ಈ ಭೇದಭಾವ ಸಲ್ಲದು

ದೇಶದಲ್ಲಿ ಬಡ ಶ್ರೀಮಂತರ ನಡುವಿನ ಕಂದಕವನ್ನು ಹೆಚ್ಚಿಸುವ ಪ್ರಯತ್ನ ಈ ಹಿಂದೆ ಪ್ರತಿಯೊಂದು ನಗರದಲ್ಲಿ ನಡೆದಿತ್ತು. ಒಂದು ಕಾಲದಲ್ಲಿ ಒಂದೇ ಬೀದಿಯಲ್ಲಿ  ಚಿಕ್ಕಮನೆಗಳು, ದೊಡ್ಡಮನೆಗಳು ಜೊತೆ ಜೊತೆಗೇ ಇರುತ್ತಿದ್ದವು. ಆದರೆ ಈಗ ಶ್ರೀಮಂತರ ಏರಿಯಾಗಳೇ ಬೇರೆ, ಬಡವರ ಏರಿಯಾಗಳೇ ಬೇರೆ, ಕಾರ್ಮಿಕರದ್ದು ಬೇರೆ. ಇವುಗಳಲ್ಲೂ ಜಾತಿಧರ್ಮದ ಭೇದಭಾವ ಇತ್ತು. ಈಗ ಶ್ರೀಮಂತ ಮಹಿಳೆಯರಿಗೆ ಬಡಜನರ ಸಂಪರ್ಕವೆಂದರೆ ಕೆಲಸಗಾರರ ಮಟ್ಟಿಗೆ ಮಾತ್ರ ಸೀಮಿತವಾಗಿದೆ. ಈಗ ತರಕಾರಿಯವರ ಮಳಿಗೆಗಳು ಮಾಲ್‌ಗಳಲ್ಲೂ ತೆರೆಯುತ್ತಿವೆ.

ಈ ವರ್ಗಭೇದದ ಅರ್ಥ ಶ್ರೀಮಂತ ವರ್ಗದವರ ಬಡಾವಣೆಗಳು ಸ್ವಚ್ಛ, ಹೈಫೈ ಗಾಡಿಗಳು, ಪಾರ್ಕ್‌ಗಳು ಇರುವಂತಹ ಸ್ಥಳ. ಅಲ್ಲಿ ಪ್ರತಿಯೊಂದು ಮನೆ ಮುಂದೆ ಕಾವಲುಗಾರರ ಕೊಠಡಿ ಕಂಡುಬರುತ್ತದೆ. ಅದು ಮಾರ್ಕೆಟ್‌ನಿಂದ ಸಾಕಷ್ಟು ದೂರದಲ್ಲಿರುತ್ತದೆ. ಅಲ್ಲಿ ಸ್ವಚ್ಛತೆಯ ಕೆಲಸಗಾರರು ನಿಯಮಿತವಾಗಿ ಕಂಡುಬರುತ್ತಾರೆ. ಅದು ಬಡದೇಶದ ಭಾಗ ಎಂದೆನಿಸುವುದಿಲ್ಲ. ವಿದೇಶದಿಂದ ವಾಪಸ್‌ ಬಂದು ಭಾರತೀಯರು ಇರುವುದು ಇಂತಹ ಕಡೆಯೇ.

ಆದರೆ ಈಗ ಕೊಳಕೆನ್ನುವುದು ಕೇವಲ ನೆಲಕ್ಕಷ್ಟೇ ಸೀಮಿತವಾಗಿಲ್ಲ. ಅದು ಆಕಾಶಕ್ಕೂ ತಲುಪಿಬಿಟ್ಟಿದೆ. ಅದು ಎಲ್ಲ ನಗರಗಳನ್ನೂ ಆಪೋಶನ ತೆಗೆದುಕೊಳ್ಳುತ್ತಿದೆ. ಕಲುಷಿತ ಹವೆ ಈಗ ಬಡವರ ಮನೆಗಳಲ್ಲಷ್ಟೇ ಅಲ್ಲ, ಶ್ರೀಮಂತರ ಮನೆಗಳಲ್ಲೂ ಕಂಡು ಬರುತ್ತದೆ. ಮಾಲಿನ್ಯ ಅದ್ಭುತ ಸರಿಸಮಾನ ಧೋರಣೆ ಹೊಂದಿದೆ. ಮನೆ ಕೆಲಸದವಳು ಕೆಮ್ಮುತ್ತಾ ಒಳಗೆ ಬಂದರೆ, ಶ್ರೀಮಂತ ಮಹಿಳೆ ಮನೆಯಲ್ಲಿಯೇ ಕೆಮ್ಮುತ್ತಾ ಕೂತಿರುತ್ತಾಳೆ.

ಮಾಲಿನ್ಯವನ್ನು ಟೀಕಿಸುವರು, ಈ ದೇಶದ ಶೇ.90ರಷ್ಟು ಜನರು ಹಿಂದಿನಿಂದಲೂ ಮಾಲಿನ್ಯವನ್ನು ಸಹಿಸಿಕೊಂಡು ಬಂದಿದ್ದಾರೆ ಎಂಬುದನ್ನು ಮರೆಯುತ್ತಾರೆ. ಈಗ ನಿಸರ್ಗ ಅದರ ಸೇಡು ತೀರಿಸಿಕೊಂಡಿದೆ. ತನಗೆ ಎಲ್ಲರೂ ಸರಿಸಮಾನರು, ಮೇಲು ಕೀಳು ಯಾವುದೂ ಇಲ್ಲ ನಾನು ಎಲ್ಲರನ್ನೂ ಸಮನವಾಗಿ ಸತಾಯಿಸುತ್ತೇನೆ ಎನ್ನುವುದು ಅದರ ಧೋರಣೆ.

ಕೇರಳ, ಕರ್ನಾಟಕ, ಪಾಟ್ನಾ, ಮುಂಬೈ, ಚೆನ್ನೈ ಮುಂತಾದ ಕಡೆ ಮಹಾ ಮಳೆ ತನ್ನ ಮಹಾಕೋಪಕ್ಕೆ ಶ್ರೀಮಂತರು ಬಡವರೆನ್ನದೆ ಎಲ್ಲರನ್ನೂ ಆಪೋಶನ ತೆಗೆದುಕೊಂಡು ಬಿಟ್ಟಿತ್ತು. ಜಾಗತಿಕ ತಾಪಮಾನ ಬರುವ ಬೇಸಿಗೆಯಲ್ಲಿ ಏರ್‌ಕಂಡೀಶನರ್‌ಗಳು, ವಿದ್ಯುತ್‌ ವ್ಯತ್ಯಯ ಉಂಟಾಗುವಂತೆ ಮಾಡಬಹುದು. ನಿಸರ್ಗ ಸರ್ವರಿಗೂ ಪಾಠ ಕಲಿಸಿದೆ. ನಕಲಿ ಭೇದಭಾವ ಸಲ್ಲದು ಎಂದು ಅದು ಹೇಳುತ್ತದೆ.

ಒಂದು ವೇಳೆ ಮಾಲಿನ್ಯದಿಂದ ರಕ್ಷಿಸಿಕೊಳ್ಳಬೇಕೆಂದರೆ ದೊಡ್ಡ ಸಾಹೇಬರು ಹಾಗೂ ಮೇಡಂಗಳು ಜನಸಾಮಾನ್ಯರಿಂದ ಪಾಠ ಕಲಿಯಬೇಕು. ಅವರನ್ನು ನಿರಾಕರಿಸಿ ಅಥವಾ ತಿರಸ್ಕರಿಸಿ ದೇಶ, ಸಮಾಜ ಮುಂದೆ ಸಾಗದು. ಮಾಲಿನ್ಯ ಒಂದು ನಗರದಿಂದ ಇನ್ನೊಂದು ನಗರ, ಹಾಗೆಯೇ ದೇಶಕ್ಕೆ ಸಾಗುತ್ತಿದೆ. ಪರ್ವತ, ಸಮುದ್ರಗಳನ್ನು ದಾಟಿ ಹೊರಟಿದೆ. ಅದರ ಕಪಿಮುಷ್ಟಿಯಿಂದ ಪಾರಾಗಲು ಪ್ರತಿಯೊಂದರ ಬಗ್ಗೆಯೂ ಕಾಳಜಿ ವಹಿಸಬೇಕು. ಕೆಲವರು ಹಸಿರು ಟೀ ಶರ್ಟ್‌ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸೆಕ್ಯೂರಿಟಿ ಏಜೆನ್ಸಿಗಳು ಹಾಗೂ ಕ್ಯಾಮೆರಾಗಳ ಸಮ್ಮುಖದಲ್ಲಿ ರಸ್ತೆ ಗುಡಿಸಿ ಸಮುದ್ರ ತೀರದಲ್ಲಿ ಕಸ ಸಂಗ್ರಹಿಸಿ ಶಭಾಷ್‌ಗಿರಿ ಪಡೆಯುತ್ತಿರಬಹುದು. ಆದರೆ `ಮಿಸ್‌ ಪೊಲ್ಯೂಶನ್‌’ನ್ನು ಖುಷಿಯಿಂದಿಡಲು ಆಗುವುದಿಲ್ಲ. ಅದಕ್ಕಾಗಿ ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರ ಭುಜಕ್ಕೆ ಭುಜ ಕೊಟ್ಟು ನಡೆಯಬೇಕು.

ಆದರೆ ಇದು ಸಾಧ್ಯವಿಲ್ಲ. ಜಾತಿ, ವರ್ಗ, ಧರ್ಮ, ಮೂಲಸ್ಥಳದ ಭೇದಭಾವ ಇದ್ದೇ ಇರುತ್ತೆ. ಜೊತೆಗೆ ಹಣದ್ದೂ ಕೂಡ, ಇದರೊಂದಿಗೆ ಸೌಂದರ್ಯ ಕೂಡ ಸೇರಿಕೊಳ್ಳುತ್ತೆ. ಹೀಗಾಗಿ ಮಿಸ್‌ ಪೊಲ್ಯೂಶನ್‌ ಖಳನಾಯಕಿಯಾಗಿಯೇ ಇರುತ್ತಾಳೆಯೇ ಹೊರತು ಪ್ರೇಯಸಿಯಾಗಿ ಅಲ್ಲ.

ವೃದ್ಧಾಪ್ಯಕ್ಕೂ ಮುನ್ನ ಜಾಗೃತರಾಗಿ

ಅಮೆರಿಕದ ಒಂದು ತಮಾಷೆಯ ಆದರೆ ಅಚ್ಚರಿ ಹುಟ್ಟಿಸುವ ಅಂಕಿಅಂಶವಿದು. ಅಮೆರಿಕದ 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಕೆಲಸ ಬಿಟ್ಟು ತಮ್ಮ ವಯೋವೃದ್ಧ ಪೋಷಕರ ಯೋಗಕ್ಷೇಮ ನೋಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇವರು ಪ್ರತಿ ತಿಂಗಳು 3 ಲಕ್ಷ ಡಾಲರ್‌ ಹಾನಿ ಅನುಭವಿಸುತ್ತಿದ್ದಾರೆ. ಭಾರತದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನೂ ಆಗಿಲ್ಲ. ಆದರೆ ಇಲ್ಲಿ ಯಾರೊಬ್ಬರೂ ಆ ಕಾರಣದಿಂದ ಉದ್ಯೋಗ ತೊರೆಯುತ್ತಿಲ್ಲ. ಏಕೆಂದರೆ ಇಲ್ಲಿ ಮನೆಯಲ್ಲಿ ಹೆಂಡತಿ ಇದ್ದಾಳೆ. ಆಕೆ ಎಂದೂ ಕೆಲಸ ಮಾಡಿಲ್ಲ. ಆದರೆ ತಂದೆತಾಯಿ ಅಥವಾ ಅತ್ತೆಮಾಂದಿರ ಯೋಗಕ್ಷೇಮ ನೋಡಿಕೊಳ್ಳಲು ತಮ್ಮ ಒಳ್ಳೆಯ ನೌಕರಿ ಬಿಟ್ಟು ಬಿಡುವಂತಹ ಮಹಿಳೆಯರ ಸಂಖ್ಯೆ ಈಗ ಹೆಚ್ಚಾಗುತ್ತಾ ಹೊರಟಿದೆ.

ಅಂದಹಾಗೆ ವೃದ್ಧರ ವಯಸ್ಸು 75-80ರ ಆಸುಪಾಸು ಇರುತ್ತದೆ. ಅಲ್ಲಿಯವರೆಗೆ ಅವರ ಮಕ್ಕಳ ವಯಸ್ಸು 45-50 ತಲುಪಿರುತ್ತದೆ. ಮನೆಯಲ್ಲಿ ಇಬ್ಬರು ಮೂವರು ಇದ್ದರೆ ಒಬ್ಬರು ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗಿ ಬರುತ್ತದೆ. ಹಿಂದಿನ ಪೀಳಿಗೆಯವರಿಗೆ 2-3 ಮಕ್ಕಳಾದರೂ ಇರುತ್ತಿದ್ದರು. ಅದರಲ್ಲಿ ಯಾರಾದರೂ ಒಬ್ಬರು ಅವರನ್ನು ನೋಡಿಕೊಳ್ಳುತ್ತಿದ್ದರು. ಈಗ 40-50 ವಯೋಮಾನದವರಿಗೆ ತಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ಸತಾಯಿಸುತ್ತಿದೆ.

ಈಗ  ಕಡಿಮೆ ಮಕ್ಕಳು, ತಡವಾಗಿ ಮದುವೆ, ಏಕಾಂಗಿ ವಾಸದ ಆ ಸುಖ, ಮನೆಗೆಲಸಗಳ ಬಗ್ಗೆ ನಿರಾಸಕ್ತಿ, ದುಬಾರಿಯಾಗುತ್ತಿರುವ ಆಸ್ಪತ್ರೆಗಳು ಸವಾಲಾಗಿವೆ. 40-45 ವಯಸ್ಸಿನವರಿಗೆ ಆಮಿಷ ಒಡ್ಡಿ ಓಲ್ಡ್ ಏಜ್‌ ಹೋಮ್, ಇನ್ಶೂರೆನ್ಸ್ ಪಾಲಿಸಿಗಳು ಜಮಾ ಖಾತೆಯಲ್ಲಿ ಹಣದ ಯೋಜನೆಗಳನ್ನು ಉಣಬಡಿಸಲಾಗುತ್ತಿದೆ. ಆದರೆ ಈಗ ಆಮಿಷ ಒಡ್ಡುತ್ತಿರುವ ಸರ್ಕಾರಿ, ಖಾಸಗಿ ಕಂಪನಿಗಳು 30 ವರ್ಷದ ಬಳಿಕ ಅಷ್ಟು ಹಣವನ್ನು ವಾಪಸ್‌ ಮಾಡುತ್ತವೆಯೇ ಎಂಬ ಖಚಿತತೆ ಇಲ್ಲ. ಏಕೆಂದರೆ ಅಷ್ಟು ವರ್ಷಗಳ ಬಳಿಕ ಆ ಬ್ಯಾಂಕ್‌ ಇರುತ್ತದೆಯೇ ಎಂಬ ನಂಬಿಕೆ ಇಟ್ಟುಕೊಳ್ಳುವುದು ಕಷ್ಟವಾಗಿದೆ. ವೃದ್ಧರ ಸುರಕ್ಷತೆಗೆ ಮಕ್ಕಳೇ ಎಲ್ಲಕ್ಕೂ ದೊಡ್ಡ ಗ್ಯಾರಂಟಿ. ಆದರೆ ಈಗ ಅನಿಸುವುದೇನೆಂದರೆ, ಯೌವನವನ್ನು ಪರಿಪೂರ್ಣವಾಗಿ ಎಂಜಾಯ್‌ ಮಾಡಲು ಅಥವಾ ಕೆರಿಯರ್‌ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಯುವಕರು ತಮ್ಮ ವೃದ್ಧಾಪ್ಯ ಜೀವನದ ಗುಂಡಿಯನ್ನು ತಾವೇ ಖುದ್ದಾಗಿ ತೋಡಿಕೊಳ್ಳುತ್ತಿದ್ದಾರೆ. ಅದರಲ್ಲೇ ಅವರ ಜೀವನ ಕೊನೆಗೊಳ್ಳಲಿದೆ.

ಇದರ ಒಂದು ಸರಳ ಉಪಾಯವೆಂದರೆ, `ಸೆಲ್ಫ್ ಗವರ್ನ್ಡ್ ಹೋಮ್ಸ್ ಫಾರ್‌ ಏಜ್ಡ್’ ಅಂದರೆ  ಸ್ವತಃ ತಾವೇ ತಮ್ಮ ಉಸ್ತುವಾರಿ ನೋಡಿಕೊಳ್ಳುವ ವ್ಯವಸ್ಥೆ ಆಗಬೇಕು. ಇದು ಕೂಡ ಅಷ್ಟು ಸುಲಭವಲ್ಲ. ಇದರಲ್ಲಿ ವೃದ್ಧರು ಹಾಗೂ ಮಧ್ಯವಯಸ್ಸಿನವರು ಸಕಾಲಕ್ಕೆ ಆಸುಪಾಸಿನ ವೃದ್ಧರನ್ನು ಒಗ್ಗೂಡಿಸಬೇಕು. ತಮ್ಮ ಆರ್ಥಿಕ ಸ್ಥಿತಿಗನುಗುಣವಾಗಿ 5-7 ಕೋಣೆಗಳ ಮನೆಯನ್ನು ವ್ಯವಸ್ಥೆ ಮಾಡಬೇಕು. ಅದರಲ್ಲಿ 5-7 ಜೋಡಿಗಳಾದರೂ ಇರಬೇಕು.

ಅವರು ತಮ್ಮ ಖರ್ಚನ್ನು ಹೇಗೆ ನೋಡಿಕೊಳ್ಳಬೇಕು? ಕೆಲವರು ಉದಾರ, ಮತ್ತೆ ಕೆಲವರು ಧಾರಾಳ. ಇಂಥದನ್ನು 40-45ನೇ ವಯಸ್ಸಿನಲ್ಲಿಯೇ ನಿರ್ಧಾರ ಮಾಡುವುದು ಸುಲಭ. ಆಗ ಮಕ್ಕಳು ಅಷ್ಟು ದೊಡ್ಡವರಾಗಿರುವುದಿಲ್ಲ. ಅವರು ಆಗ ನಿಮಗೆ ನಿರ್ಧಾರ ಕೈಗೊಳ್ಳಲು ಯಾವುದೇ ಅಡ್ಡಿ ಮಾಡುವುದಿಲ್ಲ. ಚಿಕ್ಕಪುಟ್ಟ ವಿವಾದಗಳನ್ನು ಪರಸ್ಪರ ಬಗೆಹರಿಸಿಕೊಳ್ಳಬಹುದು.

ವೃದ್ಧರಿಗೆ ಆರ್ಥಿಕ ಸುರಕ್ಷತೆಗಿಂತಲೂ ಮಾನಸಿಕ ಸುರಕ್ಷತೆಯ ಅಗತ್ಯ ಹೆಚ್ಚು. ಆದರೆ ಅವರನ್ನು ನೋಡಿಕೊಳ್ಳುವವರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಬಹಳಷ್ಟು ಜನರ ಕಣ್ಣು ಅವರ ಆಸ್ತಿಯ ಮೇಲೆಯೇ ಇರುತ್ತದೆ. ಕಾಳಜಿ ವಹಿಸುವವರು ಕಳ್ಳತನ, ಆಲಸ್ಯತನ, ಹೊಡೆದಾಟ ಹೀಗೆ ಯಾವುದಕ್ಕೂ ಹೇಸುವುದಿಲ್ಲ. ಕೆಲವೊಮ್ಮೆ ವೃದ್ಧರನ್ನು ಕೊಲೆ ಕೂಡ ಮಾಡಿಬಿಡುತ್ತಾರೆ. ಈ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚು ಸುರಕ್ಷಿತವಾಗಿರಬೇಕು. ಏಕೆಂದರೆ ಅವರಿಗೆ ತಂತ್ರಜ್ಞಾನ ಸರಿಯಾಗಿ ಅರ್ಥವಾಗುವುದಿಲ್ಲ.

ನಗುತ್ತಾ ಇರುವುದೇ ಜಾಣತನ

ಆರ್ಥಿಕ ಹಿನ್ನಡೆ ಕುಟುಂಬಗಳನ್ನು ಬಹಳ ಘಾಸಿ ಮಾಡುತ್ತಿದೆ. ಯಾವ ಆಹಾರ ವಸ್ತುಗಳ ಇಳುವರಿ ಕಡಿಮೆ ಆಗಿದೆಯೊ, ಅದರಿಂದಾಗಿ ಮನೆ ನಡೆಸುವುದು ಕಷ್ಟವಾಗಿದೆ. ಆದರೆ ಅದರಿಂದ ಕಂಗೆಟ್ಟು ರೋದಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಸರ್ಕಾರಿ ನಿರ್ಧಾರಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ಮಳೆಬಿಸಿಲಿನ ಮೇಲೆ ಹೇಗೆ ನಿಯಂತ್ರಣವಿಲ್ಲವೋ, ಅದೇ ರೀತಿ ಇದನ್ನು ನಗುತ್ತಾ ನಿರ್ವಹಣೆ ಮಾಡುವುದರಲ್ಲಿಯೇ ಜಾಣತನವಿದೆ.

ವಾಸ್ತವದಲ್ಲಿ ನಾವು ಕಡಿಮೆ ಮೊತ್ತದಲ್ಲಿ ನಿರ್ವಹಣೆ ಮಾಡುತ್ತೇವೆ. ಒಂದು ವೇಳೆ ಆದಾಯ ಕಡಿಮೆಯಾದರೆ ನಗುವುದನ್ನು ಬಿಟ್ಟುಬಿಡಬೇಡಿ. ಹೆಚ್ಚು ನಗುತ್ತಿರಿ, ಅಳುಮುಖ ದುಃಖವನ್ನು ಹೆಚ್ಚಿಸುತ್ತದೆ. ನೋವು ಸೊಂಟವನ್ನು ಕುಗ್ಗಿಸುತ್ತದೆ. ಈಗ ನಡೆಯುತ್ತಿರುವುದನ್ನು ನೋಡಿದರೆ ಅದು ಬಹುಬೇಗ ಸುಧಾರಣೆ ಆಗುತ್ತದೆಂದು ಹೇಳಲಾಗದು. ಅದಕ್ಕಾಗಿ ಪ್ರತಿಯೊಂದು ಬಗೆಯ ಪರ್ಯಾಯಗಳ ಜೊತೆ ನಮ್ಮನ್ನು ನಾವು ತೆರೆದುಕೊಂಡು ಜೀವಿಸುವ ಉಪಾಯ ಹುಡುಕಿ ಮನೆಯ ಮೇಲಾಗಲಿ, ಬಟ್ಟೆಯ ಮೇಲಾಗಲಿ, ಅಷ್ಟೇ ಅಲ್ಲ ಮುಖದ ಮೇಲೆ ಆಪತ್ತು ಬರದಿರಲಿ. ಅದು ಅತ್ಯವಶ್ಯ ಅದು ಸಾಧ್ಯವಿದೆ.

ನಮ್ಮ ಹಳೆ ತಲೆಮಾರಿನವರ ಬಗ್ಗೆ ಏನನ್ನಾದರೂ ಕಲಿತುಕೊಳ್ಳುವ ಬಗ್ಗೆ ನೋಡಿದಾಗ ತಿಳಿದುಬರುವ ಸಂಗತಿಯೆಂದರೆ, ಅವರು ಕಡಿಮೆ ಖರ್ಚಿನಲ್ಲಿಯೇ ಎಲ್ಲವನ್ನೂ ಸಂಭಾಳಿಸುತ್ತಿದ್ದರು. ಆದರೆ ಅವರು ಯಾವಾಗಲೂ ನಗುತ್ತಾ ಇರಲಿಲ್ಲ. ಅವರಿಗೆ ಅಳುವುದನ್ನು ರೋದಿಸುವುದನ್ನು ಕಲಿಸಲಾಗುತ್ತಿತ್ತು. ಆಗ ಪ್ರತಿಯೊಬ್ಬರೂ ಅಳುತ್ತಿದ್ದರು. ಏಕೆಂದರೆ ತನಗೆ ಯಾರಾದರೂ ಏನನ್ನಾದರೂ ದಯಪಾಲಿಸಲಿ ಎಂದು.

ಇಂದಿನ ಯುಗ ಹೇಗಿದೆಯೆಂದರೆ, ಏನನ್ನಾದರೂ ಮಾಡಿ, ನಗುನಗುತ್ತಾ ಜೀವನ ಸಾಗಿಸಬೇಕು ಎಂಬುದು. ಅದರಲ್ಲಿ ಕಷ್ಟ ಏನಿದೆ? ಏಕಾಂಗಿಯಾಗಿ ಕುಳಿತು ಸ್ವಿಗ್ಗಿ ಅಥವಾ ಝೊಮ್ಯಾಟೊದವರು ಕಳಿಸಿಕೊಡುವ ಚೀಸ್‌, ಮಶ್ರೂಮ್, ಚಿಕನ್‌ ಟಾಪಿಂಗ್‌ ಇರುವ ಪಿಜ್ಜಾ ತಿನ್ನುವುದಕ್ಕಿಂತ ಮನೆಯಲ್ಲಿಯೇ ಮಾಡುವ ಪೂರಿ ತಿನ್ನುವುದರಲ್ಲೇ ಹೆಚ್ಚು ಸುಖವಿದೆ. ಮನೆಯ ಎಲ್ಲರೂ ಸೇರಿ ತಯಾರಿಸಿದರೆ, ತಿಂದರೆ ಅದೇ ಖುಷಿ.ಸ್ಮಾರ್ಟ್‌ ಫೋನ್‌ನಲ್ಲಿ ಇಯರ್‌ ಫೋನ್‌ ಹಾಕಿಕೊಂಡು ಹಾಡು ಕೇಳುವುದಕ್ಕಿಂತ  ನೀವೇ ಹಾಡುವುದು, ಬೇರೆಯವರಿಗೆ ಕೇಳಿಸಿ ನಗಿಸುವುದರಲ್ಲಿ ಹೆಚ್ಚು ಅರ್ಥವಿದೆ. ಮೊಬೈಲ್‌‌ನಲ್ಲಿ ದುಬಾರಿ ಆಟಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಆಡುವುದಕ್ಕಿಂತ ಇಬ್ಬರು ಸೇರಿ ಚೆಸ್‌ ಆಡುವುದು 4 ಜನರು ಕುಳಿತು ನೋಡುವುದು ಹೆಚ್ಚು ಖುಷಿ ಕೊಡುತ್ತದೆ. ಇವು ನಿಮ್ಮಲ್ಲಿ ಉತ್ಸಾಹಸ್ಛೂರ್ತಿ ಹೆಚ್ಚಿಸುತ್ತದೆ.

ಸರ್ಕಾರಿ ಮೂರ್ಖತನದಿಂದ ಆಗುತ್ತಿರುವ ಆರ್ಥಿಕ ಹಾನಿ ಮತ್ತು ಸರ್ಕಾರದ ರಕ್ಷಣೆಗಾಗಿ ನಡೆಯುತ್ತಿರುವ ಪೂಜೆಪುನಸ್ಕಾರಗಳ ಮಾರುಕಟ್ಟೆಯಲ್ಲಿ ಸಿಲುಕಿ ನಲುಗುವುದಕ್ಕಿಂತ ನಿಮ್ಮ ಶಕ್ತಿಯ ಮೇಲೆ ನಂಬಿಕೆ ಇರಲಿ. ನಿಸರ್ಗ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದರ ವಿರುದ್ಧ ಹೋರಾಡಲು ಶಕ್ತಿ ನೀಡಿದೆ. ಕೆಲವರು ಜೋರಾಗಿ ಹೋರಾಡುತ್ತಾರೆ, ಮತ್ತೆ ಕೆಲವರು ಬೇರೆಯವರ ಮೇಲೆ ಆರೋಪ ಹೊರಿಸುತ್ತಾರೆ. ಕೆಲವರು ಪೂಜೆಯಲ್ಲಿ ತಲ್ಲೀನರಾಗುತ್ತಾರೆ. ನೀವು ಏನು ಮಾಡುತ್ತಿರುವಿರಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ