ಏಪ್ರಿಲ್ 13, 1919 ಭಾನುವಾರ ಅಂದರೆ ಇಂದಿಗೆ ಸರಿಯಾಗಿ 107 ವರ್ಷಗಳ ಹಿಂದೆ ಬೈಶಾಖೀ ಹಬ್ಬದ ದಿನ. ಸೌರಮಾನ ಪಂಚಾಂಗದ ಪ್ರಕಾರ ಹೊಸ ವರುಷದ ದಿನ ಅದರಲ್ಲೂ ಪಂಜಾಬಿನ ಸಿಖ್ಖರಿಗೆ ತುಂಬಾ ವಿಶೇಷವಾದ ಹಬ್ಬ. ಎಲ್ಲರೂ ಒಟ್ಟಿಗೆ ಸಂಭ್ರಮಿಸಿಸುವ ಹಬ್ಬ ಅದೇ ಸಮಯದಲ್ಲಿ ದೇಶಾದ್ಯಂತ ಸ್ವಾತತ್ರ್ಯ ಸಂಗ್ರಾಮದ ಕಿಚ್ಚು ಹಬ್ಬಿತ್ತು. ದೇಶಾದ್ಯಂತ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಸ್ಥಳೀಯ ಮುಖಂಡರುಗಳ ನೇತೃತ್ವದಲ್ಲಿ ತಮಗೆ ತೋಚಿದಂತೆ ಬ್ರಿಟಿಷರ ವಿರುದ್ಧ ಹೋರಾಟಗಳನ್ನು ನಡೆಸುತ್ತಿದ್ದರು. ಬ್ರಿಟೀಷರೂ ಸಹಾ ಅಂತಹ ಹೋರಾಟಗಾರರನ್ನು ಹತ್ತಿಕ್ಕುವುದಲ್ಲಿ ಬಹಳ ಕ್ರೂರಿಗಳಾಗಿದ್ದರು. ಅದೇ ರೀತಿ ಇಬ್ಬರು ರಾಷ್ಟ್ರೀಯ ನಾಯಕರಾದ ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚ್ಲೆವ್ ಅವರನ್ನು ಅಂದಿನ ಬ್ರಿಟಿಷ್ ಸರ್ಕಾರ ಬಂಧಿಸಿ ಗಡೀಪಾರು ಮಾಡಿದ್ದರು. ಇದು ಸಹಜವಾಗಿ ಪಂಜಾಬಿಗಳನ್ನು ಕೆರಳಿಸಿತ್ತಾದರೂ, ಅದಕ್ಕಾಗಿ ಹಬ್ಬದ ದಿನ ಸುತ್ತ ಮುತ್ತಲಿನ ಗ್ರಾಮಸ್ಥರು ಜಲಿಯನ್ ವಾಲಾ ಭಾಗ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.
ಇಂತಹ ಪ್ರತಿಭಟನೆಗಳು ನಡೆಯಬಹುದೆಂದು ಅದಾಗಲೇ ಅನುಮಾನಿಸಿದಿದ್ದ ಬ್ರಿಟಿಷ್ ಸರ್ಕಾರ ಆ ದಿನದಂದು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಭೆ ಸಮಾರಂಭ ನಡೆಸಬಾರದು ಎಂಬ ಸುತ್ತೋಲೆಯನ್ನು ಹೊರಡಿಸಿತ್ತಾದರೂ, ಒಂದು ಕಡೆ ರಾಷ್ಟ್ರೀಯ ನಾಯಕರ ಗಡಿಪಾರು ದುಖಃ ಮತ್ತೊಂದು ಕಡೆ ಬೈಸಾಖೀ ಹಬ್ಬದ ಸಂಭ್ರಮದಲ್ಲಿದ್ದ ಬಹುತೇಕ ಸ್ಥಳೀಯರಿಗೆ ಈ ಸುತ್ತೋಲೆ ಜಾರಿಯಾದದ್ದು ಗೊತ್ತೇ ಇರಲಿಲ್ಲ.

ಪೂರ್ವ ನಿರ್ಧಾರದಂತೆ ಸುಮಾರು ಆರೇಳು ಎಕರೆ ವಿಶಾಲವಾದ ಸುತ್ತಲೂ ಎತ್ತರವಾದ ಗೋಡೆಗಳಿಂದ ಆವೃತವಾಗಿದ್ದ ಕೇವಲ ಒಂದೇ ಒಂದು ಮುಖ್ಯ ದ್ವಾರದ ಮೂಲಕ ಪ್ರವೇಶ ಮಾಡಬಹುತಾಗಿತ್ತಾ ಜಲಿಯನ್ ವಾಲಾ ಉದ್ಯಾನವನದಲ್ಲಿ ಆ ದಿನ ಹೊಸಾವರ್ಷದ ಸಂಭ್ರಮ ಮತ್ತು ಶಾಂತಿಯುತ ಪ್ರತಿಭಟನೆಯನ್ನಾಚರಿಸಲು ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಸರಿ ಸುಮಾರು ಹತ್ತು ಹದಿನೈದು ಸಾವಿರ ಜನ ಸೇರಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ಅಲ್ಲೊಂದು ಕಂಡೂ ಕೇಳರಿಯದ ಘನ ಘೋರ ಇತಿಹಾಸಕ್ಕೆ ತಾವೇ ಸಾಕ್ಷಿಗಳಾಗುತ್ತೇವೆ ಇಲ್ಲವೇ ಇತಿಹಾಸದ ಭಾಗ ವಾಗುತ್ತೇವೆ ಎಂಬ ಸಣ್ಣ ಕುರುಹೂ ಯಾರಿಗೂ ಇರಲಿಲ್ಲ .
ತಮ್ಮ ಆದೇಶವನ್ನೂ ಧಿಕ್ಕರಿ ಸುಮಾರು ಹತ್ತು ಹದಿನೈದು ಸಾವಿರ ಜನರು ಪ್ರತಿಭಟನೆಗೆ ಜಲಿಯನ್ ವಾಲಾ ಭಾಗ್ ನಲ್ಲಿ ಸೇರಿರುವ ವಿಷಯ ಬ್ರಿಟಿಷ್ ಸೈನ್ಯಾಧಿಕಾರಿ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಕಿವಿಗೆ ಬಿದ್ದ ತಕ್ಷಣವೇ, ಆತ ಕೆಂಡಾಮಂಡಲನಾಗಿ ಹೋದ. ಭಾರತೀಯರಿಗೆ ತಕ್ಕ ಪಾಠ ಕಲಿಸಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ ಜನರಲ್ ಡೈಯರ್ ಸುಮಾರು ಐವತ್ತು ಮಂದಿ ಬಂಧೂಕುಧಾರೀ ಸೈನಿಕರನ್ನು ಕರೆದುಕೊಂಡು ಹೋಗಿ ಜಲಿಯನ್ ವಾಲಾ ಭಾಗ್ ಪ್ರವೇಶ ದ್ವಾರದ ಬಳಿ ನಿಲ್ಲಿಸಿ ಏಕಾ ಏಕಿ ಫೈಯರ್ ಎಂಬ ಆಜ್ಞೆಯನ್ನು ನೀಡಿಯೇ ಬಿಟ್ಟ. ಜನರಲ್ ಡೈಯರ್ ಆಜ್ಞೆಗೇ ಕಾಯುತ್ತಿದ್ದ ಆ ಸೈನಿಕರು ಆ ಮುಗ್ಧ ಜನರ ಮೇಲೆ ಯದ್ವಾ ತದ್ವಾ ಗುಂಡು ಹಾರಿಸಿಯೇ ಬಿಟ್ಟರು. ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ಒಂದು ಕಡೆ ಗುಂಡಿನ ಭೋರ್ಗರೆಯುವ ಸದ್ದಾದರೇ, ಮತ್ತೊಂದು ಕಡೆ ಗುಂಡು ತಗುಲಿ ಪ್ರಾಣ ಬಿಡುತ್ತಿದ್ದವರ ನರಳಾಟ ಚೀರಾಟ.








