ಸಾವಿರಾರು ಅಡಿಗಳ ಎತ್ತರದಲ್ಲಿ ಎಲ್ಲಾ ಕಡೆ ಐಸ್ ದಟ್ಟ ಹರಡಿರುವಾಗ, ಕೊರೆಯುವ ತಾಪಮಾನದಲ್ಲಿ ಒಬ್ಬಂಟಿ ಸೈನಿಕ ನಮ್ಮ ದೇಶದ ಗಡಿಕಾಯಬಲ್ಲ, ತನ್ನ ಸಹಸೈನಿಕನ ಜೊತೆ ಮಾರನೇ ದಿನದ ಸೂರ್ಯೋದಯ ಕಾಣಬಲ್ಲೆನೋ ಇಲ್ಲವೋ ತಿಳಿಯದೆ ದುಡಿಯುತ್ತಿರುತ್ತಾನೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ದೇಶದ ಗಡಿ ಬಳಿ ವಾಸಿಸುವ ಸೈನಿಕರು, ದೇಶ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ನಗರವಾಸಿಗಳಿಗೆ ಇದು ಕನಸು ಮನಸ್ಸಿನಲ್ಲೂ ತಿಳಿಯುವದಿಲ್ಲ. ಇಂಥ ಅನೇಕ ಬಿಕ್ಕಟ್ಟುಗಳನ್ನು ಪ್ರತ್ಯಕ್ಷ ಎದುರಿಸಿ, ಗಡಿ ಪ್ರದೇಶಗಳಾದ ನೌಸೀರಾ, ಪುಂಜ್, ರಾಜೋರಿ, ಸೂರನ್ ಕೋಟ್, ಪಠಾಣ್ ಕೋಟ್ ಗಳಲ್ಲಿ ದುಡಿದಿರುವ ಮೇಜರ್ ಡಾ. ಆಶ್ಲೇಷಾ ತಾಡೆ ಕೇಲ್ಕರ್ ಗಡಿ ಬಳಿ ದುಡಿದು ರಿಟೈರ್ ಆಗಿದ್ದಾರೆ. ರಾಯಘಡದ, ಪಾಲಘರ್ ನ ಆದಿವಾಸಿ ಕ್ಷೇತ್ರಗಳಲ್ಲಿ ಈಗಲೂ ತಮ್ಮ ಸಂಸ್ಥೆ `ಆನಂದಿ ಫೌಂಡೇಶನ್' ಮೂಲಕ ಸಕ್ರಿಯ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಅಪೌಷ್ಟಿಕತೆಯ ನಿವಾರಣೆ ಈಕೆಯ ಮುಖ್ಯ ಗುರಿ, ಅನೇಕ ಪ್ರಶಸ್ತಿ ಪುರಸ್ಕಾರ ಸಂದಿವೆ.
ಇವರ ಈ ಸೇವಾಕಾರ್ಯಕ್ಕೆ ಪತಿ ಆದಿತ್ಯ ಕೇಲ್ಕರ್, ಮಗಳು ಆನಂದಿತಾ ಬಹಳ ನೆರವಾಗುತ್ತದೆ. ಸಾಮಾಜಿಕ ಬದಲಾವಣೆಗಳ ಕುರಿತಾಗಿ ಈಕೆ ಬಹು ಒತ್ತಾಯಿಸುತ್ತಾರೆ. ನಿಯಮಿತ ರೂಪದಲ್ಲಿ ಮಹಿಳಾಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ.
ಪ್ರೇರಣೆಯ ಮೂಲ
ಈಕೆ ತಮ್ಮ ಕುಟುಂಬದ ಏಕೈಕ ಡಾಕ್ಟರ್, ಸೇನೆಗೆ ಸೇರಿದ ವೊದಲ ಮಹಿಳೆ. ಸದ್ಯ ಕೋಕಣ್ ಜಿಲ್ಲಾ ನಿವಾಸಿ ಡಾ. ಆಶ್ಲೇಷಾ ನಿವೃತ್ತಿ ನಂತರ, ಮಹಾತ್ಮಗಾಂಧಿ ಮಿಶನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜನಔಷಧ ವೈದ್ಯಕ ಶಾಸ್ತ್ರದ ಕಮ್ಯುನಿಟಿಯ ಅಸೋಸಿಯೇಟ್ ಅಧ್ಯಾಪಕಿಯೂ ಹೌದು.
ಆಕೆ ಹೇಳುತ್ತಾರೆ, ನಾನು ಮರಾಠಿ ಮೀಡಿಯಂನಲ್ಲಿ ಕಲಿತು ಬಂದಳು. ಅಲ್ಲಿದ್ದ ನನ್ನ ಸೀನಿಯರ್ ವಿನಾಯಕ್ ಗೋರೆ ಸೇನೆ ಸೇರಿದ ಮೇಲೆ, ಅವರಿಂದ ಬಹಳ ಪ್ರೇರಣೆ ಪಡೆದೆ. ಕಾರ್ಗಿಲ್ ನಲ್ಲಿ ಅವರು ಹುತಾತ್ಮರಾದಾಗ, ಅವರ ತಾಯಿ ನಮ್ಮ ಶಾಲೆಯಲ್ಲಿ ಇನ್ನೂ ಕಲಿಸುತ್ತಿದ್ದರು. 16ರ ಹರೆಯದಲ್ಲಿ ಇದನ್ನು ಗಮನಿಸಿ ಬಹಳ ಭಾವುಕಳಾಗಿದ್ದೆ. ಬಾಲ್ಯದಿಂದಲೇ ಕಲಿಕೆಯಲ್ಲಿ ಮುಂದಿದ್ದ ನಾನು, ಮುಂದೆ ಮೆಡಿಕಲ್ ಸೇರಿದೆ. ಹೆತ್ತವರು ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಒಬ್ಬಳೇ ಮಗಳಾದರೂ ಸೇನೆಗೆ ಸೇರಲು ಉತ್ತೇಜಿಸಿದರು. 2009ರಲ್ಲಿ ಕಮೀಶನಿಂಗ್ ಮುಗಿಸಿ, ಅಧಿಕಾರಿಯಾಗಿ, ಹೆಗಲಿಗೆ ಸ್ಟಾರ್ ಸಿಗಿಸಿಕೊಂಡು ಬಂದಾಗ, ಪರಿಚಿತರೆಲ್ಲ ಬಹಳ ಸಂಭ್ರಮಿಸಿದರು.
ವಿಭಿನ್ನ ಅನುಭವಗಳು
26ರ ಹರೆಯದಲ್ಲೇ ನಾನು ಮುಂಬೈನಿಂದ ಕಾಶ್ಮೀರಕ್ಕೆ ಪೋಸ್ಟಿಂಗ್ ಆದೆ. ಎಲ್ಲೆಲ್ಲೂ ಹಿಮದ ರಾಶಿ ಕಂಡು ಒಮ್ಮೊಮ್ಮೆ ಬೆಚ್ಚಿ ಬೀಳುತ್ತಿದ್ದೆ. ಗಡಿ ಬಳಿಯ ಆ ಜಾಗ ಕೌಂಟರ್ ಟೆರರಿಸಂಗೆ ಖ್ಯಾತಿ, ಇದಂತೂ ನಿರ್ಮಾನುಷ ಪ್ರದೇಶ, ಗಡಿಯ ಅಂತಿಮ ರೇಖೆ. ದೂರ ದೂರದವರೆಗೆ ಏನೂ ಇಲ್ಲದೆ ಬರೀ ಮುಳ್ಳುಪೊದೆಗಳ ರಾಶಿ ಮಾತ್ರ ಇತ್ತು. ಅಲ್ಲಿ ನಿಂತ ಯೋಧರು ದಿನವಿಡೀ ದೇಶದ ರಕ್ಷಣೆಗೆ ಕಟಿಬದ್ಧರು.
ಇಂಥ ಸುಮಾರು 67 ಸಾವಿರ ಸೈನಿಕರ ಮಧ್ಯೆ ಡಾ. ಆಶ್ಲೇಷಾ ಎಂದೂ ಯಾವುದಕ್ಕೂ ಅಂಜದೆ, ತಾವೇ ಮುಂದಾಳಾಗಿ ನೇತೃತ್ವ ವಹಿಸಿದರು. ಅವರೆಲ್ಲರೂ ನನ್ನ ಒಡಹುಟ್ಟಿದವರಂತೆ ಸದಾ ನನ್ನ ಮಾನಪ್ರಾಣಗಳ ರಕ್ಷಣೆಗೆ ಗುಂಡೇಟಿಗೆ ಎದೆಯೊಡ್ಡಿದ್ದಾರೆ! ಅಲ್ಲಿ ಫಿಸಿಕಲ್ ಟ್ರೇನಿಂಗ್ ಜೊತೆ ನಾನೂ ಶಸ್ತ್ರಾಸ್ತ್ರ ಪ್ರಯೋಗದ ತರಬೇತಿ ಪಡೆದಿದ್ದೆ, ಎಮರ್ಜೆನ್ಸಿ ಎದುರಿಸಲು ಸದಾ ಸಿದ್ಧಳಾಗಿದ್ದೆ. ವೈದ್ಯಳಾದರೂ ನಾನೂ ಸೇನೆಯ ಭಾಗವಾದ್ದರಿಂದ, ಭಯೋತ್ಪಾದಕರನ್ನು ಎದುರಿಸಲು ಸನ್ನದ್ಧಳಾಗಿರುತ್ತಿದ್ದೆ, ಅಂಥವರಿಗೂ ಚಿಕಿತ್ಸೆ ನೀಡಿದ್ದೇನೆ!