ಕಥೆ – ಸಂಧ್ಯಾ ಸುರೇಂದ್ರ
ರಮಾಕಾಂತನಿಗೆ ಮಗಳು ಭವ್ಯಾಳನ್ನು DNA ಪರೀಕ್ಷಿಸಬೇಕಾದ ಅಗತ್ಯ ಏನು ಬಂತು? ಈ ಭವ್ಯಾ ಯಾರು? ಆ ಕುರಿತು ರಿಪೋರ್ಟ್ಬಂದ ನಂತರ ನಡೆದದ್ದೇನು…..?
ಅಂದು ಪೇಪರ್ ನಲ್ಲಿ ಬಂದಿದ್ದ ಒಂದು ವರದಿಯನ್ನು ಓದಿ ಯಾಕೋ ಭವ್ಯಾಳ ಪ್ರಪಂಚ ಒಂದೇ ದಿನಕ್ಕೆ ಕಾಲಡಿ ಕುಸಿದು ಹೋಯಿತು. ತನ್ನನರ ಮಧ್ಯೆ ಭವ್ಯಾ ಇದ್ದಕ್ಕಿದ್ದಂತೆ ಪರಕೀಯಳಾಗಿ ಹೋದಳು.
ನೋಡಲಿಕ್ಕೇನೋ ಈಗಲೂ ಎಲ್ಲ ಮೊದಲಿನಂತೆಯೇ ಇತ್ತು, ಆದರೆ ದೃಷ್ಟಿಯಲ್ಲಿ ಮಾತ್ರವಲ್ಲದೆ, ಹಲವರ ಮನದಲ್ಲೂ ಈಗ ಭೇದಭಾವ ಸ್ಪಷ್ಟ ಗೋಚರಿಸುತ್ತಿತ್ತು. ತಾಯಿಯ ಸ್ಪರ್ಶದಿಂದಲೂ ಭವ್ಯಾಳಿಗೆ ಈ ವ್ಯತ್ಯಾಸ ಗೊತ್ತಾಗುತ್ತಿತ್ತು. ತಾಯಿಯ ಸ್ಪರ್ಶದಲ್ಲಿ ಇದೀಗ ಅರಿಯದ ಸಂಕೋಚ, ಮುಜುಗರಗಳಿದ್ದವು.
ಭವ್ಯಾಳ ಅಸ್ತಿತ್ವವೇ ಒಂದು ಪ್ರಶ್ನಾರ್ಹ ಚಿಹ್ನೆಯಾಗಿ ಹೋಗಿತ್ತು. ಆದರೆ ಇದರಲ್ಲಿ ಅವಳ ತಪ್ಪಾದರೂ ಏನು? ತಾನು ಹುಟ್ಟಿದ ಆ ಘಳಿಗೆಯಲ್ಲಿ ಎಲ್ಲಿ ಏನು ನಡೆಯಿತು, ಎಂಥ ಎಡವಟ್ಟಾಯಿತು ಎಂದು ಆ ಸಣ್ಣ ಜೀವಕ್ಕೆ ತಿಳಿಯಬೇಕಾದರೂ ಹೇಗೆ? ಅಂದು ಪೇಪರ್ ನಲ್ಲಿ ಪ್ರಕಟಗೊಂಡಿದ್ದ ವರದಿ 7 ವರ್ಷದ ಭವ್ಯಾಳನ್ನು ತನ್ನ ಮನೆಯಲ್ಲಿಯೇ ಅಪರಿಚಿತಳನ್ನಾಗಿಸಿತ್ತು. ಹೊರಗಿನ ಒಂದು ನರ್ಸಿಂಗ್ ಹೋಮಿನ ಸ್ಕ್ಯಾಂಡ್ ನಿಂದಾಗಿ ಅದರ ನಿರ್ವಾಹಕರು, ಸಿಬ್ಬಂದಿ ಎಲ್ಲರನ್ನೂ ಹಿಡಿದು ಪೊಲೀಸರು ಸೆರೆಗೆ ಹಾಕಿದ್ದರು. ಆ ನರ್ಸಿಂಗ್ ಹೋಮಿನಲ್ಲಿ ಡೆಲಿವರಿಗೆಂದು ಬಂದಿದ್ದ ಒಬ್ಬ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ತಮ್ಮ ಬಲವಾದ ಕಾರ್ಯಾಚರಣೆ ನಡೆಸಿದ್ದರು.
ದೂರು ನೀಡಿದ ಗಿರಿಜಾಳ ಆರೋಪವೆಂದರೆ, ಆ ನರ್ಸಿಂಗ್ ಹೋಮಿನಲ್ಲಿ ಆಗ ತಾನೇ ಅವಳ ಹೆರಿಗೆಯಾಗಿದ್ದ 1-2 ದಿನಗಳ ಮಗುವನ್ನು ಬದಲಾಯಿಸಲಾಗಿತ್ತಂತೆ! ತಾನು ಹೆತ್ತಿದ್ದು ಒಂದು ಗಂಡು ಮಗು, ಅದಕ್ಕೆ ಹಾಲೂಡಿಸಿದ್ದೂ ನೆನಪಿದೆ, ಮಾರನೇ ಬೆಳಗ್ಗೆ ನೋಡಿದರೆ ತನ್ನ ಮಗ್ಗುಲಲ್ಲಿ ಅಲ್ಲಿನ ಸಿಬ್ಬಂದಿ ಒಂದು ಹೆಣ್ಣುಮಗು ಮಲಗಿಸಿದ್ದಾರೆ, ತನಗೆ ತನ್ನ ಮಗುವೇ ಬೇಕು ಎಂದು ಹೋರಾಡುತ್ತಿದ್ದಳು. ಈ ಕುಕೃತ್ಯದಲ್ಲಿ ತನ್ನ ಹೆರಿಗೆ ಮಾಡಿಸಿದ್ದ ಇಬ್ಬರು ನರ್ಸುಗಳ ಕೈವಾಡ ಖಂಡಿತಾ ಇದೆ ಎಂದು ತಿಳಿಸಿದ್ದಳು.
ಆಕೆಯ ದೂರಿನ ಪ್ರಕಾರ, ತಮ್ಮ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಆ ಇಬ್ಬರು ನರ್ಸುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು, ಮಹಿಳಾ ಪೊಲೀಸರಿಂದ ಅವರದೇ ಭಾಷೆಯಲ್ಲಿ ಗದರಿಸಿ, ತದುಕಿದಾಗ, ಅವರು ತಮ್ಮ ತಪ್ಪು ಒಪ್ಪಿಕೊಂಡದ್ದಲ್ಲದೆ, ಅಲ್ಲಿ ನಡೆಯುತ್ತಿದ್ದ ಘನಘೋರ ಹಗರಣಗಳ ಬಗ್ಗೆಯೂ ತಿಳಿಸಿದರು.
ಅದನ್ನು ನಡೆಸುತ್ತಿದ್ದ ಒಡತಿ ನಕಲಿ ವೈದ್ಯೆ, ಅವಳ ಬಳಿಯಿದ್ದ ಸರ್ಟಿಫಿಕೇಟ್ ಎಲ್ಲವೂ ನಕಲಿ ಎಂದು ಖಾತ್ರಿಯಾಯಿತು. ಹೀಗಾಗಿ ಪೊಲೀಸರು ಸಾರಾಸಗಟಾಗಿ ಎಲ್ಲರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ಕಳೆದ 15 ವರ್ಷಗಳಿಂದ ನಡೆಯುತ್ತಿದ್ದ ಈ ಆಸ್ಪತ್ರೆ, ಇಂಥ ಅದೆಷ್ಟು ನೀಚ ಕುಕೃತ್ಯಗಳನ್ನೆಸಗಿ ಸಣ್ಣ ಕೂಸುಗಳನ್ನು ಮಾರಿಕೊಂಡಿವೆಯೋ ಗೊತ್ತಿಲ್ಲ ಎಂದು ಪೊಲೀಸರು ಕಂಡುಕೊಂಡರು. ಅಲ್ಲಿಗೆ ಬರುತ್ತಿದ್ದ ಅವಿವಾಹಿತ ಬಸುರಿಯರು, ಇವರು ಕೇಳಿದಷ್ಟು ಹಣ ತೆತ್ತು, ಗರ್ಭಪಾತ ಮಾಡಿಸಿಕೊಂಡು, ತಲೆ ಮರೆಸಿಕೊಳ್ಳುತ್ತಿದ್ದರು. ಇಂಥ ಅನೇಕಾನೇಕ ಕಾನೂನು ಬಾಹಿರ ಕುಕೃತ್ಯಗಳು ಹೊರಗೆ ಬಂದವು. ಕಾನೂನು ಬದ್ಧವಾಗಿ ಸಣ್ಣ ಕೂಸನ್ನು ದತ್ತು ತೆಗೆದುಕೊಳ್ಳಲು ಹೋದರೆ, ಕೋರ್ಟು ಕಛೇರಿಗೆ ಇನ್ನಿಲ್ಲದೆ ಅಲೆದಾಡಬೇಕಾದೀತೆಂದು, ಸಂತಾನಹೀನ ದಂಪತಿಗಳು ಇಲ್ಲಿಗೆ ಬಂದು, ಆಸ್ಪತ್ರೆಯವರಿಗೆ ದೊಡ್ಡ ಮೊತ್ತ ಮುಟ್ಟಿಸಿ, ಬೇಕಾದ ಮಕ್ಕಳನ್ನು ಪಡೆಯುತ್ತಿದ್ದರು.
ಅಲ್ಲಿ ಡೆಲಿವರಿ ಮಾಡಿಸಿಕೊಂಡಿದ್ದ ಅನೇಕ ಹೆಂಗಸರ ಕಂದಮ್ಮಗಳು ಗಪ್ ಚುಪ್ ಆಗಿ ಬದಲಾವಣೆ ಆಗಿಹೋಗುತ್ತಿದ್ದವು. ಇಷ್ಟೆಲ್ಲ ನಡೆದರೂ ಆಸ್ಪತ್ರೆಯ ಆದಾಯಕ್ಕೇನೂ ಕಡಿಮೆ ಇರಲಿಲ್ಲ.
ಆಸ್ಪತ್ರೆಯ ಸಂಚಾಲಕಿ, ಸಿಬ್ಬಂದಿಯರನ್ನು ಸಂಪೂರ್ಣ ವಿಚಾರಿಸಿಕೊಂಡ ಪೊಲೀಸರಿಗೆ, ಇಂಥ ಕುಕೃತ್ಯಗಳಿಗೆ ಅಲ್ಲಿ ರೆಕಾರ್ಡ್ ಇರಲಿಲ್ಲ, ಇಂಥ ಎಷ್ಟಾಗಿದ್ದವೋ ಗೊತ್ತಿಲ್ಲ ಎಂದೇ ಅವರು ತಿಳಿಸಿದರು. ಅಲ್ಲಿಗೆ ಹೆರಿಗೆಗೆಂದು ಬಂದಿದ್ದ ಅಮಾಯಕ ಯುವತಿಯರ ಎಷ್ಟು ಶಿಶುಗಳನ್ನು ಬದವಾಯಿಸಲಾಗಿತ್ತೋ ತಿಳಿಯದು.
ಗಂಡು ಮಗುವೇ ಬೇಕೆಂದು ದುರಾಸೆಪಡುತ್ತಿದ್ದ ಮನೆಯವರು, ಹೆರಿಗೆ ಬೇನೆ ನಂತರ ಜ್ಞಾನವಿಲ್ಲದೆ ಬಿದ್ದಿದ್ದ ಬಾಣಂತಿಯನ್ನು ಏಮಾರಿಸಿ, ಅವಳ ಗಂಡು ಮಗವನ್ನು ಕದ್ದು ಅದನ್ನು ಹೆಣ್ಣು ಹೆತ್ತ ಸಿರಿವಂತರಿಗೆ ಬದಲಾಯಿಸಿ, ಇಲ್ಲಿ ಬಂದ ಹೆಣ್ಣಿಗೆ, ನೀನು ಹೆತ್ತಿದ್ದೇ ಹೆಣ್ಣು ಎಂದು ನಂಬಿಸಿ ಕೊರಳು ಕೊಯ್ಯುತ್ತಿದ್ದರಂತೆ. 7 ವರ್ಷದ ಮುಗ್ಧ ಕೂಸು ಭವ್ಯಾ ಸಹ ಇದೇ ಆಸ್ಪತ್ರೆಯಲ್ಲಿ ಹುಟ್ಟಿ, ಆ ಮನೆಯ ನಂದಾದೀಪಾಗಿದ್ದಳು. ಆದರೆ ಇದೀಗ ಆ ಆಸ್ಪತ್ರೆ ಸೀಲ್ ಹಾಕಿಸಿಕೊಂಡು ರೋದಿಸುತ್ತಿತ್ತು.
ಭವ್ಯಾಳ ಹಿರಿಯ ಅಕ್ಕಂದಿರು ಇಬ್ಬರೂ ಸಹ ಬೇರೆ ಊರಿನ ಉನ್ನತ ಆಸ್ಪತ್ರೆಗಳಲ್ಲಿ ಹುಟ್ಟಿದ್ದರಿಂದ ಅದೇನೂ ಸಂದೇಹಕ್ಕೆ ದಾರಿಯಾಗಲಿಲ್ಲ. ಇದಕ್ಕೆ ಕಾರಣ, ಭವ್ಯಾಳ ತಾಯಿ ಶಾರದಾ ತವರೂರು ಶಿವಮೊಗ್ಗದಲ್ಲಿ ಮೊದಲ ಮಕ್ಕಳಿಬ್ಬರು ಹುಟ್ಟಿದ್ದರಿಂದ ಎಲ್ಲವೂ ಸುಸೂತ್ರವಾಗಿತ್ತು. ರಮಾಕಾಂತ್ ಮಡದಿಯ 3ನೇ ಹೆರಿಗೆಯನ್ನು ಇಲ್ಲೇ ಬೆಂಗಳೂರಿನಲ್ಲೇ ಮಾಡಿಸಿದ್ದ. ಮತ್ತೆ ಮತ್ತೆ ಮಡದಿಯನ್ನು ಹೆರಿಗೆಗೆಂದು ತವರೂರಿಗೆ ಕಳಿಸುವುದು ಬೇಡವೆಂದೇ, ಆತ ಪತ್ನಿ ಶಾರದಾಳನ್ನು ಇದೇ ನರ್ಸಿಂಗ್ ಹೋಮಿನಲ್ಲಿ ಸೇರಿಸಿದ್ದ. 2 ಮಕ್ಕಳ ನಂತರ ಕೆಲಸಕ್ಕೆ ಸೇರಿದ್ದ ಶಾರದಾ, ತನ್ನದು ಖಾಸಗಿ ಕಂಪನಿಯಾದ್ದರಿಂದ, ಹೆಚ್ಚು ದಿನಗಳು ತವರಿನಲ್ಲಿ ಉಳಿಯಲಾಗದು ಎಂದು ಇಲ್ಲೇ ಬೆಂಗಳೂರಿನಲ್ಲೇ ಹೆರಿಗೆ ಆಗಲೆಂದು ಬಯಸಿದ್ದಳು.
3ನೇ ಮಗು ಖಂಡಿತಾ ಗಂಡೇ ಆಗುತ್ತದೆ ಎಂದು ಇವರಿಬ್ಬರೂ ಎದುರು ನೋಡುತ್ತಿದ್ದರು. ಗರ್ಭಸ್ಥ ಶಿಶುವಿನ ಲಿಂಗಪತ್ತೆ ಕಾನೂನು ಬಾಹಿರವಾದ್ದರಿಂದ, ಪ್ರಸವಕ್ಕೆ ಮುನ್ನ ಇವರಿಗೆ ಅದನ್ನು ತಿಳಿಯಲಾಗಲಿಲ್ಲ. ತಮ್ಮಿಬ್ಬರ ಆಸೆಯಂತೆ ಅದು ಗಂಡು ಮಗುವೇ ಎಂದು ಅವಳು ನಂಬಿದ್ದಳು.
ಆದರೆ ಹೆರಿಗೆ ನಂತರ, ಬಹಳ ಬ್ಲೀಡಿಂಗ್ ಆದಕಾರಣ, 1-2 ದಿನ ಶಾರದಾ ಜ್ಞಾನವಿಲ್ಲದೆ ವಿಶ್ರಾಂತಿ ಪಡೆಯಬೇಕಾಯಿತು. ನಡುನಡುವೆ ಮಂಪರು, ಯಾವುದೂ ಸರಿಯಾಗಿ ತಿಳಿಯಲೊಲ್ಲದು. ಅಂದು ಸಂಜೆ ಅವಳಿಗೆ 3ನೇ ಮಗು ಹೆಣ್ಣೇ ಎಂದು ಈ ಆಸ್ಪತ್ರೆಯವರು ಖಾತ್ರಿಪಡಿಸಿದಾಗ, ಇವರಿಬ್ಬರಿಗೂ ಬಹಳ ನಿರಾಸೆ ಆಗಿತ್ತು.
ಏನೇ ಆಗಲಿ, ತಾವು ಪಡೆದ ಮಗು ತಮ್ಮದೇ ಎಂದು 3ನೇ ಮಗುವನ್ನು ಒಲ್ಲದ ಮನದಿಂದಲೇ ಇವರಿಬ್ಬರೂ ಸ್ವೀಕರಿಸಿದ್ದರು. 4ನೇ ಮಗು ಗಂಡು ಆಗಬಹುದು ಎಂಬ ಹುಸಿ ನಿರೀಕ್ಷೆ ಬೇಡ, ಎಂದು ಅವರು ಆ ಗೊಡವೆಗೇ ಹೋಗಲಿಲ್ಲ. ಹೀಗಾಗಿ ರಮಾಕಾಂತ್ ವೀಕಾಗಿದ್ದ ಪತ್ನಿಗೆ ತೊಂದರೆ ಬೇಡವೆಂದು ತಾನೇ ಮುಂದಾಗಿ, ವ್ಯಾಸೆಕ್ಟಮಿ ಆಪರೇಷನ್ ಮಾಡಿಸಿಕೊಂಡು, ತಮ್ಮ ಸಂಸಾರ 3 ಮಕ್ಕಳಿಗಷ್ಟೇ ಸೀಮಿತ ಎಂದು ನಿರ್ಧರಿಸಿದರು.
ಯಾವುದೋ ಅರಿಯದ ಬೇಸರಕ್ಕೆ ತುತ್ತಾಗಿ, ಶಾರದಾ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದಳು. ತನಗಿನ್ನು ಗಂಡು ಮಗು ಆಗುವುದಿಲ್ಲ ಎಂಬುದು ಒಂದೆಡೆಯಾದರೆ, ಈ ಕೊನೆಯ ಮಗುವಾದರೂ ಗಂಡಾಗಬಾರದಿತ್ತೇ ಎಂಬ ಕೊರಗು ಮತ್ತೊಂದು ರೀತಿ ಬಾಧಿಸುತ್ತಿತ್ತು.
ಆದರೆ ಹಾಗೆಂದು ಶಾರದಾ ಮಗಳಿಗೆ ಮಮತೆ, ವಾತ್ಸಲ್ಯ ತೋರುವುದರಲ್ಲಿ ಎಂದೂ ಹಿಂದುಳಿಯಲಿಲ್ಲ. ಹಿರಿ ಮಕ್ಕಳಂತೆಯೇ ಇದಕ್ಕೂ ಎದೆಯ ಹಾಲೂಡಿಸಿ, ಅಕ್ಕರೆಯಿಂದಲೇ ರಮಿಸುತ್ತಿದ್ದಳು…. ಕೆಲವೇ ದಿನಗಳಲ್ಲಿ ರಮಾಕಾಂತ್ ಸಹ ಹಳೆಯ ಬೇಸರ ಮರೆತು, 3ನೇ ಮಗುವನ್ನು ಎಂದಿನ ಪ್ರೀತಿಯಿಂದ ಅಪ್ಪನಾಗಿ ಓಲೈಸುತ್ತಿದ್ದ. ಪುಟ್ಟ ತಂಗಿ ಪಾಪು ಮನೆಗೆ ಬಂದಿದ್ದಾಳೆ ಎಂದು ಅಕ್ಕಂದಿರಿಬ್ಬರೂ ಈ ಮಗು ಭವ್ಯಾಳನ್ನು ಅತಿ ಮುಚ್ಚಟೆಯಿಂದ ಆಡಿಸುತ್ತಿದ್ದರು. ಇಂದಿನ ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳು ಯಾವ ಗಂಡು ಮಕ್ಕಳಿಗೂ ಕಡಿಮೆಯಲ್ಲ, ತಾವು ಇನ್ನೆಂದೂ ಆ ವಿಷಯವಾಗಿ ಕೊರಗಬಾರದೆಂದು ದಂಪತಿಗಳಿಬ್ಬರೂ ದೃಢವಾಗಿ ತೀರ್ಮಾನಕ್ಕೆ ಬಂದಿದ್ದರು.
ಇದೆಲ್ಲ ಆಗಿ 7 ವರ್ಷಗಳೇ ಕಳೆದು ಹೋಗಿದ್ದವು. ಭವ್ಯಾ ಆ ಮನೆಯ ಮುದ್ದಿನ ಕಣ್ಮಣಿಯೇ ಆಗಿದ್ದಳು. ಆದರೆ ಆ ದಿನ ಪತ್ರಿಕೆಯಲ್ಲಿ ಬಂದ ವರದಿ, ಆ ಆಸ್ಪತ್ರೆ ಸೀಲ್ ಆಗಿ, ಟಿವಿಯ ಎಲ್ಲಾ ವಾಹಿನಿಗಳಲ್ಲೂ ದಿನವಿಡೀ ಅದೇ ಚರ್ಚೆಯಾಗಿ, ನಗರವಿಡೀ ದೊಡ್ಡ ಆಂದೋಲನವೇ ನಡೆದು ಹೋಗಿತ್ತು. ಅದು ಈ ಸಂಸಾರದ ನೆಮ್ಮದಿಯ ಮೇಲೆ ಕರಿಮೋಡದ ಅಶಾಂತಿ ಚೆಲ್ಲಿತ್ತು! ಅಂದರೆ… ತಮ್ಮ ಈ ಮಗಳು ಭವ್ಯಾ ನಿಜಕ್ಕೂ ತಮ್ಮ ರಕ್ತ ಹಂಚಿಕೊಂಡು ಹುಟ್ಟಿದ್ದಲ್ಲವೇ….? ಎಂಬುದೇ ಈಗ ಅವರ ದೊಡ್ಡ ಸಂಶಯಕ್ಕೆ ಕಾರಣವಾಗಿತ್ತು.
ಶಾರದಾಳ ಮನಸ್ಸು ಗೊಂದಲದ ಗೂಡಾಗಿತ್ತು. ಹಾಗಾದರೆ….. ಹಾಗಾದರೆ…. 7 ವರ್ಷಗಳ ಹಿಂದೆ ತನಗೂ ಹೀಗೆ ಮೋಸವಾಗಿ, ತನಗೆ ಹುಟ್ಟಿದ ಗಂಡು ಮಗು ಬದಲಾಗಿ ಯಾರದೋ ಹೆಣ್ಣು ಮಗು ಭವ್ಯಾ ತಮ್ಮ ಮನೆಯಲ್ಲಿ ಬೆಳೆಯುತ್ತಿದೆಯೇ….? ಆ ಆಸ್ಪತ್ರೆಯರು ತನಗೆ ಇಂಥ ಮೋಸ ಮಾಡಿದ್ದಾರೆಯೇ? ಬೇರೆ ಹೆಂಗಸರಂತೆ ತಾನೂ ಏಮಾರಿದ್ದೇನೆಯೇ? ಅಯ್ಯೋ….. ಹಾಗಾದರೆ ತಾನು ಹೆತ್ತ ಮಗು…. ಈಗ ಎಲ್ಲಿ ಹೇಗೆ ಬೆಳೆಯುತ್ತಿದೆಯೋ ಏನೋ? ಇದ್ದಕ್ಕಿದ್ದಂತೆ ಅವಳಿಗೆ ತನ್ನ ಸಂಸಾರದ ನೆಮ್ಮದಿ, ಸುಖ ಶಾಂತಿ ಎಲ್ಲ ಶೂನ್ಯವಾದಂತೆ ಎನಿಸಿತು. ತನ್ನ ಈ ಮನದ ಸಂದೇಹವನ್ನು ಅವಳು ಪತಿ ಬಳಿಯೂ ಹಂಚಿಕೊಂಡಳು.
“ಅಂದ್ರೆ…. ಎಲ್ಲರ ಹಾಗೆ ನಮಗೂ ಮೋಸ ಆಗಿದೆ ಅಂತೀರಾ? ಹಾಗಾದರೆ ಈ ಭವ್ಯಾ ನಮ್ಮ ಮಗಳೇ ಅಲ್ಲವೇ?” ಪತಿ ಮುಂದೆ ಅಸಹಾಯಕಳಾಗಿ ಬಿಕ್ಕಿದಳು.
ಇದನ್ನು ಕೇಳಿ ಆತನಿಗೂ ಶಾಕ್ ಆದಂತಿತ್ತು, “ಛೇ….ಛೇ…! ಈ ತರಹದ ಯೋಚನೆ ನಮಗೆ ಬರಲೇಬಾರದು. ಇಂಥ ವಿಚಾರಕ್ಕೆ ಈಗ ಯಾವುದೇ ಪ್ರಾಮುಖ್ಯತೆ ಇಲ್ಲ. 7 ವರ್ಷಗಳ ಆ ಹಿಂದಿನ ಕಂತೆಪುರಾಣ ಕೆದಕಿ ಈಗ ಏನಾಗಬೇಕಿದೆ? 3ನೆಯದು ಹೆಣ್ಣಾದರೂ ಅದು ನಮ್ಮದೇ ಮಗು ತಾನೇ ಎಂದು ಸಮಾಧಾನ ಪಟ್ಟುಕೊಂಡಂತೆಯೇ, ಏನೇ ಆಗಲಿ…. ಇದೇ ನಮ್ಮ ಮಗು ಎಂದು ಈಗಲೂ ಸಮಾಧಾನ ತಂದುಕೊಳ್ಳೋಣ. ಇಲ್ಲದಿದ್ದರೆ ಜೀವನದುದ್ದಕ್ಕೂ ಈ ಚಿಂತೆ ನಮ್ಮನ್ನು ದಹಿಸಿಬಿಡುತ್ತದೆ,” ಎಂದು ಪತ್ನಿಗೆ ಸಮಾಧಾನ ಹೇಳಿದ.
“ಏನೇ ಆಗಲಿ…. ನನಗಂತೂ ಈ ಸಂದೇಹದ ಸುಳಿಯಿಂದ ಹೊರಬರಲಾಗುತ್ತಿಲ್ಲ. 7 ವರ್ಷದ ಹಿಂದೆ ನಡೆದಿರಬಹುದು, ಆದರೆ ಅದು ನಮ್ಮೊಂದಿಗೆ ನಡೆದಿದ್ದ ದುರ್ಘಟನೆ ತಾನೇ? ನಾನು ಹೇಳುತ್ತಿರುವ ಮಾತು ಸತ್ಯವೋ ಸುಳ್ಳೋ ಎಂದು ನಿಮ್ಮ ಆತ್ಮಸಾಕ್ಷಿಯನ್ನೇ ಕೇಳಿಕೊಳ್ಳಿ. ಮೆಡಿಕಲ್ ಸೈನ್ಸ್ ಆಧಾರದಿಂದ ಇವಳೇ ನಮ್ಮ ಮಗಳು ಎಂದು ನಿರೂಪಿಸಲು ಸಾಧ್ಯವಿಲ್ಲ ಅಂತೀರಾ….?”
“ಶಾರಿ…. ಸಾಕು ಮಾಡು! ಈ ಎಲ್ಲಾ ವಿಚಾರಗಳಿಂದ ನಮ್ಮ ನೆಮ್ಮದಿ ಹಾಳಾಗುತ್ತದೆಯೇ ಹೊರತು ಬೇರೇನೂ ಪ್ರಯೋಜನವಿಲ್ಲ. ಆಗಿದ್ದು ಆಯ್ತು, ಮುಂದೆ ಆಗಬೇಕಿರುವುದನ್ನು ನೋಡೋಣ. ಯಾರಿಗೋ ಏನೋ ಮೋಸ ಆಗಿರಬಹುದು, ಅದು ನಮಗೇ ಆಗಿದೆ ಎಂದು ಏಕೆ ಅಂದುಕೊಳ್ಳಬೇಕು? ಹಾಗೇಂತ ಏನೂ ಅರಿಯದ ಆ ಮುಗ್ಧ ಮಗು ಭವ್ಯಾಳನ್ನು ಈಗ ನಮ್ಮ ಮಗಳಲ್ಲ ಎಂದು ಭಾವಿಸುವುದೇ…..?”

“ಇದು ಕೇವಲ ನನ್ನ ಮನಸ್ಸಿನ ಭ್ರಾಂತಿಯಲ್ಲ….. ಇದುವೇ ವಾಸ್ತವ!” ಅರಿಯದೇ ಅವಳು ಬಿಕ್ಕಿದಳು.
“ಹೋಗಲಿ, ನಿನ್ನ ಮಾತೇ ಸರಿ ಅಂದುಕೊಳ್ಳೋಣ. ಇದಕ್ಕೆ ಈಗ ಆಧಾರ ಏನು? ಇದನ್ನು ಸಾಬೀತುಪಡಿಸೋದು ಹೇಗೆ?” ರಮಾಕಾಂತ್ ಎಷ್ಟು ಹೇಳಿದರೂ ಶಾರದಾ ಬಡಪಟ್ಟಿಗೆ ಒಪ್ಪುವಂತಿರಲಿಲ್ಲ.
“ನಾವು ಪೊಲೀಸರ ಬಳಿ ದೂರು ಕೊಡೋಣ!”
“ಅಂದ್ರೆ….. ನೀನು ಹೇಳೋದು, ಭವ್ಯಾ ನಮ್ಮ ಮಗಳೇ ಅಲ್ಲವೇ ಅನ್ನೋದನ್ನು ಪೊಲೀಸರು ಹೇಳಲು ಸಾಧ್ಯವೇ?”
“ನಾನು ಹೇಳಿದ್ದಕ್ಕೆಲ್ಲ ನೀವು ಉಲ್ಟಾ ಹೇಳ್ತೀರಿ…. ಇತರರ ಪ್ರಕರಣ ಕಂಡುಹಿಡಿದಂತೆ ಅವರು ನಮ್ಮ ಕೇಸನ್ನೂ ಸರಿಪಡಿಸಿ, ನಿಜಾಂಶ ಏನು ಅಂತ ತಿಳಿಸಬಹುದು….”
“ನಿನ್ನ ಮಾತಿನ ಅರ್ಥ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಳ್ಳೋದು ಅಂತ! ಪೊಲೀಸರ ಬಳಿ ಹೋಗಿ, ನಿನ್ನೆಯ ಪೇಪರ್ ಓದಿ, ನಮ್ಮ ಮಗಳು ನಮ್ಮವಳಲ್ಲ ಅನಿಸ್ತಿದೆ, ಹೇಗಾದರೂ ಇದರ ಸತ್ಯ ಪತ್ತೆ ಮಾಡಿ ಅಂತ ಹೇಳೋದಾ? ಆ ಆಸ್ಪತ್ರೆಯವರು ನಮಗೂ ಮೋಸ ಮಾಡಿದ್ದಾರಾ ವಿಚಾರಿಸಿ ಅನ್ನೋದಾ? ಇದಾದ ನಂತರ ಏನಾಗಬಹುದು ಅಂತ ನಿನಗೆ ಗೊತ್ತೇ…..?
“ಅವರೇನೋ ಇದರ ಹಿಂದಿನ ಸತ್ಯಾಂಶ ಕಂಡುಹಿಡಿಯುತ್ತಾರೆ ಅಂತಿಟ್ಕೊ. ಅದರಿಂದ ನಮ್ಮ ಮಗಳ ಮೇಲೆ ಸಂದೇಹ ಬಂದು ಅವಳನ್ನು ನಮ್ಮಿಂದ ದೂರ ಮಾಡಿ, ಯಾವುದೋ ಅನಾಥಾಲಯಕ್ಕೆ ಸೇರಿಸಿಬಿಟ್ಟರೆ ನಮಗೆ ನೆಮ್ಮದಿಯಿಂದ ಇರಲಾದೀತೇ? ನಮ್ಮ ಮಗಳನ್ನು ನಾವು ಬಿಟ್ಟಿರಲಾದೀತೇ? ಇದೆಲ್ಲ ಹಗರಣ ಮುಗಿದು, ಕೋರ್ಟು ಕಛೇರಿ ಅಲೆದಾಟ ಮುಗಿಯುವವರೆಗೂ ಅವರು ಅನಾಥಾಲಯದಿಂದ ಅದನ್ನು ವಾಪಸ್ಸು ಕಳಿಸೋಲ್ಲ. ಮುಂದೆ ನೀನು ಹೇಳೋ ಮಾತೇ ನಿಜ ಆಯ್ತು ಅಂದ್ಕೊ…. ಈ ಮಗು ನಮ್ಮದಲ್ಲ ಅಂತ ಕೇಸ್ ಬಗೆಹರಿದರೆ, ನಮ್ಮ ಅಸಲಿ ಮಗು ಎಲ್ಲಿ ಬೆಳೆಯುತ್ತಿದೆಯೇ ಏನೋ? ಇನ್ನು ಮುಂದೆ ಅದು ನಮಗೆ ಸಿಕ್ಕೇ ಸಿಗುತ್ತದೆ ಅಂತ ಏನು ಗ್ಯಾರಂಟಿ? ಇದನ್ನೆಲ್ಲ ಎದುರಿಸಲು ನೀನು ಮಾನಸಿಕವಾಗಿ ಸಿದ್ಧಳಾಗು, ಆಗ ಪೊಲೀಸರ ಬಳಿ ಹೋಗೋಣ!” ಆತ ಪತ್ನಿಯನ್ನೇ ದಿಟ್ಟಿಸುತ್ತಾ ವಿವರಿಸಿದ.
ಇದನ್ನೆಲ್ಲ ಕೇಳಿ ಅವಳಿಗೆ ಧರ್ಮ ಸಂಕಟಕ್ಕೆ ಸಿಲುಕಿದಂತಾಯಿತು. ಇದರ ವಾಸ್ತವಾಂಶ ಅರಿತ ಶಾರದಾ, ಮತ್ತೆ ಪೊಲೀಸರ ಬಳಿ ಹೋಗುವ ಮಾತೆತ್ತಲಿಲ್ಲ. ಏನೇ ಆದರೂ ಒಳ ಮನದಲ್ಲಿ ಒಂದು ಕೀಟ ಅವಳನ್ನು ಕೊರೆಯುತ್ತಲೇ ಇತ್ತು. ಏನೇ ಆಗಲಿ, ಆ ಆಸ್ಪತ್ರೆಯಿಂದ ತಾನು ವಂಚಿತೆ ಎಂಬ ಭ್ರಾಂತಿ ಅವಳ ಮನದಿಂದ ದೂರವಾಗಲೇ ಇಲ್ಲ.
ಇದರ ಪರಿಣಾಮವಾಗಿ ಪಾಪದ ಕೂಸು ಭವ್ಯಾ ತಾಯಿಯ ಅನಾದರಕ್ಕೆ ಗುರಿ ಆಗಬೇಕಾಯಿತು. ಅದಕ್ಕೆ ಇದ್ದಕ್ಕಿದ್ದಂತೆ ತಾಯಿಯ ಪ್ರೀತಿ ವಾತ್ಸಲ್ಯದಲ್ಲಿ ಏನೋ ಕೊರತೆ ಇರುವಂತೆ ಭಾಸವಾಗ ತೊಡಗಿತು. ಇದರಲ್ಲಿ ತನ್ನ ತಪ್ಪೇನು? ತಾನು ಯಾವ ಅಪರಾಧ ಮಾಡಿದೆ ಅಂತ ಅಕ್ಕಂದಿರನ್ನು ರಮಿಸುವಂತೆ ಅಮ್ಮ ತನ್ನನ್ನು ರಮಿಸುತ್ತಿಲ್ಲ….?
ಮಗುವಿನತ್ತ ಪತ್ನಿಯ ಅನಾದರ ಕಂಡು ರಮಾಕಾಂತ್ ಮನದಲ್ಲೇ ಕೊರಗತೊಡಗಿದ. ಆದರೆ ಈ ಸಮಸ್ಯೆಗೆ ತಕ್ಷಣ ಎಂಥ ಪರಿಹಾರ ಹುಡುಕುವುದೋ ತಿಳಿಯಲಿಲ್ಲ. ಆ ಸಂಜೆ ಪತ್ನಿ ಹೇಳಿದ ಮಾತು ಕೇಳಿ ಆತನಿಗೆ ಮತ್ತೊಂದು ದೊಡ್ಡ ಸಮಸ್ಯೆ ಎದುರಾಯಿತು. ಟಿವಿ ಕಾರ್ಯಕ್ರಮಗಳ ಮೂಲಕ DNA ಪರೀಕ್ಷೆ ಬಗ್ಗೆ ಅರೆಬರೆ ತಿಳಿದುಕೊಂಡಿದ್ದ ಶಾರದಾ, ಪತಿಗೂ ಮಗುವಿಗೂ ಆ ಪರೀಕ್ಷೆ ಮಾಡಿಸಿ, ಅವನೇ ಆ ಮಗುವಿನ ತಂದೆ ಹೌದೋ ಅಲ್ಲವೋ ತಿಳಿದರಾಯಿತು ಎಂದುಬಿಟ್ಟಳು! ಇದರಿಂದ ಮಗುವಿನ ಹೆತ್ತ ತಂದೆ ಹೌದೋ ಅಲ್ಲವೋ ಎಂಬುದಂತೂ ಖಾತ್ರಿಯಾಗುತ್ತಿತ್ತು.
“ಎಲ್ಲರೂ ಹೇಳ್ತಾರೆ, ಈ ಟೆಸ್ಟ್ ಮಾಡಿಸಿ ಮಗುವಿನ ತಂದೆ ಯಾರೆಂದು ತಿಳಿಯಬಹುದಂತೆ. ಅಸಲಿ ಪಿತೃತ್ವಕ್ಕೆ ಇದು ಸರಿಯಾದ ಪರೀಕ್ಷೆಯಂತೆ. ಇದರಿಂದ ಹಂಸಕ್ಷೀರದ ನ್ಯಾಯದಂತೆ ನೀರುಹಾಲು ಬೇರೆ ಎಂಬುದು ನಿರೂಪಿತವಾಗುತ್ತದೆ. ನಿಮ್ಮಿಬ್ಬರ ಪರೀಕ್ಷೆ ಏಕೆ ಮಾಡಿಸಬಾರದು?”
ಆಕೆಯ ಮಾತು ಕೇಳಿ ಆತ ಕೆಲವು ಕಾಲ ವಿಚಲಿತನಾದ. ಮಗಳ ಕುರಿತಾಗಿ ಸದಾ ಯೋಚಿಸುತ್ತಾ ಪತ್ನಿ ಈ ಹಂತ ಮುಟ್ಟಬಹುದೆಂದು ಅವನು ಎಣಿಸಿರಲಿಲ್ಲ.
“ಈ ಪರೀಕ್ಷೆ ನಿನಗೊಂದು ಆಟವೇ? ಇದಕ್ಕಾಗಿ ಬಹಳ ಹಣ ಖರ್ಚಾಗುತ್ತದೆ. ನಮ್ಮಂಥ ಮಧ್ಯಮ ವರ್ಗದವರಿಗೆ ಇದೆಲ್ಲ ಬೇಕೇ?” ಆಕೆಗೆ ತಿಳಿಹೇಳಲು ಆತ ಬಹಳ ಯತ್ನಿಸಿದ.
“ಎಷ್ಟೇ ಖರ್ಚಾಗಲಿ ಬಿಡಿ, ಇದನ್ನು ಮಾಡಿಸಿ ನೋಡಿಯೇಬಿಡೋಣ. ದಿನಾ ನನ್ನ ಮನಸ್ಸು ಕೊರೆಯುತ್ತಿರುವ ಚಿಂತೆಯಾದರೂ ಇದರಿಂದ ದೂರವಾಗಲಿ!”
ಶಾರದಾಳ ಮಾತುಗಳಿಂದ ಈ ಹಗರಣ ಗಂಭೀರ ರೂಪ ತಾಳುತ್ತಿದೆ ಎನಿಸಿತು. ಮಗಳ ಕುರಿತಾಗಿ ಸದಾ ಯೋಚಿಸಿ ಕಂಗೆಡುತ್ತಾ, ಹೆಂಡತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ ಎಂದು ಅರಿತುಕೊಂಡ. ಹೇಗಾದರೂ ಮಾಡಿ ಅವಳನ್ನು ಆ ಮನಃಸ್ಥಿತಿಯಿಂದ ಹೊರತರಲೇಬೇಕಿತ್ತು. ಇದನ್ನು ಸುಳ್ಳು ಹೇಳಿ ಸಾಧಿಸಿದರೂ ತಪ್ಪಿಲ್ಲ ಎನಿಸಿತು.
ಆಗ ಆತ ತನ್ನ ಗೆಳೆಯ ಡಾ. ಸತೀಶ್ ಬಗ್ಗೆ ಯೋಚಿಸಲಾರಂಭಿಸಿದ. ಖ್ಯಾತ ಪ್ರೈವೇಟ್ ಲ್ಯಾಬ್ ಹೊಂದಿದ್ದ ಡಾ. ಸತೀಶ್ ನನ್ನು ಕಂಡು, ಮನೆಯ ಸಮಸ್ಯೆಯ ಬಗ್ಗೆ ಪೂರ್ತಿ ವಿವರಿಸಿದ ರಮಾಕಾಂತ್.
“ಅದೆಲ್ಲ ಸರಿ…. ನಿನ್ನ ಪತ್ನಿ ಎಲ್ಲಿಯವರೆಗೆ ಕಲಿತಿದ್ದಾರೆ?” ಸಮಸ್ಯೆಯನ್ನು ಆಳವಾಗಿ ವಿಶ್ಲೇಷಿಸುತ್ತಾ ಡಾಕ್ಟರ್ ನುಡಿದ.
“PUC ವರೆಗೂ ಆಗಿದೆ, ಡಿಗ್ರಿ ಅಂತೂ ಆಗಿಲ್ಲ.”
“ಇತ್ತೀಚೆಗೆ ಎಲ್ಲರೂ DNA ಬಗ್ಗೆ ಮಾತನಾಡುತ್ತಾರೆ. ಎಲ್ಲಿ ನೋಡಿದರೂ ಸರೋಗೇಟ್ ಮದರ್ ಮಾಮೂಲಿ ಆಗಿದೆ. ಹೀಗಾಗಿ ಇದೆಲ್ಲ ತುಂಬಾ ಸುಲಭ ಎನಿಸಿದೆ ಆಕೆಗೆ. ಇರಲಿ, ಆಕೆಯ ಮುಗ್ಧ ಮನಸ್ಸಿಗೆ ನೋವಾಗದಂತೆ ಮೆಡಿಕಲ್ ಸೈನ್ಸ್ ಆಧಾರದಿಂದ ಏನಾದರೂ ಪರಿಹಾರ ಹುಡುಕುವೆ. ನಾಳೆ ಶಾರದಾ, ಭವ್ಯಾ ಇಬ್ಬರನ್ನೂ ಕರೆದುಕೊಂಡು ಬಾ.”
ಗೆಳೆಯನ ಮಾತು ರಮಾಕಾಂತ್ ಗೆ ಎಷ್ಟೋ ಧೈರ್ಯ ನೀಡಿತು. ಮನೆಗೆ ಬಂದು ಮಡದಿಗೆ ಹೇಳಿ ಮಾರನೇ ದಿನ ಡಾಕ್ಟರ್ ಬಳಿ ಹೋಗೋಣ ರೆಡಿ ಆಗಿರು ಎಂದ.
“ಎಲ್ಲಿಗೆ ಹೋಗಬೇಕು?” ಶಾರದಾ ಪ್ರಶ್ನಿಸಿದಳು.
“ಡಾ. ಸತೀಶ್ ಕುಮಾರ್ ಬಳಿ. ಆತ ನನ್ನ ಬಾಲ್ಯ ಸ್ನೇಹಿತ. ಮಗು ಮತ್ತು ನನ್ನ DNA ಟೆಸ್ಟ್ ಮಾಡಿಸಬೇಕು ಅಂದ್ಯಲ್ಲ…. ಅದರ ಕುರಿತಾಗಿಯೇ!”
“ಅಯ್ಯೋ…. ಇಷ್ಟು ಬೇಗ ಇದೆಲ್ಲ ರೆಡಿ ಮಾಡಿಕೊಂಡಿರಾ? ಮೊದಲೇ ಈ ವಿಚಾರ ನೀವು ನನಗೆ ಹೇಳಲೇ ಇಲ್ಲ…..”
“ನಾನು ನಿನ್ನೆ ಸಂಜೆ ಅವನ ಬಳಿ ಹೋಗಿ ಎಲ್ಲಾ ವಿವರವಾಗಿ ಕೇಳಿಕೊಂಡು ಬಂದಿದ್ದೀನಿ. ನಮ್ಮ ಮೂವರ ರಕ್ತದ ಪರೀಕ್ಷೆ ಮಾಡಿಸಿ ಅದರಿಂದ ಸತ್ಯಾಂಶ ಹೊರಡಿಸುತ್ತಾನೆ. ಇದನ್ನು ದೊಡ್ಡ ಲ್ಯಾಬ್ ನಲ್ಲಿ ಪ್ರೊಸೆಸ್ ಮಾಡಿಸಿ, ಫೈನಲ್ ರಿಪೋರ್ಟ್ ತರಿಸುವಷ್ಟರಲ್ಲಿ 1 ವಾರ ಆಗುತ್ತಂತೆ.”
ತನ್ನ ಸಂದೇಹ ಈಗ ಎಂಥ ಭೂತಾಕಾರ ತಾಳಿದೆ ಎಂದು ಅವರಿಗಾಗಿ ಅವಳು ಕಂಗಾಲಾದಳು. ಇದೆಲ್ಲ ಈಗ ಬೇಕಿತ್ತೇ ಎಂದು ಮತ್ತೊಂದು ಹೊಸ ದ್ವಂದ್ವ ಶುರುವಾಯಿತು.
ಮಾರನೇ ದಿನ ಇವರಿಬ್ಬರನ್ನೂ ಕರೆದುಕೊಂಡು ರಮಾಕಾಂತ್ ಕ್ಲಿನಿಕ್ ಕಡೆ ನಡೆದ. ಡಾ. ಸತೀಶ್ ನ ಲ್ಯಾಬ್ ಕ್ಲಿನಿಕ್ ನ ಹಿಂಭಾಗದಲ್ಲೇ ಇತ್ತು.
DNA ಟೆಸ್ಟ್ ಹೆಸರಲ್ಲಿ ಒಂದು ಡ್ರಾಮಾ ನಡೆಸಬೇಕಿತ್ತು. ಎಲ್ಲಕ್ಕೂ ಮೊದಲು ರಮಾಕಾಂತ್ ನನ್ನು ಲ್ಯಾಬ್ ಗೆ ಕರೆದೊಯ್ದ ಡಾಕ್ಟರ್, ಚುಟುಕಾಗಿ ರಕ್ತ ಪರೀಕ್ಷೆ ಮುಗಿಸಿದರು. ಇತರರ ಗಮನಕ್ಕಾಗಿ ಬಲಗೈ ಬಳಿ, ಚುಚ್ಚಿರುವ ಭಾಗ ಎಂಬಂತೆ ಒಂದು ಸಣ್ಣ ಪ್ಲಾಸ್ಟರ್ ಹಾಕಲಾಗಿತ್ತು. ಮುಂದೇನು ಮಾಡಬೇಕು ಎಂದು 10 ನಿಮಿಷ ಅವರು ಅಲ್ಲೇ ಚರ್ಚಿಸಿದರು.
ಲ್ಯಾಬ್ ನಿಂದ ಹೊರಬಂದ ರಮಾಕಾಂತ್, ಆತಂಕದಿಂದ ಎದುರು ನೋಡುತ್ತಿದ್ದ ಪತ್ನಿ ಶಾರದಾಳನ್ನು ಒಳಗೆ ಹೋಗುವಂತೆ ಕಳುಹಿಸಿಕೊಟ್ಟ. ಇದನ್ನೆಲ್ಲ ಗಮನಿಸುತ್ತಿದ್ದ ಪುಟ್ಟ ಭವ್ಯಾ, ತನಗೆಂಥ ಇಂಜೆಕ್ಷನ್ ಕಾದಿದೆಯೋ ಎಂದು ಗಾಬರಿ ಪಡುತ್ತಿದ್ದಳು.
ಇಡೀ ನಾಟಕ ಅಸಲಿ ಎಂದು ಪ್ರತಿಬಿಂಬಿಸಲು, ಡಾಕ್ಟರ್ ಶಾರದಾಳ ಕೈಯಿಂದ ತುಸುವೇ ರಕ್ತ ತೆಗೆದುಕೊಂಡು, ಬೇರೆ ಏನೇನೋ ತಪಾಸಣೆ ನಡೆಸಿ, ಪ್ಲಾಸ್ಟರ್ ಹಾಕಿ ಕಳುಹಿಸಿದರು. ವಾಸ್ತವದಲ್ಲಿ ಈ DNA ಪರೀಕ್ಷೆಯಲ್ಲಿ ತಾಯಿಯ ರಕ್ತದ ಟೆಸ್ಟ್ ಬೇಕಾಗೇ ಇರಲಿಲ್ಲ. ಶಾರದಾಳ ಮನಶ್ಶಾಂತಿಗಾಗಿ ಇದೆಲ್ಲವನ್ನೂ ಗೆಳೆಯರಿಬ್ಬರೂ ಯೋಚಿಸಿದ್ದರು. ಮಗಳು ಭವ್ಯಾ ತನ್ನ ರಕ್ತದ ಅಂಶವೋ ಅಲ್ಲವೋ ಎನ್ನುವ ಅವಳ ಸಂದೇಹ ನಿವಾರಣೆ ಇಲ್ಲಿ ಮುಖ್ಯವಾಗಿತ್ತು.
ನಂತರ ಡಾಕ್ಟರ್ ಬಂದು ಹೆದರಿದ್ದ ಮಗು ಭವ್ಯಾಳನ್ನು ಕರೆದುಕೊಂಡು ಹೋದರು. ಭವ್ಯಾಳಿಂದ ಒಂದೇ ಒಂದು ತೊಟ್ಟು ರಕ್ತ ಎಳೆದುಕೊಂಡು, ಕ್ಷಣ ಮಾತ್ರದಲ್ಲಿ ಟೆಸ್ಟ್ ಮುಗಿಸಿದ ಡಾಕ್ಟರ್, ಅದರ ಕೈಗೊಂದು ಪುಟ್ಟ ಪ್ಲಾಸ್ಟರ್ ಹಾಕಿ ಕಳಿಸಿದರು. ಇಷ್ಟು ಬೇಗ, ಇಷ್ಟು ಕಡಿಮೆ ನೋವಲ್ಲಿ ಟೆಸ್ಟ್ ಮುಗಿಯಿತೇ ಎಂದು ಭವ್ಯಾ ಸಂಭ್ರಮದಿಂದ ಹೊರಗೆ ಓಡಿಬಂದಳು.
ನಂತರ ಶಾರದಾಳ ಸಂಶಯ ನಿವಾರಣೆಗಾಗಿ, ಡಾಕ್ಟರ್ ಬಳಿ ಮಾತನಾಡಲಿ ಎಂದು ರಮಾಕಾಂತ್ ಪತ್ನಿಯೊಂದಿಗೆ ಡಾ. ಸತೀಶ್ ಮುಂದೆ ಹಾಜರಾದ.
“ನಾನು ಈಗ ಮಾಡಿದ ಈ DNA ಟೆಸ್ಟ್ ನಿಜಕ್ಕೂ ನನ್ನ ವೃತ್ತಿ ಜೀವನಕ್ಕೆ ಮಾಡುತ್ತಿರುವ ಅನ್ಯಾಯ!”
“ಒಂದು ಒಳ್ಳೆಯ ಕೆಲಸಕ್ಕಾಗಿ, ನಮ್ಮ ಕುಟುಂಬ ಕಾಪಾಡಲು ನೀವು ನಡೆಸುತ್ತಿರುವ ಈ ಟೆಸ್ಟ್ ಅನ್ಯಾಯ ಆಗದು ಬಿಡು ಸತೀಶ್,” ಎಂದ ರಮಾಕಾಂತ್. ಶಾರದಾಳ ತೃಪ್ತಿಗಾಗಿ ಒಂದಷ್ಟು ವೈಜ್ಞಾನಿಕ ವಿವರಣೆ, ಜೀನ್ಸ್ ಇತ್ಯಾದಿ ಕುರಿತು ಹೇಳಿ, ವಾರದ ನಂತರ ರಿಪೋರ್ಟ್ ಬಂದಾಗ ಕರೆಸಿಕೊಳ್ಳುವುದಾಗಿ ಡಾಕ್ಟರ್ ಇವರನ್ನು ಕಳುಹಿಸಿ ಕೊಟ್ಟರು.
ಕ್ಲಿನಿಕ್ನಿಂದ ಮರಳಿದ ನಂತರ ಶಾರದಾಳಲ್ಲಿ ಒಂದು ವಿಚಿತ್ರ ಬದಲಾವಣೆ ಗಮನಿಸಿದ ರಮಾಕಾಂತ್. ಭವ್ಯಾಳ ಬಗ್ಗೆ ಏನೋ ಒಂದು ಬಗೆಯ ಹಿಂಜರಿತ ಬೆಳೆಸಿಕೊಂಡಿದ್ದ ಶಾರದಾ, ಅದನ್ನೆಲ್ಲ ಮರೆತು ಎಂದಿನಂತೆ ಮಮತಾಮಯಿ ತಾಯಿಯಾಗಿ ಮಗುವನ್ನು ಆದರಿಸುತ್ತಿದ್ದಳು. ಈ ಬದಲಾವಣೆ ಒಳ್ಳೆಯದಕ್ಕೆ ಎಂದು ತಿಳಿದರೂ, ಶಾರದಾಳ ಮನದಾಳದ ಶಂಕೆ ಇನ್ನೂ ನಿವಾರಣೆಯಾಗಿಲ್ಲ ಎಂದು ಅವಳ ಚಿಂತಾಕ್ರಾಂತ ಮುಖ ಕಂಡೇ ಈತ ಊಹಿಸುತ್ತಿದ್ದ.
ಗಂಡ ಮತ್ತು ಡಾಕ್ಟರ್ ರ ನಾಟಕದ ಬಗ್ಗೆ ಶಾರದಾಳಿಗೆ ಕಿಂಚಿತ್ತೂ ಸಂದೇಹ ಬರಲಿಲ್ಲ. ಅವಳ ಶಂಕೆ ನಿವಾರಿಸಲೆಂದೇ ಡಾಕ್ಟರ್ ಒಂದು ನಕಲಿ ರಿಪೋರ್ಟ್ ತಯಾರಿಸಿದರು. ಇಂಥದ್ದೆಲ್ಲ ಸೂಕ್ಷ್ಮವಾಗಿ ಅರಿತುಕೊಳ್ಳುವಷ್ಟು ಪ್ರೌಢ ಜಾಣ್ಮೆ ಅಥವಾ ವೈಜ್ಞಾನಿಕ ತಿಳಿವಳಿಕೆ ಅವಳಿಗೆ ಇರಲಿಲ್ಲ. DNA ಟೆಸ್ಟ್ ಬೇಕು ಎಂದು ಒತ್ತಾಯಿಸುತ್ತಿದ್ದ ಅವಳಿಗೆ ಅದರ ಮೂಲಭೂತ ಹಂತಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ಇದನ್ನು ಅವಳು ಮೂರನೆಯವರ ಬಳಿ ಚರ್ಚಿಸುವುದಿಲ್ಲ ಎಂಬುದಂತೂ ರಮಾಕಾಂತನಿಗೆ ಖಾತ್ರಿಯಿತ್ತು.
ಒಂದು ವಾರ ಕಳೆದರೂ ಶಾರದಾ ಆ DNA ರಿಪೋರ್ಟ್ ಏನಾಯಿತು ಎಂದು ಗಂಡನನ್ನು ಕೇಳಲು ಹೋಗಲಿಲ್ಲ. ಅದರಿಂದ ತನಗೇನೂ ಆಗಬೇಕಿಲ್ಲ ಎಂಬಂತೆ ನಿರ್ಲಿಪ್ತಳಾಗಿದ್ದಳು.
ಡಾಕ್ಟರ್ ಬಳಿ ಫೋನಿನಲ್ಲಿ ವಿಚಾರಿಸಿಕೊಂಡ ರಮಾಕಾಂತ್, ಶಾರದಾ ಬಳಿ, “ರಿಪೋರ್ಟ್ ಬಂದಿದೆಯಂತೆ ಶಾರಿ. ನಾವು ನಾಳೇನೇ ಅಲ್ಲಿಗೆ ಹೋಗಬೇಕಂತೆ,” ಎಂದ.
ಇದರಿಂದ ಅವಳು ಒಂದಿಷ್ಟೂ ವಿಚಲಿತಳಾಗದೆ ಭಾವಹೀನವಾಗಿ ಅವಳು ಸುಮ್ಮನೆ ಇದ್ದುಬಿಟ್ಟಳು.
“ಯಾಕೋ ನಿನಗೆ ಮೂಡ್ ಇಲ್ಲ ಅನಿಸುತ್ತೆ…. ಸರಿ ಬಿಡು, ನಾನು ನಾಳೆ ಸಂಜೆ ಆಫೀಸಿನಿಂದ ಬರುವಾಗ ಡಾಕ್ಟರ್ ನ ಮೀಟ್ ಮಾಡಿ ರಿಪೋರ್ಟ್ ಪಡೆದು ಬರ್ತೀನಿ,” ಎಂದು ಅವಳಿಗೆ ಸಮಾಧಾನವೆಂಬಂತೆ ಹೇಳಿದ. ಅದಕ್ಕೂ ಅವಳೇನೂ ಪ್ರತಿಕ್ರಿಯಿಸಲಿಲ್ಲ.
ಸಂಜೆ ಬರುವಾಗ ಆತ ಒಂದು ಸೀಲ್ಡ್ ಕವರ್ ತಂದಿದ್ದ. ಅದರಲ್ಲಿ ಒಂದು ನಕಲಿ ರಿಪೋರ್ಟ್ ಸಿದ್ಧವಾಗಿತ್ತು. ಅದರಲ್ಲಿ ಇದ್ದುದೇನು ಎಂಬುದು ಅವನಿಗೆ ಗೊತ್ತಿತ್ತು, ಇವರಿಬ್ಬರೂ ಮಾತನಾಡಿಕೊಂಡಂತೆಯೇ ಡಾಕ್ಟರ್ ರಿಪೋರ್ಟ್ ತಯಾರಿಸಿ ಕೊಟ್ಟಿದ್ದರು.
ಅದನ್ನು ಪತ್ನಿಗೆ ಕೊಡುತ್ತಾ ಆತ, “ಈ ರಿಪೋರ್ಟ್ ನಮ್ಮ ಸಾಂಸಾರಿಕ ನೆಮ್ಮದಿಗೆ ನೇರ ಸಂಬಂಧಿಸಿದೆ. ಹೀಗಾಗಿ ಬೇರೆ ಲ್ಯಾಬ್ ನಿಂದ ಸೀಲ್ಡ್ ಆಗಿ ಬಂದಿದ್ದ ಈ ರಿಪೋರ್ಟ್ ನಾವೇ ನೋಡಿ ತಿಳಿಯಲಿ ಎಂದು ಹೀಗೆ ಕಳುಹಿಸಿದ್ದಾನೆ. ಇದರಲ್ಲಿ ಏನೇ ಇರಲಿ ಶಾರಿ, ನಿನ್ನ ಸಂದೇಹ ನಿಜ ಅಥವಾ ಸುಳ್ಳೇ ಆಗಿರಬಹುದು, ಅದನ್ನು ಸಹಜವಾಗಿ ಸ್ವೀಕರಿಸಲು ನೀನು ಸಿದ್ಧಳಿರಬೇಕಷ್ಟೇ….” ಎಂದ.
ಆದರೆ ತನ್ನ ಸಂದೇಹದ ಸುಳಿಯಿಂದ ಸಂಪೂರ್ಣ ಹೊರಬಂದಿದ್ದ ಶಾರದಾ, ಕ್ಷಣ ಮಾತ್ರ ತಡ ಮಾಡದೆ, ಗಂಡನಿಂದ ಆ ರಿಪೋರ್ಟ್ ಪಡೆದು, ಒಂದೇ ನಿಮಿಷದಲ್ಲಿ ಚೂರು ಚೂರಾಗಿ ಹರಿದು, ಬಚ್ಚಲಿನ ಒಲೆಗೆ ಹಾಕಿ ಬಂದಳು. ಇದೇನಿದು ಆಶ್ಚರ್ಯ ಎಂದು ಗರ ಬಡಿದವನಂತೆ ನೋಡುತ್ತಿದ್ದ ಗಂಡನ ಎದೆಗೊರಗಿದ ಶಾರದಾ, ಮಗಳು ಭವ್ಯಾಳನ್ನೂ ಎಳೆದುಕೊಂಡು ಒಟ್ಟಿಗೆ ತಬ್ಬಿ ಮೌನವಾಗಿ ಬಿಕ್ಕಿದಳು.
ಆ ರಿಪೋರ್ಟಿನಲ್ಲಿ ಏನೇ ಇರಲಿ, ತಮ್ಮ ಕೌಟುಂಬಿಕ ನೆಮ್ಮದಿ ಮೊದಲಿನಂತೆಯೇ ತುಂಬಿರಲಿ ಎಂದು, ಭವ್ಯಾಳನ್ನು ಬಿಟ್ಟಿರಲಾಗದೆ ಗಟ್ಟಿಯಾಗಿ ಹಿಡಿದುಕೊಂಡಳು. ಅದೇ ಹೊತ್ತಿಗೆ ಹೊರಗಿನಿಂದ ಬಂದಿದ್ದ ಅವಳ ಹಿರಿಯ ಮಕ್ಕಳು ಸಹ ಓಡಿ ಬಂದು ಇವರ ತೆಕ್ಕೆಗೆ ಬಿದ್ದರು. ಅಲ್ಲಿಗೆ ಅವಳ ಸಂಶಯವೆಲ್ಲ ಸಂಪೂರ್ಣ ದೂರವಾಗಿತ್ತು.





