ಬಹುಮುಖ ಪ್ರತಿಭೆಯ ಮಾನಸಾ ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ. ಸರ್ವ ಕಲೆಯಲ್ಲೂ ಆಸಕ್ತಿ, ಪರಿಶ್ರಮ, ಸಾಧನೆಯ ಪಥದತ್ತ ಕ್ರಮಿಸುತ್ತಿರುವ ಈಕೆಗೆ ಕಲೋಪಾಸನೆಯೇ ಜೀವನದ ಪರಮ ಗಂತ್ಯ. ಓದುವುದರಲ್ಲೂ ಕಡಿಮೇಯೇನಿಲ್ಲ. ಬಿ.ಎಸ್ಸಿ. ಪದವೀಧರೆ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಬಿ.ಇ. ಪದವಿಯನ್ನು ಉತ್ತಮ ಅಂಕಗಳಿಂದ ಗಳಿಸಿರುವ ಯಶಸ್ವೀ ಎಂಜಿನಿಯರ್ ಕೂಡ.

ವೇದಿಕೆಯ ಮೇಲೆ ಮೋಹಿನಿ ಭಸ್ಮಾಸುರ ನೃತ್ಯರೂಪಕದಲ್ಲಿ ಮೋಹಿನಿಯಾಗಿ ಸುಮನೋಹರವಾಗಿ ನರ್ತಿಸುತ್ತ, ಶಿಲ್ಪ ಸದೃಶ ಭಾವ ಭಂಗಿಗಳಲ್ಲಿ ಕಣ್ಮನ ತುಂಬುವ ಮಾನಸಾ ಥೇಟ್‌ ಮೋಹಿನಿಯೇ! ಸಪ್ರಮಾಣ ಮೋಹನಾಕಾರವುಳ್ಳ ಸುಂದರಿ ಕೂಡ. ರೂಪಪ್ರತಿಭೆ ಮಿಳಿತವಾದ ಈ ಕಲಾವಿದೆ ಯಾವ ಪಾತ್ರಾಭಿನಯ, ನೃತ್ಯ ಪ್ರಸ್ತುತಿಯಲ್ಲೂ ಜೀವ ತುಂಬಿ ನರ್ತಿಸಬಲ್ಲ, ಪ್ರಬುದ್ಧ ಅಭಿನಯ ನೀಡುವ ಸಾಮರ್ಥ್ಯ ಉಳ್ಳವಳು.

ಸುಸಂಸ್ಕೃತ ಮನೆತನ, ತಂದೆ ತೀರ್ಥಹಳ್ಳಿಯವರು, ಕೋಣಂದೂರು ವೆಂಕಪ್ಪ ಪ್ರೊಫೆಸರ್‌ ಮತ್ತು ಸಾಹಿತಿಗಳು. ತಾಯಿ ನಳಿನಿ ವೆಂಕಪ್ಪ ಕೂಡ ಲೇಖಕಿ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಡಳಿತಾಧಿಕಾರಿಯಾಗಿದ್ದರು. ಮಗಳ ಬದುಕಿನಲ್ಲಿ ಅವಳ ಬಾಲ್ಯದಿಂದಲೂ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮೌಲ್ಯಾಧಾರಿತ ಬದ್ಧತೆ, ಆಧ್ಯಾತ್ಮಿಕ ಚಿಂತನೆಗಳ ಪ್ರಾಮುಖ್ಯವನ್ನು ಮನನಗೊಳಿಸಿ ಬೆಳೆಸಿದ ಚಿಂತಕಿ.

ಬಾಲ್ಯದಿಂದಲೇ ನೃತ್ಯಾಸಕ್ತಿ

manasa-k-24

ಮಾನಸಾ ಬಾಲಪ್ರತಿಭೆ, ಚಟುವಟಿಕೆಯ ಚಿಲುಮೆಯಾಗಿದ್ದಳು. ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಓದುವಾಗ ತರಗತಿಗೆ ಪ್ರಥಮ, ಭಗವದ್ಗೀತೆ, ಅಮರಕೋಶ, ಹಾಡುಗಾರಿಕೆ, ನೃತ್ಯ, ರಂಗೋಲಿ, ಚರ್ಚಾಸ್ಪರ್ಧೆ, ಎಲ್ಲದರಲ್ಲೂ ಮೊದಲು, ನಾಟಕಗಳಲ್ಲಿ ಪ್ರಮುಖ ಪಾತ್ರ ಮತ್ತು ಜಿಲ್ಲಾ ಮಟ್ಟದ ನೃತ್ಯ, ನಾಟಕ ಇತ್ಯಾದಿ ಎಲ್ಲ ಕಲಾ ಸ್ಪರ್ಧೆಗಳಲ್ಲಿ ಬಹುಮಾನಗಳು. ಜೊತೆಗೆ ಜಿಲ್ಲಾ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಬೆಳ್ಳಿ ಹಾಗೂ ಚಿನ್ನದ ಪದಕಗಳನ್ನು ಗಳಿಸಿದ ಅಗ್ಗಳಿಕೆ ಇವಳದು. ಎಸ್‌.ಎಸ್‌.ಎ್‌.ಸಿ.ಯಲ್ಲಿ ಡಿಸ್ಟಿಂಕ್ಷನ್‌ ಮತ್ತು ಕನ್ನಡ ಭಾಷೆಯಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಅಂಕಗಳನ್ನು ಪಡೆದ ವೈಶಿಷ್ಟ್ಯ. ಆನಂತರ ಬೆಂಗಳೂರಿನ ಆರ್‌.ವಿ. ಕಾಲೇಜಿನಿಂದ ಎಂಜಿನಿಯರ್‌ ಪದವಿ ಇವೆಲ್ಲಕ್ಕೂ ಕಳಶವಿಟ್ಟಂತೆ ನೃತ್ಯಕ್ಷೇತ್ರದಲ್ಲಿ ಬಾಲ್ಯದಿಂದಲೂ ಕಠಿಣಾಭ್ಯಾಸದ ತರಬೇತಿ. ಐದರ ಎಳವೆಯಲ್ಲೇ ಖ್ಯಾತ ನೃತ್ಯ ಗುರು ಶಾಂತಾ ಪ್ರಶಸ್ತಿ ವಿಜೇತೆ ರಾಧಾ ಶ್ರೀಧರ್‌ ಅವರಲ್ಲಿ ನೃತ್ಯ ಕಲಿಕೆಗೆ ಸೇರ್ಪಡೆ.

ಕರ್ನಾಟಕ ಸರ್ಕಾರದ ಭರತನಾಟ್ಯ ಜೂನಿಯರ್‌, ಸೀನಿಯರ್‌, ವಿದ್ವತ್‌ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್‌ ಪಡೆದು ಉತ್ತೀರ್ಣಳಾಗಿ ಅಂದಿನಿಂದ ಇಂದಿನವರೆಗೂ ಸತತ ಮೂರು ದಶಕಗಳಿಗೂ ಮಿಕ್ಕಿ ನೃತ್ಯೋಪಾಸನೆ ಮಾಡುತ್ತ ಬಂದಿರುವ ಬದ್ಧತೆಯ ಕಲಾವಿದೆ.

ತನ್ನದೇ ಆದ ನೃತ್ಯಸಂಸ್ಥೆ `ನಾಟ್ಯ ಸಂಪದ’ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ನಾಟ್ಯ ಶಿಕ್ಷಕಿಯಾಗಿ ಇದುವರೆಗೂ ನೂರಾರು ಕಲಾವಿದೆಯರನ್ನು ತಯಾರು ಮಾಡಿದ ಸಂತೃಪ್ತಿ ಸಾರ್ಥಕ್ಯ ಭಾವ ಇವರದು.

ಚಿಕ್ಕಂದಿನಲ್ಲೇ ರಂಗಪ್ರವೇಶ

Manasa-Kanti-2

ಚಿಕ್ಕ ವಯಸ್ಸಿನಲ್ಲೇ ಭರತನಾಟ್ಯದಲ್ಲಿ `ರಂಗಪ್ರವೇಶ’ ಮಾಡಿದ ಮಾನಸಾ, ಕಲಾ ರಸಿಕರೊಂದಿಗೆ ಮಾಧ್ಯಮಗಳ ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿ ನಿರಂತರ ನೃತ್ಯ ಪ್ರದರ್ಶನ ನೀಡಲಾರಂಭಿಸಿದ್ದು ಅವಳ ಸಾಧನೆಯ ಮಜಲು. ಆನಂತರ ಭರತನಾಟ್ಯದಲ್ಲಿ ಪದ್ಮಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂರವರ ಮಾರ್ಗದರ್ಶನದಲ್ಲಿ ಶಾಸ್ತ್ರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಳು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಡಾ. ಮೀನಾಕ್ಷಿ ರವಿಯವರಿಂದ ಕಲಿತಿರುವುದಲ್ಲದೆ, ಗುರು ನಾಗರತ್ನಾ ಶಶಿಧರ್‌ರರಲ್ಲಿ ವೀಣಾ ವಾದನದ ಅಭ್ಯಾಸ ಮಾಡಿರುವ ಪ್ರತಿಭಾವಂತೆ, ಭರತನಾಟ್ಯದೊಂದಿಗೆ ಗುರು ಮೈಸೂರು ನಾಗರಾಜ್‌ ಅವರಲ್ಲಿ ಕಥಕ್‌ ನೃತ್ಯ ಶೈಲಿಯಲ್ಲಿಯೂ ತರಬೇತು ಹೊಂದಿದ್ದಾಳೆ. ನೃತ್ಯಜ್ಞೆಯಾದ ಇವಳು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಪರೀಕ್ಷಕಿಯಾಗಿ ಸೇಲೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.

ಬಹುತೇಕ ಹೆಚ್ಚಾಗಿ ಏಕ್ಯಕ್ತಿ ನೃತ್ಯ ಪ್ರದರ್ಶಗಳನ್ನೇ ನೀಡಿ ಗಮನ ಸೆಳೆದಿರುವ ಇವಳು, ಸಮೂಹ ನೃತ್ಯವಲ್ಲದೆ ತಾನು ನೃತ್ಯ ಕಲಿತ ಶಾಲೆ `ವೆಂಕಟೇಶ ನಾಟ್ಯ ಮಂಡಳಿ’ಯ ಎಲ್ಲ ನೃತ್ಯರೂಪಕಗಳು ನೃತ್ಯ ನಾಟಕಗಳು, ಜಾನಪದ ನೃತ್ಯ, ಭಾವಗೀತೆಗಳಿಗೆ ಅಭಿನಯ ಮಾಡಿರುವುದು ಈಕೆಯ ವೈಶಿಷ್ಟ್ಯ. ದೂರದರ್ಶನದ `ಎ’ ಗ್ರೇಡ್‌ ಕಲಾವಿದೆಯಾಗಿರುವ ಇವಳು ದೂರದರ್ಶನದಲ್ಲಿ ಅನೇಕ ವಿಶೇಷ ಸಮಾರಂಭಗಳಲ್ಲಿ ಏಕವ್ಯಕ್ತಿ ಮತ್ತು ಶಿಷ್ಯವೃಂದದೊಂದಿಗೆ ಕಾರ್ಯಕ್ರಮಗಳಿಗೆ ಮತ್ತು ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಸೇರಿದಂತೆ ಅನೇಕ ಸಮಾರಂಭಗಳಿಗೆ ನಿರೂಪಕಿಯಾಗಿಯೂ ಆಹ್ವಾನಿತಳಾಗಿದ್ದಾಳೆ.

ಅಂತಾರಾಷ್ಟ್ರೀಯ ನೃತ್ಯ ಪ್ರದರ್ಶನ

ಭಾರತಾದ್ಯಂತ ಅನೇಕ ನೃತ್ಯೋತ್ಸವಗಳಲ್ಲಿ ನರ್ತಿಸಿರುವ ಮಾನಸಾ, ಅಮೆರಿಕಾದಲ್ಲಿ ನಾಲ್ಕು ತಿಂಗಳು ಪ್ರವಾಸ ಮಾಡಿ ಅಲ್ಲಿನ ಇಪ್ಪತ್ತಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಕ್ಯಾಲಿಫೋರ್ನಿಯಾ, ಜಾರ್ಜಿಯಾ, ಟೆಕ್ಸಾಸ್‌, ಫ್ಲಾರಿಡಾ, ಪೆನ್ಸಲ್ವೇನಿಯಾ, ಅರಿಜೋನಾ, ಅಲಾಸ್ಕಾ, ವಾಷಿಂಗ್ಟನ್‌, ಮಿಷಿಗನ್‌, ನಿವಾಡ, ಒಹಾಲೋೕ, ನ್ಯೂಜರ್ಸಿ, ವರ್ಜಿನಿಯಾ, ಇಲಿನಾಯ್ಸ್, ನ್ಯೂಯಾರ್ಕ್‌, ಮೇರಿಲ್ಯಾಂಡ್‌, ಮಿಸ್ಸೋರಿ, ಕೆಂಟುಕಿ, ಲೂಸಿಯಾನಾ ನಾರ್ತ್ಕೆರೋಲಿನಾ ಮುಂತಾದೆಡೆ ಅನೇಕ ನೃತ್ಯ ಪ್ರದರ್ಶನಗಳನ್ನಿತ್ತು ಅಲ್ಲಿನ ಕಲಾ ರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಹಾಗೆಯೇ ದುಬೈ ಮತ್ತು ಶಾರ್ಜಾಗಳಲ್ಲಿ ನಾಲ್ಕು ಬಾರಿ ಪ್ರವಾಸ ಮಾಡಿ ಕನ್ನಡದ ಪೆಂಪನ್ನು ಎತ್ತಿ ಹಿಡಿದಿದ್ದಾರೆ.

ಉತ್ತಮ ನೃತ್ಯ ಸಂಯೋಜಕಿಯೂ ಆಗಿ ಹೆಸರು ಮಾಡಿರುವ ಮಾನಸಾ, ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಜಿ.ಎಸ್‌.ಎಸ್‌. ಮುಂತಾದ ಖ್ಯಾತ ಕವಿಗಳ ಗೀತೆಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಹಂಪಿ, ಪಟ್ಟದಕಲ್ಲು, ಕಿಂಕಿ;, ರಸಸಂಜೆ, ಶಾಂತೋತ್ಸವ ಮುಂತಾದ ಅನೇಕ ಉತ್ಸವಗಳಲ್ಲದೆ ಅನೇಕ ರಾಜ್ಯೋತ್ಸವಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿದ ಗರಿಮೆ. ಸರ್ಕಾರದಿಂದ ರಷ್ಯನ್‌, ಥಾಯ್‌, ಜಪಾನ್‌, ಅಮೆರಿಕನ್‌ ಪ್ರತಿನಿಧಿಗಳಿಗಾಗಿ ನೃತ್ಯ ಕಾರ್ಯಕ್ರಮ ನೀಡಲು ಇವರಿಗೆ ಆಮಂತ್ರಣ. ಅಖಿಲ ಭಾರತ ಚೀಫ್ ಸಮ್ಮೇಳನದಲ್ಲಿ ಅತ್ಯುತ್ತಮ ಕಲಾವಿದೆ ಎಂಬ ಪ್ರಶಂಸೆ.

ಬಹುಮುಖ ಪ್ರತಿಭೆಯ ವೃತ್ತಿಗಳು

Manasa-Kanti-Kannada

ಮಾನಸಾಳ ಪ್ರತಿಭೆ ಇಷ್ಟಕ್ಕೇ ಸೀಮಿತವಾಗಿಲ್ಲ. ಜಾಹೀರಾತುಗಳಲ್ಲಿ ಅಭಿನಯ ನೀಡಿರುವುದರೊಂದಿಗೆ ಅನೇಕ ಪ್ರತಿಷ್ಠಿತ ವಾಣಿಜ್ಯ ಜಾಹೀರಾತುಗಳ ಕಂಪನಿಯ ಹಾಡುಗಳಿಗೆ ರಚನೆ. ರೆಡ್‌ ಎಫ್‌.ಎಂ. 93.5ರಲ್ಲಿ ರೇಡಿಯೋ ಜಾಕಿ, ಉದಯ ಟಿ.ವಿ., ಝೀ ಟಿ.ವಿ ಕನ್ನಡದಲ್ಲಿ  ನಿರೂಪಕಿ ಮತ್ತು ಸ್ಕ್ರಿಪ್ಟ್ ರೈಟರ್‌ ಆಗಿ ಅನುಭವ ಗಳಿಕೆ. ಸುದ್ದಿ ಟಿವಿ ನ್ಯೂಸ್‌ ಚಾನಲ್‌ನಲ್ಲಿ ಪ್ರೋಗ್ರಾಮ್ ಪ್ರೊಡ್ಯೂಸರ್‌ ಆಗಿ ಸೇವೆ.

ಮಾನಸಾಳ ಕಾರ್ಯಕ್ಷೇತ್ರ ಇನ್ನೂ ವಿಪುಲ. ಪ್ರಖ್ಯಾತ ನಾಟ್ಯ ಇನ್ ಸ್ಟಿಟ್ಯೂಟ್‌ ಆಫ್‌ ಕಥಕ್‌ಕೊರಿಯಾಗ್ರಫಿ ಸಂಸ್ಥೆಯಿಂದ ಇಂಟೀರಿಯರ್‌ ಡಿಸೈನಿಂಗ್‌ನಲ್ಲಿ ಡಿಪ್ಲೊಮಾ ಮತ್ತು ಕೊರಿಯಾಗ್ರಫಿಯಲ್ಲೂ ಡಿಪ್ಲೊಮಾ ಮಾಡಿರುವ ಹಿರಿಮೆ ಇವಳದು. ತನ್ನ `ನಾಟ್ಯ ಸಂಪದ’ ಶಾಲೆಯ ಹಿರಿಯ ವಿದ್ಯಾರ್ಥಿಗಳ ಒಂದು `ಕೋರ್ಟಿಮ್’ನೊಂದಿಗೆ ಅನೇಕ ಯುವಜನೋತ್ಸವ ಮತ್ತು ಕಾರ್ಪೋರೆಟ್‌ ಕಾರ್ಯಕ್ರಮಗಳನ್ನೂ ನೀಡುತ್ತ ಬಂದಿದ್ದಾರೆ. ಗುರು ರಾಧಾ ಶ್ರೀಧರ್‌ ನಿರ್ಮಿತ ಎಲ್ಲ ನೃತ್ಯ ರೂಪಕಗಳಲ್ಲಿ ಪ್ರಮುಖ ಪಾತ್ರ ವಹಿಸಿ ನರ್ತನದಲ್ಲಿ ಭಾಗವಹಿಸಿರುವ ಈಕೆ ಗುರುಗಳಿಂದ `ನೃತ್ಯ ಕಲೋಪಾಸಕಿ’ ಪ್ರಶಸ್ತಿಯನ್ನು ಪಡೆದ ಅದೃಷ್ಟವಂತೆ.

ಕೆಲಕಾಲ ಪೇಟಿಎಂ ಸಂಸ್ಥೆಯಲ್ಲಿ ರೀಜನಲ್ ಮೇನೇಜರ್‌ ಆಗಿ ಯಶಸ್ವೀ ಉದ್ಯೋಗಿಯಾಗಿಯೂ ಸೇವೆ ಸಲ್ಲಿಸಿರುವ ಮಾನಸಾ, ಅಲ್ಲಿ ಪೇಟಿಎಂ ಸೂಪರ್‌ ಸ್ಟಾರ್‌ ಹಾಗೂ ಬೆಸ್ಟ್ ರೀಜನಲ್ ಮೇನೇಜರ್‌ ಪ್ರಶಸ್ತಿಗಳನ್ನು ಗಳಿಸಿದ ವೈಶಿಷ್ಟ್ಯ ಇವಳದು. ಆಧ್ಯಾತ್ಮಿಕ ಚಿಂತಕಿಯಾದ ಈಕೆ, ಯೋಗ ಶಿಕ್ಷಕಿಯರ ತರಬೇತಿ, ಭಗವದ್ಗೀತೆ ಪ್ರವಚನ ಕೋರ್ಸ್‌, ಕುಂಡಲಿನಿ ಚಕ್ರಧಾರಣ ಶಿಕ್ಷಕಿಯ ತರಬೇತಿ ಪಡೆದಿದ್ದಾರೆ.

ಈ ಎಲ್ಲ ವಿಶಿಷ್ಟ ಹಿನ್ನಲೆಯುಳ್ಳ ಮಾನಸಾ, ತಮ್ಮ ನೃತ್ಯಶಾಲೆಯ ವಿದ್ಯಾರ್ಥಿನಿಯರ ಸರ್ವಾಂಗೀಣ ಬೆಳವಣಿಗೆಗೆ ಸಹಾಯಕವಾಗುವ ವಿವಿಧ ಆಯಾಮಗಳ ಶಿಕ್ಷಣವನ್ನೂ ನೀಡುತ್ತ ಬಂದಿರುವುದು ನಿಜಕ್ಕೂ ವಿಶೇಷವೇ ಸರಿ.

– ಸಂಧ್ಯಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ