ಮಹೇಶ : ಬಾಲ್ಯದಿಂದಲೂ ನಮಗೆ ಕಲಿಸುತ್ತಿದ್ದ ಒಂದು ಪಾಠವನ್ನು ನಾವು ನಿರ್ಲಕ್ಷಿಸಿದ್ದರೆ ಚೆನ್ನಾಗಿತ್ತು ಅನಿಸುತ್ತಿದೆ....
ಸುರೇಶ : ಅದೇನಪ್ಪ ಅಂಥ ಪಾಠ.....?
ಮಹೇಶ : ಯಾವತ್ತೂ ಕಪ್ಪೆಗೆ ಕಲ್ಲು ಹೊಡೆಯಬೇಡಿ, ಮುಂದೆ ಮೂಗಿ ಹೆಂಡತಿ ಸಿಗ್ತಾಳೆ ಅಂತ ಯಾವಾಗಲೂ ಹೆದರಿಸೋರು.
ಸುರೇಶ : ಅದಕ್ಕೇನಿಗ?
ಮಹೇಶ : ಕೆಲವು ಕಪ್ಪೆಗಳಿಗಾದರೂ ಕಲ್ಲು ಹೊಡೆದಿದ್ದರೆ, ಮದುವೆ ಆದಮೇಲೆ ನೆಮ್ಮದಿ ಕಾಣಬಹುದಿತ್ತೇನೋ....
ಗಿರೀಶ : ನಮ್ಮಂಥ ವಿವಾಹಿತರ ಕಷ್ಟ ನಿಮ್ಮಂಥ ಬ್ಯಾಚುಲರ್ಸ್ ಗೆ ಹೇಗಪ್ಪ ಗೊತ್ತಾಗಬೇಕು?
ಸತೀಶ : ಏನಪ್ಪ ನಿನ್ನ ಕಷ್ಟಕೋಟಲೆಗಳು.....?
ಗಿರೀಶ : ಏನೇನು ಅಂತ ಹೇಳುವುದು....? ಒಂದೇ ಎರಡೇ.....? ಗಂಡಸರಿಗೆ ಈ ಮದುವೆಯನ್ನು ನಿಭಾಯಿಸೋದು ಅಂದ್ರೆ ಖಂಡಿತಾ ಸುಲಭವಲ್ಲ, 7 ಕೆರೆ ನೀರು ಕುಡಿದಂತೆ ಅಂದುಕೋ. ಹಸಿ ಮೆಣಸಿನ ಒಂದು ಟಾಫಿ, ಇದನ್ನು ಚೀಪುತ್ತಲೇ ಸವಿಯಬೇಕೇ ಹೊರತು, ಒಂದೇ ಸಲ ತಿಂದು ಅಗಿಯುವಂಥದ್ದಲ್ಲ.......
ರವಿ : ಯಾಕೋ ರಾಜು ಬಹಳ ಬೇಸರಗೊಂಡಿರುವ ಹಾಗೆ ಕಾಣ್ತೀಯಾ?
ರಾಜು : ನೋಡೋ ಮತ್ತೆ.... ನಮ್ಮ ಹಿಂದಿನ ರಸ್ತೆಯ ಹೊಸ ಮನೆಗೆ ಬಂದ ಹುಡುಗಿ ರೀನಾ ಬಹಳ ಕನ್ ಫ್ಯೂಸ್ ಮಾಡ್ತಾಳೆ. ಅವಳು ನನ್ನನ್ನು ನೋಡಿದಾಗೆಲ್ಲ ನಗ್ತಾಳೆ....
ರವಿ : ಇದರಲ್ಲಿ ತಲೆ ಕೆಡಿಸಿಕೊಳ್ಳೋಕೆ ಏನಿದೆ? ನಿನ್ನ ಲವ್ವಿಗೆ ಆಕಿ ಗ್ರೀನ್ ಸಿಗ್ನಲ್ ಕೊಟ್ಟಾಳ......
ರಾಜು : ಬಡ್ಕೊಂಡ್ರು! ಅವಳು ನಸುನಗುತ್ತಾ ನನ್ನನ್ನು ನೋಡ್ತಿದ್ದಾಳೋ ಅಥವಾ ಇವನ ಹುಟ್ಟಿರುವುದು ನೋಡು ಅಂತ ವ್ಯಂಗ್ಯವಾಗಿ ನನ್ನನ್ನು ನೋಡಿ ನಗ್ತಿದ್ದಾಳೋ, ಅರ್ಥ ಆಗ್ತಿಲ್ಲ ಮಾರಾಯ!
ರೇವತಿ : ಅಲ್ಲಾ ರೀ, ಈ ಹೊಸ ಮನೆಗೆ ಬಂದು 6 ತಿಂಗಳಾಯ್ತು. ಆವತ್ತಿನಿಂದ ಪಕ್ಕದ ಮನೆ ಪಂಕಜಾಳನ್ನು ಗಮನಿಸುತ್ತಿದ್ದೇನೆ. ಸಂಜೆ ಆಗುವುದೇ ತಡ, ಅವರ ಯಜಮಾನರು ಆಫೀಸಿನಿಂದ ಬಂದವರೇ ಓಡೋಡಿ ಬಂದು ಹೆಂಡತಿಯನ್ನು ತಬ್ಬಿ, ಮುದ್ದಿಸುತ್ತಾರೆ. ನೀವು ಇದ್ದೀರಿ...... ಶುದ್ಧ ಅರಸಿಕರು! ಅವರು ಮಾಡಿದ್ದನ್ನೇ ನೀವು ಮಾಡಬಾರದೇ?
ಪ್ರಕಾಶ್ : ಅಲ್ಲ ಕಣೆ, ನನಗೆ ಈ ಐಡಿಯಾ ಬರಲಿಲ್ಲ ಅಂದುಕೊಂಡಿದ್ದೀಯಾ? ಒಂದು ದಿನ ಪಂಕಜಾಳ ಗಂಡ ಬರೋದು 10 ನಿಮಿಷ ತಡ ಆಯ್ತು ಅಂತ, ಆಫೀಸಿನಿಂದ ಬಂದ ನಾನೇ ಅವಸರ ಅವಸರದಲ್ಲಿ ಹೋಗಿ ಆಕೆಯನ್ನು ತಬ್ಬಿಕೊಂಡರೆ, ನನ್ನ ಹಿಂದೆ ಬಂದ ಆತ.... ಸಿಟ್ಟಿಗೇಳುವುದೇ?
ಕಮಲಾ ಅಂಗಡಿ ಬೀದಿಯಿಂದ ಮನೆಗೆ ಹಿಂದಿರುಗುತ್ತಿದ್ದಳು. ತರಕಾರಿ ಅಂಗಡಿಯವನು 15 ನಿಮಿಷದಿಂದ ಸತತ ತರಕಾರಿ ಮೇಲೆ ನೀರು ಚಿಮುಕಿಸುತ್ತಿರುವುದನ್ನು ನೋಡಿ ಆಶ್ಚರ್ಯಗೊಂಡಳು.
ಕೊನೆಗೂ ತಡೆಯಲಾರದೆ ಕೇಳಿಯೇಬಿಟ್ಟಳು, ``ಏನಪ್ಪ, ನಿನ್ನ ತರಕಾರಿಗಳೆಲ್ಲ ನಿನ್ನೆಯಿಂದ ನಿದ್ರಿಸುತ್ತಿವೆ ಅನಿಸುತ್ತೆ. ನೀನೂ ಆಗಿನಿಂದ ನೀರು ಚಿಮುಕಿಸುತ್ತಲೇ ಇರುವೆ. ಬೆಂಡೆಕಾಯಿ, ತೊಂಡೆಕಾಯಿಗಳು ಎಚ್ಚರಗೊಂಡಿದ್ದರೆ ಅರ್ಧರ್ಧ ಕಿಲೋ ತೂಗಿ ಕೊಡ್ತೀಯಾ?'' ಅನ್ನುವುದೇ?
ಒಂದು ಎಮ್ಮೆ ಬಹಳ ಗಾಬರಿಯಿಂದ ಕಾಡಿನಲ್ಲಿ ಸತತ ಓಡುತ್ತಿತ್ತು. ದಾರಿಯಲ್ಲಿ ಅದಕ್ಕೆ ಒಂದು ಇಲಿ ಎದುರಾಗಿ ಅಡ್ಡಗಟ್ಟಿತು.
ಇಲಿ : ಏನಾಯ್ತು? ಯಾಕೆ ಹೀಗೆ ಗಾಬರಿಯಿಂದ ಓಡ್ತಾನೇ ಇದ್ದೀಯಾ?