ನು ತಿಂಡಿಗಾಗಿ ಅವಲಕ್ಕಿ ಒಗ್ಗರಣೆಗೆ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ನಿಂಬೆಹಣ್ಣು ಎಲ್ಲವನ್ನೂ ಸಿದ್ಧ ಮಾಡಿ ಮಧ್ಯಾಹ್ನದ ಊಟಕ್ಕೆ ಚಪಾತಿ ಹಿಟ್ಟು ಕಲಸಿದ ನಂತರ ಪಲ್ಯಕ್ಕೆ ಹೀರೇಕಾಯಿಯನ್ನು ಹೆಚ್ಚಿ ಚಿಕ್ಕ ಕುಕ್ಕರ್‌ ನಲ್ಲಿ ಬೇಯಲು ಇಟ್ಟು ಅವಲಕ್ಕಿ ಒಗ್ಗರಣೆ ಮುಗಿಸಿ ಮಕ್ಕಳಿಗೆ, ಯಜಮಾನರಿಗೆ, ಅತ್ತೆ ಮಾವಂದಿರಿಗೆ ಡೈನಿಂಗ್‌ ಟೇಬಲ್ ಮೇಲಿಟ್ಟು, ನಂತರ ಒಂದು ಕಡೆ ಚಪಾತಿ ಮತ್ತೊಂದು ಕಡೆ ಪಲ್ಯ ಮಾಡಿ ಡಬ್ಬಿಗಳಿಗೆ ತುಂಬಿಸಿದಳು.

ನಂತರ ಕುಕ್ಕರ್‌ ತೆಗೆದು ಹುಳಿ ಕುದಿಸಿ ಯಜಮಾನರ ಡಬ್ಬಿಗಳಿಗೆ ಚಪಾತಿ ಪಲ್ಯ, ಅನ್ನ ಸಾರು, ಮೊಸರು, ಹಸಿ ತರಕಾರಿ ಸಲಾಡ್‌, ಉಪ್ಪಿನಕಾಯಿ, ಚಟ್ನಿ ಪುಡಿ, ಬಾಳೆಹಣ್ಣು ತುಂಬಿಸಿ ಕೊಟ್ಟ ನಂತರ ಮಕ್ಕಳಿಗೆ ಶಾರ್ಟ್‌ ಬ್ರೇಕ್‌ ನಲ್ಲಿ ತಿನ್ನಲು ಹಣ್ಣುಗಳನ್ನು ತೊಳೆದು ಹೆಚ್ಚಿ ಡಬ್ಬಿಗಳಿಗೆ ತುಂಬಿಸಿ, ನಂತರ ಅವರ ನೀರಿನ ಬಾಟಲ್ ಗಳನ್ನು ತುಂಬಿಸಿದಳು. ನಡುವೆ ಮಕ್ಕಳಿಬ್ಬರ ಸ್ನಾನಕ್ಕೆ ಟವೆಲ್, ಸಮವಸ್ತ್ರ ಎಲ್ಲವನ್ನೂ ಕೊಟ್ಟಿದ್ದಾಯ್ತು. ನಂತರ ಮಗಳು ಒಂದೇ ಸಮನೆ ಗಲಾಟೆ ಶುರು ಹಚ್ಚಿದ್ದಳು. ಅಮ್ಮ ಜಡೆ ಹಾಕು, ಟೈಮ್ ಆಯ್ತು ಎಂದು ಒಂದೇ ಸಮನೆ ಕೂಗಿಕೊಳ್ಳುತ್ತಿದ್ದಳು. ಎರಡು ಜಡೆ ಹಾಕಿ ರಿಬ್ಬನ್‌ ಕಟ್ಟುವ ಹೊತ್ತಿಗೆ ಸಾಕಾಯಿತು. ಉದ್ದನೆಯ ಕೂದಲನ್ನು ಬಾಬ್‌ ಕಟ್‌ ಮಾಡಿಸಿ ಬಿಡೋಣ ಎಂದರೆ ಕತ್ತರಿಸುವುದು ಬೇಡ ಎಂದು ಮಗಳು ಹಠ ಮಾಡುತ್ತಿದ್ದಳು. ಖಾಸಗಿ ಶಾಲೆಯಲ್ಲಿ ಬಹಳ ಕಟ್ಟುನಿಟ್ಟಾಗಿ ಬಾಚಿ ಎರಡು ಜಡೆ ಹಾಕಿ ಮೇಲೆ ಕಟ್ಟಬೇಕು, ಇಲ್ಲದಿದ್ದರೆ ಡೈರಿಯಲ್ಲಿ ಬರೆದು ಕಳಿಸುತ್ತಾರೆ.

ಚೂಡಿದಾರ್‌ ಮೇಲೊಂದು ವೇಲ್ ‌ಹಾಕಿ, ಕೆದರಿದ್ದ ಕೂದಲನ್ನು ಕೈಯಿಂದ ಹಿಂದೆ ತಳ್ಳಿಕೊಂಡು, ಮಕ್ಕಳನ್ನು ಶಾಲೆಗೆ ಬಿಟ್ಟುಬರಲು ಹೊರಟಳು. ಮಗ, “ಅಮ್ಮಾ, ನಿನ್ನ ಚೂಡಿದಾರ್‌ ಮೇಲೆ ಹಿಟ್ಟು ಬಿದ್ದಿದೆ. ಬೇರೆ ಬಟ್ಟೆ ಹಾಕಿಕೊಂಡು ಬಾ,” ಎಂದ.

“ಈಗ ಅದಕ್ಕೆ ಟೈಮಿಲ್ಲ ನಡಿ….” ಎಂದಳು.

“ಅಮ್ಮಾ, ನನ್ನ ಗೆಳೆಯರು ನನ್ನನ್ನು ನಿಮ್ಮ ಮಮ್ಮಿ ಕೆಲಸಕ್ಕೆ ಹೋಗುತ್ತಾರಾ….? ಅದಕ್ಕೆ ನಿಮ್ಮ ಮನೆ ಆಯಾ ಆಂಟಿ ಬಿಡೋದಕ್ಕೆ ಬರೋದಾ ಅಂತ ಕೇಳ್ತಾರೆ ಗೊತ್ತಾ…..?” ಎಂದ ಮಗನಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ.

“ಬೇಗ ಹೋಗೋಣ ನಡಿ, ಬೆಲ್ ‌ಆದ ಮೇಲೆ ಹೋದರೆ ಶಿಕ್ಷೆ ಕೊಡುತ್ತಾರೆ,” ಎಂದು ಹೊರಡಿಸಿಕೊಂಡು ಸ್ಕೂಟಿಯಲ್ಲಿ ಮಕ್ಕಳಿಬ್ಬರನ್ನು ಶಾಲೆಗೆ ಬಿಟ್ಟು ಮನೆಗೆ ಇನ್ನೇನು ಬಂದು ತಟ್ಟೆಗೆ ತಿಂಡಿ ಹಾಕಿಕೊಂಡು ಕುಳಿತಾಗ ಮಾವನ ಅಣ್ಣ ಬಂದರು. ತಿಂಡಿ ಹೊತ್ತಿಗೆ ಬಂದ ಮೇಲೆ ತಿಂಡಿ ಕೊಡದೆ ಇದ್ದರೆ ಹೇಗೆ? ತನ್ನ ಪಾಲಿನ ತಿಂಡಿಯನ್ನು ಅವರಿಗೆ ಕೊಟ್ಟು ರಾತ್ರಿಯ ಉಳಿದ ಚೂರು ಅನ್ನಕ್ಕೆ ಹುಳಿ ಹಾಕಿಕೊಂಡು ಉಪ್ಪಿನಕಾಯಿ ಜೊತೆ ತಿಂದಳು.

ನಂತರ ಮತ್ತೆ ಕಾಫಿ ಸಮಾರಾಧಾನೆ. ಮಾವನವರ ಅಣ್ಣ, ಅವರ ಸೊಸೆ ಬರೆದಿದ್ದ ಕಥೆಯೊಂದು ಪತ್ರಿಕೆಯಲ್ಲಿ ಬಂದಿದೆ ಎಂದು ತೋರಿಸಿದರು. ಮಾವನವರು ಕಥೆ ಬರೆಯಲು ಟ್ಯಾಲೆಂಟ್‌ ಇರಬೇಕು ಎಂದರು. ಕಥೆ ಬರೆಯಲು ಕುಳಿತಾಗ ಕಥೆಕವನ ಬರೆಯುವುದರಿಂದ ಏನು ಪ್ರಯೋಜನವಿಲ್ಲ, ಅದರಿಂದ ಏನೂ ಸಂಪಾದನೆಯಿಲ್ಲ ಎಂದು ಅತ್ತೆಮಾವ ಇಬ್ಬರೂ ಮನೆ ಕೆಲಸ ಮಾಡಿಕೋ ಸಾಕು ಎಂದಿದ್ದರು. ಈಗ ಬೇರೆ ಯಾರದೋ ಕಥೆ ಬಂದಾಗ ಖುಷಿಪಟ್ಟು ಸಂಭ್ರಮಿಸುತ್ತಿದ್ದಾರೆ ಎಂದು ಬೇಸರವೆನಿಸಿತು.

ಒಂದೆರಡು ಘಳಿಗೆ ನಿಧಾನವಾಗಿ ವಿಶ್ರಮಿಸಿಕೊಂಡು ಕುಳಿತುಕೊಳ್ಳೋಣ ಎನಿಸಿತು. ಆದರೆ ಅಡುಗೆಮನೆಯ ಸಿಂಕ್‌ ನಲ್ಲಿ ಇದ್ದ ತೊಳೆಯುವ ಪಾತ್ರೆಗಳು, ಬಕೆಟ್‌ ತುಂಬಾ ಇದ್ದ ಒಗೆಯುವ ಬಟ್ಟೆಗಳನ್ನು ನೋಡಿ, `ಇನ್ನು ಕುಳಿತರೆ ಆಗುವುದಿಲ್ಲ,’ ಎಂದುಕೊಂಡು ಎದ್ದು ಪಾತ್ರೆ, ಬಟ್ಟೆ ಮುಗಿಸುವ ವೇಳೆಗೆ ಮಧ್ಯಾಹ್ನ ಒಂದೂವರೆ. ಊಟದ ಸಮಯ. ಊಟ ಮುಗಿದ ಮೇಲೆ ಮತ್ತೆ ಪಾತ್ರೆ, ಅಡುಗೆಮನೆ ಸ್ವಚ್ಛ ಮಾಡುವುದು…. ಹೀಗೆ ಒಂದಾದ ಮೇಲೆ ಒಂದರಂತೆ ಕೆಲಸಗಳು.

lakir-mat-pito-story1

“ಭುವನಾ, ನಾಳೆ ನಮ್ಮ ಲೇಡೀಸ್‌ ಕ್ಲಬ್‌ ಕಡೆಯಿಂದ ಶ್ರೀರಂಗಪಟ್ಟಣ, ನಿಮಿಷಾಂಬ, ತ್ರಿವೇಣಿ ಸಂಗಮ, ಮೇಕೆದಾಟು ಎಲ್ಲಾ ಕಡೆ ಪ್ರವಾಸ ಹೋಗುತ್ತಿದ್ದೇವೆ. ಬೆಳಗ್ಗೆ ಆರೂವರೆಗೆ ಇಲ್ಲೇ ನಮ್ಮ ಮನೆ ಮುಂದೆ ಮಿನಿ ಬಸ್‌ ಬರುತ್ತೆ. ಒಟ್ಟು 25 ಜನ ಹೋಗುತ್ತೇವೆ. ಸ್ವಲ್ಪ ಬೆಳಗ್ಗೇನೇ ಬಿಸಿಬೇಳೆ ಭಾತ್‌ ಮತ್ತು ಹಯಗ್ರೀವ ಮಾಡಿಕೊಡು, ಎಲ್ಲರೂ ಒಂದೊಂದು ಐಟಂ ತುರುವುದು ಅಂತ ಮಾತಾಡಿಕೊಂಡಿದ್ದೇವೆ,” ಎಂದು ಅತ್ತೆ ಹೇಳಿದರು.

ನಾಳೆ ಶನಿವಾರ. ಮಕ್ಕಳಿಬ್ಬರಿಗೂ ರಜಾ. ಯಜಮಾನರಿಗೂ ರಜಾ. ಆರಾಮವಾಗಿ ತಡವಾಗಿ ಏಳೋಣ ಅಂದಕೊಂಡರೆ, ಅತ್ತೆಯ ಪ್ರವಾಸಕ್ಕಾಗಿ ಮತ್ತೆ ಬೇಗ ಏಳಬೇಕು. ಎಲ್ಲಿಯಾದರೂ ಹೋಟೆಲ್ ನಲ್ಲಿ ತಿಂದಿದ್ದರೆ ಆಗುತ್ತಿರಲಿಲ್ವಾ ಎನಿಸಿತು. ಆದರೆ ಹಾಗೆ ಹೇಳಲು ಆಗುತ್ತದೆಯೇ? ತಾನು ಗಂಡ ಮಕ್ಕಳ ಜೊತೆ, ಅಥವಾ ಗೆಳತಿಯರ ಜೊತೆ ಪ್ರವಾಸ ಹೋಗಿ ಯಾವ ಕಾಲವಾಯಿತೋ….? ಮಕ್ಕಳು ಚಿಕ್ಕವರು, ನಂತರ ಅವರ ಸ್ಕೂಲ್‌, ಓದು, ಬರಹ ಅಂತ ಎಲ್ಲಿಯೂ ಹೋಗಲು ಆಗುವುದಿಲ್ಲ. ತನ್ನ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದುಕೊಂಡಳು.

ಶಾಲೆಗೆ ಹೋಗಿ ಮಕ್ಕಳನ್ನು ಕರೆತಂದಳು. ಅವರು ಡ್ರೆಸ್‌ ಬದಲಿಸಿ, ಕೈಕಾಲು ಮುಖ ತೊಳೆದು ಬಂದ ಮೇಲೆ ಹುಳಿ ಬಿಸಿ ಮಾಡಿ, ಅವರಿಬ್ಬರಿಗೂ ಅನ್ನ, ಹುಳಿ, ತುಪ್ಪ ಹಾಕಿ ಬಡಿಸಿದಳು. ಇಬ್ಬರೂ ಒಂದಷ್ಟು ಗಲಾಟೆ ಮಾಡುತ್ತಾ, ಸ್ಕೂಲ್ ವಿಷಯಗಳನ್ನು ಹೇಳುತ್ತಾ ಊಟ ಮಾಡಿದರು.

ನಂತರ ಸಾಯಂಕಾಲದ ಕಸ ಗುಡಿಸುವುದು, ಕಾಫಿ, ತಿಂಡಿ, ದೇವರ ದೀಪ ಹಚ್ಚುವುದು, ಮಕ್ಕಳ ಹೋಂವರ್ಕ್‌ ಮಾಡಿಸಿ, ರಾತ್ರಿ ಅಡುಗೆ ಎಲ್ಲಾ ಮುಗಿಸಿ, ಮಾರನೇ ದಿನ ಬಿಸಿಬೇಳೆ ಭಾತ್‌ ಗೆ ತರಕಾರಿ ಹೆಚ್ಚಿಟ್ಟು ಮಲಗಲು ಬಂದಾಗ ರಾತ್ರಿ ಹನ್ನೊಂದೂವರೆ. ಯಜಮಾನರ ಗೊರಕೆ ಕೇಳಿಸುತ್ತಿತು. ಅಷ್ಟು ಕೆಲಸ ಮುಗಿಸಿ ಬಂದ ಮೇಲೆ ಕೈ ಹಿಡಿದ ಪತಿ ಒಂದೇ ಒಂದು ಮುಗುಳ್ನಗೆ ನಕ್ಕರೂ ಸಾಕು, ತನ್ನೆಲ್ಲ ಕಷ್ಟ ಮರೆಯಬಹುದು. ಇತ್ತೀಚೆಗೆ ಯಜಮಾನರಿಗೆ ತನ್ನ ಬಗ್ಗೆ ಆಸಕ್ತಿಯೇ ಇಲ್ಲದಂತೆ ಆಗಿದೆ ಎಂದುಕೊಳ್ಳುತ್ತಾ ಹಾಸಿಗೆಯಲ್ಲಿ ಒರಗಿದಳು.

ಡಿಗ್ರಿ ಮುಗಿದ ಕೂಡಲೇ ಮದುವೆ ಮಾಡಿದರು. ನಂತರ ನಾಲ್ಕು ವರ್ಷಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಹೆತ್ತ ಮೇಲೆ, ಮಕ್ಕಳು ಸಾಕು ಎಂದು ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾಗಿತ್ತು. ಅದರಿಂದ ಹೀಗೆ ವಿಪರೀತ ಮೈ ಬರಲು ಶುರುವಾಯಿತು. ತೆಳ್ಳಗೆ ಬಳುಕುವ ಬಳ್ಳಿಯಂತೆ ಇದ್ದ ತಾನೀಗ ಕುಂಬಳ ಕಾಯಿಯಂತೆ ಆಗಿದ್ದೇನೆ. ಹೀಗಾಗಿ ಯಜಮಾನರಿಗೆ ತನ್ನ ಬಗ್ಗೆ ಆಸಕ್ತಿಯೇ ಇಲ್ಲವಾಗಿದೆ, ಎಂದುಕೊಂಡಂತೆ ಅವಳಿಗೆ ಅಳು ಬಂದಿತು. ಆದರೆ ಅಳಲೂ ಆಗುವುದಿಲ್ಲ. ಹಾಗೇ ಕಣ್ಣು ಮುಚ್ಚಿದಳು. ಮಾರನೇ ದಿನ ಬೆಳಗ್ಗೆ ನಾಲ್ಕೂವರೆ ಹೊತ್ತಿಗೆ ಎದ್ದು ಸ್ನಾನ ಮುಗಿಸಿ ಅಡುಗೆ ಮನೆಗೆ ಬಂದ ಭುವನಾ, ಮೊದಲು ಕುಕ್ಕರ್‌ ನಲ್ಲಿ ಅಕ್ಕಿ, ಬೇಳೆ ತರಕಾರಿ ಹಾಕಿ, ಮತ್ತೊಂದು ಕಡೆ ಹಯಗ್ರೀವಕ್ಕೆ ಕಡಲೆಬೇಳೆ ಬೇಯಲು ಇಟ್ಟಳು. ಕಾಯಿ ತುರಿದುಕೊಂಡು ಬಿಸಿಬೇಳೆ ಭಾತ್‌ ಗೆ ಖಾರ ರೆಡಿ ಮಾಡಿ, ಎಲ್ಲವನ್ನೂ ಸೇರಿಸಿ ಒಗ್ಗರಣೆ ಕೊಟ್ಟು ಮುಗಿಸಿ, ಡಬ್ಬಿಗಳಲ್ಲಿ ತುಂಬುವ ಹೊತ್ತಿಗೆ ಸಮಯ ಆರೂವರೆ ಆಗಿತ್ತು.

`ಉಸ್ಸಪ್ಪಾ….’ ಎನ್ನುವಂತೆ ಆಯಿತು. ಅತ್ತೆ ಬಂದು, “ಉಪ್ಪು ಖಾರ ಎಲ್ಲ ಸರಿಯಾಗಿ ಹಾಕಿದೀಯಾ ತಾನೇ?” ಎಂದ ಕೇಳಿದರು.

“ಹ್ಞೂಂ ಅತ್ತೆ….” ಎಂದಳು.

“ಸರಿ, ನಾನು ಹೋಗಿ ಬರುತ್ತೇನೆ. ಮನೆ ಕಡೆ ಜೋಪಾನ,” ಎಂದು ಹೇಳಿ ಬಿಸಿಬೇಳೆ ಭಾತ್‌ ಮತ್ತು ಹಯವಗ್ರೀ ತುಂಬಿದ್ದ ಡಬ್ಬಿಗಳನ್ನು ತೆಗೆದುಕೊಂಡು ಹೊರಟರು.

ಕಾಲೇಜಿನಲ್ಲಿ ಓದುವಾಗ, ವಾಣಿ ವಿಲಾಸ ಸಾಗರಕ್ಕೆ ಪ್ರವಾಸ ಹೋಗಿದ್ದು ಜ್ಞಾಪಕಕ್ಕೆ ಬಂದಿತು. ಸಂತಸದ ಅಲೆಯ ಹಿಂದೆ ವಿಷಾದಿಂದ ಹಾದು ಹೋಯಿತು. ವಿದ್ಯಾರ್ಥಿ ಜೀವನವೇ ಚೆಂದ. ಯಾವ ಯೋಚನೆ, ತಾಪತ್ರಯ ಇರುವುದಿಲ್ಲ. ಬರೀ ಕಾಲೇಜ್‌ ಗೆ ಹೋಗುವುದು ಹಾಗೂ ಓದುವುದು ಬಿಟ್ಟರೆ ಮತ್ತೇನೂ ಇರುತ್ತಿರಲಿಲ್ಲ.

ಓದಿನಲ್ಲಿ ಬುದ್ಧಿವಂತೆ ಆಗಿದ್ದರೂ, ಎಂಜಿನಿಯರಿಂಗ್‌ ಓದುತ್ತಿದ್ದ ಅಣ್ಣ ಹಾಗೂ ತನಗೆ ಸೇರಿ ಇಬ್ಬರಿಗೂ ಫೀಸ್‌ ಕಟ್ಟುವುದು ಕಷ್ಟ ಎಂದು, ಅಲ್ಲೇ ಮನೆಯ ಹತ್ತಿರವೇ ಇದ್ದ ಸರ್ಕಾರಿ ಕಾಲೇಜಿಗೆ ಕಲಾ ವಿಭಾಗಕ್ಕೆ ಸೇರಿಸಿದ್ದರು. ಕಾಲೇಜಿನಲ್ಲಿ ಪಾಠ ಕೇಳಿದ್ದಕ್ಕಿಂತ ಹೊರಗಡೆ ಕುಳಿತು ದಿನ ಬೋರೆ ಹಣ್ಣು, ಖಾರ ಹಚ್ಚಿದ ಸೌತೆಕಾಯಿ, ಚುರುಮುರಿ, ಐಸ್‌ ಕ್ಯಾಂಡಿ ತಿಂದು ಗೆಳತಿಯರೊಂದಿಗೆ ಹರಟೆ ಹೊಡೆದದ್ದೇ ಹೆಚ್ಚು. ಎಷ್ಟು ಚೆನ್ನಾಗಿರುತ್ತಿತ್ತು…… ಆಗ ಕೊಡುತ್ತಿದ್ದ ಐದು ಹತ್ತು ರೂಪಾಯಿ ಕೂಡ ನನಗೆ ದೊಡ್ಡ ಮೊತ್ತವೇ, ಗೆಳತಿಯರೆಲ್ಲ ಸೇರಿ ಅದೆಷ್ಟು ಹರಟೆ ಹೊಡೆಯುತ್ತಿದ್ದೆ. ಈಗ ಕಾಲೇಜಿನ ಗೆಳತಿಯರೆಲ್ಲ ಸೇರಿ ವಾಟ್ಸ್ ಆ್ಯಪ್‌ ಗ್ರೂಪ್ ಮಾಡಿಕೊಂಡಿದ್ದರೂ, ಅದನ್ನು ಓದಿ, ಕಮೆಂಟ್‌ ಹಾಕಲು ಸಹ ಸಮಯವಿಲ್ಲ. ಎಲ್ಲರೂ ಎಷ್ಟು ಸುಖವಾಗಿ ಇದ್ದಾರೆ. ಆದರೆ ತನಗೇಕೆ ಹೀಗೆ ಎನಿಸಿತು ಅವಳಿಗೆ. ನಿಟ್ಟುಸಿರೊಂದು ಹೊರ ಬಂದಿತು.

ಭಾನುವಾರ ಬೆಳಗ್ಗೆ ನಾದಿನಿ ತನ್ನ ಸಂಸಾರದೊಂದಿಗೆ ಹಾಜರ್‌. ಎಲ್ಲರಿಗೂ ಬಿಸಿ ಬಿಸಿ ದೋಸೆ, ಚಟ್ನಿ, ಆಲೂಗಡ್ಡೆ ಪಲ್ಯ, ಕಾಫಿ, ನಂತರ ಮಧ್ಯಾಹ್ನಕ್ಕೆ ಅನ್ನ, ಹುಳಿ, ಸಾರು, ಪಲ್ಯ, ಹಪ್ಪಳ ಮಾಡಿ ಬಡಿಸಿ, ಎಲ್ಲವನ್ನೂ ಸ್ವಚ್ಛ ಮಾಡುವ ವೇಳೆಗೆ ಸಾಕಾಯಿತು. ಅತ್ತೆ ಪಕ್ಕದ ಮನೆಯವರ ಹತ್ತಿರ, “ನಮ್ಮ ಜ್ಯೋತಿ ಒಳಗೂ ಹೊರಗೂ ಎರಡೂ ಕಡೆ ಕೆಲಸ ಮಾಡಿ ಮಾಡಿ ಸಾಕಾಗಿರುತ್ತಾಳೆ. ಅದಕ್ಕೆ ಪ್ರತಿ ಭಾನುವಾರ ಇಲ್ಲಿಗೆ ಬಂದು ಸ್ವಲ್ಪ ಸುಧಾರಿಸಿಕೊಂಡು ಹೋಗು ಅಂತ ಹೇಳಿದ್ದೀನಿ. ಹೇಗೂ ಭುವನಾ ಏನೂ ಎಲ್ಲೂ ಕೆಲಸಕ್ಕೆ ಹೋಗುವುದಿಲ್ಲ. ವಾರ ಪೂರ್ತಿ ಸುಮ್ಮನೆ ಮನೆಯಲ್ಲೇ ಇರುತ್ತಾಳೆ,” ಎಂದು ಹೇಳುತ್ತಿದ್ದರು.

ಮದುವೆಗೆ ಮುಂಚೆಯೇ ಕೆಲಸಕ್ಕೆ ಕಳಿಸುವುದಿಲ್ಲ ಎಂದು ಹೇಳಿಯೇ ಮದುವೆ ಮಾಡಿಕೊಂಡದ್ದು. ಆಗಂತೂ ಹಿರಿಯರು ಒಪ್ಪಿದರೆ ಮುಗಿಯಿತು ಎನ್ನುವ ಧೋರಣೆ. ಸ್ವಂತ ಯೋಚನೆ ಮಾಡುವಷ್ಟು ಪ್ರಬುದ್ಧ ಮನಸ್ಥಿತಿ ಇರಲಿಲ್ಲ.

ಸೋಮವಾರದಿಂದ ಮತ್ತೆ ಯಥಾಪ್ರಕಾರದ ಜೀವನ……. ತಾಯಿ ತಂದೆಯ ಮನೆಗೆ ಹೋಗಬೇಕೆಂದು ಅನಿಸಿತು. ಒಂದೇ ಊರಿನಲ್ಲಿ ಇದ್ದರೂ ಕೂಡ ಆರು ತಿಂಗಳಿಗೆ ಒಮ್ಮೆ ಹೋಗುತ್ತಿದ್ದದ್ದು. ಬೆಳಗ್ಗೆ ಎದ್ದಾಗ ಏಕೋ ಒಮ್ಮೆಲೆ ತಲೆ ಗಿರ್‌ ಎಂದು ತಿರುಗಿದಂತೆ ಆಯಿತು. ಇತ್ತೀಚೆಗೆ ಕೆಲವೊಮ್ಮೆ ಈ ರೀತಿ ಆಗುತ್ತಿದ್ದರೂ ಅದಕ್ಕಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಂತರ ಎದ್ದು ಹೊರಗೆ ಹೋಗಿ ಬಗ್ಗಿ ರಂಗೋಲಿಯ ಎಳೆ ಬಿಡಿಸುತ್ತಿದ್ದಾಗ ಮತ್ತೆ ಕಣ್ಣು ಕತ್ತಲೆ ಬಂದಿತು. ಒಂದು ಕ್ಷಣ ಏನಾಗುತ್ತಿದೆ ಎಂದು ತಿಳಿಯದೇ ಹೋಯಿತು. ಎಚ್ಚರವಾದಾಗ ಹಾಲ್ ನಲ್ಲಿದ್ದ ದಿವಾನ್‌ ಕಾಟ್‌ ಮೇಲೆ ಮಲಗಿರುವುದು ತಿಳಿಯಿತು.

ಪಕ್ಕದಲ್ಲಿ ಪತಿ ಜೋರಾಗಿ, “ಭುವನಾ, ಭುವನಾ…..” ಎಂದು ಕರೆಯುತ್ತಿದ್ದುದು ಕೇಳಿಸಿತು.

ಅತ್ತೆ ಮಾವ ಒಂದಷ್ಟು ಕಂಗಾಲಾಗಿ ನಿಂತಿದ್ದರು. ಮಕ್ಕಳು ಆಗಲೇ ಎದ್ದು ಅಮ್ಮ ಎಂದು ಸೀರೆಯ ಸೆರಗು ಹಿಡಿದುಕೊಂಡು ಅಳುತ್ತಿದ್ದರು. ಕಣ್ಣು ಬಿಟ್ಟು ನೋಡಿದಾಗ ಎಲ್ಲರಿಗೂ ಸ್ವಲ್ಪ ಸಮಾಧಾನ ಆದಂತೆ ಕಾಣಿಸಿತು.

“ಏನಾಯಿತು ಭುವನಾ?”ಎಂದು ಕೇಳಿದರು.

“ಕಣ್ಣು ಕತ್ತಲು ಬಂದಿತು,” ಎಂದಳು.

“ಸರಿ ಸ್ವಲ್ಪ ಸಕ್ಕರೆ ನೀರು ಕುಡಿ, ಕಡಿಮೆ ಆಗುತ್ತೆ. ಹಾಗೆ ಸ್ವಲ್ಪ ರೆಸ್ಟ್ ತೆಗೆದುಕೋ,” ಎಂದರು. ಮನೆಯ ಕೆಲಸಗಳೆಲ್ಲ ಅತ್ತೆಯ ಮೇಲೆ ಬಿದ್ದಾಗ ಅತ್ತೆ ಸ್ವಲ್ಪ ಅಸಹನೆ ತೋರಿಸಿದರು.

ನಂತರ ಪತಿ, “ಇವತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗುವೆ, ತಿಂಡಿ ತಿನ್ನು,” ಎಂದು ಹೇಳಿದರು.

ಸ್ನಾನ ಮಾಡಿ, ತಿಂಡಿ ತಿಂದು ಆಸ್ಪತ್ರೆಗೆ ಹೋಗಿ ಸರದಿಯಲ್ಲಿ ಕಾಯುತ್ತಾ ಕುಳಿತುಕೊಂಡಳು. ನಂತರ ವೈದ್ಯರ ಬಳಿ ತೋರಿಸಿದಾಗ ರಾಡಮ್ ಶುಗರ್‌ ಟೆಸ್ಟ್ ಮಾಡಿಸಲು ಹೇಳಿದರು. ಹಾಗೆಯೇ ರಕ್ತದ ಒತ್ತಡ ಪರೀಕ್ಷಿಸಿದರು.

ರಿಪೋರ್ಟ್‌ ನೋಡಿ, “ನಿಮಗೆ ಸ್ವಲ್ಪ ಶುಗರ್‌ ಮತ್ತು ಬಿಪಿ ಬಾರ್ಡರ್‌ ನಲ್ಲಿ ಇದೆ. ಎಷ್ಟು ವಯಸ್ಸು?” ಎಂದೆಲ್ಲಾ ವಿಚಾರಿಸಿದರು. “ಡಾಕ್ಟರ್‌ ನನಗೆ ಇನ್ನೂ 32 ವರ್ಷ ಅಷ್ಟೇ. ಅಲ್ಲದೆ ಇಷ್ಟು ಬೇಗ ಬಿಪಿ ಶುಗರ್‌ ಬರುತ್ತದೆಯೇ…?” ಎಂದು ಕೇಳಿದಳು.

“ಬಿಪಿ ಶುಗರ್‌ ಬರಲು ವಯಸ್ಸಿಲ್ಲ, ಎಲ್ಲರಿಗೂ ಬರುತ್ತದೆ. ನಾಳೆ ಫಾಸ್ಟಿಂಗ್‌ ಶುಗರ್‌ ಟೆಸ್ಟ್ ಮಾಡಿಸಿಕೊಂಡು ಬನ್ನಿ,” ಎಂದರು. ಎಲ್ಲ ಮುಗಿಸಿಕೊಂಡು ಮನೆಗೆ ಬರುವಾಗ ಪತಿಯ ಮುಖದಲ್ಲಿ ಕೋಪವಿದೆಯೇ, ಅನುಕಂಪವಿದೆಯೇ ಪ್ರೀತಿ ಇದೆಯೇ ಎಂದು ಹುಡುಕಲು ಹೋಗಿ ಸೋತಳು. ಹೆಂಗಸರು ಮನೆಯಲ್ಲಿ ಯಾವಾಗಲೂ ಎಲ್ಲಾ ಕೆಲಸ ಮಾಡುತ್ತಿದ್ದರೆ ಚೆಂದ. ಇಲ್ಲದಿದ್ದರೆ ಎಲ್ಲರಿಗೂ ಅಸಹನೆ. ಅದರಲ್ಲೂ ಗಂಡಂದಿರಿಗೆ ಹೆಂಡತಿಗೆ ಕಾಯಿಲೆ ಬಂದರೆ ಆಸ್ಪತ್ರೆಗೆ ದುಡ್ಡು ಖರ್ಚು ಎಂದು ಸೋದರತ್ತೆ ಹೇಳಿದ್ದು ಜ್ಞಾಪಕಕ್ಕೆ ಬಂದಿತು. ಒಂದು ವಿಷಾದದ ನಗೆ ಮುಖದಲ್ಲಿ ಹಾದು ಹೋಯಿತು. ಅಂತೂ ಎಲ್ಲಾ ಪರೀಕ್ಷೆಗಳನ್ನು ಮುಗಿಸಿದಾಗ, ವೈದ್ಯರು ನಿಯಮಿತವಾಗಿ ವಾಕಿಂಗ್‌ ಮಾಡಿ, ಶರೀರಕ್ಕೆ ವ್ಯಾಯಾಮ ಬೇಕು ಎಂದು ಹೇಳಿದರು. ಜೊತೆಗೆ ಊಟ, ತಿಂಡಿ ಎಲ್ಲದರ ಚಾರ್ಟ್‌ ಕೊಟ್ಟರು.

“ಡಾಕ್ಟರ್‌, ನಾನು ದಿನ ಎಷ್ಟೊಂದು ಮನೆ ಕೆಲಸ ಮಾಡುತ್ತೇನೆ. ಅದು ವ್ಯಾಯಾಮವೇ ಅಲ್ಲವೇ…?” ಎಂದು ಕೇಳಿದಳು. ಅ

ದಕ್ಕೆ ವೈದ್ಯರು, “ನಾವು ಅಲ್ಲಿಯೇ ತಪ್ಪುವುದು, ಮನೆ ಕೆಲಸದ ಹೊರತಾಗಿ ಬೆಳಗ್ಗೆ ಅಥವಾ ಸಾಯಂಕಾಲ ತಣ್ಣನೆಯ ಹೊತ್ತಿನಲ್ಲಿ ಮನಸ್ಸು ಪ್ರಶಾಂತ, ಉಲ್ಲಾಸವಾಗಿ ಇರಲು, ಮೈಯಲ್ಲಿನ ಕೊಬ್ಬು ಕರಗಲು ನಿಯಮಿತವಾಗಿ ಅವಶ್ಯಕವಾಗಿ ವಾಕಿಂಗ್ ಬೇಕೇ ಬೇಕು,” ಎಂದರು.

`ಇಷ್ಟೆಲ್ಲಾ ನಾನು ಮಾಡಲು ಸಾಧ್ಯವೇ…..?’ ಎನಿಸಿತು ಭುವನಾಳಿಗೆ.

ಆಸ್ಪತ್ರೆಯಿಂದ ಮನೆಗೆ ಬಂದ ಭುವನಾ, ಊಟ ಮಾಡಿ ಮಲಗಿಕೊಂಡಳು. ಆದರೆ ಮಲಗಿದರೆ ಎಲ್ಲಿಯ ನಿದ್ದೆ?

`ಇವತ್ತು ಬೆಳಗ್ಗೆ ಮಕ್ಕಳಿಬ್ಬರೂ ತಿಂಡಿ ತಿಂದರೋ, ಹಾಲು ಕುಡಿದರೋ, ಹೋಂವರ್ಕ್‌ ತೆಗೆದುಕೊಂಡು ಹೋದರೋ ಇಲ್ಲವೋ? ಇವತ್ತು ಗಣಿತ ಯೂನಿಟ್‌ ಟೆಸ್ಟ್ ಎಂದು ಮಗ ಹೇಳಿದ್ದ. ಒಂದೆರಡು ದಿನಗಳಿಂದ ಪಾಠ ಹೇಳಿಕೊಡಲು ಸಮಯ ಸಿಕ್ಕಿಲ್ಲ, ಜಾಮಿಟ್ರಿ ಪೆಟ್ಟಿಗೆ ತೆಗೆದುಕೊಂಡು ಹೋದನೋ ಇಲ್ಲವೋ….. ಗೊತ್ತಿಲ್ಲ. ಯಜಮಾನರಿಗೆ ಮುಖ್ಯವಾದ ಮೀಟಿಂಗ್‌ ಇತ್ತು. ಇವತ್ತು ನನ್ನಿಂದಾಗಿ ಆಸ್ಪತ್ರೆಗೆ ಹೋಗಬೇಕಾಯ್ತು. ಮೀಟಿಂಗ್‌ ತಪ್ಪಿ ಹೋಯಿತು. ಛೇ ನನ್ನಿಂದ ಎಲ್ಲರಿಗೂ ತೊಂದರೆ,’ ಎಂದುಕೊಂಡಳು.

ನಿದ್ದೆಯ ಜೊಂಪು ಹತ್ತುವಾಗ ಹೊರಗಡೆ ಅತ್ತೆ ಪಕ್ಕದ ಮನೆಯವರೊಂದಿಗೆ ಮಾತನಾಡುತ್ತಾ ಇದ್ದದ್ದು ಕೇಳಿಸಿತು.

“ಏನು ನಿಮ್ಮ ಸೊಸೆಗೆ ಹುಷಾರಿಲ್ಲವೇ….? ನೀವೇ ಬಟ್ಟೆ ಒಣಗಿ ಹಾಕುತ್ತಾ ಇದ್ದೀರಾ….?”

“ಅವಳಿಗೆ ಹುಷಾರಿಲ್ಲ……” ಎಂದು ಅತ್ತೆ ಹೇಳಿದರು.

“ಏನಾಗಿದೆ….?” ಕೇಳಿದರು ಪಕ್ಕದ ಮನೆಯಾಕೆ.

“ಅಯ್ಯೋ…. ಬಿ.ಪಿ, ಶುಗರ್‌ ಬಾರ್ಡರ್‌ ನಲ್ಲಿ ಇವೆಯಂತೆ. ನೋಡಿ ನಮ್ಮ ಕಾಲದಲ್ಲಿ ನಾವೆಲ್ಲಾ ಎಷ್ಟು ಗಟ್ಟಿಮುಟ್ಟಾಗಿದ್ದೆವು. ಈಗಿನವರಿಗೆ ಚಿಕ್ಕ ವಯಸ್ಸಿಗೇ ನೂರೆಂಟು ಕಾಯಿಲೆಗಳು. ಮತ್ತೆ ಮನೆಯಲ್ಲೇ ಇರುವುದು, ಕೆಲಸಕ್ಕೆ ಹೋಗುವುದಿಲ್ಲ ಏನಿಲ್ಲ…. ಆದರೂ ನಿಶ್ಶಕ್ತಿ  ಅಂತೆ,” ಎಂದೇನೋ ಅತ್ತೆ ಹೇಳುತ್ತಿದ್ದರು. ಅದಕ್ಕೆ ಪಕ್ಕದ ಮನೆಯಾಕೆ, “ಎಷ್ಟು ಚೆನ್ನಾಗಿ ದುಂಡು, ದುಂಡಗೆ ಮೈ ಕೈ ತುಂಬಿಕೊಂಡಿದ್ದಾರೆ. ಆದರೂ ನಿಶ್ಶಕ್ತಿಯೇ….? ನಿಮ್ಮ ಮಗಳನ್ನು ನೋಡಿ ಕೆಲಸಕ್ಕೂ ಹೋಗಿ, ಮನೆಯಲ್ಲೂ ಕೆಲಸ ಮಾಡುತ್ತಾಳೆ,” ಎಂದರು.

“ಏನು ಮಾಡುವುದು ಹೇಳಿ ಈ ತರ ಆದರೆ….” ಎಂದು ಅತ್ತೆ ಬೇಸರದಿಂದ ಹೇಳುತ್ತಿದ್ದರು.

ಇಬ್ಬರೂ ಅಲ್ಲಿಗೆ ಮಾತು ಮುಗಿಸಿದರು.

ಭುವನಾಳಿಗೆ ಮೈಮೇಲೆ ಮುಳ್ಳು ಚುಚ್ಚಿದ ಹಾಗೆ ಆಯಿತು. ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದರೆ ಅಂಥವರಿಗೆ ಕಾಯಿಲೆಗಳು ಬರಬಾರದೇ….? ಏಕೆ ಜನ ಹೀಗೆ ಎಂದುಕೊಂಡಳು. ಕಾಯಿಲೆ ಕಸಾಲೆಗಳು ಯಾರನ್ನಾದರೂ ಕೇಳಿಕೊಂಡು ಬರುತ್ತದೆಯೇ ಎನಿಸಿತು.

ವೈದ್ಯರು, “ನೀವು ನೋಡಲು ದಪ್ಪ ಇದ್ದೀರಾ ಅಷ್ಟೆ. ನಿಮಗೆ ರಕ್ತ ಕಡಿಮೆ ಇದೆ. ಏನು ಊಟ, ತಿಂಡಿ ತೆಗೆದು ಕೊಳ್ಳುತ್ತಿರುವಿರಿ…?” ಎಂದು ಕೇಳಿದರು.

ಇವರು ವಿಷಯ ಹೇಳಿದಳು.“ನೀವು ಊಟ, ತಿಂಡಿ ಸರಿಯಾಗಿ ತಿನ್ನದೆ ಮೈಯಲ್ಲಿ ಗಾಳಿ ಸೇರಿಕೊಂಡು ದಪ್ಪ ಆಗಿರುವಿರಿ. ನಿಮ್ಮ ಊಟ, ತಿಂಡಿಯಲ್ಲಿ ತರಕಾರಿ, ಹಣ್ಣು, ಹಾಲು ಇರಲಿ, ಮೊಳಕೆ ಕಾಳು, ಬೇಳೆಗಳನ್ನು ಸೇವಿಸಿ,” ಎಂದು ಹೇಳಿದರು.

ಎಲ್ಲರ ಉದಾಸೀನ, ಹಿಂಸೆಯ ಮಾತುಗಳನ್ನು ಕೇಳಿ ಮನಸ್ಸಿಗೆ ನೋವಾಯಿತು. ಯಾಕಾದರೂ ತನಗೆ ಈ ಕಾಯಿಲೆ ಬಂದಿತೋ ಎನಿಸಿತು. ತವರಿನಲ್ಲಿ ಅಮ್ಮ ಹೊರಗಡೆ ಆದ ಆ ಮೂರು ದಿನಗಳಲ್ಲಿ ಎಷ್ಟು ಅಕ್ಕರಾಸ್ತೆಯಿಂದ ನೋಡಿಕೊಳ್ಳುತ್ತಿದ್ದರು. ಒಂದೂ ಕೆಲಸ ಮಾಡಲು ಬಿಡುತ್ತಿರಲಿಲ್ಲ. ಮದುವೆಗೆ ಮೊದಲು ಅಮ್ಮ ಮದುವೆ ಆಗಿ ಹೋದ ಮೇಲೆ ಕೆಲಸ ಮಾಡುವುದು ಇದ್ದೇ ಇರುತ್ತದೆ ಎಂದು ಹೆಚ್ಚು ಕೆಲಸ ಮಾಡಲು ಬಿಡುತ್ತಿರಲಿಲ್ಲ. ಅಂಗಳ ಗುಡಿಸಿ, ನೀರು ಹಾಕಿ ದೊಡ್ಡ ರಂಗೋಲಿ ಹಾಕಿದರೆ ಹಬ್ಬ ಹರಿದಿನಗಳಲ್ಲಿ ಅಪ್ಪ ಅಮ್ಮನಿಗೆ ಅದೆಷ್ಟು ಸಂಭ್ರಮ! ತಾನು ಹಾಕಿದ ರಂಗೋಲಿಯನ್ನು ಎಲ್ಲರ ಎದುರಿನಲ್ಲಿ ಹೊಗಳಿ ಹೇಳಿಕೊಳ್ಳುತ್ತಿದ್ದರು.

ಬಸುರಿ ಬಾಣಂತಿಯಲ್ಲಿ ಅದೆಷ್ಟು ಪಥ್ಯದ ಅಡುಗೆ ತಿಂಡಿಗಳು….. ಬಾಣಂತಿ ಲೇಹ್ಯ, ಕಷಾಯಗಳು, ತಲೆಗೆ ಸ್ನಾನ ಮಾಡಿದಾಗ ಸಾಂಬ್ರಾಣಿ ಹಾಕಿ ಕೆಂಡದ ಕಾವು ಕೊಟ್ಟು ಕೂದಲು ಒಣಗಿಸುತ್ತಿದ್ದರು. ಯಾವಾಗಲೂ ಅಪ್ಪ ಹಂಡೆಯ ಒಲೆಗೆ ಹೊಟ್ಟು ತುಂಬಿಸಿ, ಹಂಡೆ ತುಂಬಾ ಬಿಸಿ ನೀರು ಸಿದ್ಧವಾಗಿ ಇಟ್ಟಿರುತ್ತಿದ್ದರು. ಒಂದು ದಿನ ನಿದ್ದೆಗೆಟ್ಟು ಮಕ್ಕಳನ್ನು ನೋಡಿಕೊಳ್ಳಲು ಬಿಡುತ್ತಿರಲಿಲ್ಲ. ಹಸಿ ಬಾಣಂತಿ, ಹಸಿ ಮೈ, ಸಿಸೇರಿಯನ್‌ ಬೇರೆ ಎಂದು ಕೊಂಚ ಕಷ್ಟ ಆಗದಂತೆ ನಡು ರಾತ್ರಿಯಲ್ಲಿ ಕೂಡ ಎದ್ದು ಮಕ್ಕಳನ್ನು ಆಡಿಸುತ್ತಿದ್ದರು. ಅಮ್ಮ ಹೆಣ್ಣುಮಕ್ಕಳಿಗೆ ಬಸುರಿ ಬಾಣಂತಿಯಲ್ಲಿ ಪಟ್ಟ ಸುಖವೇ ಸುಖ. ಮತ್ತೆ ಯಾರು ನೀನು ಕುಳಿತುಕೊಮ್ಮ ಒಂದು ಲೋಟ ಕಾಫಿ ಮಾಡಿ ಕೊಡುತ್ತೇನೆ ಎನ್ನುವುದಿಲ್ಲ ಎಂದು ಹೇಳುತ್ತಿದ್ದರು. ಎಲ್ಲ ಅವಳಿಗೆ ನೆನಪಾಗಿ ಕಣ್ಣಾಲಿಗಳು ತುಂಬಿಬಂದವು.

ಸಾಯಂಕಾಲ ಮಕ್ಕಳು ಶಾಲೆಯಿಂದು ಬಂದು, “ಅಮ್ಮಾ….. ಈಗ ಹೇಗಿದ್ದೀಯಾ…?” ಎಂದು ಕೈ ಹಿಡಿದುಕೊಂಡು ಕಳಕಳಿಯಿಂದ ಕೇಳಿ ಮೃದುವಾಗಿ ಹೂ ಮುತ್ತು ಕೊಟ್ಟಾಗ ಒಂದು ಕ್ಷಣ ದುಃಖ, ನೋವು ಎಲ್ಲಾ ಮರೆಯಾಯಿತು. ಮಕ್ಕಳ ಪ್ರೀತಿ, ವಿಶ್ವಾಸ, ಮುಗ್ಧತೆಯಲ್ಲಿ ಇಡೀ ಜಗತ್ತಿನ ಸುಖವಿದೆ ಎನಿಸಿತು.

ಮಕ್ಕಳ ಮುದ್ದು ಮುಖ ನೋಡುತ್ತಾ, “ಲಂಚ್‌ ಬಾಕ್ಸ್ ಖಾಲಿ ಮಾಡಿದ್ರಾ, ಮುಖ ತೊಳೆದುಕೊಳ್ಳಿ, ಊಟ ಮಾಡಿ. ಹೋಂವರ್ಕ್‌ತೋರಿಸಿದ್ರಾ….?  ಟೆಸ್ಟ್ ಹೇಗೆ ಬರೆದಿರಿ? ಜಾಮಿಟ್ರಿ… ಪೆಟ್ಟಿಗೆ ತೆಗೆದುಕೊಂಡು ಹೋಗಿದ್ರಾ….?” ಎಂದೆಲ್ಲಾ ಪ್ರಶ್ನಿಸಿದಳು.

“ಹ್ಞೂಂ ಅಮ್ಮಾ…. ಎಲ್ಲಾ ಮಾಡಿದೆ. ನಿನಗೆ ಹುಷಾರಿಲ್ಲ. ಗಲಾಟೆ ಮಾಡಬಾರದು ಎಂದು ಅಣ್ಣ ಹೇಳಿದ,” ಎಂದು ಮಗಳು ಹೇಳಿದಾಗ ಹೃದಯ ಅರಳಿತು. ಮಕ್ಕಳಿಗೆ ತನ್ನನ್ನು ಕಂಡರೆ ಎಷ್ಟು ಪ್ರೀತಿ ಎಂದು ಇಬ್ಬರಿಗೂ ಮುತ್ತಿಟ್ಟಳು.

“ಅಮ್ಮಾ…. ನೀನು ಮಲಗಿ ನಿದ್ದೆ ಮಾಡು, ನಾವಿಬ್ಬರೂ ಈಗ ದೊಡ್ಡವರಾಗಿದ್ದೇವೆ. ನಮ್ಮ ಕೆಲಸ ನಾವು ಮಾಡಿಕೊಳ್ಳುತ್ತೇವೆ,” ಎಂದು ಮಗ ಹೇಳಿದಾಗ ಎಷ್ಟು ಜವಾಬ್ದಾರಿ ಬಂದಿದೆ ನನ್ನ ಮುದ್ದು ಕಂದನಿಗೆ ಎನಿಸಿತು.

ಒಂದೆರಡು ದಿನಗಳಲ್ಲಿ ಆಸ್ಪತ್ರೆ ವೈದ್ಯಕೀಯ ಪರೀಕ್ಷೆ, ಔಷಧಿ ಉಪಚಾರ ಎಲ್ಲ ಸಲಹೆಗಳನ್ನು ಪಡೆದ ಮೇಲೆ ಸಂಬಂಧಿಕರ ಮದುವೆಗೆಂದು ದೂರದ ಊರಿಗೆ ಹೋಗಿದ್ದ ಭುವನಾಳ ತಾಯಿ ತಂದೆ ವಿಷಯ ತಿಳಿದು ಅವಳನ್ನು ನೋಡಲು ಬಂದರು. ಭುವನಾಳ ತಾಯಿ ತಂದೆ ಅವಳ ಅತ್ತೆ ಮಾವ ಮತ್ತು ಪತಿಯ ಜೊತೆ ಮಾತನಾಡಿ ಒಂದೆರಡು ದಿನದ ಮಟ್ಟಿಗೆ ಮಗಳನ್ನು ತವರಿಗೆ ಕರೆದೊಯ್ದರು. ಮನೆಯ ಮುಂದೆ ಅಮ್ಮ ಹಾಕಿದ್ದ ರಂಗೋಲಿ, ತುಳಸಿಗಿಡ, ಪಾರಿಜಾತ ಹೂಗಳು, ತೆಂಗಿನಮರಗಳು ತಂಗಾಳಿ ಬೀಸಿ ಸ್ವಾಗತ ಕೋರಿದವು.

bhairavi-story2

`ಉಸ್ಸಪ್ಪಾ…..’ ಎಂದು ಅಲ್ಲಿಯೇ ಅಂಗಳದ ಕಟ್ಟೆಯ ಮೇಲೆ, ಮರದ ಕೆಳಗೆ ಕುಳಿತಳು. ಒಂದು ರೀತಿಯ ಆಪ್ಯಾಯಮಾನ ಮೂಡಿತು. ತಾನು ನೆಟ್ಟಿದ್ದ ಮಲ್ಲಿಗೆಯ ಬಳ್ಳಿ ಹಬ್ಬಿ ಗಿಡದ ತುಂಬ ಬಿಳಿ ಮೊಗ್ಗು, ಹೂಗಳನ್ನು ಬಿಟ್ಟಿತ್ತು. ನವಿರಾದ ಸುವಾಸನೆ ಬರುತ್ತಿತ್ತು. ಏನೋ ಒಂದು ರೀತಿಯ ಹಿತವೆನಿಸಿತವಳಿಗೆ.

ಅಮ್ಮ, ಎಲ್ಲ ರೀತಿಯ ಹಿಟ್ಟುಗಳನ್ನು ಬೆರೆಸಿ ಬಿಸಿ ಬಿಸಿಯಾದ ರೊಟ್ಟಿ ಮಾಡಿ, ಚಟ್ನಿಪುಡಿ, ಹುಣಿಸೇಕಾಯಿ ಚಟ್ನಿ, ಹಾಕಿ ಮೇಲೆ ತುಪ್ಪ ಹಾಕಿದರು. ಗಬಗಬನೆ ಮೂರು ದಿನದಿಂದ ಊಟ, ತಿಂಡಿ ಕಾಣದವಳ ಹಾಗೆ ತಿಂದು ಮುಗಿಸಿದಳು. ಅಮ್ಮ ಮತ್ತೊಂದು ರೊಟ್ಟಿ ತಂದು ಬಡಿಸಿದಾಗ ಸಮಾಧಾನದಿಂದ, “ಅಮ್ಮಾ….. ನೀನು ಎಷ್ಟು ಚೆನ್ನಾಗಿ ರೊಟ್ಟಿ ಮಾಡುತ್ತೀಯಾ… ನಾನು ಹೇಗೆ ಮಾಡಿದರೂ ಇಷ್ಟು ಚೆನ್ನಾಗಿ ಬರುವುದಿಲ್ಲ,” ಎಂದಳು.

ಅಮ್ಮ ಮುಗುಳ್ನಗೆ ಬೀರಿ ಒಳಗೆ ಹೋಗಿ ಅವಳಿಗೆ ಇಷ್ಟವಾದ ಬೆಲ್ಲ ಹಾಕಿ ಮಾಡಿದ ಶುಂಠಿ ಟೀಯನ್ನು ಬಿಸಿಬಿಸಿಯಾಗಿ ಮಾಡಿ ತಂದುಕೊಟ್ಟರು. ಶುಂಠಿಯ ಸ್ವಾದವನ್ನು ಆಸ್ವಾದಿಸುತ್ತಾ ಭುವನಾ ಟೀ ಹೀರಿದಳು. ಅಮ್ಮನ ಜೊತೆ ಸ್ವಲ್ಪ ಹೊತ್ತು ಹರಟೆ ಹೊಡೆದಳು. ಆಲಸ್ಯದಿಂದ ಸ್ವಲ್ಪ ಹೊತ್ತು ಮಲಗಬೇಕು ಎನಿಸಿತು.

ಅಮ್ಮ ಅಪ್ಪನ ರೂಮಿನಲ್ಲಿ ಮಂಚದ ಮೇಲೆ ಉರುಳಿಕೊಂಡಾಗ ನಿದ್ದೆ ತಾನೇ ತಾನಾಗಿ ಬಂದಿತ್ತು. ಎಷ್ಟೋ ದಿನಗಳಿಂದ ನಿದ್ದೆ ಮಾಡಿಲ್ಲವೇನೋ ಎನ್ನುವಷ್ಟು ನಿದ್ದೆ ಮಾಡಿದಳು. ಮಧ್ಯಾಹ್ನ ಎದ್ದಾಗ ಗಂಟೆ ಎರಡಾಗಿತ್ತು. ಬಿಸಿಬಿಸಿಯಾದ ಅಡುಗೆಯ ಘಮ ಘಮ ಪರಿಮಳ ಮನೆ ತುಂಬ ತುಂಬಿಕೊಂಡಿತ್ತು. ಕೈಕಾಲು ಮುಖ ತೊಳೆದು ಊಟಕ್ಕೆ ಕುಳಿತಾಗ, ಬಿಸಿಬಿಸಿ ಅನ್ನ, ಘಮಘಮಿಸುವ ಬೂದುಗುಂಬಳಕಾಯ ಮಜ್ಜಿಗೆಹುಳಿ, ಬಾಳಕದ ಮೆಣಸಿನಕಾಯಿ, ಹಪ್ಪಳಸಂಡಿಗೆ, ಮಾವಿನಕಾಯಿ ಉಪ್ಪಿನಕಾಯಿ ತಟ್ಟೆಯನ್ನು ಅಲಂಕರಿಸಿತ್ತು. ಅನ್ನದ ಮೇಲೆ ಅಮ್ಮ ಒಂದು ಮಿಳ್ಳೆ ತುಪ್ಪ ಬಡಿಸಿದಾಗ ರುಚಿ ಇನ್ನಷ್ಟು ಹೆಚ್ಚಿತು. ಎರಡು ಸಾರಿ ಮಜ್ಜಿಗೆ ಹುಳಿ ಅನ್ನ ತಿಂದು, ಲೋಟದ ತುಂಬಾ ಬಿಸಿಬಿಸಿಯಾದ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಘಮ ತುಂಬಿದ ಗಲಿ ಪಾಯಸದ ಮೇಲೆ ತುಪ್ಪ ಹಾಕಿಕೊಂಡು ಕುಡಿದಾಗ ಬಹಳ ರುಚಿ ಎನಿಸಿತು.

“ಅಮ್ಮಾ… ನನಗೆ ಸಕ್ಕರೆ ಕಾಯಿಲೆ, ಸಿಹಿ ತಿನ್ನುವಂತೆ ಇಲ್ಲ,” ಎಂದಳು.

“ಬೆಲ್ಲ ಹಾಕಿ ಮಾಡಿದ್ದೀನಿ. ಇದರಲ್ಲಿ ಅಷ್ಟು ಸಕ್ಕರೆಯ ಅಂಶ ಇರುವುದಿಲ್ಲ. ಜೊತೆಗೆ ನಮಗೆ ಇಷ್ಟವಾದ ಊಟ ತಿನ್ನಬೇಕು. ನಮ್ಮ ಆಸೆಗಳನ್ನು ತೀರಾ ಬದಿಗಿಡಬಾರದು,” ಎಂದರು.

“ಅಮ್ಮಾ, ಏನೇ ಹೇಳು ಅಂಗಡಿಯಲ್ಲಿ ಕೊಂಡು ತರುವ ಶ್ಯಾವಿಗೆಗೆ ಈ ರುಚಿ ಇರುವುದಿಲ್ಲ. ನೀನೇ ಮನೆಯಲ್ಲಿ ಮಾಡಿದ ಗಲಿಯೇ ಇದು,” ಎಂದ ಕೇಳಿದಳು.

“ಹ್ಞೂಂ…. ನಾನೇ ಮಾಡಿದ್ದು, ಇನ್ನೂ ಸ್ವಲ್ಪ ಹಾಕಿಸಿಕೋ,” ಎಂದು ಹೇಳುತ್ತಾ ಅಮ್ಮ, ಅಕ್ಕರೆಯಿಂದ ಇನ್ನೊಂದು ಲೋಟ ಪಾಯಸ ಹಾಕಿ, ಅದರ ಮೇಲೆ ತುಪ್ಪ ಹಾಕಿದಾಗ ಅಂತಃಕರಣ ತುಂಬಿ ಬಂತು. ತನಗೆ ಮನೆಯಲ್ಲಿ ಯಾರು ಹೀಗೆ ಬಡಿಸುತ್ತಾರೆ ಎನಿಸಿತು. ತಾನು ಉಂಡೆನೇ, ಇಲ್ಲವೇ ಎಂದು ಕೇಳುವವರೂ ಇರುವುದಿಲ್ಲ ಎನಿಸಿತು.

ಬಹಳ ದಿನಗಳ ನಂತರ ಹೊಟ್ಟೆ ತುಂಬಾ ರುಚಿಕಟ್ಟಾದ ಊಟ ತಿಂದಂತೆ ತೃಪ್ತಿ ಆಗಿತ್ತು. ಊಟ ಮುಗಿದ ಮೇಲೆ ಅಪ್ಪ ಹೆಚ್ಚಿಕೊಟ್ಟ ಬಾಳೆಹಣ್ಣು, ಸೇಬುಹಣ್ಣುನ್ನು ತಿಂದು, ಮಾವಿನ ಮರದ ಕೆಳಗೆ ಅಮ್ಮನೊಡನೆ ಸ್ವಲ್ಪ ಹೊತ್ತು ಹರಟುತ್ತಾ ಕುಳಿತಳು.

ಮರುದಿನ ಅತ್ತೆ, ಮಾವ, ಮಕ್ಕಳು ಫೋನ್‌ ಮಾಡಿ ಆರೋಗ್ಯ ವಿಚಾರಿಸಿದರು. ನಂತರ ಮನೆ ಕಡೆ ಧಾವಂತ ಬೇಡ. ನಿನಗೆ ಆರಾಮವಾದ ಮೇಲೆ ಬಾ ಎಂದರು.

“ಅಮ್ಮಾ…. ನೀನೇನು ಯೋಚನೆ ಮಾಡಬೇಡ. ನಾವಿಬ್ಬರೂ ಊಟ, ತಿಂಡಿ, ಓದು, ಬರಹ ಎಲ್ಲಾ ಮಾಡಿಕೊಳ್ತೀವಿ. ರಾತ್ರಿ ಅಪ್ಪನ ಪಕ್ಕ ಮಲಗಿಕೊಂಡೆ. ಅಪ್ಪ ರಾತ್ರಿ ಇಬ್ಬರಿಗೂ ಚಾಕ್ಲೇಟ್‌ ತಂದಿದ್ದರು. ಜೊತೆಗೆ ಕಥೆ ಹೇಳಿದರು,” ಎಂದು ಮಕ್ಕಳಿಬ್ಬರು ಖುಷಿಯಿಂದ ಹೇಳಿದರು.

bhairavi-story1

“ನಿಮ್ಮ ಅಪ್ಪ ಎಲ್ಲಿ….?” ಎಂದು ಕೇಳಿದಳು.

“ಅಮ್ಮಾ, ಅಪ್ಪನಿಗೆ ಕಛೇರಿಯಲ್ಲಿ ಬಹಳ ಕೆಲಸವಂತೆ. ಅದಕ್ಕೆ ಇನ್ನೂ ಮನೆಗೆ ಬಂದಿಲ್ಲ,” ಎಂದರು. ಎಲ್ಲರ ಒಲವಿನ ಮಾತುಗಳನ್ನು ಕೇಳಿ ಹೃದಯ ಹರ್ಷಗೊಂಡರೂ ಕೂಡ ಪತಿ ಫೋನ್‌ ಮಾಡಿ ಮಾತನಾಡದೆ ಇದ್ದದ್ದು ಹೃದಯದಲ್ಲಿ ಎಲ್ಲೋ ಒಂದು ಕಡೆ ಮುಳ್ಳು ಚುಚ್ಚಿದಂತೆ ಆಯಿತು. ಪತಿಯ ಒಲುಮೆಯ ಮಾತುಗಳಿಗೆ ಮನ ಹಾತೊರೆಯುತ್ತಿತ್ತು. ಮದುವೆಗೆ ಮುಂಚೆ ಫೋನ್‌ ಮಾಡಿ ಗಂಟೆಗಟ್ಟಲೆ ಮಾತಾಡುತ್ತಾ ಇದ್ದದ್ದು ನೆನಪಿಗೆ ಬಂದಿತು. `ಹೋಗಲಿ ನಾನೇ ಫೋನ್‌ ಮಾಡ್ತೀನಿ,’ ಎಂದುಕೊಂಡು ಫೋನ್‌ ಮಾಡಿದಳು.

“ನನಗೆ ಸ್ವಲ್ಪ ಅರ್ಜೆಂಟ್‌ ಕೆಲಸವಿದೆ. ನಂತರ ಮಾಡುವೆ,” ಎಂದು ಪತಿ ಫೋನ್‌ ಇಟ್ಟಾಗ, ನಿರಾಸೆಯ ನಿಟ್ಟುಸಿರು ಹೊರಬಂದಿತು.

ಭುವನಾಳ ತಾಯಿ ಮಗಳಿಗೆ ಎಣ್ಣೆ ಹಚ್ಚಿ, ಹಂಡೆಯ ತುಂಬಾ ನೀರು ಕಾಯಿಸಿ ತಲೆಗೆ ಎಣ್ಣೆ ಹಚ್ಚುತ್ತಾ, “ನೋಡು ಕೂದಲು ಹೇಗಾಗಿದೆ, ಜಿಡ್ಡು ಕಟ್ಟಿ ಹೋಗಿದೆ,” ಎಂದು ಅಕ್ಕರೆಯಿಂದ ತಲೆಗೆ ನೀರೆರದು, ಒಣಗಿಸಿ, ಸಿಕ್ಕು ಬಿಡಿಸಿ ತಲೆ ಬಾಚಿ, ಹೂ ಮುಡಿಸಿದರು.

ನಂತರ “ಇಲ್ಲೇ ಪಕ್ಕದ ಬೀದಿಗೆ ಹೋಗಿ ಬರೋಣ ಬಾ,” ಎಂದು ಅಮ್ಮಾ ಅವಳನ್ನು ಸಿದ್ಧ ಉಡುಪುಗಳ ಅಂಗಡಿಗೆ ಕರೆದುಕೊಂಡು ಹೋದರು. ಅಲ್ಲಿ ಅವಳಿಗೊಪ್ಪುವ ನಾಲ್ಕೈದು ಚೂಡಿದಾರ್‌ ಕೊಡಿಸಿದರು.

ನಂತರ ಅಲ್ಲಿಯೇ ಇದ್ದ ಬ್ಯೂಟಿ ಪಾರ್ಲರ್‌ ಗೆ ಕರೆದುಕೊಂಡು ಹೋಗಿ ಹುಬ್ಬು ಮತ್ತು ಕೂದಲಿಗೆ ಅಂದವಾದ ಆಕಾರ ಬರುವಂತೆ ಮಾಡಿಸಿದರು. ನಂತರ ಮುಖಕ್ಕೆ ಕೂಡ ಶುಶ್ರೂಷೆ ಆಯಿತು.

“ಅಮ್ಮಾ….. ಏನಿದೆಲ್ಲಾ….?” ಎಂದಳು ಭುವನಾ.

“ಸುಮ್ಮನೆ ಇರು. ಚೆನ್ನಾಗಿ ಕಾಣಿಸುತ್ತಿದೆ.” ಎಂದರು.

“ಅತ್ತೆ ಏನಾದರೂ ಅಂದರೆ ಏನು ಮಾಡುವುದು….?” ಎಂದು ಕೇಳಿದಳು.

“ನೀನು ಇಷ್ಟು ವರ್ಷ ಸಂಸಾರದಲ್ಲಿ ನಿಮ್ಮ ಅತ್ತೆಗೆ ಇಷ್ಟವಿಲ್ಲದ ಕೆಲಸ ಮಾಡಿದಾಗ ಅದನ್ನು ಹೇಗೆ ಸರಿಪಡಿಸಬಹುದು. ಅವರನ್ನು ಹೇಗೆ ಸಮಾಧಾನ ಮಾಡುವುದು? ಅನುನಯಿಸುವುದು ಎಲ್ಲನ್ನೂ ಕಲಿತುಕೊಂಡಿರುತ್ತೀಯಾ ಅಂದುಕೊಂಡಿದ್ದೇನೆ. ಹಾಗಾಗಿ ಅದನ್ನು ನಾನು ಹೇಳಿಕೊಡಬೇಕಾಗಿಲ್ಲ. ಇವೆಲ್ಲವನ್ನೂ ಯಾವ ಕಾಲೇಜ್‌ ಅಥವಾ ಯೂನಿವರ್ಸಿಟಿಗಳಲ್ಲೂ ಹೇಳಿಕೊಡುವುದಿಲ್ಲ. ಕೆಲವೊಂದು ವಿಷಯಗಳನ್ನು ನಾವೇ ಕಲಿತುಕೊಳ್ಳಬೇಕಾಗುತ್ತದೆ,” ಎಂದು ಅಮ್ಮ ಹೇಳಿದರು. ನಂತರ ಅಲ್ಲಿಯೇ ಪಕ್ಕದಲ್ಲಿದ್ದ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿ ಒಂದಿಷ್ಟು ಮಣಿಗಳು, ಪ್ಲಾಸ್ಟಿಕ್‌ ವೈರ್‌, ಬಣ್ಣದ ಕಾಗದಗಳು, ವೆಲ್ವೆಟ್‌ ಬಟ್ಟೆಗಳು, ದಾರಗಳು ಎಲ್ಲವನ್ನೂ ಕೊಡಿಸಿದರು.

“ಇನ್ನು ಮುಂದೆ ನಿನ್ನ ಬಿಡುವಿನ ಸಮಯದಲ್ಲಿ ನಿನ್ನ ಹವ್ಯಾಸ ಮುಂದುವರಿಸು. ಬೇರೆಯವರ ಮಾತಿಗೆ ಕಿವಿಗೊಡಬೇಡ. ನಿನ್ನ ಮನಸ್ಸಂತೋಷಕ್ಕಾಗಿ ಇದನ್ನೆಲ್ಲಾ ಮಾಡಬೇಕು,” ಎಂದರು.

ಭುವನಾ ಅಮ್ಮನಿಗೆ, “ಅಮ್ಮಾ, ಇದೆಲ್ಲಾ ನಿನಗೆ ಹೇಗೆ ತಿಳಿಯಿತು…..?” ಎಂದು ಕೇಳಿದಳು.

“ನಾನು ನಿನ್ನ ಅಮ್ಮ…. ನಿನ್ನ  ಹಾಗೆಯೇ ಇದ್ದೆ. ಅವೆಲ್ಲ ದಾಟಿ ಈಗ ನಾನು ಅಮ್ಮ, ಅತ್ತೆ ಮತ್ತು ಅಜ್ಜಿ ಎಲ್ಲಾ ಆಗಿರುವುದು. ನಿನಗಾಗಿ ನೀನು ಬದಲಾಗಬೇಕು,” ಎಂದರು.

ಇಬ್ಬರೂ ಮನೆಗೆ ಬರುವ ವೇಳೆಗೆ ತಂದೆ ಬಿಸಿ ಬಿಸಿಯಾಗಿ ಮೆಣಸಿಕಾಯಿ, ಬಾಳೇಕಾಯಿ ಬಜ್ಜಿ ಕರೆದಿಟ್ಟಿದ್ದರು. ಭುವನಾ ಖುಷಿಯಿಂದ, “ಅಪ್ಪಾ…. ನೀವು ಇವತ್ತು ಅಡುಗೆಮನೆಗೆ ಹೋಗಿದ್ದೀರಾ…..?” ಎಂದು ಕೇಳಿದಳು.

“ನನ್ನ ಮುದ್ದು ಮಗಳಿಗೆ ಇಷ್ಟೂ ಮಾಡಬೇಡವೇ….? ಎಲ್ಲಾ ನಿಮ್ಮ ಅಮ್ಮನೇ ಮಾಡಿಬಿಟ್ಟರೆ ಹೇಗೆ….?” ಎಂದು ನಕ್ಕರು.

ಮುಖ ತೊಳೆದು, ಹೊಸ ಚೂಡಿದಾರ್‌ ಹಾಕಿ, ಕನ್ನಡಿಯಲ್ಲಿ ನೋಡಿಕೊಂಡಾಗ ಹೆಮ್ಮೆ ಎನಿಸಿತು. ತಾನೆಷ್ಟು ಚೆಲುವೆ ಎನಿಸಿತು.

ಸಾಯಂಕಾಲ ಪಾರಿಜಾತದ ಮರದ ಕೆಳಗೆ ಕುಳಿತು ಹೂವಿನ ಸುವಾಸನೆ  ಆಸ್ವಾದಿಸುತ್ತಿದ್ದಾಗ ಪತಿಯ ವಿಡಿಯೋ ಕರೆ ಬಂದಿತು. ಏನೋ ಒಂದು ರೀತಿಯ ಮುದ, ನಾಚಿಕೆ ಎನಿಸಿತು.

“ಏನು ಮೇಡಂ, ಹೇಗಿದ್ದೀರಿ…..? ತವರಿನ ಸುಖದಲ್ಲಿ ನನ್ನನ್ನು ಮರೆತು ಹೋದಂತೆ ಕಾಣಿಸ್ತಿದೆ….?” ಎಂದು ಕೇಳಿದರು.

“ಚೆನ್ನಾಗಿ ಇದ್ದೇನೆ. ನಾನು ಫೋನ್‌ ಮಾಡಿದಾಗ, ನೀವು ಬಹಳ ಕೆಲಸ, ಆಮೇಲೆ ಮಾಡುತ್ತೀನಿ ಎಂದಿರಿ. ನೀವು ಹೇಗಿದ್ದೀರಿ….?” ಎಂದು ಕೇಳಿದಳು.

“ನಾನು ಚೆನ್ನಾಗಿ ಇದ್ದೇನೆ. ಆದರೆ ನೀನು ಇಲ್ಲದೆ ಇರುವುದಕ್ಕೆ ಮನೆಗೆ ಬರಲು ಬಲು ಬೇಜಾರು. ಯಾವಾಗ ಬರುತ್ತೀಯಾ….? ನಿನ್ನನ್ನು ನೋಡಬೇಕು ಎನಿಸಿದೆ,” ಎಂದರು.

“ನೋಡ್ತಾ ಇದ್ದೀರಲ್ಲ…..?” ಎಂದಳು.

“ಹ್ಞೂಂ…. ಬರೀ ನೋಡಿದರೆ ಸಾಕೆ, ಇಷ್ಟು ಚೆನ್ನಾಗಿ ಕಾಣಿಸುತ್ತಾ ಇದ್ದೀಯಾ, ಒಲವಿನ ಕಾಣಿಕೆ ಕೊಡಬೇಕು ಎನಿಸುತ್ತಿದೆ. ಬೇಗ ಬಾ,” ಎಂದರು.

“ಹ್ಞೂಂ…. ನಾಳೆ ಬರುತ್ತೇನೆ,” ಎಂದಳು.

ಮರುದಿನ ತಂದೆಯ ಜೊತೆ ಗಂಡನ ಮನೆಗೆ ಬಂದಳು. ಸಾಯಂಕಾಲ ಶಾಲೆಯಿಂದ ಮನೆಗೆ ಬಂದ ಮಕ್ಕಳಿಬ್ಬರೂ, “ಅಮ್ಮಾ….. ಅಮ್ಮಾ…..” ಎನ್ನುತ್ತಾ ಎರಡು ದಿನಗಳಿಂದ ನಡೆದ ಕಥೆಗಳನ್ನೆಲ್ಲಾ ಹೇಳಿದರು.

ಕಛೇರಿಯಿಂದ ಬಂದ ಪತಿ ಚೆಂದದ ಮುಗುಳು ನಗೆ ಚೆಲ್ಲಿ ಸಂತಸ ವ್ಯಕ್ತಪಡಿಸಿದರು. ಕೊಠಡಿಯ ಏಕಾಂತದಲ್ಲಿ, “ನೀನಿಲ್ಲದೆ, ಎರಡು ದಿನ ನನ್ನ ದಿನಚರಿ ಅಸ್ತವ್ಯಸ್ತವಾಗಿತ್ತು. ಮತ್ತೆಲ್ಲೂ ಹೋಗಬೇಡ,” ಎನ್ನುತ್ತಾ ಒಲವಿನ ಕಾಣಿಕೆ ನೀಡಿದರು.

ತವರಿನಿಂದ ಬಂದ ಭುವನಾ ಹೊಸ ಉತ್ಸಾಹದಿಂದ ಮತ್ತೆ ತನ್ನ ಕೆಲಸ ಮುಂದುವರಿಸಿದಳು. ಈಗ ಮೊದಲಿನ ಹಾಗೆ ಮನಸ್ಸಿಗೆ ಒತ್ತಡ ಮಾಡಿಕೊಳ್ಳುವುದಿಲ್ಲ. ಅತ್ತೆ ತರಕಾರಿ ಹೆಚ್ಚಿ ಕೊಡುವುದು, ಅದು ಇದೂ ಅಂತ ಚಿಕ್ಕ ಪುಟ್ಟ ಕೆಲಸಗಳಿಗೆ ನೆರವಾಗುತ್ತಿದ್ದರು. ಮಾನವರು ಮಕ್ಕಳಿಗೆ ಪಾಠ ಹೇಳಿಕೊಡುವುದು, ಶಾಲೆಗೆ ಬಿಟ್ಟು ಬರುವುದು ಮತ್ತು ಕರೆ ತರುವುದು ಮಾಡುತ್ತಿದ್ದರು. ಭುವನಾ ಸಾಯಂಕಾಲ ಸ್ವಲ್ಪ ಹೊತ್ತು ತಂಗಾಳಿಯಲ್ಲಿ ಅತ್ತೆಯನ್ನು ಕರೆದುಕೊಂಡು ವಾಕಿಂಗ್‌ ಹೋಗಿ ಬರುತ್ತಿದ್ದಳು.

ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ತಾಯಿ ಕೊಡಿಸಿದ್ದ ಬಟ್ಟೆಯಿಂದ ಕೆಂಪು ಕೊಕ್ಕಿನ, ಹಸಿರು ಗಿಣಿಗಳ ತೋರಣವನ್ನು ಸಿದ್ಧಪಡಿಸಿದಳು. ಅದನ್ನು ಬಾಗಿಲಿಗೆ ಹಾಕಿದಾಗ, ಹಳದಿ ಮಾವಿನ ಹಣ್ಣುಗಳನ್ನು ಕುಕ್ಕುತ್ತಿದ್ದ ಗಿಣಿಗಳು, ನಿಜವಾದ ಗಿಣಿಗಳೇನೋ ಎನ್ನುವಂತೆ ಕಾಣುತ್ತಿದ್ದವು. ಮನೆಗೆ ಬಂದ ಅತಿಥಿಗಳೆಲ್ಲರೂ ಅದನ್ನು ನೋಡಿ ಬಹಳ ಚೆನ್ನಾಗಿದೆ ತಮಗೂ ಒಂದು ತಯಾರಿಸಿ ಕೊಡಬೇಕೆಂದು ಕೇಳಿದರು. ಅಕ್ಕಪಕ್ಕದ ಕೆಲವರು ದುಡ್ಡಿಗೆ ಹಾಕಿ ಕೊಡುವಂತೆ ಕೇಳಿದರು.

ಭುವನಾಳಿಗೆ ಮಧ್ಯಾಹ್ನ ಈಗ ಕೈತುಂಬಾ ಕೆಲಸ. ಆದರೆ ಉತ್ಸಾಹ ಹೆಚ್ಚಾಗಿತ್ತು. ಇನ್ನೂ ಹೊಸ ಹೊಸ ಮಾದರಿಯ ಕಸೂತಿಗಳನ್ನು ಹಾಕ ತೊಡಗಿದಳು. ತನ್ನ ಕರಕುಶಲತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದಾಗ, ಸಂತೋಷವಾಗುತ್ತಿತ್ತು. ಜೊತೆಗೆ ಅವಳ ಆರೋಗ್ಯದಲ್ಲೂ ಸುಧಾರಣೆಯಾಗತೊಡಗಿತು.

ಅಂದು ಸಾಯಂಕಾಲ ಮನೆಗೆ ಬಂದ ಪತಿ ನೀನು ನನ್ನ ಸಹೋದ್ಯೋಗಿ ಮಿತ್ರರಿಗೆ ಹಾಕಿಕೊಟ್ಟ ತೋರಣ, ಅವರಿಗೆ ಬಹಳ ಮೆಚ್ಚುಗೆಯಾಯಿತು. ನಿನ್ನನ್ನು ಬಹಳ ಹೊಗಳಿದರು ಎನ್ನುತ್ತಾ, ಅವಳ ಕೈ ಹಿಡಿದು ಪಕ್ಕದಲ್ಲಿ ಕೂರಿಸಿಕೊಂಡು, ಅವಳ ಕೈಗಳಿಗೆ ಹೂ ಮುತ್ತೊಂದನ್ನು ಕೊಟ್ಟರು. ಭುವನಾಳಿಗೆ ತನ್ನ ಶ್ರಮ ಸಾರ್ಥಕವಾಯಿತು ಎನಿಸಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ