ಸಾಗರದಲ್ಲಿ ಪ್ರಪ್ರಥಮ ಡೊಳ್ಳು ತಂಡ ಕಟ್ಟಿ ಕುಣಿದ ಹೆಗ್ಗಳಿಕೆ ವಿದೇಶದಲ್ಲೂ ಇವರ ಸದ್ದು ಅಪಾರ! ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಚೂಡಾಮಣಿ ರಾಮಚಂದ್ರರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ…..?

ಬದಲಾಗಿರುವ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಮಲೆನಾಡಿನಲ್ಲಿ ಡೊಳ್ಳು ಕುಣಿತ ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದನ್ನು ಕಲಿತು, ಸೊಂಟಕ್ಕೆ ಡೊಳ್ಳು ಕಟ್ಟಿ ಕುಣಿಯುವುದನ್ನು ಕಲಿತ ಹೆಗ್ಗಳಿಕೆ ಸಾಗರದ ಜಾನಪದ ಕಲಾವಿದೆ ಚೂಡಾಮಣಿ ರಾಮಚಂದ್ರರಿಗೆ ಸಲ್ಲುತ್ತದೆ.

ಪ್ರಪ್ರಥಮ ಮಹಿಳಾ ಡೊಳ್ಳು ತಂಡ ಕಟ್ಟಿ ದೇಶದ ಹಲವು ರಾಜ್ಯ, ವಿದೇಶಗಳಲ್ಲೂ ಡೊಳ್ಳಿನ ಝೇಂಕಾರವನ್ನು ಪಸರಿಸಿದ ಹೆಮ್ಮೆ ಚೂಡಾಮಣಿಯವರದು.

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಹುಚ್ಚರಾಯಪ್ಪ ಮತ್ತು ಸರಸ್ವತಿ ಬಾಯಿ ದಂಪತಿಯರ ಪುತ್ರಿಯಾಗಿ 1947ರಲ್ಲಿ ಜನಿಸಿದ ಇವರು, ಎಸ್‌.ಎಸ್‌.ಎಲ್.ಸಿ ಹಿಂದಿ ಪಂಡಿತ್‌ ಪರೀಕ್ಷೆ, ಸಂಸ್ಕೃತ ಪರೀಕ್ಷೆ, ಶೀಘ್ರಲಿಪಿ, ಸಂಗೀತ, ವೀಣಾವಾದನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.

ಇವರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ, ಜಾನಪದ ಕಲೆಗಳು ಅಂದರೆ ಕೋಲಾಟ, ಡೊಳ್ಳು ಕುಣಿತ, ಜಾನಪದ ಹಾಡುಗಳು, ವೀರಗಾಸೆ, ಲಂಬಾಣಿ ನೃತ್ಯ ಹಾಗೂ ಭಜನೆ ಇವುಗಳಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ವಿವಾಹದ ನಂತರ ಸಾಗರದ ನಿವಾಸಿಯಾಗಿದ್ದು, ಎಲ್ಲ ಚಟುವಟಿಕೆಗಳಲ್ಲಿ ಇವತ್ತಿಗೂ ಸಕ್ರಿಯರಾಗಿದ್ದಾರೆ. ಕುಟುಂಬದ ಎಲ್ಲರ ಸಹಕಾರ, ಬೆಂಬಲ ಇವರಿಗಿದೆ.

ಸಾಗರದ ಮಹಿಳಾ ಸಮಾಜ, ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಇನ್ನರ್‌ ವೀಲ್ ‌ಕ್ಲಬ್‌ ನಲ್ಲಿ ನಾಲ್ಕು ದಶಕಕ್ಕೂ ಹೆಚ್ಚಿನ ಕಾಲದಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಸಂಘಗಳ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಪರ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಿದ್ದು, ಬಡ ಹೆಣ್ಣುಮಕ್ಕಳಿಗೆ ಸಾಧ್ಯವಾದಷ್ಟು ಅನುಕೂಲಗಳನ್ನು ಕಲ್ಪಿಸಿಕೊಡುವುದಕ್ಕೆ ಪೂರಕವಾಗಿ ಅಗತ್ಯ ತರಬೇತಿಗಳ್ನು ನೀಡಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಭಜನಾ ಮಂಡಳಿ, ಜಾನಪದ ಹಾಡುಗಳ ತಂಡ, ಕೋಲಾಟ ತಂಡಗಳ ರಚನೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ವೀರಗಾಸೆ ಹಾಗೂ ಲಂಬಾಣಿ ನೃತ್ಯ ಕಲಿತು ಹಲವೆಡೆ ಪ್ರದರ್ಶನ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಹಲವಾರು ತರಬೇತಿ ಕಾರ್ಯಕ್ರಮಗಳು, ಬಡ ಮಕ್ಕಳಿಗೆ ಶಿಶುಪಾಲನಾ ಕೇಂದ್ರಗಳನ್ನು ನಡೆಸುವಿಕೆ, ಸುಮಾರು 30 ವರ್ಷಗಳಿಂದ ಕೇಂದ್ರ ಮಹಿಳಾ ಅಭಿವೃದ್ಧಿ ನಿಗಮದಿಂದ ಧನ ಸಹಾಯ ಪಡೆದು ಈ ಶಿಶುಪಾಲನಾ ಕೇಂದ್ರವನ್ನು ನಡೆಸಲಾಗುತ್ತಿದೆ.

ಸ್ವಸಹಾಯ ಮಹಿಳಾ ಮಂಡಳಿ

ಸ್ನೇಹ ಸಾಗರ ಸ್ವಸಹಾಯ ಮಹಿಳಾ ಮಂಡಳಿಯನ್ನು ಸಹಕಾರ ಶಿಕ್ಷಣದ ಅಡಿಯಲ್ಲಿ ಆರಂಭಿಸಿ, ಇದು ಶಿವಮೊಗ್ಗ ಜಿಲ್ಲೆಯ ಪ್ರಥಮ ಸ್ವಸಹಾಯ ಮಹಿಳಾ ಮಂಡಳಿಯಾಗಿದೆ. ಸುಮಾರು 25 ವರ್ಷಗಳಿಂದಲೂ ಈ ಸಂಸ್ಥೆಯ ಅಧ್ಯಕ್ಷೆಯಾಗಿ ಇವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ವಿವಿಧ ರೀತಿಯ 30ಕ್ಕೂ ಹೆಚ್ಚು ತರಬೇತಿಗಳನ್ನು ನೀಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗಿದ್ದಾರೆ.

ಮಹಿಳಾ ನಾಟಕೋತ್ಸವ, ಜಾನಪದ ಹಾಡು ಉತ್ಸವ, ಕೋಲಾಟ ಮೇಳ, ಭಜನೆ, ಮಹಿಳಾ ಡೊಳ್ಳು ಮೇಳ, ಮಹಿಳಾ ಸಾಹಿತಿಗಳ ಸಮ್ಮೇಳನ, ವಚನ ಸಾಹಿತ್ಯ ಸಮ್ಮೇಳನ, ಮಹಿಳಾ ಕಾರ್ಯವಾಗಲಿ ಹೀಗೆ ಹಲವಾರು ಪ್ರದರ್ಶನಗಳನ್ನು ಪ್ರಪ್ರಥಮವಾಗಿ ಸಾಗರದಲ್ಲಿ ಏರ್ಪಡಿಸಿ ವಿಶೇಷ ಯಶಸ್ಸನ್ನು ಪಡೆದಿದ್ದಾರೆ. ಪ್ರತಿ ವರ್ಷ ಮಹಿಳಾ ಜಾನಪದ ಕಲಾವಿದರನ್ನು ಗುರುತಿಸಿ ಸನ್ಮಾನಿಸಿ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಇವರ ಕಲಾ ಪ್ರೇಮಕ್ಕೆ ಸಾಕ್ಷಿ.

Chudamani-Ramachandra

ಡೊಳ್ಳು ತರಬೇತಿ ಪಡೆದರು

ಚಿಕ್ಕ ವಯಸ್ಸಿನಲ್ಲೇ ಡೊಳ್ಳು ಕುಣಿತವನ್ನು ಸಮೀಪದಿಂದ ನೋಡಿ ಆಕರ್ಷಣೆಗೊಳಗಾಗಿ ತಾನೂ ಏಕೆ ಈ ಕಲೆಯನ್ನು ಅಭ್ಯಾಸ ಮಾಡಬಾರದು ಎಂಬ ದಿಟ್ಟ ನಿರ್ಧಾರ ತಳೆದರು. ಸಾಗರ ಸಮೀಪದ ಕುಗ್ವೆ ಗ್ರಾಮದ ರಾಮಪ್ಪನವರಿಂದ ತರಬೇತಿ ಪಡೆದು ಡೊಳ್ಳು ಕಟ್ಟಿ ಅದರ ಹಾಡಿಗೆ ಹೆಜ್ಜೆ ಹಾಕಲು ಕಲಿತರು. ಮಧ್ಯ ವಯಸ್ಸಿನ ಮಹಿಳೆಯರ ತಂಡ ರಚಿಸಿ, ಡೊಳ್ಳು ಬಾರಿಸುವ ಕಲೆಯನ್ನು ಕಲಿಯುವ ಪ್ರಯತ್ನದಲ್ಲಿ ಯಶಸ್ವಿಯಾದರು. ಸತತ ಪರಿಶ್ರಮದಿಂದ ಸಾಕಷ್ಟು ಪರಿಣಿತಿಯನ್ನು ಪಡೆದು ಪ್ರಥಮ ಬಾರಿಗೆ ಸಾಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದಾಗ ಸಾಗರದ ಜನತೆಯಿಂದ, ಮಹಿಳೆಯರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು.

ಮುಂದೆ ಜಿಲ್ಲಾ ಉತ್ಸವ, ರಾಜ್ಯದ ಕಲಾ ಉತ್ಸವ, ಸಾಹಿತ್ಯ ಸಮ್ಮೇಳನ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಇವರಿಗೆ ಅವಕಾಶಗಳು ಅರಸಿ ಬಂದವು. ಪ್ರಥಮ ಬಾರಿಗೆ ದೆಹಲಿಯ ಕರ್ನಾಟಕ ಸಂಘದಲ್ಲಿ ಪ್ರದರ್ಶನ ನೀಡಿ ಶಹಭಾಸ್‌ ಪ್ರಶಂಸೆ ಪಡೆದರು. ನಂತರದ ವರ್ಷಗಳಲ್ಲಿ ನಾಲ್ಕು ಬಾರಿ ದೆಹಲಿಯಲ್ಲಿ ಪ್ರದರ್ಶನ ನೀಡಿದರು.

ಪ್ರತಿಷ್ಠಿತ ವೇದಿಕೆಗಳಲ್ಲಿ ಡೊಳ್ಳು ಪ್ರದರ್ಶನ

ಕಾಮನ್‌ ವೆಲ್ತ್‌ಕ್ರೀಡಾಕೂಟದ ಸಾಂಸ್ಕೃತಿಕ ಕಾರ್ಯಕ್ರಮ, ಹರಿಯಾಣದ ಸೂರಜ್‌ ಕುಂಡ್‌ ನಲ್ಲಿ ಸಾರ್ಕ್‌ ದೇಶದ ಕಲಾವಿದರೊಂದಿಗೆ ಪ್ರದರ್ಶನ, ಗುಜರಾತಿನ ಎಲ್ಲ ಜಿಲ್ಲೆಗಳಲ್ಲಿ ಪ್ರದರ್ಶನ, ಉಪ್ಪಿನ ಸತ್ಯಾಗ್ರಹದ 150ನೇ ವರ್ಷದ ಸಮಾರಂಭದಲ್ಲಿ ಪ್ರದರ್ಶನ. ಜೊತೆಗೆ ಮುಂಬೈನಲ್ಲಿ ನಾಲ್ಕು ಬಾರಿ ಪ್ರದರ್ಶನ, ಅಸ್ಸಾಂ, ಮೇಘಾಲಯ, ಪಾಂಡಿಚೆರಿ, ಕೇರಳ, ತಮಿಳುನಾಡು, ಗೋವಾ, ರಾಜಾಸ್ಥಾನ ಹಾಗೂ ತಮಿಳುನಾಡಿನ ದೇವಸ್ಥಾನದ ನೃತ್ಯೋತ್ಸವ, ವಾರಾಣಸಿಯ ಗಂಗಾ ಮಹೋತ್ಸವ, ಜಂಗಮವಾಡಿ ಉತ್ಸವಗಳಲ್ಲಿ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ವಿದೇಶ ಪ್ರವಾಸ ನೆರೆಯ ನೇಪಾಳ್‌, ಕೊಲ್ಲಿ ರಾಷ್ಟ್ರಗಳಾದ ಕುವೈತ್‌, ದುಬೈ, ಅಬುದಾಬಿ, ಥಾಯ್‌ ಲ್ಯಾಂಡ್‌, ಸಿಂಗಾಪೂರ್‌, ಲಂಡನ್‌ ನಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನ, ಮಾಲ್ಡಿವ್ಸ್, ಮಾರಿಷಸ್‌, ಶ್ರೀಲಂಕಾ, ಸ್ವಿಡ್ಜರ್ಲೆಂಡ್‌, ವೆನಿಸ್‌, ಆಸ್ಟ್ರೀಯಾ, ಜರ್ಮನಿ, ಫ್ರಾನ್ಸ್, ಇಟಲಿ ದೇಶಗಳಲ್ಲಿ ಕರ್ನಾಟಕದ ಈ ಜಾನಪದ ಕಲೆಯ ಸೊಗಡನ್ನು ಬಿತ್ತರಿಸಿದ್ದಾರೆ.

ಚಲನಚಿತ್ರ, ದೂರದರ್ಶನ ಚಾನೆಲ್ ‌ಗಳಲ್ಲಿ ಇವರ ಪ್ರದರ್ಶನ ಪ್ರಸಾರವಾಗಿದೆ. ಶಾಲಾ ಕಾಲೇಜು ಹೆಣ್ಣುಮಕ್ಕಳಿಗೆ ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಲಂಬಾಣಿ ನೃತ್ಯಗಳ ತರಬೇತಿ ನೀಡಿ ಅನೇಕ ತಂಡಗಳನ್ನು ರಚಿಸಿದ್ದಾರೆ.

ಸಾಧನೆಗೆ ಸಂದ ಪ್ರಶಸ್ತಿಗಳು

ಇವರ ಕಲಾ ಸಾಧನೆಯನ್ನು ಪರಿಗಣಿಸಿ ಹತ್ತು ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. 2018ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕರ್ನಾಟಕ ಜ್ಯೋತಿ, ಸುವರ್ಣ ಕನ್ನಡತಿ, ಕನ್ನಡ ಜೋಪ್ರೇಮ, ಕನ್ನಡ ಕಲಾ ಕುಸುಮ, ಭಾರತ ಸ್ತ್ರೀ ರತ್ನ, ಅಂಬೇಡ್ಕರ್‌, ಕರ್ನಾಟಕ ಪತಂಜಲಿ ರತ್ನ, ಸಮಾಜ ರತ್ನ, ಪರಿಮಳ, ಕುವೆಂಪು ವಿಶ್ವಮಾನವ, ಪ್ರಜಾಭೂಷಣ, ಬೆಸ್ಟ್ ವೆಕೇಶನ್‌ ಎಕ್ಸಿನ್ಸ್ ಪ್ರಶಸ್ತಿ ದೊರಕಿದೆ.

ಹಾಗೆಯೇ ಕುವೆಂಪು ವಿಶ್ವ ಕನ್ನಡ ಅಂತಾರಾಷ್ಟ್ರೀಯ ಪ್ರಶಸ್ತಿ, ಸಹೃದಯ ಕಲಾವಿದೆ ಪ್ರಶಸ್ತಿ, ವೀರ ಸಾವರ್ಕರ್‌ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಕಿತ್ತೂರು ರಾಣಿ ಚೆನ್ನಮ್ಮಾಜಿ ಪ್ರಶಸ್ತಿ ಮುಂತಾದವು ಇವರ ಮಡಿಲು ಸೇರಿವೆ.

Chudamani---Dollu-

ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೃಷಿ

ಸಾಹಿತ್ಯ ಬರವಣಿಗೆಯಲ್ಲಿ ಆಸಕ್ತಿ ಇರುವ ಚೂಡಾಮಣಿ ಒಂದು ಕಥಾ ಸಂಕಲನ, 4 ಕವನ ಸಂಕಲನ, 2 ಮಕ್ಕಳ ಕಥೆ, 2 ಪ್ರವಾಸ ಕಥನ ಪ್ರಕಟಿಸಿದ್ದಾರೆ. ಇಡೀ ಭಾರತವನ್ನು 4 ಬಾರಿ ಸುತ್ತಿದ ಅನುಭವ ಇವರದು. ಅಮರನಾಥ, ಕೈಲಾಸ ಮಾನಸ ಸರೋವರ ಯಾತ್ರೆ ಪೂರೈಸಿದ ಅನುಭವ ಇವರಿಗಿದೆ.

ಡೊಳ್ಳು ಕಲೆಯನ್ನು ಸಿದ್ಧಿಸಿಕೊಂಡು ಈ ಮೂಲಕ ದೇಶ ವಿದೇಶಗಳಲ್ಲಿ ಇದನ್ನು ಪರಿಚಯಿಸಿ ಸಾಧನೆ ಮಾಡಿದ ಚೂಡಾಮಣಿ ಮಹಿಳಾ ಸಮುದಾಯಕ್ಕೆ ಸ್ಛೂರ್ತಿ ಹಾಗೂ ಮಾದರಿಯಾಗಿದ್ದಾರೆ. ಇವರು ಭಾರತದ ಕೀರ್ತಿಯನ್ನು ಇನ್ನಷ್ಟು ಮತ್ತಷ್ಟು ಶಿಖರಕ್ಕೇರಿಸಲಿ ಎಂದು ಶುಭಾಶಯ ಕೋರೋಣ.

ಗಣಪತಿ ಶಿರಳಗಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ