ಅಧ್ಯಾಪಕಿಯಾಗಿದ್ದ ಅವರು ರಂಗಾಸಕ್ತಿಯಿಂದ ಅವಧಿಗೆ ಮುಂಚೆಯೇ ವೃತ್ತಿಗೆ ರಾಜೀನಾಮೆ ನೀಡಿ ಹವ್ಯಾಸಿ ರಂಗಭೂಮಿಯಲ್ಲಿಯೇ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನದಿಂದ ಗಮನಸೆಳೆದು, ಸದ್ಯ ಎರಡು ಪಾತ್ರಗಳಿರುವ ತಿಳಿ ಹಾಸ್ಯದ ನಾಟಕಗಳನ್ನು ರಂಗ ಪ್ರಯೋಗ ಮಾಡಿ ತಮ್ಮ ವೈಶಿಷ್ಟ್ಯತೆಯ ಛಾಪು ಮೂಡಿಸುತ್ತಿದ್ದಾರೆ.

ಲಕ್ಷ್ಮೀ ಚಂದ್ರಶೇಖರ್‌…  ಏಕಪಾತ್ರಾಭಿನಯದಿಂದ ಕನ್ನಡ ರಂಗಭೂಮಿಯಲ್ಲಿ ಮನೆ ಮಾತಾದವರು. ಅವರು ಮೂಲತಃ ಪ್ರಾಧ್ಯಾಪಕಿ. ಆದರೆ ಅವರನ್ನು ಹೆಚ್ಚು ಸೆಳೆದದ್ದು ಕನ್ನಡ ರಂಗಭೂಮಿ. ಕನ್ನಡದ ಜೊತೆಗೆ ಆಂಗ್ಲ ನಾಟಕಗಳಲ್ಲೂ ಅಭಿನಯಿಸುತ್ತಿರುವುದು ಅವರ ವಿಶೇಷತೆಯೆನ್ನಬಹುದು.

ರಂಗಾಸಕ್ತಿ ಬೆಳೆದದ್ದು

ಲಕ್ಷ್ಮೀಯವರು ಕಲಾಪೋಷಕ ಕುಟುಂಬದಲ್ಲಿ ಬೆಳೆದವರು. ಅವರ ತಂದೆಗೆ ಸಂಗೀತ ನಾಟಕಗಳೆಂದರೆ ಪಂಚಪ್ರಾಣ. ಹೀಗಾಗಿ ಲಕ್ಷ್ಮೀಯವರು ರಂಗಭೂಮಿಯಲ್ಲಿ ಹಾಗೂ ಅವರ ಸೋದರ ಎಚ್‌.ಕೆ. ನರಸಿಂಹಮೂರ್ತಿ ವಯೋಲಿನ್‌ನಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು.

ಚನ್ನರಾಯಪಟ್ಟಣದಲ್ಲಿ ವಾಸವಾಗಿದ್ದ ಅವರ ಮನೆ ಪಕ್ಕದಲ್ಲೇ ನಾಟಕ ಕಂಪನಿಗಳು ಟೆಂಟ್‌ ಹಾಕುತ್ತಿದ್ದವು. ಹೀಗಾಗಿ ಲಕ್ಷ್ಮೀಯವರಿಗೆ 3-4 ತಿಂಗಳ ಕಾಲ ಮನರಂಜನೆಯೋ ಮನರಂಜನೆ! ನಾಟಕದ ರಿಹರ್ಸಲ್ ನೋಡಲು ಆಗಾಗ ಅಲ್ಲಿಗೆ ಹೋಗುತ್ತಿದ್ದರು. ಕೆಲವೊಂದು ಸಲ ಬಿದಿರಿನ ತಟ್ಟಿಯ ಸಂದಿಯಿಂದ ಅಲ್ಲಿನ ಚಟುವಟಿಕೆಗಳನ್ನು ಗಮನವಿಟ್ಟು ನೋಡುತ್ತಿದ್ದರು.

ನಾಟಕ ತಂಡದವರ ಸಂಭಾಷಣೆ ಮನೆಯಲ್ಲೂ ಸುಲಭವಾಗಿ ಕೇಳಿಸುತ್ತಿದ್ದುದರಿಂದ, `ಕಿತ್ತೂರ ಚೆನ್ನಮ್ಮ’, `ದಾನಶೂರ ಕರ್ಣ’ ಮುಂತಾದ ನಾಟಕಗಳ ಸಂಭಾಷಣೆಯನ್ನು ಅವರು ಅದೇ ರೋಷಾವೇಶದಿಂದ ಹೇಳಿ ಮನೆಯವರನ್ನೆಲ್ಲ ಚಕಿತಗೊಳಿಸುತ್ತಿದ್ದರು.

ಹೈಸ್ಕೂಲ್ ಮುಗಿಸುವ ಹೊತ್ತಿಗೆ ಅವರಿಗೆ ತ್ರಿವೇಣಿಯವರ ಕಾದಂಬರಿಗಳನ್ನು ಓದುವ ಅಭ್ಯಾಸ ಚೆನ್ನಾಗಿಯೇ ಅಂಟಿಕೊಂಡಿತ್ತು. `ಕಂಕಣ’ ಮತ್ತು `ಮುಕ್ತಿ’ ಈ ಎರಡು ಕಾದಂಬರಿಗಳಂತೂ ಅವರ ಮನಸ್ಸನ್ನು ಅಪಾರವಾಗಿ ಸೆಳೆದಿದ್ದವು. ಅವು ಹಾಸ್ಟೆಲ್‌ನಲ್ಲಿ ಇರುವ ಹುಡುಗಿಯರ ಜೀವನದ ಕುರಿತಾಗಿ ಬರೆದಂತಹ ಕಾದಂಬರಿಗಳು. ತಾವು ಹಾಸ್ಟೆಲ್‌ನಲ್ಲಿ ಇರಬೇಕೆಂದು ಅವರು ಆಗಲೇ ಅಂದುಕೊಳ್ಳುತ್ತಿದ್ದರು. ಚನ್ನರಾಯಪಟ್ಟಣದ ಅವರ ಅಜ್ಜಿ ಅಂದರೆ ತಂದೆಯ ತಾಯಿ ತುಂಬಾ ವಿಚಿತ್ರ ಸ್ವಭಾವದವರು. ಮನೆಯ ಯಾರೊಬ್ಬರಿಗೂ ಸಿನಿಮಾ, ನಾಟಕ ನೋಡಲು ಅವಕಾಶ ಕೊಡುತ್ತಿರಲಿಲ್ಲ. ಈ ಕಾರಣದಿಂದಲೇ ಅವರು ಹೈಸ್ಕೂಲ್ ಮುಗಿಯುತ್ತಿದ್ದಂತೆ ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ (ಹಾಸ್ಟೆಲ್ ‌ವಾಸ) ಆರಂಭಿಸಿದರು.

ಕೈ ಬೀಸಿ ಕರೆದ `ಸಮತೆಂತೋ’

photo.Aadaddella

ಕಾಲೇಜ್‌ ಡೇ ಬರುತ್ತಿದ್ದಂತೆ ಅವರು ಹುಡುಗಿಯರದ್ದೇ ಆದ ತಂಡ ಕಟ್ಟಿಕೊಂಡು ಯಾವುದಾದರೂ ನಾಟಕ ಆಡುತ್ತಿದ್ದರು. ಲಕ್ಷ್ಮೀಯವರು ಎತ್ತರದ ವ್ಯಕ್ತಿತ್ವದವರಾದ್ದರಿಂದ, ಅವರಿಗೆ ಪುರುಷನ ಪಾತ್ರವನ್ನೇ ಮಾಡಬೇಕಾಗಿ ಬರುತ್ತಿತ್ತು. ಪಾತ್ರ ಯಾವುದೇ ಇರಲಿ, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆನ್ನುವುದೇ ಅವರ ಅಭಿಲಾಷೆಯಾಗಿರುತಿತ್ತು.

ಹಾಸ್ಟೆಲ್‌ನಲ್ಲಿ ಇದ್ದದ್ದರಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಅವರಿಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಮೈಸೂರಿನಲ್ಲಿ ಆಗ ಪ್ರಸಿದ್ಧವಾಗಿದ್ದ `ಸಮತೆಂತೋ’ (ಸರಸ್ವತಿಪುರಂ ಮಧ್ಯದ ತೆಂಗಿನ ತೋಟ) ಅವರ ನಾಟಕ ಚಟುವಟಿಕೆಗೆ ವೇದಿಕೆಯಾಗಿ ದೊರಕಿತು. ಆ ಸಂಸ್ಥೆಯಲ್ಲಿ ಆಗ ಬ್ಯಾಂಕ್‌ ಉದ್ಯೋಗಿಗಳು, ಕಾಲೇಜು ಉಪನ್ಯಾಸಕರು ಹಾಗೂ ಲೇಖಕರೇ ಹೆಚ್ಚಿನ ಪ್ರಮಾಣದಲ್ಲಿದ್ದರು. ಲಕ್ಷ್ಮೀ ಆಗ ಇನ್ನೂ ವಿದ್ಯಾರ್ಥಿನಿ. `ಸಮತೆಂತೋ’ ವತಿಯಿಂದ ಪ್ರದರ್ಶಿತವಾದ ಎ.ಎನ್‌. ಮೂರ್ತಿರಾಯರ `ಆಷಾಢಭೂತಿ’ ನಾಟಕದಲ್ಲಿ ಅಭಿನಯಿಸುವ ಅವಕಾಶ ದೊರಕಿತು. ಅದರಲ್ಲಿ ಅವರಿಗೆ ದೊರೆತದ್ದು ಬೋಳು ತಲೆಯ ಅಜ್ಜಿಯ ಪಾತ್ರ. ಚನ್ನರಾಯಪಟ್ಟಣದ ತಮ್ಮ ಅಜ್ಜಿಯನ್ನೇ ಹೋಲುವಂತಹ ಪಾತ್ರ ಅದಾಗಿದ್ದರಿಂದ ಅವರು ಅದರಲ್ಲಿ ಲೀವಾಜಾಲವಾಗಿ ಅಭಿನಯಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡರು. 7 ವರ್ಷದ ತಮ್ಮ ಹಾಸ್ಟೆಲ್ ಜೀವನದಲ್ಲಿ ಅವರು `ಕದಡಿದ ನೀರು,’ `ಬಹಾದ್ದೂರ್‌ ಗಂಡು,’ `ಮೃಚ್ಛಕಟಿಕ’ ಮುಂತಾದ ನಾಟಕಗಳಲ್ಲಿ ಗಮನಸೆಳೆಯುವ ಅಭಿನಯ ನೀಡಿದರು.

ಉಪನ್ಯಾಸಕಿಯಾಗಿ……

photo.kaveri

ಮೈಸೂರಿನಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಹಾಸನದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ನೇಮಕಗೊಳ್ಳುವುದರ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅದೇ ವರ್ಷ ಅವರು ಭರತನಾಟ್ಯ ಕೂಡ ಕಲಿತರು. ಆದರೆ ಅವರಿಗೆ ರಂಗಭೂಮಿಯ ಕಡೆ ಸೆಳೆತ ಇದ್ದುದರಿಂದ ಭರತನಾಟ್ಯದಲ್ಲಿ ಮುಂದುವರಿಯಲು ಇಷ್ಟಪಡಲಿಲ್ಲ.

ಆತುರಾತುರದ ಮದುವೆ

ಈ ಮಧ್ಯೆ ಅವರಿಗೆ ಮದುವೆ ಪ್ರಸ್ತಾಪವೊಂದು ಬಂದಿತ್ತು. ಆ ಮದುವೆ ಪ್ರಸ್ತಾಪ ತಂದವರು ಬೇರಾರೂ ಅಲ್ಲ, ಹೆಸರಾಂತ ಸಾಹಿತಿ ಡಾ. ಯು.ಆರ್‌. ಅನಂತಮೂರ್ತಿ. ಒಂದೆಡೆ ಅವರು ಲಕ್ಷ್ಮೀಯವರಿಗೆ ಪ್ರಾಧ್ಯಾಪಕರಾಗಿದ್ದರೆ, ಇನ್ನೊಂದೆಡೆ ಬಿ.ಕೆ. ಚಂದ್ರಶೇಖರ್‌ಅವರಿಗೂ ಪ್ರಾಧ್ಯಾಪಕರಾಗಿದ್ದರು.

ಚಂದ್ರಶೇಖರ್‌ ಆಗ ಇಂಗ್ಲೆಂಡ್‌ನಲ್ಲಿ ಪಿ.ಎಚ್‌.ಡಿ. ಮಾಡುತ್ತಿದ್ದರು. ಅವರು ಬೇಗ ವಿದೇಶಕ್ಕೆ ತೆರಳಬೇಕಾಗಿದ್ದರಿಂದ ಆತುರಾತುರದಲ್ಲಿ ಮದುವೆ ನಿರ್ಧಾರವಾಯಿತು. ಅಣ್ಣನ ಮದುವೆ ಅದೇ ಆಗ ಮುಗಿದಿತ್ತು. ಅದಾದ 15 ದಿನದಲ್ಲೇ ಇವರ ಮದುವೆಯಾಯಿತು.

ಮದುವೆಯ ಬಳಿಕ ಪತಿಯ ಜೊತೆ ಇಂಗ್ಲೆಂಡಿಗೆ ಪಯಣ. `ಮನೆಯಲ್ಲಿ ಏಕಾಂಗಿಯಾಗಿ ಕುಳಿತುಕೊಳ್ಳುವುದರ ಬದಲು ಏನನ್ನಾದರೂ ಮಾಡು,’ ಎಂದು ಗಂಡ ಚಂದ್ರಶೇಖರ್‌ ಪ್ರೋತ್ಸಾಹ ನೀಡಿದ್ದರಿಂದ ಅವರು ಲೀಡ್ಸ್ ಯೂನಿವರ್ಸಿಟಿಯಿಂದ ಇಂಗ್ಲಿಷ್‌ನಲ್ಲಿ ಮತ್ತೊಂದು ಎಂ.ಎ. ಮಾಡಿದರು. ಬಿಡುವಿದ್ದಾಗೆಲ್ಲ ಗಂಡ ಹೆಂಡತಿ ಲಂಡನ್‌ನಲ್ಲಿ ನಾಟಕಗಳನ್ನು ನೋಡಲು ಹೋಗುತ್ತಿದ್ದರು. ಅಲ್ಲಿನ ಸ್ತ್ರೀ ಪಾತ್ರಧಾರಿಗಳ ‘ಮುಕ್ತ ಅಭಿನಯ’ ಅವರಿಗೆ ಅಷ್ಟಿಷ್ಟು ಭಯವನ್ನುಂಟು ಮಾಡಿತ್ತು. ನಾಟಕದ ಬಗೆಗೇ ಎಂ.ಎ. ಮಾಡಬೇಕೆಂದಿದ್ದ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತ್ತು. ಇಂಗ್ಲೆಂಡ್‌ನಲ್ಲಿದ್ದ ಎರಡೂವರೆ ವರ್ಷ ಕಾಲದಲ್ಲಿ ಅವರು ಅನೇಕ ಸಲ ಶೇಕ್ಸ್ ಪಿಯರ್‌ನ ಜನ್ಮಸ್ಥಳಕ್ಕೂ ಹೋಗಿ ಅನೇಕ ನಾಟಕಗಳನ್ನು ನೋಡಿ ಬಂದಿದ್ದರು. ಭಾರತಕ್ಕೆ ವಾಪಸ್‌ ಬಂದ ಬಳಿಕ ಲಕ್ಷ್ಮೀಯವರು ಪುನಃ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತುರ್ತು ಪರಿಸ್ಥಿತಿ ಜಾರಿಯಾಗಿದ್ದ ಕಾಲವದು. ಅದನ್ನು ವಿರೋಧಿಸಿ ಮಾಡಿದ ನಾಟಕದಲ್ಲಿ ಅವರಿಗೆ ಆಸ್ತಮಾ ಪೀಡಿತ ಮಹಿಳೆಯ ಪಾತ್ರ ದೊರಕಿತ್ತು.

ಸಮುದಾಯದ ನಂಟು

 

ಪ್ರೊ. ಬಿ.ಕೆ. ಚಂದ್ರಶೇಖರ್‌ ಅವರು `ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌’ನಲ್ಲಿ ಪ್ರೊಫೆಸರ್‌ ಆಗಿ ನೇಮಕಗೊಂಡಿದ್ದರಿಂದ ಬೆಂಗಳೂರಿಗೆ ಬರಬೇಕಾಯಿತು. ಇಲ್ಲಿ ಯಾವ ನಾಟಕ ತಂಡ ಸೇರಿಕೊಳ್ಳಬೇಕು ಎಂದು ವಿಚಾರಿಸುತ್ತಿದ್ದಾಗ, ಯಾರೋ `ಸಮುದಾಯ’ದ ಹೆಸರು ಸೂಚಿಸಿದರು. ಪ್ರಸನ್ನ ಅವರನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಭೇಟಿಯಾಗಿ `ನಿಮ್ಮ ತಂಡದಲ್ಲಿ ನನಗೂ ಸ್ಥಾನ ದೊರಕಬಹುದೆ?’ ಎಂದು ಕೇಳಿದರು. ಆಗ ಪ್ರಸನ್ನ `ಗೆಲಿಲಿಯೊ’ ನಾಟಕದ ರಿಹರ್ಸಲ್‌ನಲ್ಲಿ ಮಗ್ನರಾಗಿದ್ದರು. ಅವರು ಲಕ್ಷ್ಮೀಯವರಿಗೆ `ಗೆಲಿಲಿಯೊ’ನ ಮಗಳ ಪಾತ್ರ ಕೊಟ್ಟು ತಕ್ಷಣ ರಿಹರ್ಸಲ್ ಮಾಡಿಸಿಯೇಬಿಟ್ಟರು.

ಆಗ `ಸಮುದಾಯ’ದ ನಾಟಕಗಳಲ್ಲಿ ಭಾರ್ಗವಿ ನಾರಾಯಣ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಅವರು ಎಲ್ಐಸಿಯಲ್ಲಿ ಉನ್ನತ ಹುದ್ದೆಯಲ್ಲಿದ್ದುದರಿಂದ ಎಷ್ಟೋ ಸಲ ರಿಹರ್ಸಲ್‌ಗೆ ಬರಲಾಗುತ್ತಿರಲಿಲ್ಲ. ಹೀಗೆ ಕ್ರಮೇಣ ಅವರು ವಹಿಸುತ್ತಿದ್ದ ಮುಖ್ಯ ಪಾತ್ರಗಳು ಲಕ್ಷ್ಮೀಯವರಿಗೆ ದೊರಕತೊಡಗಿದವು. `ಸಮುದಾಯ’ದೊಂದಿಗಿನ 20 ವರ್ಷದ ಒಡನಾಟದಲ್ಲಿ ಅವರು ಅಭಿನಯಿಸಿದ ಕೆಲವು ಪ್ರಮುಖ ನಾಟಕಗಳೆಂದರೆ, `ದಂಗೆಯ ಮುಂಚಿನ ದಿನಗಳು,’ `ಹುತ್ತ ಬಡಿದಾಗ,’ `ಮಹಾಚೈತ್ರ’ ಮುಂತಾದವು.

ಬೆಂಗಳೂರಿಗೆ ಬಂದ ಹೊಸದರಲ್ಲಿ ಅವರು ವಿಜಯಾ ಕಾಲೇಜಿನಲ್ಲಿ ಒಂದು ವರ್ಷ ಉಪನ್ಯಾಸಕಿಯಾಗಿ ತಾತ್ಕಾಲಿಕ ಸೇವೆ ಸಲ್ಲಿಸಿದರು. ಬಳಿಕ ರಾಜಾಜಿನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ ನೇಮಕಗೊಂಡರು. ಕಾಲೇಜು ಪಾಠ ಹಾಗೂ ನಾಟಕಗಳ ರಿಹರ್ಸಲ್‌ಗಳಿಗೆ ಸಮಯ ಹೊಂದಿಸಿಕೊಳ್ಳಲು ಕಷ್ಟವಾಗತೊಡಗಿದಾಗ ಅಲ್ಲಿ ರಾಜೀನಾಮೆ ನೀಡಿ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜು ಸೇರಿದರು. ಆಗ ಅಲ್ಲಿ ಪ್ರಾಚಾರ್ಯರಾಗಿದ್ದವರು ಚಿ.ನ. ಮಂಗಳಾ. ಅವರು ನಾಟಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಅಲ್ಲಿ ಲಕ್ಷ್ಮೀಯವರು ಥಿಯೇಟರ್‌ ಕ್ಲಬ್‌ ಒಂದನ್ನು ಹುಟ್ಟುಹಾಕಿದರಲ್ಲದೆ ಪ್ರಮೋದ್‌ ಶಿಗ್ಗಾಂವ್‌, ಸುರೇಶ್‌ ಅನಗಳ್ಳಿಯಂತಹ ಪ್ರಸಿದ್ಧ ನಿರ್ದೇಶಕರನ್ನು ಕರೆಸಿ ವಿದ್ಯಾರ್ಥಿಗಳಿಂದ ಅನೇಕ ನಾಟಕಗಳನ್ನು ಆಡಿಸಿದರು.

ಕಿರುತೆರೆಗೆ ಪ್ರವೇಶ

ಎನ್‌ಎಂಕೆಆರ್‌ವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅವರು ರಂಗ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಅಭಿನಯ ಸಾಮರ್ಥ್ಯ ಗಮನಿಸಿ ಟಿ.ವಿ. ಕಾರ್ಯಕ್ರಮಗಳಲ್ಲಿ ಅಭಿನಯಿಸಲು ಕರೆ ಬರತೊಡಗಿದವು. `ಕೆರೆಗೆ ಹಾರ’ ಅವರು ಅಭಿನಯಿಸಿದ ಕಿರುತೆರೆಯ ಪ್ರಥಮ ನಾಟಕ. ಇದರ ನಿರ್ದೇಶಕರು ಟಿ.ಎನ್‌. ನರಸಿಂಹನ್‌. ಬಳಿಕ ಅವರದೇ ನಿರ್ದೇಶನದ `ಕಾಮನಬಿಲ್ಲು’ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.

ಅಲ್ಲಿಂದಾಚೆಗೆ ಬಂದ ಧಾರಾವಾಹಿಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ಟಿ.ಎನ್‌. ಸೀತಾರಾಮ್ ನಿರ್ದೇಶನದ `ಮಾಯಾಮೃಗ’ದಲ್ಲಿ ಶಾಸ್ತ್ರೀಯವರ ಹೆಂಡತಿಯ ಪಾತ್ರ. ನಂತರ ಬಂದ ಗಿರೀಶ್‌ ಕಾಸರವಳ್ಳಿಯವರ `ಗೃಹಭಂಗ’ ಧಾರಾವಾಹಿಯ ಗಂಗಮ್ಮನ ಪಾತ್ರವಂತೂ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಜನ ಅವರನ್ನು ಈಗಲೂ ಅದೇ ಪಾತ್ರದಿಂದ ಗುರುತಿಸುತ್ತಾರೆ.

ಏಕಪಾತ್ರಾಭಿನಯದತ್ತ…..

1998ರಲ್ಲಿ ಪ್ರೋ. ಲಕ್ಷ್ಮೀ ಚಂದ್ರಶೇಖರ್‌ ಅವರು ಅಂತಾರಾಷ್ಟ್ರೀಯ ಶೇಕ್ಸ್ ಪಿಯರ್‌ ಕಾನ್‌ಫರೆನ್ಸಿಗೆಂದು ವಿದೇಶಕ್ಕೆ ಹೋಗಿದ್ದರು. ಆಗ ಅವರಿಗೆ ಹಲವು ಪಾತ್ರಗಳನ್ನು ಒಬ್ಬರೇ ಯಶಸ್ವಿಯಾಗಿ ನಿರ್ವಹಿಸಬೇಕೆಂಬ ಯೋಚನೆ ಮೂಡಿತ್ತು. ಅವರ ಯೋಚನೆಗೆ ಅಕ್ಷರ ರೂಪ ಕೊಟ್ಟವರು ಶಶಿಧರ್‌ ಬಾರಿಘಾಟ್‌. ಪುರಾಣ ಕಾಲದಿಂದ ತೀರ ಇತ್ತೀಚಿನವರೆಗೆ ಹೆಣ್ಣು ಸವೆಸಿದ ದಾರಿಯನ್ನು ಸೂಚಿಸುವ `ಹೆಣ್ಣಲ್ಲಿ’ ನಾಟಕ ಲಕ್ಷ್ಮೀಯವರ ಹೊಸದೊಂದು ಪ್ರಯತ್ನಕ್ಕೆ ಸಾಕ್ಷಿಯಾಯಿತು. ಅಮೆರಿಕದಲ್ಲಿ ಇದು ಪ್ರಥಮ ಪ್ರದರ್ಶನ ಕಂಡಿರುವುದು ವಿಶೇಷ. ಬಳಿಕ ಬೇರೆ ನಗರಗಳಲ್ಲೂ ಮೂರು ಪ್ರದರ್ಶನ ಕಂಡಿತು.

`ಹೆಣ್ಣಲ್ಲಿ’ ನಾಟಕ ಬಳಿಕ ಆಂಗ್ಲ ಭಾಷೆಗೂ ರೂಪಾಂತರಗೊಂಡಿತು. ಆದರೆ ಅದರಲ್ಲಿ ಮೂಲದಲ್ಲಿದ್ದ ಕೆಲವು ಪಾತ್ರಗಳು ಹೋಗಿ ಬೇರೆ ಪಾತ್ರಗಳು ಸೃಷ್ಟಿಗೊಂಡಿದ್ದವು. `ಜಸ್ಟ್ ಎ ವುಮನ್‌’ ಹೆಸರಿನ ಈ ನಾಟಕದಲ್ಲಿ ರೂಪ್‌ಕಂರ್‌ ಹಾಗೂ ಬಂರಿದೇವಿ ಪಾತ್ರಗಳಿದ್ದವು. ಬದಲಾವಣೆಯ ಈ ತಂತ್ರ ಬಹಳ ಯಶಸ್ವಿ ಎನಿಸಿತು. ಬಳಿಕ `ಹೆಣ್ಣಲ್ಲಿ’ಯಲ್ಲೂ ಇವೇ ಪಾತ್ರಗಳು ಪ್ರತ್ಯಕ್ಷಗೊಂಡವು. ಅದಾದ ಬಳಿಕ ಲಕ್ಷ್ಮೀಯವರು `ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯನ್ನು ಏಕವ್ಯಕ್ತಿ ಕಲಾ ಪ್ರದರ್ಶನಕ್ಕೆ ಆಯ್ದುಕೊಂಡರು. ಅದನ್ನು ರಂಗರೂಪಕ್ಕೆ ತರಲು ಅವರಿಗೆ 6 ತಿಂಗಳುಗಳೇ ಬೇಕಾದವು. ಲಕ್ಷ್ಮೀಯವರ ಈ ಪ್ರಯತ್ನ ಸ್ವತಃ ಕಂಬಾರರಿಗೂ ಬಹಳ ಇಷ್ಟವಾಯಿತು. `ಲೇಡಿ ಮೈನಸ್‌ ಮ್ಯಾಕ್‌ಬೆತ್‌’ ಎಂಬ ನಾಟಕದ ಆಯ್ದ ಭಾಗವನ್ನು ರೂಪಾಂತರ ಮಾಡಿಕೊಂಡು ಏಕವ್ಯಕ್ತಿ ಪ್ರದರ್ಶನಕ್ಕೆ ತಂದು ಪ್ರಶಂಸೆಗೆ ಪಾತ್ರರಾದರು.

ಕ್ರಿಯೇಟಿವ್ ‌ಥಿಯೇಟರ್‌

ತಮ್ಮದೇ ಆದ ನಾಟಕ ತಂಡವೊಂದನ್ನು ಕಟ್ಟಬೇಕೆಂಬ ಕನಸು ಪ್ರೊ. ಲಕ್ಷ್ಮೀ ಚಂದ್ರಶೇಖರ್‌ ಅವರಿಗೆ ಮೊದಲಿನಿಂದಲೇ ಇತ್ತು. ಆ ಕನಸು ನನಸಾದದ್ದು 2005ರಲ್ಲಿ. ತಮ್ಮ ತಂಡದ ನಾಟಕಗಳಲ್ಲಿ ಸದಾ ಹೊಸತನದ ಸ್ಪರ್ಶವಿರಬೇಕು, ಕ್ರಿಯಾಶೀಲತೆ ಇರಬೇಕು ಎಂಬ ಕಾರಣದಿಂದ ಅವರು ತಂಡಕ್ಕಿಟ್ಟ ಹೆಸರು `ಕ್ರಿಯೇಟಿವ್ ಥಿಯೇಟರ್‌.’ ಆಂಗ್ಲ ಉಚ್ಚಾರದಲ್ಲಿ `ಎಂದೇ ನಮೂದಿಸಿದರು.

`ಕ್ರಿಯೇಟಿವ್ ‌ಥಿಯೇಟರ್‌’ನಿಂದ ಪ್ರದರ್ಶಿತಗೊಂಡ ಮೊದಲ ನಾಟಕ `ಎದ್ದೇಳು’ ಹಾಗೂ `ಮೀಡಿಯಾ.’ ಇವು ಇಟಲಿಯ ನೊಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ದರಿಯೋ ಪೆ ಮತ್ತು ಅವನ ಹೆಂಡತಿ ಹಾಗೂ ಸುಪ್ರಸಿದ್ಧ ನಟಿ ಫ್ರಾಂಕ್‌ ರಾಮೆ ಬರೆದ `ರೈಸ್‌ ಅಂಡ್‌ ಶೈನ್‌’ ಹಾಗೂ `ಮೀಡಿಯಾ’ ಆಧರಿಸಿದ ಎರಡು ಕಿರು ನಾಟಕಗಳು. ಇದು ಲಕ್ಷ್ಮೀಯವರ ಏಕವ್ಯಕ್ತಿ ಕಲಾ ಪ್ರದರ್ಶನಗಳು.

ಹೊಸತನದತ್ತ……

photo.saheb

ತಮ್ಮದೇ ತಂಡ ಕಟ್ಟಿಕೊಂಡ ಬಳಿಕ ಪ್ರೊ. ಲಕ್ಷ್ಮೀ ಚಂದ್ರಶೇಖರ್‌ ಅವರಿಗೆ ಗಂಭೀರ ಪಾತ್ರಗಳುಳ್ಳ ಏಕವ್ಯಕ್ತಿ ಕಲಾ ಪ್ರದರ್ಶನಕ್ಕಿಂತ ಎರಡು ಪಾತ್ರಗಳಿರುವ ಹಾಸ್ಯ ಮಿಶ್ರಿತ ನಾಟಕಗಳತ್ತ ಒಲವು ಮೂಡಿತು. ಅಂತಹ ನಾಟಕಗಳಿಗೆ ವಿಷಯ ಶೋಧಿಸುತ್ತಿರುವಾಗ ಅವರ ಗಮನಕ್ಕೆ ಬಂದದ್ದು ಹೆಸರಾಂತ ಹಾಸ್ಯ ಸಾಹಿತಿ ಟಿ. ಸುನಂದಮ್ಮರ `ಬೆಸ್ಟ್ ಆಫ್‌ ಸುನಂದಮ್ಮ’ ಹಾಸ್ಯ ಬರಹಗಳ ಸಂಕಲನ. ಸುನಂದಮ್ಮನವರ ಹಲವು ಹಾಸ್ಯ ಬರಹಗಳನ್ನು ಇಟ್ಟುಕೊಂಡು ಕೆ.ವೈ. ನಾರಾಯಣಸ್ವಾಮಿಯವರು `ಹೀಗಾದ್ರೆ ಹೇಗೆ?’ ಎಂಬ ನಾಟಕವನ್ನು ಬರೆದುಕೊಟ್ಟರು. ಸರಸೂ ಮತ್ತು ಮೈಲಾರಯ್ಯ ಪಾತ್ರಗಳಲ್ಲಿ ಪ್ರೊ. ಲಕ್ಷ್ಮೀ ಚಂದ್ರಶೇಖರ್‌ ಹಾಗೂ ಸುಂದರ್‌ ಅವರ ಅಭಿನಯ ಪ್ರೇಕ್ಷಕರ ಮನತಟ್ಟುವಲ್ಲಿ ಯಶಸ್ವಿಯಾಯಿತು. ಸುನಂದಮ್ಮನವರ ಹರಟೆಗಳನ್ನು ಆಧರಿಸಿ ಹೆಣೆಯಲಾದ ಮತ್ತೊಂದು ನಾಟಕವೆಂದರೆ `ಆದದ್ದೆಲ್ಲ ಒಳಿತೇ!’ ಇದು ಸಾಕಷ್ಟು ಯಶಸ್ಸು ಕಂಡಿತಲ್ಲದೆ, ಬಳಿಕ ಆಂಗ್ಲ ಭಾಷೆಗೂ ರೂಪಾಂತರಗೊಂಡಿತು. ಜಿ.ಪಿ. ರಾಜರತ್ನಂ ಜನ್ಮ ಶತಮಾನೋತ್ಸವ ವರ್ಷದಲ್ಲಿ `ರತ್ನನ್‌ ಪರ್ಪಂಚ’ ಎಂಬ ನಾಟಕನ್ನು ತೆರೆಗೆ ತಂದರು. ಅದರಲ್ಲಿ ಅವರ ಜನಪ್ರಿಯ ಹಾಡುಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಸಿಂಗಾಪೂರ್‌ನ ಬರಹಗಾರ್ತಿ ಸ್ಟೆಲ್ಲಾ ಕಾನ್‌ ಬರೆದ `ಎಮಿಲಿ ಆಫ್‌ ಎಮರಾಲ್ಡ್ ಹಿಲ್‌’ ಆಧರಿಸಿ `ಕಿತ್ತಳೆ ಮನೆ ಕಾವೇರಿ’ ಎಂಬ ನಾಟಕವನ್ನು ಪ್ರೊ. ಲಕ್ಷ್ಮೀಯವರೇ ರೂಪಿಸಿದರು. ಇದರಲ್ಲಿ ಕೊಡವ ಭಾಷೆಯನ್ನೇ ಹೆಚ್ಚಾಗಿ ಬಳಸಿದ್ದರಿಂದ ಇದು ಪ್ರಾದೇಶಿಕವಾಗಿ ಹೆಚ್ಚು ಆಪ್ತವೆನಿಸಿತು. ನಾ. ಕಸ್ತೂರಿಯವರ `ಗುಂಡಾಯಣ’ ಹಾಗೂ ಎಂ.ಆರ್‌. ಶ್ರೀನಿವಾಸ ಮೂರ್ತಿಯವರ `ಸಾಹೇಬರ ಸರ್ಕೀಟು’ ಎಂಬ ನಾಟಕಗಳನ್ನು ಕೂಡ ಪ್ರದರ್ಶಿಸಿ ತಮ್ಮ ವಿಶಿಷ್ಟತೆಯ ಛಾಪು ಮೂಡಿಸಿದರು.

ಕೌಟುಂಬಿಕ ಸಹಕಾರ

ಪ್ರೊ. ಲಕ್ಷ್ಮೀಯವರ ಪತಿ ಪ್ರೊ. ಬಿ.ಕೆ. ಚಂದ್ರಶೇಖರ್‌ ವಿಧಾನಸಭೆಯ ಸಭಾಪತಿಗಳಾಗಿ ಕಾರ್ಯ ನಿರ್ವಹಿಸಿದರು. ಅವರ ಸಹಕಾರದಿಂದ ತಾವು ಇಷ್ಟೆಲ್ಲ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಯಿತೆಂದು ಪ್ರೊ. ಲಕ್ಷ್ಮೀ ಹೇಳುತ್ತಾರೆ. ಅವರ ಪುತ್ರ ಕಾನೂನು ವಿದ್ಯಾಭ್ಯಾಸ ಮಾಡಿದ್ದು, ಪ್ರಸಕ್ತ ಇಂಗ್ಲೆಂಡಿನಲ್ಲಿಯೇ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಗಳು ಅಮೆರಿಕಾದಲ್ಲಿ `ಮ್ಯಾರೇಜ್‌ ಅಂಡ್‌ ಫ್ಯಾಮಿಲಿ ಥೆರಪಿ’ ವಿಷಯದಲ್ಲಿ ಅಧ್ಯಯನ ಮುಗಿಸಿಕೊಂಡು ಬಂದಿದ್ದು, ಬೆಂಗಳೂರಿನಲ್ಲಿ ಪ್ರೈವೇಟ್‌ ಪ್ರ್ಯಾಕ್ಟೀಸ್‌ ಆರಂಭಿಸಲಿದ್ದಾರೆ.

ಭಾಷಾಂತರ ನಾಟಕ ಪ್ರದರ್ಶನಗಳಿಲ್ಲದಿದ್ದಾಗ ಅವರು ಭಾಷಾಂತರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಬಸವಣ್ಣನವರ 2000 ವಚನಗಳನ್ನು ಈಗಾಗಲೇ ಆಂಗ್ಲಭಾಷೆಗೆ ಅನುವಾದ ಮಾಡಿದ್ದಾರೆ.

ಡಾ. ಚಂದ್ರಶೇಖರ್‌ ಕಂಬಾರರ `ಶಿಖರ ಸೂರ್ಯ’ ಕಾದಂಬರಿಯನ್ನು ಇದೀಗ ಆಂಗ್ಲ ಭಾಷೆಗೆ ಅನುವಾದ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಸಿನಿಮಾದಲ್ಲೂ ಅಭಿನಯ ಕನ್ನಡದ ಅನೇಕ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದಾರೆ. `ಅಸ್ಥೆ,’ `ಸಾಂಗ್ಲಿಯಾನಾ,’ `ಮೌನಿ,’ `ಬೇರು,’ `ಮತದಾನ,’, `ತನನಂ ತನನಂ,’ ಮುಂತಾದವು, `ಪ್ರೀತಿಯಿಂದ’ ಹಾಗೂ `ಜ್ಯೋತಿ ಅಲಿಯಾಸ್‌ ಕೋತಿರಾಜ್‌’ ತೆರೆಗೆ ಬರಬೇಕಾದ ಚಿತ್ರಗಳು.

ಪ್ರಶಸ್ತಿಗಳು

ಕಾಲೇಜು ರಂಗಭೂಮಿಗಾಗಿ ಸಲ್ಲಿಸಿದ ಸೇವೆಗಾಗಿ ಅವರಿಗೆ 2002ರಲ್ಲಿ `ಸಂಸ ಪ್ರಶಸ್ತಿ,’ `ಗೃಹಭಂಗ’ದ ಗಂಗಮ್ಮನ ಪಾತ್ರದಲ್ಲಿನ ಅವರ ಅಭಿನಯಕ್ಕೆ `ಆರ್ಯಭಟ ಪ್ರಶಸ್ತಿ,’ `ಪ್ರಿಯದರ್ಶಿನಿ ಪ್ರಶಸ್ತಿ’ಗಳು ಅವರ ಕಲಾ ಸಾಧನೆಯನ್ನು ಗೌರವಿಸಿವೆ.

ಬುದ್ಧಿ ಬೆಳವಣಿಗಯತ್ತ ಗಮನವಿರಲಿ

ಮಹಿಳೆಯರಿಗೆ ಯಾರೂ ಅಷ್ಟು ಸುಲಭವಾಗಿ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ. ಅದನ್ನು ಪಡೆದುಕೊಳ್ಳಲು ನಾವು ಇಂಚಿಂಚು ಹೋರಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸಾಕಷ್ಟು ಕಹಿಯನ್ನು ಅನುಭವಿಸಬೇಕಾಗುತ್ತದೆ. ನಮಗೆ ನಮ್ಮದೇ ಆದ ವ್ಯಕ್ತಿತ್ವವಿದೆ ಎನ್ನುವುದನ್ನು ಮೊದಲು ನಾವು ಅರಿತುಕೊಳ್ಳಬೇಕು.

ಮಕ್ಕಳನ್ನು ಬೆಳೆಸುವಾಗಲೇ ನಾವು ಹೆಣ್ಣು ಗಂಡು ಎಂಬ ಭೇದಭಾವ ಬರದಂತೆ ಬೆಳೆಸಬೇಕು. ಮಹಿಳೆಯರು ಅದರಲ್ಲೂ ಯುವತಿಯರು ಸೌಂದರ್ಯದ ಬಗ್ಗೆ ಅತಿಯಾಗಿ ಗಮನ ಕೊಡದೆ, ಮನಸ್ಸುಬುದ್ಧಿ ಬೆಳವಣಿಗೆಯತ್ತ ಹೆಚ್ಚಿನ ಆಸಕ್ತಿ ತೋರಿಸಬೇಕು. ನಾನು ಸಮಾಜದ ಒಂದು ಭಾಗ, ನನಗೂ ಯೋಚನೆ ಮಾಡುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಡಬೇಕು. ರಾಜಾಸ್ಥಾನದ ಅನಕ್ಷರಸ್ಥ ಮಹಿಳೆ ಊರೂರಿಗೆ ಹೋಗಿ `ಬನ್ನಿ ಹೋರಾಡೋಣ’ ಎನ್ನುತ್ತಾಳಾದರೆ, ಸಾಕ್ಷರರಾಗಿ ನಮಗೇಕೆ ಅದು ಸಾಧ್ಯವಿಲ್ಲ ಎಂಬ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಪ್ರೊ. ಲಕ್ಷ್ಮೀ ಚಂದ್ರಶೇಖರ್‌ ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ

ಕೆಮ್ಮಿದಾಗೆಲ್ಲ ನಿನ್ನದೇ ನೆನಪು…..

ಲಕ್ಷ್ಮೀಯವರು ಚನ್ನರಾಯಪಟ್ಟಣದ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಪರ್ವತವಾಣಿಯವರ `ಹಣ ಹದ್ದು’ ಎಂಬ ನಾಟಕವನ್ನು ಮಾಡಿದ್ದರು. ಅದರಲ್ಲಿ ಅವರಿಗೆ ಕ್ಷಯರೋಗಿ ಮುದುಕನ ಪಾತ್ರ. ಆ ಮುದುಕನಿಗೆ ಸಂಭಾಷಣೆ ಕಮ್ಮಿ, ಕೆಮ್ಮುವುದೇ ಜಾಸ್ತಿ. ಕೆಮ್ಮು ದೃಶ್ಯ ಸಹಜವಾಗಿಯೇ ಮೂಡಿಬರಲೆಂದು ಲಕ್ಷ್ಮೀ ಸಾಕಷ್ಟು ನೆಲ್ಲಿಕಾಯಿ ತಿಂದುಬಿಟ್ಟಿದ್ದರು. ಬಳಿಕ ಆ ದೃಶ್ಯ ಅತ್ಯಂತ ಸಹಜವಾಗಿಯೇ ಎಲ್ಲರ ಚಪ್ಪಾಳೆ ಗಿಟ್ಟಿಸಿತು. ಆಗ ಅವರ ಹೈಸ್ಕೂಲಿಗೆ ಬಂದಿದ್ದ ಎನ್‌ಸಿಸಿ ಅಧಿಕಾರಿ ಅವರಿಗೆ ಪತ್ರವೊಂದನ್ನು ಬರೆದಿದ್ದರು, “ಕೆಮ್ಮಿದಾಗೆಲ್ಲ ನಿನ್ನದೇ ನೆನಪು ಬರುತ್ತೆ…..” ಎಂದು.

ಮಚ್ಚೆಯ ಗೊಂದಲ `ಮಾಯಾಮೃಗ’ ಧಾರಾವಾಹಿಯಲ್ಲಿ ಲಕ್ಷ್ಮೀಯವರಿಗೆ ಶಾಸ್ತ್ರೀಯ ಹೆಂಡತಿಯ ಪಾತ್ರ. ಆ ಧಾರಾವಾಹಿಯಲ್ಲಿನ ಅವರ ಪಾತ್ರ ಅದೆಷ್ಟು ಪ್ರಭಾವ ಬೀರಿತ್ತೆಂದರೆ, ಲಕ್ಷ್ಮೀಯವರು ಮದುವೆ ಸಮಾರಂಭಗಳಿಗೆ ಹೋದರೆ ಸ್ತ್ರೀಯರು ಅವರನ್ನು ಸುತ್ತುವರಿದು `ನಿಮಗೆ ಅಕ್ಕತಂಗಿ ಯಾರಾದರೂ ಇದ್ದಾರೆಯೇ?’ ಎಂದು ಕೇಳುತ್ತಿದ್ದರು. ಏಕೆಂದರೆ ಇವರನ್ನೇ ಹೋಲುವ  ಆ ಪಾತ್ರಧಾರಿಯೇ ಬೇರೆ ಎಂದು ಅವರು ಭಾವಿಸಿದ್ದರು. ಮಹಿಳೆಯರ ಈ ಗೊಂದಲ ನಿವಾರಿಸಲು ಧಾರಾವಾಹಿಯ ನಿರ್ದೇಶಕ ಟಿ.ಎನ್‌. ಸೀತಾರಾಮ್ ಕೊನೆಯ ಕಂತಿನಲ್ಲಿ ಅವರ ಕೆನ್ನೆಯ ಮೇಲಿನ ಮಚ್ಚೆ ತೆಗೆದು ತೋರಿಸಬೇಕಾಯಿತು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ