ಧರ್ಮ ನಿವಾರಿಸಿ ಮಹಿಳೆಯನ್ನು ಉಳಿಸಿ
ಮಹಿಳೆಯರ ಸುರಕ್ಷತೆಯ ಬಾಬತ್ತಿನಲ್ಲಿ ಗೋವಾ, ಕೇರಳ, ಮಿಜೋರಾಂ, ಮಣಿಪುರ, ಸಿಕ್ಕಿಂ ಮುಂಚೂಣಿಯಲ್ಲಿದ್ದರೆ, ಬಿಹಾರ, ಉ.ಪ್ರದೇಶ ಮತ್ತು ದೆಹಲಿಯಲ್ಲಿ ಅವರ ಸ್ಥಿತಿ ದಯನೀಯವಾಗಿದೆ. `ಜೆಂಡರ್ ವಲ್ನರೆಬಿಲಿಟಿ ಇಂಡೆಕ್ಸ್’ನ್ನು ಅರೆ ಸರ್ಕಾರಿ ಸಂಸ್ಥೆಯೊಂದು ಸಿದ್ಧಪಡಿಸಿದೆ. ಇದರಲ್ಲಿ 0 ಯಿಂದ 1 ಅಂಕ ನೀಡಲಾಗಿದೆ. ಗೋವಾಗೆ 0.656 ಅಂಕ ಕೊಡಲಾಗಿದೆ. ದೆಹಲಿ 0.456, ಉ.ಪ್ರದೇಶ 0.434 ಮತ್ತು ಬಿಹಾರಕ್ಕೆ ದೊರೆತ ಅಂಕ 0.410.ಯಾವ ರಾಜ್ಯಗಳು ಸುರಕ್ಷಿತ ಪಟ್ಟಿಯಲ್ಲಿ ಇವೆಯೋ, ಅಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇದೆ, ಆದರೆ ಜೊತೆಗೆ ಅಲ್ಲಿ ಶೋಷಣೆಯ ಪ್ರಮಾಣ ಕಡಿಮೆಯಾಗಿದೆ. ಅಲ್ಲಿ ಹೆಣ್ಣುಗಂಡಿನ ನಡುವೆ ಭೇದಭಾವ ಕಡಿಮೆ ಇದೆ. ಮಹಿಳೆಯರಿಗೆ ಹೆಚ್ಚು ಸುರಕ್ಷತೆ ಇರುವ ರಾಜ್ಯಗಳಲ್ಲಿ ಅವರು ತಮಗಿಷ್ಟವಾದ ಸಂಗಾತಿಯನ್ನು ತಾವೇ ಆಯ್ಕೆ ಮಾಡಬಹುದು. ಅವರ ಸ್ಥಿತಿ ದಯನೀಯವಾಗಿರುವ ರಾಜ್ಯಗಳಲ್ಲಿ ಅವರು ತಮ್ಮ ಇಷ್ಟದ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡರೆ ಅವರನ್ನು ಹೊಡೆದು ಮೂಲೆಗುಂಪು ಮಾಡಲಾಗುತ್ತದೆ, ಕೆಲವೊಂದು ಕಡೆ ಅವರನ್ನು ಸಾಯಿಸಿಬಿಡಲಾಗುತ್ತದೆ.
ಅಲ್ಲಿನ ಭೇದಭಾವಕ್ಕೆ ಏನು ಕಾರಣ ಎಂಬುದನ್ನು ಈ ವರದಿಯು ಸ್ಪಷ್ಟಪಡಿಸಿಲ್ಲವಾದರೂ, ಮಹಿಳೆಯರು ಹೆಚ್ಚು ಸುರಕ್ಷಿತವಾಗಿರುವ ರಾಜ್ಯಗಳಲ್ಲಿ ಧರ್ಮದ ಪ್ರಭಾವ ಕಡಿಮೆ ಇದೆ. ಅಸುರಕ್ಷಿತ ರಾಜ್ಯಗಳಲ್ಲಿ ಧರ್ಮದ ಪ್ರಭಾವ ಅತಿ ಹೆಚ್ಚು. ಅಸುರಕ್ಷತೆ ಇರುವ ರಾಜ್ಯಗಳಲ್ಲಿ ಧರ್ಮದ ಬಾರುಕೋಲಿನಿಂದ ಮಹಿಳೆಯರ ಮೇಲೆ ಹಗಲು-ರಾತ್ರಿ ಪ್ರಹಾರ ಮಾಡಲಾಗುತ್ತದೆ. ಅವರಿಗೆ ಮನೆಯಲ್ಲೂ ಕೂಡ ವ್ಯವಸ್ಥಿತವಾಗಿ ಇರಲು ಅವಕಾಶ ಕೊಡಲಾಗುವುದಿಲ್ಲ. ಏಕೆಂದರೆ ಧರ್ಮ ಮಾಡುವುದು ಅದನ್ನೇ ಅಲ್ವಾ? ಯಾವ ಸಮಾಜದಲ್ಲಿ ಹಗಲು ರಾತ್ರಿ ಧರ್ಮದ ಗುಣಗಾನ ಮಾಡಲಾಗುತ್ತದೊ, ಧರ್ಮಾಧಿಕಾರಿಗಳು ರಾಜ್ಯಭಾರ ನಡೆಸುತ್ತಿರುತ್ತಾರೊ ಅಲ್ಲಿ ಇಂತಹ ಹೀನ ಘಟನೆಗಳು ಸಾಮಾನ್ಯ. ನಮ್ಮಲ್ಲಿ ಪೂಜಿಸಲ್ಪಡುವ ದೇವಿದೇವತೆಯರ ಇತಿಹಾಸ ಗಮನಿಸಿದರೆ ಸ್ತ್ರೀ ಶೋಷಣೆಯ ಉದಾಹರಣೆಗಳು ಹೇರಳವಾಗಿ ದೊರೆಯುತ್ತವೆ. ಯಾವ ಸಮಾಜ ಮಹಿಳೆಯರನ್ನು ಬೊಂಬೆಗಳಂತೆ, ಗುಲಾಮರಂತೆ ಭಾವಿಸುತ್ತದೊ, ಅಲ್ಲಿ ಇಂಥದು ಸಾಮಾನ್ಯ. ಇಂದು ಇಸ್ಲಾಂ ಮಹಿಳೆಯರನ್ನು ಅಂಕುಶದಿಂದ ಬಂಧಿಸಿ ಇಡುತ್ತಿದೆ. ಮನೆಯೊಳಗೂ ಕೂಡ ಮಹಿಳೆಯರು ಸುರಕ್ಷಿತವಾಗಿಲ್ಲ. ಇಡೀ ಪಶ್ಚಿಮ ಏಷ್ಯಾ ಧರ್ಮ ಹೊತ್ತಿಸಿದ ಬೆಂಕಿಯಲ್ಲಿ ಬೇಯುತ್ತಿದೆ. ಆ ಬೆಂಕಿಯ ಕಿಡಿಗಳು ಒಮ್ಮೆ ಯೂರೋಪ್, ಮತ್ತೊಮ್ಮೆ ಅಮೆರಿಕ, ಇನ್ನೊಮ್ಮೆ ಭಾರತದಲ್ಲಿ ತನ್ನ ಕೆನ್ನಾಲಿಗೆ ಚಾಚುತ್ತಿವೆ.
ಯಾವ ದೇಶದಲ್ಲಿ ಧರ್ಮದ ಪ್ರಭಾವ ಕಡಿಮೆ ಇದೆಯೊ, ಆ ದೇಶಗಳು ಭಾರಿ ಪ್ರಗತಿ ಸಾಧಿಸುತ್ತಿವೆ. ಚೀನಾ, ಜಪಾನ್, ಕೊರಿಯಾ ದೇಶಗಳ ಮೇಲೆ ಪಾಶ್ಚಿಮಾತ್ಯರು ರಾಜ್ಯಭಾರ ಮಾಡಲು ಆಗಲೇ ಇಲ್ಲ. ಭಾರತ, ಪಶ್ಚಿಮ ಏಷ್ಯಾ ಹಾಗೂ ಆಫ್ರಿಕಾದ ಅನೇಕ ರಾಷ್ಟ್ರಗಳಲ್ಲಿ ಅವರು ಸುಲಭವಾಗಿ ರಾಜ್ಯಭಾರ ನಡೆಸಿದರು.
ಮಹಿಳೆಯರ ಸುರಕ್ಷತೆ ಅವರನ್ನು ಗೌರವಿಸುವುದರ ಮೂಲಕ ಬರುತ್ತದೆ. ಯಾವ ಸಮಾಜದಲ್ಲಿ ಆಕೆಗೆ ಗೌರವ ಕೊಡುವುದಿಲ್ಲವೋ ಅಲ್ಲಿ ಸುರಕ್ಷತಾ ವ್ಯವಸ್ಥೆ ದುರ್ಬಲವಾಗಿರುತ್ತದೆ. ಅವಳು ತನ್ನ ಕಾಲ ಮೇಲೆ ನಿಲ್ಲಲು ಆಗುವುದಿಲ್ಲ. ಆಕ್ರಮಣಕಾರಿಗಳನ್ನು ಸುಲಭವಾಗಿ ಎದುರಿಸಲು ಆಗುವುದಿಲ್ಲ.
ದೆಹಲಿಯಲ್ಲಿ ಧರ್ಮದ ಪ್ರಭಾವ ಅಷ್ಟೇನೂ ಜೋರಾಗಿ ಇಲ್ಲ. ಆದರೆ ಇಲ್ಲಿರುವಷ್ಟು ದೇವಸ್ಥಾನಗಳು ಬಹುಶಃ ದೊಡ್ಡ ರಾಜ್ಯಗಳಲ್ಲೂ ಇಲ್ಲ. ಇಲ್ಲಿ ನಡೆಯುವಷ್ಟು ಧಾರ್ಮಿಕ ದಂಧೆ ಎಲ್ಲೂ ನಡೆಯುವುದಿಲ್ಲ. ದೆಹಲಿಯ ಬೆಳವಣಿಗೆಯ ರಹಸ್ಯ ಅಲ್ಲಿನ ನಿವಾಸಿಗಳ ಪರಿಶ್ರಮದಿಂದಲ್ಲ, ಕೇಂದ್ರ ಸರ್ಕಾರದ ಚುಕ್ಕಾಣಿ ಇಲ್ಲಿಯೇ ಇರುವುದು ಅದಕ್ಕೆ ಕಾರಣ. ಅದು ದೇಶಾದ್ಯಂತದ ತೆರಿಗೆ, ಲಂಚದ ಹಣ ವಸೂಲಿ ಮಾಡಿ ಮುಖಂಡರು, ಕಾರ್ಮಿಕರು, ವ್ಯಾಪಾರಿಗಳಿಗೆ ನೀಡುತ್ತದೆ. ಮಹಿಳೆಯರಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ ಎಂಬಂತೆ ಅವರನ್ನು ಯಾರೂ ವಿಚಾರಿಸುವುದಿಲ್ಲ.
ಯಾರಾದರೂ ಧರ್ಮದ ಹುಚ್ಚುತನದ ಬಗ್ಗೆ ಇಂಡೆಕ್ಸ್ ಸಿದ್ಧಪಡಿಸಿದರೆ, ಅದರಲ್ಲಿ ಸರ್ಕಾರಿ ಹುದ್ದೆಯಲ್ಲಿರುವವರೇ ನಂಬರ್ 1 ಆಗುತ್ತಾರೆ. ಅವರು ಕಂಡ ಕಂಡ ಮೂರ್ತಿಗಳ ಮುಂದೆ ಮಂಡಿ ಊರುತ್ತಿರುತ್ತಾರೆ. ಎಲ್ಲಿಯವರೆಗೆ ಧರ್ಮದ ಕಪಿಮುಷ್ಟಿ ಸಡಿಲ ಆಗುವುದಿಲ್ಲವೋ, ಅಲ್ಲಿಯವರೆಗೆ ಮಹಿಳೆಯರು ಅಸುರಕ್ಷಿತರಾಗಿಯೇ ಇರುತ್ತಾರೆ.
ಹೇಳಿಕೊಳ್ಳುವುದರಿಂದ ಏನೂ ಆಗುವುದಿಲ್ಲ
ಸುಪ್ರಿಂ ಕೋರ್ಟ್ ಮಹಿಳೆಯರಿಗೆ ನೆಮ್ಮದಿ ಕೊಡುವ ಒಂದು ತೀರ್ಪನ್ನು ನೀಡಿದೆ. ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಕೇವಲ ಮಹಿಳೆಗೆ ಇದೆ, ಅದಕ್ಕಾಗಿ ಆಕೆ ಗಂಡನ ಅನುಮತಿ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವುದೇ ಆ ತೀರ್ಪು. ಒಂದು ಆಸ್ಪತ್ರೆಯ ವಿರುದ್ಧ ಪರಿಹಾರಕ್ಕಾಗಿ ಮೊಕದ್ದಮೆ ಹೂಡಿದ್ದ ಪತಿ ಮಹಾಶಯನ ಅರ್ಜಿಯನ್ನು ತಿರಸ್ಕರಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಅಂದಹಾಗೆ ಈ ಪತಿ ಹೆಂಡತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಹೆಂಡತಿಗೆ ಹುಟ್ಟಿದ ಮಗುವನ್ನು ಗಂಡ ತನ್ನ ಆಸ್ತಿ ಎಂದು ಹೇಳಿಕೊಳ್ಳಲು ಆಕೆ ಯಾವುದೇ ಯಂತ್ರ ಅಲ್ಲ, ಮಹಿಳೆ ತನ್ನ ಇಚ್ಛೆಯ ಮೇರೆಗೆ ಮಗುವನ್ನು ಹುಟ್ಟಿಸಬಹುದು. ಅದೇ ರೀತಿ ಗರ್ಭಪಾತ ಕೂಡ ಮಾಡಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಹೋರಾಡುವವರು ಒಂದು ವಿಷಯ ತಿಳಿದುಕೊಳ್ಳುವ ಅಗತ್ಯವಿದೆ. ಗರ್ಭದಲ್ಲಿರುವ ಭ್ರೂಣ ಗಂಡೊ, ಹೆಣ್ಣೋ ಎಂದು ತಿಳಿದುಕೊಳ್ಳುವ ಹಕ್ಕು ಅದಕ್ಕೆ ಜನ್ಮ ನೀಡಬೇಕೊ, ಬೇಡವೋ ಎಂದು ನಿರ್ಧರಿಸುವ ಹಕ್ಕು ಆಕೆಗಿರುತ್ತದೆ. ಅದನ್ನು ಬಿಟ್ಟು ಅವರು ಗಂಡ, ಅತ್ತೆ, ಮಾವ, ನಾದಿನಿಯರ ವಿರುದ್ಧ ದೋಷ ಹೊರಿಸುತ್ತ ಇರುತ್ತಾರೆ. ಹೆಣ್ಣು ಮಕ್ಕಳ ಬಗ್ಗೆ ಕವನ, ಕಥೆ ವ್ಯಥೆ ಹೊಸೆಯುತ್ತ ಇರುತ್ತಾರೆ.
ಒಂದು ವೇಳೆ ಗರ್ಭ ಉಳಿಸಿಕೊಳ್ಳುವ ಮತ್ತು ಮಗುವನ್ನು ಹೆರುವ ಹಕ್ಕು ಇದೆ ಎಂದಾದರೆ, ಹುಟ್ಟುವ ಮಗು ಹೆಣ್ಣಾಗಬೇಕೊ, ಗಂಡಾಗಬೇಕೊ ಎಂದು ನಿರ್ಧರಿಸುವುದು ಕೂಡ ಅವಳದೇ ಹಕ್ಕು ಎಂದಾಯಿತಲ್ಲವೇ? ಒಂದು ವೇಳೆ ಸಮಾಜ ಎರಡನೇ, ಮೂರನೇ, ನಾಲ್ಕನೇ ಹೆಣ್ಣುಮಗುವಿನ ಬಗ್ಗೆ ಹುಬ್ಬೇರಿಸುತ್ತದೆ ಎಂದರೆ, ಅದರ ತಪ್ಪಿತಸ್ಥೆ ಕೂಡ ಆಕೆಯೇ! ಎರಡು ಹೆಣ್ಣುಮಕ್ಕಳ ನಂತರ ಮಹಿಳೆಯೊಬ್ಬಳು, ಮೂರನೇ ಮಗುವಿನ ರಿಸ್ಕ್ ತೆಗೆದುಕೊಳ್ಳುತ್ತಾಳೆಂದರೆ, ಅವಳೇ ಸ್ವತಃ ಪುತ್ರ ವ್ಯಾಮೋಹದಲ್ಲಿ ಬಂಧಿಯಾಗಿರುತ್ತಾಳೆ. ಆದರೆ ಅದರ ತಪ್ಪನ್ನು ಗಂಡ ಹಾಗೂ ಅತ್ತೆಮಾವನ ಮೇಲೆ ಹೊರಿಸುತ್ತಾಳೆ. ಕಾನೂನು ಸ್ಪಷ್ಟವಾಗಿ ಹೇಳಿರುವುದೇನೆಂದರೆ, ಒಂದುವೇಳೆ 2 ಮಕ್ಕಳ ಬಳಿಕ ಗರ್ಭ ನಿಂತಿದ್ದೇ ಆದಲ್ಲಿ, ಅದನ್ನು ಗರ್ಭಪಾತ ಮಾಡಿಸುವ ಹಕ್ಕು ಕೇವಲ ಮಹಿಳೆಗಿರುತ್ತದೆ.
ವಾಸ್ತವ ಸಂಗತಿ ಬೇರೆಯೇ ಆಗಿದೆ. ನಮ್ಮ ಸುಶಿಕ್ಷಿತ ಮಹಿಳೆಯರು ಬಲು ಕಂದಾಚಾರಿಗಳು ಹಾಗೂ ಮೂಢನಂಬಿಕೆಯಿಂದ ಸುತ್ತುವರಿದವರಾಗಿರುತ್ತಾರೆ. ಅವರು ಒಂದೆಡೆ ಐಫೋನ್, ಲ್ಯಾಪ್ಟಾಪ್ ಬಳಸುತ್ತಾರೆ. ಇನ್ನೊಂದೆಡೆ ಅದರಲ್ಲಿ ಜಾತಕ ರೂಪಿಸುತ್ತಾರೆ, ವಾಸ್ತುವಿನ ಆ್ಯಂಗಲ್ ಶೋಧಿಸುತ್ತಾರೆ. ಅವರಲ್ಲಿ ತಾರ್ಕಿಕ ದೃಷ್ಟಿ ಎನ್ನುವುದು ಇಲ್ಲವೇ ಇಲ್ಲ. ಏಕೆಂದರೆ ಧರ್ಮ ರಕ್ಷಣೆಯ ಹುಚ್ಚು ವ್ಯಾಮೋಹ ಅವರ ತಲೆಯಲ್ಲಿ ಸವಾರಿ ಮಾಡುತ್ತಿರುತ್ತದೆ. ಆದಕ್ಕಾಗಿ ಅವರು ಸಾವಿರಾರು ಮೈಲಿ ದೂರದ ಬದರಿನಾಥ್, ಕಾಶಿಗೆ ಹೋಗುತ್ತಾರೆ. ತಿರುಪತಿಗೂ ಹೋಗಿ ಬರುತ್ತಾರೆ. ಅಲ್ಲಿ ಮೊಬೈಲ್ನಿಂದ ಸೆಲ್ಛೀ ತೆಗೆದು ತಮ್ಮನ್ನು ತಾವು ಆಧುನಿಕರು ಎಂದು ಹೇಳಿಕೊಳ್ಳುತ್ತಾರೆ.
ಗರ್ಭಪಾತದ ತನ್ನ ಹಕ್ಕನ್ನು ಬಳಸಿಕೊಳ್ಳದೆ ಸಮಾಜದ ಮೇಲೆ ತಪ್ಪು ಹೊರಿಸುವುದು ಮತ್ತು ಸಾಮಾಜಿಕ ನಿಯಮಗಳನ್ನು ಸರಿಯೆಂದು ಒಪ್ಪಿಕೊಳ್ಳುವ ದ್ವಂದ್ವ ಮನೋಭಾವ ನಮ್ಮ ಇಂದಿನ ಆಧುನಿಕ ಮಹಿಳೆಯರದು. ಅವರ ಮಾತುಕಥೆ ಇಂಗ್ಲಿಷ್ನಲ್ಲಿ ಇರುತ್ತದೆ. ಆದರೆ ಧೋರಣೆ ಮಾತ್ರ ಸಂಸ್ಕೃತದಲ್ಲಿ. ಹಾಗೆಂದೇ ಸುಪ್ರೀಂ ಕೋರ್ಟ್ ಕೇವಲ ಹೇಳಿಕೊಳ್ಳುವುದರಿಂದ ಏನೂ ಆಗುವುದಿಲ್ಲ ಎಂದು ಸರಿಯಾಗಿಯೇ ಹೇಳಿದೆ.
ಚರಂಡಿ ನಿರ್ಮಿಸಿ ಹೋರ್ಡಿಂಗ್ ಏಕಿಲ್ಲ?
ದೇಶದಲ್ಲಿ ಚರಂಡಿಗಳ ಸ್ಥಿತಿ ಘೋರವಾಗಿದೆ. ನರೇಂದ್ರ ಮೋದಿ ಸ್ವಚ್ಛತೆಯ ಹೆಸರಿನಲ್ಲಿ ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳುವ ಅವರು ರಾಜ್ಯ ಸರ್ಕಾರ, ನಗರಸಭೆ, ಪುರಸಭೆ, ಪಂಚಾಯತ್ಗಳಿಗೆ ಒಳಚರಂಡಿ ನಿರ್ಮಿಸುವ ಅಗತ್ಯದ ಬಗ್ಗೆ ಮಾತ್ರ ಎಲ್ಲೂ ಹೇಳಿಲ್ಲ. ಇದಕ್ಕಾಗಿ ಕೋಟಿ ದಶಕೋಟಿಗಳ ಖರ್ಚು ಬರುತ್ತದೆ. ಏಕೆಂದರೆ ಸರ್ಕಾರ ಕೋಟಿ ಕೋಟಿ ಹಣವನ್ನು ಸೈನಿಕರಿಗೆ ಶಸ್ತ್ರಾಸ್ತ್ರಗಳಿಗೆ, ಬುಲೆಟ್ ಟ್ರೇನ್ಗಳಿಗೆ, ಮೂರ್ತಿಗಳಿಗೆ ಖರ್ಚು ಮಾಡಬೇಕಲ್ಲ!
ದೇಶದಲ್ಲಿ ಎಲ್ಲಿಯವರೆಗೆ ದೊಡ್ಡ ದೊಡ್ಡ ಒಳಚರಂಡಿಗಳು ನಿರ್ಮಾಣ ಆಗುವುದಿಲ್ಲವೋ, ಅಲ್ಲಿಯವರೆಗೆ ದೇಶ ಸ್ವಚ್ಛ ಆಗುವುದಿಲ್ಲ.
ನಮ್ಮ ದೇಶದಲ್ಲಿ ಆರ್ಯರಿಗೂ ಮುಂಚೆ ನೆಲೆ ಕಂಡುಕೊಂಡಿದ್ದ ಸಿಂಧೂ ನಾಗರಿಕತೆಯ ಜನರು, ಹರಪ್ಪಾ, ಮೊಹೆಂಜೊದಾರೊ, ಧೋಲವೀರ, ಲೋಥಾಲ್ನಂತಹ ಸ್ಥಳಗಳಲ್ಲಿ ಮುಚ್ಚಿದ ಕಾಲುವೆಗಳು, ನಾಲೆಗಳನ್ನು ನಿರ್ಮಿಸಿದ್ದರು. ಆ ವ್ಯವಸ್ಥೆಯನ್ನು ಈಗಲೂ ಕಾಣಬಹುದು. ಆದರೆ ಆರ್ಯರಿಗೆ ಹೇಗೂ ಶೂದ್ರರು, ಅಸ್ಪೃಶ್ಯರು ಸಿಕ್ಕರು. ಹೀಗಾಗಿ ಒಳಚರಂಡಿ ನಿರ್ಮಿಸುವ ಅವಶ್ಯಕತೆಯೇ ಉಂಟಾಗಲಿಲ್ಲ.
ಈಗಲೂ ದೇಶದ ಹೆಚ್ಚಿನ ನಗರಗಳಲ್ಲಿ ನಿರ್ಮಾಣಗೊಂಡ ಚರಂಡಿಗಳು ಅಗತ್ಯಕ್ಕಿಂತ ಕಡಿಮೆ ಇವೆ. ಅವು ಕೂಡ ಯಾವಾಗಲೂ ತುಂಬಿಕೊಂಡಿರುತ್ತವೆ. ರಾಷ್ಟ್ರೀಯ ಹಸಿರು ಪ್ರಾಧಿಕಾರ ನೀಡಿದ ಆದೇಶದಲ್ಲಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಕಸವನ್ನು ಚರಂಡಿಗಳಲ್ಲಿ ಸುರಿಯಬಾರದು, ಹಾಗೆ ಮಾಡಿದರೆ ಮೋರಿಗಳ ಸರಾಗ ಹರಿವಿಗೆ ಅಡಚಣೆ ಉಂಟಾಗುತ್ತದೆ ಎಂದು ಹೇಳಲಾಗಿದೆ. ಪ್ರಾಧಿಕಾರ ಹಾಗೆ ಆದೇಶ ನೀಡುವುದರಿಂದ ಕಸ ಸುರಿಯುವುದು ನಿಂತೇ ಹೋಗುತ್ತದಾ? ಒಂದೆರಡು ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತದೆ.
ಒಳಚರಂಡಿ ವಿಜ್ಞಾನದಲ್ಲಿ ಈಗ ಸಾಕಷ್ಟು ಬದಲಾವಣೆ ಬಂದಿದೆ. ಆದರೆ ನಮ್ಮ ಉನ್ನತ ಜನರು ಆ ಬಗ್ಗೆ ಯೋಚಿಸಲು ಸಿದ್ಧರಿಲ್ಲ.
ಚರಂಡಿಗಳು ಪ್ರತಿ ಮನೆಗೂ ವರದಾನದಂತೆ. ಏಕೆಂದರೆ ಅದರಿಂದ ಯಾವುದೇ ದುರ್ವಾಸನೆ ಹೊರಹೊಮ್ಮುವುದಿಲ್ಲ, ಸೊಳ್ಳೆಗಳು ಅತ್ತ ಕಡೆ ಸುಳಿಯುವುದಿಲ್ಲ. ಆದರೆ ಭಾರತದ ಬಹಳಷ್ಟು ನಗರಗಳ ಜನತೆ ಮೋರಿಯ ಜಾಗ ಆಕ್ರಮಿಸಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಹೀಗಾಗಿ ಕೆಲವು ನಗರಗಳು ಮೋರಿಗಳಂತಾಗಿಬಿಟ್ಟಿವೆ.
ಮುಂಬೈನಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಬಹಳಷ್ಟು ಚರಂಡಿಗಳು ತಂತಾನೇ ಸ್ವಚ್ಛವಾಗುತ್ತವೆ. ಅ ಮಹಾಪೂರದಿಂದಾಗಿ ಕಸವನ್ನು ಹೊರಚೆಲ್ಲುತ್ತವೆ.
ಪ್ರತಿಯೊಂದು ನಗರದ 2/3ರಷ್ಟು ಜನರು ಚರಂಡಿಯ ಕೊರತೆ ಅಥವಾ ಹೂಳು ತುಂಬಿಕೊಂಡಿರುವ ಕಾರಣದಿಂದ ತೊಂದರೆಯಲ್ಲಿದ್ದಾರೆ. ಶೌಚಾಲಯ ನಿರ್ಮಿಸಿ ಜಾಹೀರಾತಿನಲ್ಲಿ ಮೋದಿಯವರ ಭಾವಚಿತ್ರ ಕಂಡುಬರುತ್ತದೆ. ಆದರೆ ಚರಂಡಿ ನಿರ್ಮಿಸಿ, ಅವನ್ನು ಸದಾ ಸ್ವಚ್ಛವಾಗಿಡಿ ಎಂಬ ಜಾಹೀರಾತುಗಳು ಮಾತ್ರ ಎಲ್ಲಿಯೂ ಕಂಡುಬರುವುದಿಲ್ಲ. ಏಕೆಂದರೆ ಇದು ಅತ್ಯಂತ ದುಬಾರಿ ಕೆಲಸ.
ಈಗ ಎಂತಹ ಕ್ರಶರ್ಗಳು ಬಂದಿವೆ ಎಂದರೆ, ಕಸವನ್ನು ಪುಡಿ ಪುಡಿ ಮಾಡಿ ಮೋರಿಯಲ್ಲಿ ತೇಲಿ ಹೋಗುವಂತೆ ಮಾಡಬಹುದು. ಕಸವನ್ನು ಹಾಗೆಯೇ ಸುರಿಯುತ್ತ ಹೋಗುವುದರಿಂದ ಮುಂದೊಮ್ಮೆ ಚರಂಡಿಗಳೇ ಉಳಿಯುವುದಿಲ್ಲ. ನ್ಯಾಯ ಪ್ರಾಧಿಕಾರದ ತೀರ್ಪಿನಿಂದ ನಗರಗಳ ಅಭಿವೃದ್ಧಿ ಸಾಧ್ಯವಿಲ್ಲ. ಮುಖಂಡರ ಭಾಷಣಗಳಿಂದ ಹೋಮಹವನಗಳಿಂದ ಸಾಧ್ಯವೇ ಇಲ್ಲ. ಚರಂಡಿಗಳನ್ನೇನೊ ನಿರ್ಮಿಸಬಹುದು. ಆದರೆ ಅವುಗಳ ಸಮರ್ಪಕ ನಿರ್ವಹಣೆಯನ್ನು ಯಾರು ಮಾಡುತ್ತಾರೆ? ಈ ಕೊಳಕು ಕೆಲಸಕ್ಕಾಗಿ ಸಾಯಲು ಬೇರೆ ಜನರೇ ಇದ್ದಾರೆ, ನಾವೇಕೆ ತೊಂದರೆ ತೆಗೆದುಕೊಳ್ಳಬೇಕು?