ಕರ್ನಾಟಕದ ನಾಟಕ ಮತ್ತು ಸಿನಿಮಾ ಪ್ರಿಯರಿಗೆ ಗುಬ್ಬಿ ವೀರಣ್ಣ ಎಂಬ ಹೆಸರನ್ನು ಕೇಳಿದ ತಕ್ಷಣವೇ ಮೈರೋಮಾಂಚನವಾಗುತ್ತದೆ ಎಂದರೆ ಅತಿಶಯವಲ್ಲ. ಕನ್ನಡ ರಂಗಭೂಮಿ ಮತ್ತು ಕನ್ನಡದ ಚಲನಚಿತ್ರಗಳ ಆರಂಭದ ದಿನಗಳಲ್ಲಿ ಅವುಗಳಿಗೆ ಕಾಯಕಲ್ಪ ನೀಡಿ ಅದರಲ್ಲೂ ವೃತ್ತಿ ರಂಗಭೂಮಿಗೆ ಶ್ರೇಷ್ಠತೆಯನ್ನು ದೊರಕಿಸಿಕೊಟ್ಟ ಪ್ರಾತಃಸ್ಮರಣಿಯರು ಎಂದರೂ ತಪ್ಪಾಗದು. ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳಾಗಿದ್ದರು. ಅವರೊಬ್ಬ ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿ ಬಹುಮುಖ ಪ್ರತಿಭೆಯಾಗಿದ್ದಲ್ಲದೇ, ತಮ್ಮ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ, ಮೂಲಕ ಸಾವಿರಾರು ಕಲಾವಿದರುಗಳಿಗೆ ಉದ್ಯೋಗವಕಾಶ ಕಲ್ಪಿಸಿ ಕೊಟ್ಟಿದ್ದಲ್ಲದೇ, ಅವರಲ್ಲಿದ್ದ ಸುಪ್ತ ಪ್ರತಿಭೆಯನ್ನು ಹೊರಹಾಕುವ ಸಲುವಾಗಿ ವೃತ್ತಿ ರಂಗಭೂಮಿಯಲ್ಲಿ ನೂರಾರು ಹೊಸ ರಂಗ ಪ್ರಯೋಗಳನ್ನು ಮಾಡುವ ಮೂಲಕ ಇಂದಿಗೂ ಕನ್ನಡಿಗರ ಮನೆ ಮಾತಾಗಿರುವ ಶ್ರೀ ಗುಬ್ಬಿ ವೀರಣ್ಣನವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.
ತುಮಕೂರು ಜಿಲ್ಲೆಯ ಗುಬ್ಬಿ ಎಂಬ ಗ್ರಾಮದಲ್ಲಿ ಅದಾಗಲೇ ಕಲಾವಿದರಾಗಿ, ನಾಟಕ ಕಂಪನಿಯ ಮಾಲಿಕರಾಗಿ ಚಿರಪರಿಚಿತರಾಗಿದ್ದ ಹಂಪಣ್ಣನವರು ಮತ್ತು ರುದ್ರಾಂಬೆ ದಂಪತಿಗಳ ಮಗನಾಗಿ ವೀರಣ್ಣನವರು 1890ರಲ್ಲಿ ಗುಬ್ಬಿಯಲ್ಲಿ ಜನಿಸಿದರು. ವೀರಣ್ಣನವರು ಜನಿಸುವ 6 ವರ್ಷಗಳ ಮುಂಚೆಯೇ ಅಂದರೆ, 1884ರಲ್ಲೇ. ಚಂದ್ರಣ್ಣ ಮತ್ತು ಅಬ್ದುಲ್ ಅಜೀಜ್ ಸಾಹೇಬ್ ಅವರು ಜೊತೆಗೂಡಿ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಎಂಬ ಕಂಪೆನಿ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿರುತ್ತಾರೆ. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುರು ಎನ್ನುವಂತೆ ವೀರಣ್ಣನವರಿಗೆ ಆಟ, ಪಾಠ, ವಿದ್ಯಾಭ್ಯಾಸ ಎಲ್ಲವೂ ತಮ್ಮ ತಂದೆಯವರ ಗುಬ್ಬಿ ಕಂಪೆನಿಯೇ. ರಂಗಭೂಮಿ ಕಲಾವಿದರಿಗೆ ಅಗತ್ಯವೆನಿಸಿದ್ದ ಸಂಗೀತದ ಬಾಲ ಪಾಠ, ಹಾಡುಗಾರಿಕೆ, ತಬಲಾ, ಪಿಟೀಲು ಮುಂತಾದ ವಿದ್ಯೆಗಳನ್ನು ತಮ್ಮ ಕಂಪನಿಯಲ್ಲೇ ಕರಗತ ಮಾಡಿಕೊಳ್ಳ ತೊಡಗಿದ ವೀರಣ್ಣ, ಕೇವಲ ಆರು ವರ್ಷದ ಬಾಲಕನಾಗಿದ್ದಾಗಲೇ 1896ರ ವರ್ಷದಲ್ಲಿಯೇ ತಮ್ಮ ಕಂಪನಿಯಲ್ಲಿ ಬಾಲ ಕಲಾವಿದನಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ವೀರಣ್ಣನವರು ಅಂದಿನಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಅಂದೆಲ್ಲಾ ಪುರುಷರೇ ಸ್ತ್ರೀಪಾತ್ರಗಳನ್ನೂ ನಿರ್ವಹಿಸುತ್ತಿದ್ದ ಕಾಲವಾಗಿದ್ದರಿಂದ ತರುಣಾವಸ್ಥೆಗೆ ಬರುವವರೆಗೂ ವೀರಣ್ಣನವರು ನಿರ್ವಹಿಸುತ್ತಿದ್ದದ್ದು ಸ್ತ್ರೀ ಪಾತ್ರಗಳೇ. ನಂತರ ಗಂಟಲು ಒಡೆದ ಕಾರಣ, ಪುರುಷ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸತೊಡಗಿದರು. ಅವರಿಗೆ 27 ವರ್ಷಗಳಾಗಿದ್ದಾಗ ಅವರ ತಂದೆಯವರು ನಿಧನರಾದ ಕಾರಣ, 1917ರಲ್ಲಿ ವೀರಣ್ಣನವರೇ ತಮ್ಮ ತಂದೆಯವರು ಪ್ರಾರಂಭಿಸಿದ್ದ ಗುಬ್ಬಿ ಕಂಪೆನಿಯ ಮಾಲೀಕರಾಗ ಬೇಕಾಯಿತು. ಅಲ್ಲಿಂದ್ದ ಗುಬ್ಬೀ ವೀರಣ್ಣನವರ ಬದುಕಿನಲ್ಲಿ ಭಾರೀ ಬದಲಾವಣೆಯಾಯಿತು. ಕೇವಲ ಕರ್ನಾಟಕ, ಮಹಾರಾಷ್ಟ್ರ ಮುಂತಾದ ಕಡೆಯಲ್ಲೇ ಪ್ರವಾಸ ಮಾಡುತ್ತಿದ್ದ ತಮ್ಮ ಕಂಪನಿಯನ್ನು ಇಡೀ ದಕ್ಷಿಣ ಭಾರತವಷ್ಟೇ ಅಲ್ಲದೇ ಉತ್ತರ ಭಾರತಕ್ಕೂ ಕನ್ನಡ ರಂಗಭೂಮಿಯ ಕೀರ್ತಿಯನ್ನು ಪಸರಿದರು.

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ನಟಿಯರು, ನಿರ್ದೇಶಕರು, ಸಂಭಾಷಣೆಕಾರರು, ಸಂಗೀತಕಾರಲ್ಲಿ ಅನೇಕರು ಇದೇ ಗುಬ್ಬಿ ಕಂಪನಿಯಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದರು ಎನ್ನುವುದೇ ಗುಬ್ಬಿ ಕಂಪನಿಯ ಹೆಗ್ಗಳಿಕೆಯಾಗಿದೆ. ವರನಟ ರಾಜ್ ಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯನವರೂ ಸಹಾ ಇದೇ ಗುಬ್ಬೀ ಕಂಪನೆಯಲ್ಲಿ ಪಾತ್ರನಿರ್ವಹಿಸುತ್ತಿದ್ದ ಕಾರಣ, ರಾಜ್ ಕುಮಾರು ಮತ್ತು ಅವರ ಸಹೋದರ ವರದಪ್ಪನವರು ಬಾಲ ಕಲಾವಿದರಾಗಿ ಬಣ್ಣ ಹಚ್ಚಿದ್ದೂ ಸಹಾ ಇದೇ ಕಂಪನಿಯಲ್ಲಿಯೇ. ನಟರತ್ನಾಕರ ಹಿರಣ್ಣಯ್ಯನವರೂ ಕೆಲ ವರ್ಷಗಳ ಕಾಲ ಇದೇ ಗುಬ್ಬಿ ಕಂಪೆನಿಯಲ್ಲಿ ಕಲಾವಿದರಾಗಿದ್ದರು. ನಾಡು ಕಂಡ ಶ್ರೇಷ್ಠ, ನಟ, ಸಂಭಾಷಣೆಕಾರ ಮತ್ತು ನಿರ್ದೇಶಕರಾದ, ಎಚ್. ಎಲ್. ಎನ್. ಸಿಂಹ, ಜಿ. ವಿ. ಅಯ್ಯರ್, ಬಿ. ವಿ. ಕಾರಂತ್ ಸಹಾ ಇದೇ ಕಂಪನಿಯವರೇ. ಹುಟ್ಟು ಕಿವುಡರಾಗಿದ್ದರೂ, ಶ್ರೇಷ್ಠ ಹಾಸ್ಯನಟರಾಗಿದ್ದ ಶ್ರೀ ಟಿ. ಎನ್. ಬಾಲಕೃಷ್ಣರವರು ಇದೇ ಕಂಪನಿಯಲ್ಲಿ ಗೇಟ್ ಕೀಪರ್ ಆಗಿ ಸೇರಿಕೊಂಡು ಮುಂದೇ ಶ್ರೇಷ್ಠ ನಟರಾಗಿದ್ದಲ್ಲದೇ, ಮದರಾಸಿನ ಸ್ಟುಡಿಯೋಗಳಿಗೆ ಸಡ್ಡು ಹೊಡೆಯಲೆಂದೇ, ಕನ್ನಡಿಗರೇ ಅಭಿಮಾನ ಪಟ್ಟು ಕೊಳ್ಳುವಂತಹ ಅಭಿಮಾನ್ ಸ್ಟುಡಿಯೋ ಕಟ್ಟಿದಂತಹ ಮಹಾನ್ ವ್ಯಕ್ತಿಗಳಾದರು. ರಾಜ್ ಕುಮಾರ್ ಅವರ ನಟನೆ, ಸ್ಪಷ್ಟ ಸಂಭಾಷಣೆ ಮತ್ತು ಸುಶ್ರಾವ್ಯ ಗಾಯನವನ್ನು ಯಾರಾದರೂ ಹೊಗಳಿದಲ್ಲಿ ಅವರು ನಿಸ್ಸಂಕೋಚವಾಗಿ ಇವೆಲ್ಲವೂ ಗುಬ್ಬಿ ನಾಟಕ ಕಂಪೆನಿಯಲ್ಲಿ ದೊರೆತ ಉತ್ಕೃಷ್ಟವಾದ ತರಭೇತಿ ಮತ್ತು ಅನುಭವ. ಹಾಗಾಗಿ ಇವೆಲ್ಲದರ ಸಂಪೂರ್ಣ ಶ್ರೇಯ ಗುಬ್ಬಿ ಕಂಪನಿಗೇ ಸೇರುತ್ತದೆ ಎನ್ನುತ್ತಿದ್ದರು.





