ದಕ್ಷಿಣ ಕನ್ನಡದ ಕುಗ್ರಾಮದಿಂದ ಮುಂಬೈ ಮಹಾನಗರಿಯ ನಿವಾಸಿಯಾದ ಅನಿತಾ ಪೂಜಾರಿ ತಾಕೋಡೆಯವರು ಏನೆಲ್ಲಾ ಗಣನೀಯ ಸಾಧನೆ ಮಾಡಿದ್ದಾರೆ ಎಂಬುದನ್ನು ವಿವರಾಗಿ ತಿಳಿಯೋಣವೇ......?
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ನಾಣ್ಣುಡಿ. ಹಾಗಾದರೆ ಯಶಸ್ವಿ ಮಹಿಳೆಯ ಹಿಂದೆ...? ಹೌದು, ಅಲ್ಲೂ ಇರುತ್ತಾರೆ. ಅದು ಆಕೆಯ ತಂದೆ, ಸಹೋದರ ಅಥವಾ ಕೈ ಹಿಡಿದ ಗಂಡ ಕೂಡ ಆಗಿರಬಹುದು. ಚಿಕ್ಕ ವಯಸ್ಸಿನಿಂದ ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದಂಥ ಬಹಳಷ್ಟು ಮಹಿಳೆಯರಲ್ಲಿ ಮನೆಮಾಡಿರುವ ಅನಿಸಿಕೆಗಳಲ್ಲಿ ಒಂದು `ತಾನು ಸಾಧನೆ ಮಾಡುವುದು ಇನ್ನೂ ಬಹಳಷ್ಟಿದೆ. ಮದುವೆಯಾದರೆ ಗಂಡ, ಗಂಡನ ಮನೆಯವರು ಸಾಧನೆಗೆ ಪ್ರೋತ್ಸಾಹ ನೀಡದಿದ್ದರೆ...?' ಎಂಬ ಹಿಂಜರಿಕೆ.
ಈ ಅಳುಕಿನಿಂದಲೇ ಬಹಳಷ್ಟು ಮಂದಿ ಮದುವೆಯೇ ಆಗದೆ ಉಳಿದಿರುವ ಉದಾಹರಣೆಗಳಿವೆ. ಆದರೆ ತನ್ನ ಬಾಲ್ಯವನ್ನು ಕಡುಬಡತನದಲ್ಲಿ ಕಳೆದರೂ, ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯಾಸಕ್ತಿ ಬೆಳೆಸಿಕೊಂಡು, ಮದುವೆಯ ನಂತರ ದೂರದ ಮುಂಬೈನಲ್ಲಿ ಬದುಕು ಕಟ್ಟಿಕೊಂಡರೂ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಮಹಿಳೆಯೊಬ್ಬರ ಕಥೆ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲಿಯ ಮೂಡಬಿದಿರೆ ಸಮೀಪದ ತಾಕೋಡೆ ಎಂಬ ಕುಗ್ರಾಮದಲ್ಲಿ ಭವಾನಿ ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ ದಂಪತಿಗಳ ಐವರು ಮಕ್ಕಳಲ್ಲಿ ಅನಿತಾ ಪಿ. ತಾಕೋಡೆ ಮೊದಲನೆಯವರು. ಅವರು ತಮ್ಮ ಬಾಲ್ಯದ ದಿನಗಳನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ.
ಬೋಳುಗುಡ್ಡದ ಮೇಲೊಂದು ಸೂರು, ಸೋಗೆಯ ಮಾಡು, ಕಲ್ಪವೃಕ್ಷದ ಗರಿಗಳಿಂದ ಹೆಣೆದ ಗೋಡೆ, ಮಣ್ಣಿನ ನೆಲ, ಮೂಲೆಯಲ್ಲಿ ಹರಿದಾಡುವ ಹುಳು ಹುಪ್ಪಡಿಗಳು. ಆಗೊಮ್ಮೆ ಈಗೊಮ್ಮೆ ಬೆಚ್ಚಿ ಬೀಳಿಸುವಂತೆ ಮಾಡಿನ ಸಂದಿಯಲ್ಲಿ ಹರಿದಾಡುವ ಕೇರೆ ಹಾವುಗಳು. ಯಾಕಾಗಿ ಈ ಮಳೆ ಬರುತ್ತದೋ ಎನಿಸುವಂತೆ ಮಾಡುತ್ತವೆ. ಮಾಡಿನ ಅಂಚಿನಿಂದ ನೀರು ಸೋರುವಾಗ ಅಲ್ಲಲ್ಲಿ ಪಾತ್ರವೇ ಇಟ್ಟು ಉಳಿದ ಜಾಗದಲ್ಲಿ ಮುದುಡಿಕೊಂಡು, ರಾತ್ರಿ ಎಲ್ಲಿ ಇಲಿಗಳು ಕಚ್ಚಿ ಬಿಡುತ್ತಿವೆ ಎಂದು ಮೈ ತುಂಬಾ ಹೊದ್ದು ಮಲಗುತ್ತಿದ್ದ ಆ ದಿನಗಳು!
ಬಾಲ್ಯದ ಮರೆಯಲಾಗದ ದಿನಗಳು
ಕಷ್ಟದಲ್ಲೂ ಇಷ್ಟಪಟ್ಟು ಬದುಕುತ್ತಿದ್ದ ಅಂದಿನ ಬಾಲ್ಯದ ಆ ದಿನಗಳನ್ನು ನೆನೆಸಿಕೊಂಡಾಗ ಈಗ ಆ ದಿನಗಳೇ ಎಷ್ಟೊಂದು ಮಧುರ ಅನಿಸುವುದಿದೆ. ಬರೀ ಬಿಸಿ ಅನ್ನವನ್ನು ಉಂಡೆ ಕಟ್ಟಿ ಉಣಿಸುತ್ತಿದ್ದ ಅಮ್ಮನ ಕೈ ತುತ್ತಿನ ಸವಿ, ಅಮ್ಮನ ಮನದಾಳದ ಇಂಗಿತವನ್ನರಿತು `ಬರೀ ಗಂಜಿ ಉಪ್ಪಿನಕಾಯಿ ಕೊಡು ಅದೇ ನನಗಿಷ್ಟ,' ಅಂತ ಕಣ್ಮುಚ್ಚಿ ತಿಂದ ಆ ದಿನಗಳು, ಬಡತನದಲ್ಲೂ ಏನೋ ಒಂದು ತೆರನಾದ ಹಿತವಿತ್ತು. ನಿರೂಪಣೆ ಕಾವ್ಯಮಯವಾಗಿ ಕಂಡರೂ ವೈಭವದ ಜೀವನದಲ್ಲಿ ತೇಲಾಡುವ ನಗರವಾಸಿಗಳ ಕಲ್ಪನೆಗೂ ನಿಲುಕದ ಈ ವಿವರಣೆ ಕಡು ಬಡತನದಲ್ಲಿ ಬೆಳೆದವರ ಬಾಲ್ಯದ ದಿನಗಳು ಹೇಗಿರುತ್ತವೆ ಎಂಬುದನ್ನು ಕಣ್ಣಿಗೆ ಕಟ್ಟಿದಂತಿದೆ.
ಮುಂದುವರಿದು, ಅಂತಹ ಕಡು ಬಡತನದಲ್ಲೂ, ಓದಿ ಏನನ್ನಾದರೂ ಸಾಧಿಸಬೇಕು ಎಂಬ ಛಲದಿಂದ ಕಳೆದಂತಹ ತಮ್ಮ ಬಾಲ್ಯದ ದಿನಗಳನ್ನು ಹೀಗೆ ವಿವರಿಸುತ್ತಾರೆ. ನಾನು ಶ್ರಮ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಳು. ಮನೆಯಲ್ಲಿ ಹಿರಿಯರು ಬೀಡಿ ಕಟ್ಟುವುದು, ಕಾಡಿಗೆ ಕಟ್ಟಿಗೆ ತರಲು ಹೋಗುವುದು, ಬೇಸಾಯದ ಕೆಲಸ, ಕೃಷಿ ಕೆಲಸ. ಹೀಗೆ ಎಲ್ಲರೂ ಎಲ್ಲದರಲ್ಲೂ ಪರಿಣತಿ ಹೊಂದಿದ್ದರು. ನಾನು ಹಿರಿಯ ಮಗಳಾಗಿದ್ದರಿಂದ ಎಲ್ಲ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತಿದ್ದರು.





