ರಂಗು ರಂಗಿನ ಶಬ್ದ ಮತ್ತು ಬೆಳಕಿನ ಸಮ್ಮಿಲನದ ದೀಪಾವಳಿ ಹಬ್ಬ ಮುಗಿದು ಕನ್ನಡ ಹಬ್ಬ ಕರ್ನಾಟಕ ರಾಜ್ಯೋತ್ಸವದ ಇಡೀ ತಿಂಗಳ ಭರಾಟೆ ಮುಗಿದು ಪ್ರಕೃತಿಯಲ್ಲೂ ತೀವ್ರವಾದ ಬದಲಾವಣೆಯಾಗಿ ಜನರನ್ನೆಲ್ಲಾ ಮಾಗಿಯ ಚಳಿಯಲ್ಲಿ ಗಡ ಗಡ ನಡುಗಿಸುತ್ತಾ ಮನೆಯಿಂದ ಹೊರಗಡೆ ಬಾರದಂತೆ ತಡೆದರೂ, ಬೆಂಗಳೂರಿನ ಜನರೆಲ್ಲಾ ಸುಮಾರು ಎರಡು ವಾರಗಳ ಕಾಲ ಒಂದೆಡೆ ಒಗ್ಗೂಡಿಸುವ ಕಾರ್ಯಕ್ರಮವೆಂದರೆ ಬೆಂಗಳೂರಿನ ವಿಶ್ವೇಶ್ವರಪುರಂನ ತಿಂಡಿ ಬೀದಿಯಲ್ಲಿ ಪ್ರತಿ ವರ್ಷ ವಾಸವೀ ಕಾಂಡಿಮೆಂಟ್ಸ್ ಅವರ ವತಿಯಿಂದ ನಡೆಸಲ್ಪಡುವ ಅವರೇ ಮೇಳ ಎಂದರೆ ಅತಿಶಯೋಕ್ತಿಯಲ್ಲ.
ಧನುರ್ಮಾಸದ ಇಬ್ಬನಿಯು ಅವರೇಕಾಯಿಯ ಮೇಲೆ ಬಿದ್ದು ಒಂದು ರೀತಿಯ ಅಪ್ಯಾಯಮಾನವಾದ ಅವರೇಕಾಯಿಯ ಸೊಗಡಿನ ಘಮಲನ್ನು ಹೇಳಿ ಕೇಳುವುದಕ್ಕಿಂತ ಅನುಭವಿಸಿದವರಿಗೇ ಒಂದು ರೀತಿಯ ಮಹದಾನಂದ. ಮೊದಲೆಲ್ಲಾ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬಹುತೇಕ ಎಲ್ಲರ ಮನೆಗಳಲ್ಲಿನ ಅಡುಗೆ ಮನೆಯಲ್ಲಿ ಬಳಸುವ ಒಂದು ಸಾಮಾನ್ಯ ಪದಾರ್ಥವೆಂದರೆ ಅವರೇಕಾಯಿ ರೊಟ್ಟಿ, ಅವರೇಕಾಯಿ ಹುಳಿ, ಹಿತಕಿದ ಅವರೇಕಾಯಿ ಹುಳಿ, ಅವರೇಬೇಳೆ ಹುಗ್ಗಿ, ಅವರೇಕಾಯಿ ನುಚ್ಚಿನ ಉಂಡೆ, ಅವರೇಕಾಯಿ ಆಂಬೊಡೆ, ಖಾರದ ಅವರೇಕಾಳು..... ಹೀಗೆ ಅವರೇಕಾಯಿಯಿಂದ ಈ ರೀತಿಯಾದ ಕೆಲವೇ ಕೆಲವು ತಿಂಡಿಗಳು ತಯಾರಿಸಿ ಸವಿಯುತ್ತಿದ್ದುದು ಸಹಜವಾಗಿರುತ್ತಿತ್ತು.
ಕಳೆದ ಎಂಟು ಹತ್ತು ವರ್ಷಗಳಲ್ಲಿ ಬೆಂಗಳೂರಿನ ವಿಶ್ವೇಶ್ವರಪುರಂನ ತಿಂಡಿ ಬೀದಿಯ ವಾಸವಿ ಕಾಂಡಿಮೆಂಟ್ಸ್ ಅವರು ನಿಜಕ್ಕೂ ಅವರೇಕಾಯಿಯಿಂದ ಊಹಿಸಲೂ ಅಸಾಧ್ಯವಾದ ಬಗೆ ಬಗೆಯಾದ ರುಚಿಕರವಾದ ತಿಂಡಿ ತಿನಿಸುಗಳನ್ನೂ ತಯಾರಿಸಿ ಅವರೇಕಾಯಿಯ ಮಹತ್ವವನ್ನು ಇನ್ನೂ ಹೆಚ್ಚಿಸಿದ್ದಾರೆ ಮತ್ತು ಅದನ್ನು ಪ್ರತಿ ವರ್ಷ ಅದ್ಧೂರಿಯಾಗಿ ಇನ್ನೂ ಬಗೆ ಬಗೆಯ ಹೊಸ ಹೊಸ ಅವರೇಕಾಯಿ ತಿನಿಸುಗಳನ್ನು ಆವಿಷ್ಕಾರ ಮಾಡುತ್ತಾ ಸಂಭ್ರಮದ ತಿನಿಸುಗಳ ಮೇಳ, ಜಾತ್ರೆಯನ್ನು ಏರ್ಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
ಇದರ ಪ್ರತೀಕವಾಗಿ ಪ್ರತೀ ತಿಂಗಳು 1ನೇ ತಾರೀಖಿನಿಂದ 8ನೇ ತಾರೀಖಿನವರೆಗೂ ವಿ.ವಿ.ಪುರಂ ಫುಡ್ ಸ್ಟ್ರೀಟ್ ನಲ್ಲಿ ಅವರೇ ಮೇಳ ನಡೆಯುತ್ತಿರುತ್ತದೆ. ಕಳೆದ ವರ್ಷ ಸ್ಥಳೀಯ ನಗರಪಾಲಿಕೆಯ ಸದಸ್ಯೆಯರು ಶುಚಿತ್ವದ, ಆಕ್ಷೇಪ ತೆಗೆದು ಅವರೇ ಮೇಳವನ್ನು ತಡೆಯಲು ಸಮರ್ಥರಾದರೆ, ಮತ್ತೊಮ್ಮೆ ಅದನ್ನು ಕೊರೋನಾ ಮಹಾಮಾರಿ ನುಂಗಿ ಹಾಕಿದೆ. ಮುಖ್ಯವಾಗಿ ಈ ಬಾರಿ ಜನವರಿಯ ಮೊದಲ ವಾರ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅವರೇ ಮೇಳ ಏರ್ಪಡಿಸಲಾಗಿತ್ತು.
ಎರಡು ವರ್ಷದ ಹಿಂದೆ ಮಡದಿಯೊಂದಿಗೆ ಈ ಅವರೇ ಮೇಳಕ್ಕೆ ಹೋಗಿ ಬಂದಿದ್ದೆ. ಈ ಸಲದ ಮೇಳದಲ್ಲಿನ ಬಗೆ ಬಗೆಯ ಅವರೇ ಖಾದ್ಯಗಳನ್ನು ಸವಿದ ರಸಾನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಆರಂಭದ ದಿನಗಳ ಜನಜಂಗುಳಿ ಕಡಿಮೆಯಾದ ಮೇಲೆ ಹೋಗೋಣ ಎಂದು ನಿರ್ಧರಿಸಿ ವಾರಾಂತ್ಯದ ಶನಿವಾರ ಮಧ್ಯಾಹ್ನ ಪತ್ನಿ ಸಮೇತನಾಗಿ ಅಲ್ಲಿಗೆ ಹೋದರೆ ಅಲ್ಲಿಯ ವಾತಾವರಣ ನಿಜಕ್ಕೂ ಅಚ್ಚರಿ ತರಿಸಿತು. ಬೆಂಗಳೂರಿನ ಜನರಿಗೆ ಶುಚಿ ರುಚಿಕರವಾದ ತಿಂಡಿ ತಿನಿಸುಗಳು ಎಲ್ಲಿಯೇ ಸಿಗಲಿ, ಅದು ಹೇಗೆಯೇ ಇರಲಿ, ಆರಂಭದ ದಿನದಂದು ಅಂತಿಮ ದಿನದ, ಅಂತಿಮ ಕ್ಷಣದವರೆಗೂ ಅದರ ಸಂಪೂರ್ಣ ಲಾಭವನ್ನು ಪಡೆಯುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿತ್ತು.