ಬಹಳ ಹೊತ್ತು ರತ್ನಾ ತನ್ನ ಬಾಯ್ಫ್ರೆಂಡಿಗಾಗಿ ಕಾದು ಕುಳಿತಿದ್ದಳು. ಅಂತೂ ಅವನು ಬರುವಷ್ಟರಲ್ಲಿ ಅರ್ಧ ಗಂಟೆ ತಡವಾಯಿತು. ಕೊನೆಗೂ ಗಿರೀಶ್ ಬಂದಾಗ ರತ್ನಾ ಜೋರಾಗಿ ನಗತೊಡಗಿದಳು. ಬಾಲ್ಡ್ ಆಗಿದ್ದ ಗಿರೀಶ ಅಂದು ಕಾಲರ್ ರಹಿತ ಜ್ಯಾಕೆಟ್ ಧರಿಸಿದ್ದ.
ಗಿರೀಶ್ : ಯಾಕೆ ನಗ್ತಿದ್ದಿ ರತ್ನಾ? ನಾನು ಇವತ್ತು ಚೆನ್ನಾಗಿ ಕಾಣಿಸುತ್ತಿಲ್ಲವೇ?
ರತ್ನಾ : ಬಿಡು ಗಿರಿ, ನೀನು ಕೋಪ ಮಾಡಿಕೊಳ್ತೀಯ.
ಗಿರೀಶ್ : ಇರಲಿ, ಅದೇನೂಂತ ಹೇಳಿಬಿಡು...
ರತ್ನಾ : ಕಿತ್ತುಹೋದ ಬೂಟಿನಿಂದ ಹೆಬ್ಬೆರಳು ಹೊರಬಂದಂತೆ ಕಾಣುತ್ತಿರುವೆ!
ಸುಗುಣಾ ಬಹಳ ಹೊತ್ತಿನಿಂದ ಕೊನೆಯ ಬೆಂಚಿನಲ್ಲಿ ಕುಳಿತು ಬಿಕ್ಕಳಿಸಿ ಅಳುತ್ತಿದ್ದಳು. ಅದನ್ನು ಗಮನಿಸಿದ ಅವಳ ಸಹಪಾಠಿ ವರುಣ್ ಅವಳನ್ನು ಪರಿಪರಿಯಾಗಿ ಸಮಾಧಾನಪಡಿಸಿದ.
ವರುಣ್ : ಸುಗುಣಾ, ಯಾಕಿಷ್ಟು ಅಳುತ್ತಿರುವೆ?
ಸುಗುಣಾ : ಬಹಳ ಕಡಿಮೆ ಮಾರ್ಕ್ಸ್ ಬಂದಿದೆ.
ವರುಣ್ : ಅದಿರಲಿ, ಎಷ್ಟು ಮಾರ್ಕ್ಸ್ ಬಂತು?
ಸುಗುಣಾ : ಕೇವಲ 80%.....
ವರುಣ್ : ಅಯ್ಯೋ ನಿನ್ನ ಮನೆ ಕಾಯೋಗಾ! ಅಷ್ಟು ಮಾರ್ಕ್ಸ್ ಇದ್ದರೆ, ನಾವು ಒಬ್ಬರಲ್ಲ ಇಬ್ಬಿಬ್ಬರು ಹುಡುಗರು ಪಾಸಾಗಿ ಬಿಡುತ್ತಿದ್ದೆ.
ಒಬ್ಬ ನೈಟ್ ವಾಚ್ಮ್ಯಾನ್ಗೆ ಇದ್ದಕ್ಕಿದ್ದಂತೆ ಬೀಟ್ ಮಧ್ಯೆ ಎಲ್ಲಿಂದಲೋ ಒಂದು, ಅಲ್ಲಾವುದ್ದೀನ್ನ ಅದ್ಭುತ ದೀಪದಂಥ ಹಣತೆ ಸಿಕ್ಕಿತು. ಅವನು ಅದನ್ನು ಉಜ್ಜಿ ನೋಡಿದಾಗ, ಅದರಿಂದ ನಿಜಕ್ಕೂ ಭೂತ ಹೊರಬಂದು ನೀನು 3 ಆಸೆಗಳನ್ನು ಕೇಳು, ಅದನ್ನು ನೆರವೇರಿಸುವೆ ಎಂದಿತು. ಅದಕ್ಕೆ ವಾಚ್ಮ್ಯಾನ್ ಹೇಳತೊಡಗಿದ... ``ನನಗೊಂದು ದೊಡ್ಡ ಫುಲ್ ಫರ್ನಿಶ್ಡ್ ಬಂಗಲೆ ಬೇಕು. ಎರಡನೆ ಆಸೆ ಅಂದರೆ, ಅದರ ಮಾಲೀಕ ಈ ವಿಶ್ವದ ಅತಿ ದೊಡ್ಡ ಶ್ರೀಮಂತನಾಗಿರಬೇಕು.''
``ತಥಾಸ್ತು! ನಿನ್ನ ಮೂರನೇ ಕೋರಿಕೆ ಏನು?'' ಭೂತ ಕೇಳಿತು.
ವಾಚ್ ಮ್ಯಾನ್ ಸಂಕೋಚದಿಂದ ಹೇಳಿದ, ``ಏನಿಲ್ಲ, ಈ ಹಳೆ ಮನೆ ಬದಲು ನನ್ನನ್ನು ಆ ಭವ್ಯ ಬಂಗಲೆಯ ಹೊಸ ವಾಚ್ಮ್ಯಾನ್ ಆಗಿ ನೇಮಕ ಮಾಡಿಬಿಡು!''
ದಪ್ಪಗಿದ್ದ ಕಪ್ಪು ಬಣ್ಣದ ಕನಕಾ ಹೊಸದಾಗಿ ಕೊಂಡ ಹಸಿರು ಸೀರೆ ಉಟ್ಟು, ಸೆರಗು ಬೀಸುತ್ತಾ ತನ್ನ ಪ್ರೇಮಿ ಕಿಶೋರ್ ಬಳಿ ವೈಯಾರವಾಗಿ ಕೇಳಿದಳು, ``ಈ ಹೊಸ ಸೀರೆಯಲ್ಲಿ ನಾನು ಹೇಗೆ ಕಾಣ್ತಿದ್ದೀನಿ ಡಿಯರ್?''
ಕಿಶೋರ್ ಮುಖ ಸಿಂಡರಿಸುತ್ತಾ ವರ್ಣಿಸಿದ, ``ಹಸಿರು ಹುಲ್ಲಿನ ನಡುವೆ ಮೇಯುತ್ತಿರುವ ಎಮ್ಮೆಯಂತೆ....!''
ತಂದೆ : ನೋಡಪ್ಪ, ಏನೇ ಓದು... ಅದರಲ್ಲಿ ಮನಸ್ಸನ್ನು ನೆಟ್ಟು ಚೆನ್ನಾಗಿ ಓದಿ ವಿದ್ಯಾವಂತನಾಗು. ಗೊತ್ತಾಯ್ತಾ?
ಮಗ : ಬೀಜ ನೆಟ್ಟರೆ ಮೊಳಕೆ ಸರಿಯಾಗಿ ಬರದಂಥ ಕಲಿಗಾಲವಿದು, ಇನ್ನು ಮನಸ್ಸು ನೆಟ್ಟು ಓದಲಾಗುತ್ತದೆಯೇ?
ಮಾಡರ್ನ್ ಮಮತಾಳನ್ನು ಕಂಡ ಮಹೇಶ ಮೋಹಪರವಶನಾಗಿ ಅವಳಿಗೆ ಪ್ರಪೋಸ್ ಮಾಡಿದ.
ಮಮತಾ : ಅದು ಸರಿ, ಪ್ರೀತಿ ಪ್ರೇಮ ಅಂದರೇನು?
ಮಹೇಶ : ಯಾವ ರೀತಿ ಮರಳು ಸಿಮೆಂಟಿನ ಮಧ್ಯೆ ನೀರು ಬಂಧಕವಾಗಿರುವುದೋ, ಆ ರೀತಿ ನಮ್ಮಿಬ್ಬರ ನಡುವೆ ಪ್ರೀತಿ ಪ್ರೇಮ ಬಾಂಧವ್ಯ ಬೆಸೆಯುತ್ತದೆ.
ಮಮತಾ : ಅಯ್ಯೋ.... ನಿನ್ನ ಮುಖ ನೋಡಿದ್ರೆ ಸಿಮೆಂಟು ಜಲ್ಲಿ ಕೆಲಸ ಮಾಡೋ ತರಹ ಇದೆ, ಏನು ಬೇಡ.... ಇಲ್ಲಿಂದ ಹೋಗು!