ತಮಿಳುನಾಡಿನ ಮನೀಶ್ ಸುರೇಶ್ಕುಮಾರ್ ಮತ್ತು ಕರ್ನಾಟಕದ ಸೋಹಾ ಸಾದಿಕ್ ನವದೆಹಲಿಯ ಡಿಎಲ್ಟಿಎ ಕಾಂಪ್ಲೆಕ್ಸ್ನಲ್ಲಿ ನಡೆದ 30ನೇ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್ಶಿಪ್ನ ತಮ್ಮ ವಿಭಾಗಗಳಲ್ಲಿ ಮೂರನೇ ಸುತ್ತು ತಲುಪುವ ಮೂಲಕ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ಚಾಂಪಿಯನ್ ಅಗಾಧ ಶಕ್ತಿ ಮತ್ತು ವೇಗವನ್ನು ಪ್ರದರ್ಶಿಸಿ ಒಡಿಶಾದ ದೇಬಾಸಿಸ್ ಸಾಹೂ ಅವರನ್ನು 6-2, 6-1 ನೇರ ಸೆಟ್ಗಳಿಂದ ಸೋಲಿಸಿ ಪಂದ್ಯಾವಳಿಯ ಮೂರನೇ ಸುತ್ತಿಗೆ ಅರ್ಹತೆ ಪಡೆದರು.
ಮತ್ತೊಂದೆಡೆ, ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಮಹಾರಾಷ್ಟ್ರದ ಆಕೃತಿ ಎನ್ ಸೋಂಕುಸಾರೆ ವಿರುದ್ಧ ಸೋಹಾ ಪ್ರಯಾಸದ ಗೆಲುವು ಸಾಧಿಸಿದರು. ನಿಧಾನವಾಗಿ ಆಟ ಆರಂಭಿಸಿದ ನಾಲ್ಕನೇ ಶ್ರೇಯಾಂಕದ ಆಕೃತಿ ಮೊದಲಿಗೆ 3-1 ಮುನ್ನಡೆ ಸಾಧಿಸಿದ್ದರು, ತದನಂತರದಲ್ಲಿ ಸೋಹಾ ಮತ್ತೆ ಉತ್ತಮ ಪ್ರದರ್ಶನ ನೀಡಿ ಸತತ ಐದು ಪಂದ್ಯಗಳನ್ನು ಗೆದ್ದು ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು.
ಎರಡನೇ ಸೆಟ್ನಲ್ಲಿ ಆಕೃತಿ ಅದ್ಭುತ ಕಮ್ಬ್ಯಾಕ್ ಪ್ರದರ್ಶನ ನೀಡುವ ಮೊಲಕ 6-3 ಅಂಕಗಳೊಂದಿಗೆ ಮುನ್ನಡೆದರಾದರು, ಸೋಹಾ ಅವರು ತಮ್ಮ ದೃಢವಾದ ಬೇಸ್ಲೈನ್ ಆಟದ ಮೂಲಕ ತೀಕ್ಷವಾದ ಪ್ರತಿಧಾಳಿಯ ಮೂಲಕ, ನಿರ್ಣಾಯಕ ಪಂದ್ಯದಲ್ಲೂ 6-4 ಅಂಕಗಳೊಂದಿಗೆ ಸೋಲಿಸಿದರು ಮತ್ತು ಕಠಿಣ ಸ್ಪರ್ಧೆಯಲ್ಲಿ 6-3, 3-6, 6-4 ಅಂಕಗಳೊಂದಿಗೆ ಜಯಗಳಿಸಿದರು.
ಡಿಸಿಎಂ ಶ್ರೀರಾಮ್ ಲಿಮಿಟೆಡ್ ಸಹಯೋಗದೊಂದಿಗೆ, ಆಲ್ ಇಂಡಿಯಾ ಟೆನಿಸ್ ಅಸೋಸಿಯೇಷನ್ (ಎಐಟಿಎ) ಮತ್ತು ದೆಹಲಿ ಲಾನ್ ಟೆನಿಸ್ ಅಸೋಸಿಯೇಷನ್ (ಡಿಎಲ್ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್ ಭಾರತದ ಅತಿದೊಡ್ಡ ದೇಶೀಯ ಟೆನಿಸ್ ಚಾಂಪಿಯನ್ಶಿಪ್ ಆಗಿದ್ದು, ದೇಶಾದ್ಯಂತದ ಉನ್ನತ ಸ್ಪರ್ಧಿಗಳಿಗೆ ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಲು ಕೈಬೀಸಿ ಕರೆಯುತ್ತಿದೆ.
ಏತನ್ಮಧ್ಯೆ, ಮಹಾರಾಷ್ಟ್ರದ ಆಕಾಂಕ್ಷಾ ನಿಟ್ಟುರ್ ಕೂಡ ಪಂದ್ಯಾವಳಿಯಲ್ಲಿ ತನ್ನ ಉತ್ತಮ ಫಾರ್ಮ್ ಮುಂದುವರಿಸಿದರು, ಎರಡನೇ ಶ್ರೇಯಾಂಕದ ಸೋಹಿನಿ ಸಂಜಯ್ ಮೊಹಾಂತಿ ಅವರನ್ನು 6-1, 7-6 (2) ನೇರ ಸೆಟ್ಗಳಿಂದ ಸೋಲಿಸಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ತಲುಪಿದರು. ಪಂಜಾಬ್ನ ಸಾಹಿರಾ ಸಿಂಗ್ ತಮ್ಮ ಎರಡನೇ ಸುತ್ತಿನ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದು, ಜೀತೇಶ್ ಕುಮಾರಿಯನ್ನು 6-3, 6-2 ನೇರ ಸೆಟ್ಗಳಿಂದ ಪರಾಭವಗೊಳಿಸಿದರು.
ಮಾಜಿ ಏಷ್ಯನ್ ಗೇಮ್ಸ್ ಪದಕ ವಿಜೇತ ಮತ್ತು ಒಲಿಂಪಿಯನ್ ವಿಷ್ಣುವರ್ಧನ್ ಕೂಡ ಟೂರ್ನಿಯ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ತೆಲಂಗಾಣ ಮೂಲದ ಈ ಆಟಗಾರ ಪುರುಷರ ಸಿಂಗಲ್ಸ್ನಲ್ಲಿ ದೀಪಕ್ ಎ ಅವರನ್ನು 6-1, 6-2 ಅಂತರದಿಂದ ಸೋಲಿಸಿ ತಮ್ಮ ಹುರುಪಿನ ಚಾಕಚಕ್ಯತೆಯನ್ನು ತೋರಿದರು. ಪಶ್ಚಿಮ ಬಂಗಾಳದ ಅಗ್ರ ಶ್ರೇಯಾಂಕಿತ ನಿತಿನ್ ಕುಮಾರ್ ಸಿನ್ಹಾ ಕೂಡ ಮೂರನೇ ಸುತ್ತಿಗೆ ಅರ್ಹತೆ ಪಡೆದಿದ್ದು, ಅವರ ಎದುರಾಳಿ ಸ್ಮಿತ್ ಪಟೇಲ್ ಎರಡನೇ ಸೆಟ್ನಲ್ಲಿ ಗಾಯದ ಕಾರಣ ನಿವೃತ್ತರಾದರು, ಆ ಸಮಯದಲ್ಲಿ ಸ್ಕೋರ್ 6-3, 3-2 ಅಂತರದಲ್ಲಿತ್ತು.
ಪ್ರಮುಖ ಪ್ರಶಸ್ತಿಗಳ ಹೊರತಾಗಿ, ವಿಜೇತರು ಒಟ್ಟು 21.55 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಡೆಯಲಿದ್ದಾರೆ. ಜೂನಿಯರ್ ಆಟಗಾರರಿಗೆ ಕಿಟ್ ಭತ್ಯೆಗಳು ಸಹ ಸಿಗಲಿವೆ. U16 ಮತ್ತು U14 ಸಿಂಗಲ್ಸ್ ಸ್ಪರ್ಧೆಗಳಲ್ಲಿ ವಿಜೇತರು ಮತ್ತು ರನ್ನರ್ ಅಪ್ ಆದವರಿಗೆ ತಲಾ ₹25,000 ಟೆನಿಸ್ ವಿದ್ಯಾರ್ಥಿವೇತನ ದೊರೆಯಲಿದೆ.
16 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಅರ್ಹತಾ ಸುತ್ತಿನ ಮತ್ತು ಮುಖ್ಯ ಸುತ್ತಿನ ಪಂದ್ಯಗಳು ಅಕ್ಟೋಬರ್ 5 ರಿಂದ ಅಕ್ಟೋಬರ್ 11 ರವರೆಗೆ ನಡೆಯಲಿವೆ.