ಮೊದಲಿನಿಂದಲೂ ನಾನು ಹಠಮಾರಿ ಸ್ವಭಾವದವಳು. ನನ್ನಕ್ಕ ಎಷ್ಟು ಸೌಮ್ಯಳೋ ನಾನು ಅಷ್ಟೇ ಜಗಳಗಂಟಿ. ನಮ್ಮಮ್ಮನಿಗೆ ಮೊದಲಿನಿಂದಲೂ ನಮ್ಮ ಜಗಳ ಬಿಡಿಸುವುದರಲ್ಲಿ ಸಾಕಾಗಿ ಹೋಗುತ್ತಿತ್ತು. ನನಗೆ ಬೇಡ ಎನಿಸಿದ್ದನ್ನು ನಿರ್ಲಕ್ಷ್ಯದಿಂದ ಎಸೆದು ಅಕ್ಕನ ವಸ್ತು ಕಿತ್ತುಕೊಳ್ಳುತ್ತಿದ್ದೆ. ಹೈಸ್ಕೂಲು ಮುಗಿಸುವ ಹೊತ್ತಿಗೆ ನನ್ನ ಜಗಳಗಂಟಿ ಬುದ್ಧಿ ತುಸು ಸುಧಾರಿಸಿದ್ದರೂ, ಸ್ವಾರ್ಥ ಬಿಟ್ಟು ಕೊಡುತ್ತಿರಲಿಲ್ಲ. ಹಿರಿಯ ಅಧಿಕಾರಿ ಹುದ್ದೆಯಲ್ಲಿದ್ದ ನಮ್ಮ ತಂದೆ, ಸ್ವಂತ ಮನೆ, ಕಾರು, ಆಳುಕಾಳು ನನಗೆ ಕಾಲೇಜಿನಲ್ಲಿ ಅಹಂ ತರಿಸಿತ್ತು.

ಅಕ್ಕನ ಮದುವೆ ಬ್ಯಾಂಕ್‌ ಮೇನೇಜರ್‌ ಜೊತೆ ಆಗಿತ್ತು. ನಾನಿನ್ನೂ ಆಗ ಮೊದಲನೇ ಡಿಗ್ರಿಯಲ್ಲಿದ್ದೆ. ಆಗ ಅಂತಿಮ ವರ್ಷದ ಸುಹಾಸ್‌ ಜೊತೆ ಒಂದು ಸಾಮಾಜಿಕ ನಾಟಕದಲ್ಲಿ ನಾಯಕಿಯಾಗಿ ನಟಿಸಿ, ಕ್ರಾಂತಿಕಾರಿ ಮನೋಭಾವದಿಂದ ಬೀಗುವ ಆಧುನಿಕ ಹೆಣ್ಣಾಗಿ ಎಲ್ಲರಿಂದ ಆ ಪಾತ್ರಕ್ಕೆ ಪ್ರಶಂಸೆ ಪಡೆದಿದ್ದೆ. ಹೀಗೆ ನಾವಿಬ್ಬರೂ ಅತಿ ನಿಕಟವಾಗಿ ಪ್ರೇಮಿಸತೊಡಗಿದೆವು. ಅಂತೂ ನನ್ನ ಡಿಗ್ರಿ ಓದು ಮುಂದುವರಿಯುತ್ತಿದ್ದಾಗ, ಸುಹಾಸ್‌ಗೆ ಸ್ನಾತಕೋತ್ತರ ಪದವಿ ಮುಗಿಸಿ, ಹಿರಿಯ ಅಧಿಕಾರಿಯಾಗಿ ಖ್ಯಾತ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತು. ತಂಗಿಯರ ಮದುವೆ ಮುಗಿಸಬೇಕೆಂದು ಹಠ ಹಿಡಿದರು.

ಹಿರಿಯ ತಂಗಿ ಮದುವೆ ಆಯಿತು. ಕಿರಿಯ ತಂಗಿ ಮದುವೆ ಆಮೇಲಾಗಲಿ, ನನ್ನ ಡಿಗ್ರಿ ಮುಗಿಯಿತು. ನಮ್ಮ ಮದುವೆ ಆಗಲಿ ಎಂದು ಗಲಾಟೆ ಎಬ್ಬಿಸಿ, ಹಠಹಿಡಿದು ಮದುವೆಗೆ ಒಪ್ಪಿಸಿದೆ. ಅತ್ತೆ ಮಾವ, ಕಿರಿ ನಾದಿನಿ ಇದ್ದ ತುಂಬಿದ ಸಂಸಾರ ನನಗೆ ಏನೇನೂ ಹಿಡಿಸಲಿಲ್ಲ. ನಾನು ಯಾವ ಮನೆಗೆಲಸ ಮಾಡದೆ ಧಿಮಾಕು ತೋರಿಸುತ್ತಾ ಹೊರಗಿನ ಓಡಾಟದಲ್ಲೇ ಮುಳುಗಿರುತ್ತಿದ್ದೆ. ಇದರಿಂದ ಸುಹಾಸ್‌ಗೂ ನನಗೂ ಸಣ್ಣಪುಟ್ಟ ಜಗಳ, ನಾನು ಮುನಿಸಿಕೊಂಡು ತವರಿಗೆ ಬರುವುದು, ಅವರು ಬಂದು ಓಲೈಸಿ ಕರೆದೊಯ್ಯುವುದು ನಡೆದೇ ಇತ್ತು.

ನನ್ನ ಕಿರಿ ನಾದಿನಿ ಮದುವೆಗೆ ಇವರು ಸಾಲ ಮಾಡಬೇಕಾಗಿ ಬಂದಾಗ, ನಾನು ಸಿಕ್ಕಾಪಟ್ಟೆ ಅದನ್ನು ವಿರೋಧಿಸಿ, ಬೇರೆ ಮನೆ ಮಾಡಿ, ನಾನು ಈ ಮನೆಯಲ್ಲಿ ಇರುವುದೇ ಇಲ್ಲ ಎಂದು ಜಗಳವಾಡಿ ತವರಿಗೆ ಬಂದುಬಿಟ್ಟೆ. ನಾನಾಗ 3 ತಿಂಗಳ ಗರ್ಭಿಣಿ. ನನ್ನ ತಾಯಿ, ತಂದೆ, ಅಕ್ಕಭಾವ ಎಷ್ಟು ಹೇಳಿದರೂ ನಾದಿನಿ ಮದುವೆಗೆ ಹೋಗಲೇ ಇಲ್ಲ. ಬೀಗರಾಗಿ ಇವರೇ ಹೋಗಿ ಬಂದರು.

ಆಗ ಭಾವನಿಗೆ ವರ್ಗವಾಗಿ ಅವರು ಬೇರೆ ಊರಿಗೆ ಹೊರಟರು. ಮುಂದೆ ನನ್ನ ತಂದೆಗೆ ಹೃದಯಾಘತವಾಗಿ ತೀರಿಕೊಂಡರು. ಇವರೇ ಮನೆ ಮಗನಂತೆ ಮುಂದೆ ನಿಂತು ಎಲ್ಲಾ ಕಾರ್ಯ ನಡೆಸಿದರು. ಆದರೂ ನಾನು ಅತ್ತೆಮನೆಗೆ ಹೋಗಲು ಹಿಂಜರಿದೆ.

ಆಗ ಇವರು ನನಗೆ ಕಳುಹಿಸಿದ ಇಮೇಲ್ ನನ್ನ ಕಣ್ಣು ತೆರೆಸಿತು.

`ಪ್ರಿಯ ಆಶಾ, ನೀನಿಲ್ಲದೆ ನನ್ನ ಮನ, ನಮ್ಮ ಮನೆ ಬರಿದಾಗಿದೆ. ಏನು ಅನುಕೂಲವಿದ್ದರೇನು….. ಪ್ರೇಮಿಸಿ ಮದುವೆಯಾದ ಮಡದಿ ಮನೆಯಲ್ಲಿ ಇಲ್ಲದಿದ್ದರೆ ಸಮಾಜದಲ್ಲಿ, ಸರೀಕರಲ್ಲಿ ನನಗೇನು ಗೌರವ ಉಳಿಯಿತು? ನನ್ನ ಕಿರಿ ತಂಗಿ ಪ್ರಿಯಾ ಮದುವೆಯಲ್ಲಿ ಎಲ್ಲರೆದುರು ನಾವು ಎದುರಿಸಿದ ಸಂಕೋಚದ ಬಗ್ಗೆ ಯೋಚಿಸು. ಇನ್ನಾದರೂ ಈ ಮನೆಯನ್ನು ನಿನ್ನದೆಂದು ತೆರೆದ ಮನದಿಂದ ಸ್ವಾಗತಿಸಿದಾಗ ಮಾತ್ರ ನಮ್ಮ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ’ ಎಂದು ಬರೆದಿದ್ದರು. ಆಗ ನಿಜಕ್ಕೂ ನನಗೆ ಕಣ್ಣು ತೆರೆಯಿತು. ಅವರು ಬಯಸಿದ್ದರೆ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು, ನನ್ನ ತಂದೆ ಸಾವಿಗೆ ಬರದೆ ಇರಬಹುದಿತ್ತಲ್ಲವೇ…. ಎಂದು ಯೋಚಿಸಿ ಅತ್ತೆ ಮನೆಗೆ ಹೊರಟೆ.

ಆಗ ತಾನೇ ನನಗೆ 7ನೇ ತಿಂಗಳು ನಡೆಯುತ್ತಿತ್ತು. ಅತ್ತೆ ನಾದಿನಿಯರೆಲ್ಲ ಕೂಡಿ ಸಂಭ್ರಮದಿಂದ ನನ್ನ ಸೀಮಂತ ನಡೆಸಿದರು. ನನ್ನ ತಾಯಿ, ಅಕ್ಕ ಸಹ ಬಂದು ಸಂತಸದಿಂದ ಪಾಲ್ಗೊಂಡರು. ಹೆಣ್ಣು ಮಗು ಹುಟ್ಟಿ, ನಮ್ಮದೀಗ ಸಂತೋಷ ತುಂಬಿದ ಸುಖೀ ಸಂಸಾರವಾಗಿದೆ. ಅರಿತು ಬಾಳುವುದರಲ್ಲಿ ಸುಖವಿದೆ ಎಂದು ಇವರಿಂದ ತಿಳಿದಿರುವೆ.

– ಆಶಾ ಸುಹಾಸ್‌, ಬೆಂಗಳೂರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ