ಕನ್ನಡಿಗರ ಹೊಸ ವರ್ಷದ ಮೊದಲ ಹಬ್ಬವಾದ ಯುಗಾದಿಯ ಸಂಭ್ರಮಾಚರಣೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಈ ಸಾಂಪ್ರದಾಯಿಕ ಹಬ್ಬವನ್ನು ಇಂದಿನ ಆಧುನಿಕ ದಿನಗಳಿಗೆ ತಕ್ಕಂತೆ ಆಚರಿಸುವ ವಿಧಾನ ಅರಿಯೋಣವೇ......?
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಆದರೆ ನಾವು ಕಳೆದ ಸಮಯ ಮಾತ್ರ ಮರಳಿ ಬರುವುದಿಲ್ಲ. ನಮ್ಮ ಹಿಂದೂಗಳಲ್ಲಿ ಹಬ್ಬಗಳ ಆಚರಣೆ ಬಹಳ ಇದೆ. ಅವುಗಳಲ್ಲಿ ಯುಗಾದಿಯು ಬಹಳ ಮುಖ್ಯವಾದ ಹಬ್ಬಾಗಿದೆ.
ಯುಗಾದಿ ಎಂಬ ಪದ ಸಂಸತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಯುಗಾದಿ ಎಂದರೆ ಯುಗದ ಆದಿ, ವರ್ಷದ ಆದಿ, ವರ್ಷದ ಆರಂಭ ಎಂಬುದಾಗಿ ಹೇಳಬಹುದಾಗಿದೆ. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತ ಋತು ಇದ್ದಂತೆ, ಹಿಂದೂ ಧರ್ಮಕ್ಕನುಸಾರ ಹಬ್ಬಗಳಲ್ಲಿ ಯುಗಾದಿ ಹಬ್ಬ ಪ್ರಪ್ರಥಮ ಹಬ್ಬಾಗಿ ಆಚರಿಸಲ್ಪಡುವುದು.
ಯುಗಾದಿ ಹಬ್ಬದ ದಿನ ತ್ರಿಮೂರ್ತಿಗಳಲ್ಲಿ ಒಬ್ಬನೂ ಸೃಷ್ಟಿಕರ್ತನಾದ ಬ್ರಹ್ಮ ದೇವನು ಜಗತ್ತನ್ನು ಸೃಷ್ಟಿ ಮಾಡಿದ ದಿನ. ಅಂದಿನಿಂದಲೇ ವರ್ಷ, ಋತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆ ಇದೆ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ ಮತ್ತು ದಕ್ಷಿಣಾಯನನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದಲೇ ವರ್ಷವನ್ನು ಯುಗ ಎಂದೂ, ಅದರ ಮೊದಲ ದಿನವನ್ನು ಯುಗಾದಿ ಎಂದೂ ಕರೆಯಲಾಗಿದೆ.
ಸೂರ್ಯ ಚಂದ್ರರ ಹಿನ್ನಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿದೆ. ಸೌರಮಾನ ಮತ್ತು ಚಾಂದ್ರಮಾನದ ಹಬ್ಬಗಳು ಪ್ರದೇಶಾನಸಾರವಾಗಿ ರೂಢಿಯಲ್ಲಿವೆ. ಈ ಚಾಂದ್ರಮಾನ ಯುಗಾದಿಯನ್ನು ಪ್ರಥಮ ತಿಥಿಯಾದ ಪಾಡ್ಯದಲ್ಲಿಯೇ ಸಾಂಪ್ರದಾಯಿಕವಾಗಿ ಆಚರಿಸಬೇಕು. ಸೌರಮಾನದಂದು ಯುಗಾದಿಯನ್ನು ಮೇಷ ಸಂಕ್ರಮಣದಲ್ಲಿ ಆಚರಿಸಬೇಕು. ಈ ಆಚರಣೆಯಲ್ಲೂ ಕೆಲವು ವಿಶೇಷಗಳಿವೆ.

ಐತಿಹಾಸಿಕ ಕಾರಣಗಳು
ಶ್ರೀರಾಮನು ಈ ದಿನವೇ ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯುಳ್ಳ ರಾವಣ ಮತ್ತು ರಾಕ್ಷಸರನ್ನು ವಧಿಸಿ ಅಯೋಧ್ಯೆಗೆ ಹಿಂದಿರುಗಿ ಈ ಯುಗಾದಿ ಶುಭದಿನದಂದು ಶ್ರೀರಾಮಚಂದ್ರ ಪಟ್ಟಾಭಿಷಿಕ್ತನಾಗುತ್ತಾನೆ. ಹಾಗೆಯೇ ಉಜ್ಜಯಿನಿಯ ವಿಕ್ರಮಾದಿತ್ಯನನ್ನು ಶಾಲಿವಾಹನ ಪರಾಭವಗೊಳಿಸಿ ತನ್ನ ವಿಜಯವನ್ನು ಸಂಪಾದಿಸಿದ್ದು ಇದೇ ದಿನ. ಈ ದಿನದಿಂದಲೇ ಶಾಲಿವಾಹನ ಶಕೆ ಪ್ರಾರಂಭವಾಯಿತು.
ಭಗವಂತ ಶ್ರೀಕೃಷ್ಣನು ನೃಪಕೇತುವಿಗೆ ದರ್ಶನ ನೀಡಿದ್ದು ವಿಕ್ರಮನಾಮ ಚೈತ್ರ ಶುದ್ಧ ಪ್ರತಿಪದೆಯಂದು. ಈ ಯುಗಾದಿ ಹಬ್ಬ ಜೈನರಿಗೂ ಪವಿತ್ರವಾದದ್ದು. ಹದಿನಾಲ್ಕನೇ ತೀರ್ಥಂಕರನಾದ ಮಲ್ಲಿನಾಥನು ಜನಿಸಿದ್ದು, ಯುಗಾದಿಯ ದಿನದಂದು ಎಂದು ಜೈನ ಪುರಾಣ ತಿಳಿಸುತ್ತದೆ. ಗಂಗೆ ಶಿವನ ಜಟೆಯಲ್ಲಿ ಬಂಧಿತಳಾದದ್ದು ರುಧಿರೋದ್ಗಾರಿ ಸಂವತ್ಸರದ ಚೈತ್ರಮಾಸದ ಯುಗಾದಿಯಂದು. ಎಲ್ಲ ಚೈತ್ರಶುದ್ಧ ಪ್ರಥಮದಿನ ಇರುವುದರಿಂದ ಈ ದಿನಕ್ಕೆ ಹೆಚ್ಚು ಮಹತ್ವ ಬಂದಿದೆ.

ಆಧ್ಯಾತ್ಮಕ ಕಾರಣಗಳು
ವರ್ಷದಲ್ಲಿನ ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯದಶಮಿ). ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ (ದೀಪಾವಳಿ). ಹೀಗೆ ಮೂರೂವರೆ ಮುಹೂರ್ತಗಳಿವೆ. ಈ ದಿನಗಳಂದು ಮುಹೂರ್ತ ನೋಡುವ ಅವಶ್ಯಕತೆ ಇಲ್ಲ. ಈ ದಿನಗಳಲ್ಲಿ ಪ್ರತಿ ಘಳಿಗೆಯೂ ಶುಭ ಮುಹೂರ್ತ ಆಗಿರುತ್ತದೆ.





