ಧರ್ಮದ ರಾಜಕೀಯ ನಡೆಯಲ್ಲಿ ಮಾನವರು ಕೇವಲ ಆಡಿಸಿದಂತೆ ಆಡುವ ತೊಗಲು ಗೊಂಬೆಗಳಾಗಿ ಉಳಿದುಬಿಡುತ್ತಾರೆ. ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ….?

ಧರ್ಮ ಅಥವಾ ರಾಜಕೀಯವೇ ಇರಲಿ, ಎರಡೂ ವಿಷಯಗಳು ಎಷ್ಟು ವಿಸ್ತೃತವಾಗಿವೆ ಎಂದರೆ ಒಬ್ಬ ಸಾಧಾರಣ ಪ್ರಜೆ, ತನ್ನ ಇಡೀ ಜೀವಿತಾವಧಿಯಲ್ಲಿ ಇವೆರಡರಲ್ಲಿ ಒಂದನ್ನು ದಾಟಿ ಮುಂದೆ ಹೋಗುವುದೇ ಬಲು ದುಸ್ತರ. ಆದರೆ ಅಸಹಾಯಕರಾದ ಸಾಧಾರಣ ಪ್ರಜೆಗಳು ಅತ್ತ ಧರ್ಮ ಬಿಟ್ಟು ಬಾಳಲೊಲ್ಲರು, ಇತ್ತ ರಾಜಕೀಯದಿಂದ ಪಾರಾಗಲಾರರು. ಎರಡರ ಜೊತೆಯಲ್ಲೂ ಪ್ರತಿ ಕ್ಷಣ ಹೋರಾಡುತ್ತಲೇ ಇರುತ್ತಾರೆ.

ಈಗ ಧರ್ಮದ ವಿಷಯವನ್ನೇ ತೆಗೆದುಕೊಳ್ಳಿ, ಇದು ಕೇವಲ ದೇವಿ ದೇವರುಗಳ ಆರಾಧನೆಯವರೆಗೆ ಮಾತ್ರ ಸೀಮಿತವಲ್ಲ. ಅದು ಈಗ ಧರ್ಮದ ಗುತ್ತಿಗೆದಾರರ ಅಡಿಯಾಳಾಗಿದೆ. ಧರ್ಮವನ್ನು ದಂಧೆಯಾಗಿಸಿ ಹಣ ವಸೂಲಾತಿ ಮಾಡುವುದೇ ಇವರ ಕೆಲಸ. ನಮ್ಮ ಸಮಾಜದಲ್ಲಿ ಎಲ್ಲೆಲ್ಲೂ ನಾಯಿಕೊಡೆಗಳಂತೆ ದಿನಕ್ಕೊಂದು ಜಾತಿ ಕುಲದ ಹೆಸರಲ್ಲಿ ಧರ್ಮ ಗುರುಗಳು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಇವರುಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದವರೆಗೂ ಹರಡಿಕೊಂಡು, ಈ ಬಾಬಾಗಳು ಮಾತ್ರವೇ ಧರ್ಮ ಎಂದರೇನು…. ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುತ್ತಾರೆ.

ನೀವು ಸ್ವಲ್ಪ ಗಮನವಿಟ್ಟು ಯೋಚಿಸಿ ನೋಡಿ, ಯಾವುದೋ ಬಾಬಾ ಪ್ರವಚನ ಎಂದಾಕ್ಷಣ, ಎಲ್ಲೆಲ್ಲಿಂದಲೋ ಲಕ್ಷಾಂತರ ಮಂದಿ ಭಕ್ತಗಣ ಜಮೆಗೊಳ್ಳುತ್ತಾರೆ. ತಮ್ಮ ಪರಿಕ್ರಮದ ಅಮೂಲ್ಯ ಸಂಪಾದನೆಯನ್ನು ಇವರ ಪಾದಕ್ಕೆ ಸಮರ್ಪಿಸುತ್ತಾರೆ. ತಮ್ಮ ಅಮೂಲ್ಯ ಸಮಯ, ಬೆಲೆ ಕಟ್ಟಲಾಗದ ನಂಬಿಕೆ ವಿಶ್ವಾಸಗಳನ್ನು ಅವರಿಗೆ ಮೀಸಲಿಡುತ್ತಾರೆ. ಇಂಥವರ ಹೆಸರು ಹೇಳಿಕೊಂಡು ಸಾವಿರಾರು ಮಂದಿ ತಮ್ಮ ದಿನ ಆರಂಭಿಸುತ್ತಾರೆ. ಫ್ಲೈಟ್‌ ಹಿಡಿದು ಪ್ರಯಾಣ ಹೊರಡುತ್ತಾರೆ, ಆ ಬಾಬಾ ಇದ್ದಾರಲ್ಲ ಎಲ್ಲಾ ನೋಡಿಕೊಳ್ತಾರೆ ಎಂದು ಅವರ ಮೇಲೆ ಭಾರ ಹಾಕಿ ನಿಶ್ಚಿಂತರಾಗುತ್ತಾರೆ. ಆ ಬಾಬಾ ತನ್ನ ಹಾಗೂ ತನ್ನ ಪರಿವಾರದ ರಕ್ಷಣೆಯೂ ಮಾಡಲಾರ, ಹಾಗಿರುವಾಗ ಇವರು ತೋರಿಸಿದ ವಿಶ್ವಾಸಕ್ಕೆ ಏನು ಬೆಲೆ? ಇವರು ತಮಗೆ ತಾವೇ ಈ ಮಾತನ್ನು ಹೇಗೆ ತಿಳಿ ಹೇಳುತ್ತಾರೆ?

ಇಂಥ ಹಲವಾರು ಘಟನೆಗಳು ವಿಚಾರವಂತರ ಯೋಚನೆಗೆ ಕೊನೆ ಮೊದಲಿಲ್ಲದಂತೆ ಮಾಡುತ್ತವೆ. ಇಂಥ ಲಕ್ಷಾಂತರ ಮಂದಿ ಭಕ್ತರ ಶ್ರದ್ಧೆ ಕೇವಲ ಕುರುಡು ನಂಬಿಕೆಯೇ? ಅವರು ಕಣ್ತೆರೆದು ಏನನ್ನೂ ನೋಡಲು, ತಿಳಿಯಲು ಬಯಸುವುದಿಲ್ಲವೇ? ಇದರ ಹಿಂದಿನ ಭಕ್ತಿ ಕೇವಲ ಮೂಢನಂಬಿಕೆಯೇ? ಎಲ್ಲರೂ ಮೂಢನಂಬಿಕೆಯ ಮಂಕುಬೂದಿಗೆ ಶರಣಾಗಿದ್ದಾರಾ?

ಹಾಗೆಲ್ಲ ಏನೂ ಇಲ್ಲ ಎಂದೇ ಭಾವಿಸಿದರೆ, ಮತ್ತೆ ಯಾವ ಘನ ಉದ್ದೇಶಕ್ಕಾಗಿ, ಯಾವ ಯೋಚನೆಯಲ್ಲಿ, ಎಂಥ ಭಾವನೆ ಇರಿಸಿಕೊಂಡು ಈ ಜನ ಭಕ್ತಿಯ ಹೆಸರಿನಲ್ಲಿ ಇಂಥ ಕಡೆ ತಮ್ಮ ಬಿಝಿ ದಿನಚರ್ಯೆ ಮಧ್ಯೆ ಬಿಡುವು ಮಾಡಿಕೊಂಡು ಬಂದು, ತಮ್ಮ ಪರಿಶ್ರಮದ ಗಳಿಕೆಯನ್ನು ಕಿಂಚಿತ್ತೂ ವಿಚಾರ ಮಾಡದೆ ಇವರಿಗೆ ಸಮರ್ಪಿಸುತ್ತಾರೆ!

ಅಸಹಾಯಕರಾಗಿ ಸಿಲುಕಿರುವವರು

ಇಲ್ಲಿ ನಿಜವಾಗಿಯೂ ಭಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಬಹುತೇಕ ಮಂದಿ ಒಂದೇ ತರಹದ ಮಾನಸಿಕ ಸ್ಥಿತಿ ಹೊಂದಿದ್ದು ಇಲ್ಲಿಗೆ ಬರುತ್ತಾರೆ. ಇವರ ಯೋಚಿಸುವ, ವಿಚಾರಿಸಿ ತಿಳಿಯುವ ಮೂಲಭೂತ ತತ್ವಕ್ಕೆ ಕೊಡಲಿಪೆಟ್ಟು ಬಿದ್ದಿರುವಂತಿದೆ. ಇದೇ ಅವರ ಮೊದಲ ಧರ್ಮವಾಗಿದೆ. ಮುಂದೆ ಬಾಬಾಗಳ ಎದುರು ತಲೆಬಾಗಿ (ಕಲಿತರು, ಅನಕ್ಷರಸ್ಥರೂ ಸಹ) ಕೀಲುಗೊಂಬೆಗಳಾಗಿ ಹೋಗುತ್ತಾರೆ.

ಚೀಟಿ ಗುಂಪುಗಳನ್ನು ರಚಿಸುವ ಮಂದಿ, ಪಾಲಿಸಿ ಮಾರುವಂಥ ದಲ್ಲಾಳಿಗಳು…. ಮುಂತಾದವರಿಗೆ ಈ ಸ್ಥಿತಿ ಪರ್ಫೆಕ್ಟ್ ರೆಸಿಪಿ ಎನಿಸಿದೆ. ಇಂಥ ಕಡೆ ಈ ಮಂದಿ ಸುಲಭವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇಂಥವರ ಆಶ್ವಾಸನೆ, ಭರವಸೆಗಳಿಗೆ ಇಲ್ಲಿನ ಬಕರಾಗಳು ಬೇಗನೆ ಬಲಿ ಬೀಳುತ್ತಾರೆ.

ಹೀಗಾಗಿ ಈ ಭಕ್ತಗಣ ಸುಲಭವಾಗಿ 2-3 ಚೀಟಿ ಗುಂಪುಗಳಿಗೆ ಸೇರಿಬಿಡುತ್ತಾರೆ. ಕೆಲವು ದಿನಗಳ ನಂತರ ಮತ್ತೊಂದು ಕಡೆ ಸೇರಿದಾಗ, ಯಾವ ಚೀಟಿ ಗುಂಪಿನವರು ನಮ್ಮೆಲ್ಲರ ಹಣ ದೋಚಿಕೊಂಡು ಓಡಿಹೋದರು, ಯಾರ ಪಾಲಿಸಿ ಫೇಕ್‌ ಆಯ್ತು ಇತ್ಯಾದಿ ಬಗ್ಗೆ ಚರ್ಚಿಸುತ್ತಾರಷ್ಟೆ.

ನನ್ನ ಒಬ್ಬರು ನೆರೆಮನೆಯವರಿದ್ದಾರೆ, ಪ್ರಭಾಕರ್‌ ಅಂತ. ಅವರು ಇಂಥದ್ದೇ ಒಬ್ಬ ಬಾಬಾನ ಪರಮಭಕ್ತರಾಗಿದ್ದರು. ಅವರ ಗುರುಗಳ ವಿರುದ್ಧ ಏನೂ ಹೇಳದೆ ಇರುವವರೆಗೂ, ಪ್ರಭಾಕರ್‌ ನಮ್ಮೊಂದಿಗೆ ಅತಿ ಒಳ್ಳೆಯ ವ್ಯಕ್ತಿಯಾಗಿ ನಡೆದುಕೊಳ್ಳುತ್ತಿದ್ದರು. ನಮ್ಮ ಕುಟುಂಬಕ್ಕೆ ಅವರು ಆತ್ಮೀಯ ಮಿತ್ರರಾಗಿದ್ದರು. ಅವರು, ಅವರ ಗುರುಗಳ ಸಂಬಂಧ ಇದುವವರೆಗೂ ನಮ್ಮ ಗೆಳೆತನಕ್ಕೆ ಚ್ಯುತಿ ತಂದಿರಲಿಲ್ಲ.

ಧಾರ್ಮಿಕ ಅಂಧಭಕ್ತಿ

ಒಂದು ದಿನ ನಾನು ಗಾಡಿ ತೆಗೆದು ಹೊರಗೆ ಹೊರಡಬೇಕು ಎಂದು ಗೇಟ್‌ ದಾಟಿ ಬಂದಾಗ, ಅಲ್ಲಿ ಪ್ರಭಾಕರ್‌ ಅವರ ತಾಯಿ ಹೊರಗೆ ಹೊರಡಲು ಆಟೋಗಾಗಿ ಕಾಯುತ್ತಿದ್ದರು.

“ಆಂಟಿ ನೀವು ಎಲ್ಲಿಗೆ ಹೊರಟಿರಿ? ನಾನು ನಿಮ್ಮನ್ನು ಡ್ರಾಪ್‌ ಮಾಡಿ ಹೋಗ್ತೀನಿ,” ಎಂದು ಅವರನ್ನು ಕೇಳಿದೆ.

“ನೋಡಪ್ಪ, ನಾನು ಆಶ್ರಮದವರೆಗೂ ಹೋಗಬೇಕು. ಇಂದು ಗುರೂಜಿಯವರ ಜನ್ಮದಿನ, ಅಲ್ಲಿ ವಿಶೇಷ ಕಾರ್ಯಕ್ರಮಗಳಿವೆ. ಆದರೆ… ಆಟೋ ಸಿಗ್ತಾ ಇಲ್ಲ.”

“ಅದೇನೂ ಪರವಾಗಿಲ್ಲ ಆಂಟಿ. ನಾನು ಆ ಕಡೆ ಹಾದು ಹೋಗಬೇಕು. ನೀವು ಕಾರ್‌ ಹತ್ತಿ, ನಿಮ್ಮನ್ನು ಅಲ್ಲಿ ಬಿಟ್ಟು ಹೊರಡುತ್ತೀನಿ,” ಎಂದು ಇಳಿದು ಬಂದು ಅವರಿಗೆ ಕಾರಿನ ಬಾಗಿಲು ತೆರೆದೆ. ಅವರು ಅದರಲ್ಲಿ ಕುಳಿತು ತೃಪ್ತಿಯ ಮಂದಹಾಸ ಬೀರಿದರು.

ಅವರು ಹೇಳಿದ ಆಶ್ರಮದ ರಸ್ತೆವರೆಗೂ ಹೋದೆ. ಅಲ್ಲಿ ಒಂದು ಭವ್ಯ ಕಟ್ಟಡ, ಹೊರಗೆಲ್ಲ ಚಂದದ ಅಲಂಕಾರ ನಡೆದಿತ್ತು. ಇದಲ್ಲವೇನೋ ಇವರಿಗೆ ಬೇಕಾದ ಆಶ್ರಮ ಎಂದು, “ಆಂಟಿ, ಇಲ್ಲಿ ಯಾವ ಆಶ್ರಮ ಕಾಣುತ್ತಿಲ್ಲ. ಇನ್ನು ಮುಂದೆ ಹೇಗಬೇಕೇ?” ಎಂದು ಕೇಳಿದೆ.

“ಅಯ್ಯೋ….. ಎದುರಿಗೇ ಇದೆಯಲ್ಲಪ್ಪ, ಇದೇ ನಮ್ಮ ಗುರುಗಳ ಆಶ್ರಮ!” ಎನ್ನುತ್ತಾ ಕುಳಿತಲ್ಲಿಂದಲೇ ಅದಕ್ಕೆ ಕೈ ಮುಗಿದರು.

`ಓಹೋ…. ಇದುವೇ ಆಶ್ರಮ ಅಂತಾದರೆ, ಇನ್ನು ಇವರ ಲೆಕ್ಕದಲ್ಲಿ ಕಟ್ಟಡ ಅಂದ್ರೆ ಇನ್ನು ಹೇಗಿರುತ್ತದೋ…..’ ಎಂದುಕೊಳ್ಳುತ್ತಾ ಆದಷ್ಟೂ ಅದರ ಹತ್ತಿರ ಹೋಗಿ ಆಂಟಿಯನ್ನು ಇಳಿಸಿದೆ.

ಆಗ ಕಾವಿ ಸೀರೆ ಉಟ್ಟಿದ್ದ ಒಬ್ಬ ಮಹಿಳೆ ಹೊರಗೆ ಬಂದು ಆಂಟಿಯವರನ್ನು ಮೆಟ್ಟಿಲೇರಲು ಸಹಕರಿಸುತ್ತಾ, “ಇವರು ಯಾರು?” ಎಂದು ನನ್ನ ಕಾರಿನ ಕಡೆ ಒಮ್ಮೆ ನೋಡುತ್ತಾ ಕೇಳಿದರು.

“ಅವರು ನಮ್ಮ ಪಕ್ಕದ ಮನೆಯವರು,” ಎಂದು ಆಂಟಿ ಹೆಮ್ಮೆಯಿಂದ ನನ್ನ ಕಡೆ ನೋಡುತ್ತಾ ಹೇಳಿದರು.

“ಅವರನ್ನು ಒಳಗೆ ಕರೆಯಿರಿ. ಇವತ್ತು ಇಂಥ ವಿಶೇಷ ದಿನ…. ಪ್ರಸಾದ ಸ್ವೀಕರಿಸಿಯೇ ಹೋಗಲಿ!” ಎಂದರಾಕೆ.

“ಸಾರಿ, ಇವತ್ತು ಬೇಡಿ. ಬಹಳ ಅರ್ಜೆಂಟ್‌ ಕೆಲಸದ ಮೇಲೆ ಬೇಗ ಹೋಗಬೇಕು,” ಎಂದು ಇಬ್ಬರಿಗೂ ಕೈ ಮುಗಿದು ನಾನು ಅಲ್ಲಿಂದ ಹೊರಟುಬಿಟ್ಟೆ.

ಶಿಕಾರಿ ಜಾಲ ಹರಡಿದಂತೆ

ಕೆಲವು ದಿನಗಳ ನಂತರ ನಾನು ಆಫೀಸ್‌ ಕೆಲಸದ ಮೇಲೆ ದುಬೈಗೆ ಹೊರಟಿದ್ದೆ. ದುಬೈನಲ್ಲಿ 2 ದಿನ ಕಳೆದ ನಂತರ ಒಮ್ಮೆ ನನ್ನ ಪೋನ್‌ ರಿಂಗ್‌ ಆಯಿತು. ಯಾರೆಂದು ನೋಡಿದರೆ ಪಕ್ಕದ ಮನೆ ಆಂಟಿ!

ಅದನ್ನು ನಿರ್ಲಕ್ಷಿಸಲಾರದೆ ಕರೆ ಸ್ವೀಕರಿಸುತ್ತಾ, “ನಮಸ್ತೆ ಆಂಟಿ. ಹೇಗಿದ್ದೀರಿ? ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರಾ? ನಾನು ಆಫೀಸ್‌ ಕೆಲಸಾಗಿ ದುಬೈಗೆ ಬಂದಿದ್ದೇನೆ,” ಎಂದು ನಾನು ಬಿಝಿ ಎಂಬಂತೆ ಹೇಳಿದೆ.

lead-dharm-April1-23

“ಹೌದಪ್ಪ…. ಗೊತ್ತಾಯಿತು. ಹೀಗಾಗಿಯೇ ಫೋನ್‌ ಮಾಡಿದೆ. ಇವರು, ನಮ್ಮ ಆಶ್ರಮದ ಮೇಡಂ ನಿನ್ನ ಹತ್ತಿರ ಮಾತನಾಡಬೇಕಂತೆ,” ಎನ್ನುತ್ತಾ ಫೋನ್‌ ನ್ನು ಮತ್ತಾರ ಕೈಗೋ ಕೊಟ್ಟರು. ಆ ಕಡೆಯಿಂದ ಒಬ್ಬ ಮಹಿಳೆ ಗದಗಂಟಲಿನಲ್ಲಿ ಆರ್ಡರ್‌ ಮಾಡುವರಂತೆ, ಒಂದಿಷ್ಟೂ ಪೀಠಿಕೆ ಇಲ್ಲದೆ, “ನೀವು ದುಬೈನಿಂದ ಬರುವಾಗ 60-70 ಕಂಬಳಿ ತೆಗೆದುಕೊಂಡು ಬನ್ನಿ. ನಮ್ಮ ಆಶ್ರಮಕ್ಕೆ ಈಗ ತುಂಬಾ ಅರ್ಜೆಂಟ್‌ ಇದೆ…..”

ಓ….. ಆವತ್ತು ಪ್ರಸಾದ ಕೊಂಡು ಹೋಗಿ ಎಂದ ಅದೇ ಮಹಿಳೆ ಎಂದು ಧ್ವನಿಯಿಂದ ಗುರುತಿಸಿದೆ.

ಹಿಂದುಮುಂದು ತಿಳಿಯದವರ ಬಳಿ ಹೀಗೆ ದಬಾಯಿಸಿ ಕೇಳುತ್ತಿದ್ದಾರಲ್ಲ ಎನಿಸಿದರೂ, ಇರಲಿ ಆಂಟಿ ಮೂಲಕ ಮಾತನಾಡಿಸುತ್ತಿದ್ದಾರೆ, ಅದಕ್ಕೆ ಗೌರವ ಕೊಡೋಣ ಎಂದುಕೊಳ್ಳುತ್ತಾ, “ನೋಡಿ, ಈಗ ಇದನ್ನೆಲ್ಲ ನಾನು ಮಾಡಲಾರೆ. ನಾನು ಆಫೀಸ್‌ ಕೆಲಸದ ಮೇಲೆ ಬಂದಿದ್ದೇನೆ. ಮತ್ತೆ ಅಷ್ಟು ಕಂಬಳಿಗಳ ಲಗೇಜ್‌, ನನ್ನ ಪರ್ಸನ್‌ ಲಗೇಜ್‌ ಜೊತೆ ಬೆರೆಸಲಾಗದು. ಬೇರೆ  ರೀತಿ ಅದನ್ನು ಕಳುಹಿಸುವುದು ಸಹ ಕಷ್ಟ ಆಗುತ್ತೆ,” ಎಂದೆ.

ಸುಮ್ಮನಿರಬೇಕು ತಾನೇ? ನಾನೇ ಆಕೆ ಬಳಿ ಸಾಲ ಮಾಡಿರುವೆ ಎಂಬಂತೆ, “ಹೋಗಲಿ, ಕಂಬಳಿ ತರಲು ಆಗದಿದ್ದರೆ, ಅದಕ್ಕೆ ಎಷ್ಟು ಹಣ ತಗಲುತ್ತದೋ ಕೂಡಲೇ ಆಶ್ರಮಕ್ಕೆ ಕಟ್ಟಿಬಿಡಿ. ನಾನು ಬೇರೆಯವರ ಹತ್ತಿರ ತರಿಸಿಕೊಳ್ಳುತ್ತೇನೆ!” ಎಂದು ಗುಡುಗುವುದೇ?

ಅಷ್ಟು ಹೊತ್ತಿಗೆ ನನ್ನ ಸಹನೆ ಹಾರಿ ಹೋಗಿತ್ತು. “ಬಾಯಿ ಮುಚ್ಚಿಕೊಂಡು ಫೋನ್‌ ಇಡಿ!” ಎಂದು ಕೂಗಾಡಿ ನಾನು ಫೋನ್‌ ಕಾಲ್ ‌ಕಟ್‌ ಮಾಡಿದೆ.

ಇದನ್ನು ಆಕೆ ಆಂಟಿ ಮೇಲೆ ಒತ್ತಡ ಹೇರಿ ಅವರಿಂದ ಫೋನ್‌ ಮಾಡಿಸಿರಬಹುದಲ್ಲವೇ ಎಂದು ಯೋಚಿಸತೊಡಗಿದೆ. ಆಗ ನನಗೆ ಮತ್ತೊಂದು ವಿಚಾರ ನೆನಪಾಯಿತು. ಪಕ್ಕದ ಮನೆ ಪ್ರಭಾಕರ್‌, ಅವರ ಪತ್ನಿ, ಆಂಟಿಯ ಎಲ್ಲಾ ಖರ್ಚುಗಳನ್ನೂ ತಾವೇ ನೋಡಿಕೊಳ್ಳುತ್ತಿರುವುದಾಗಿ, ಅವರಿಗೆ ಬರುತ್ತಿದ್ದ ಪೆನ್ಶನ್‌ ಹಣ ಅದು ಹೇಗೆ ಅಷ್ಟು ಬೇಗ ಖಾಲಿ ಆಗುತ್ತದೋ ಎಂದು ಹೇಳುತ್ತಿದ್ದುದು ಥಟ್ಟನೆ ಹೊಳೆಯಿತು. ಆಗ ಆಂಟಿಯವರ ಪೂರ್ತಿ ಹಣ ಆಶ್ರಮದ ಸೇವಾರ್ಥ ಅಲ್ಲಿಯೇ ಸಂದಾಯವಾಗುತ್ತಿದೆ ಎಂಬುದು ಈಗ ಸ್ಪಷ್ಟವಾಗಿ ತಿಳಿಯಿತು.

ಫೋನ್‌ ಕರೆ ಕಟ್‌ ಆಯಿತು. ಆದರೆ ಅವರು ಬಿತ್ತಿದ ವಿಚಾರ ನನ್ನ ತಲೆ ಬಿಸಿ ಏರಿಸಿತು. ಧರ್ಮದ ರಾಜಕೀಯ ಇಂಥ ವಯಸ್ಸಾದವರನ್ನೂ ಬಿಡುತ್ತಿಲ್ಲವೇ ಎಂದು ಆಲೋಚಿಸುತ್ತಿದ್ದೆ. ಇಂಥ ಧರ್ಮದ ರಾಜಕೀಯ ಸಾಧಾರಣ ಜನತೆಯ ಪರವಾಗಿ ಸಹಾಯ ಮಾಡೀತೇ?

ಒಬ್ಬ ಸಾಧಾರಣ ಪ್ರಜೆಯ ಪೂಜೆ ಯಾವಾಗ ಫಲಿಸೀತು? ಆ ವ್ಯಕ್ತಿ ತನ್ನ ಸ್ವಂತ ಸೀಮಿತ ಸಂಪಾದನೆಯಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಅವರ ಭವಿಷ್ಯ ಸುಂದರವಾಗಿಸಲು ಸತತ ಪ್ರಯತ್ನಪಟ್ಟಾಗ ಮಾತ್ರ! ತನ್ನ ಹಾಗೂ ಮನೆಯವರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿ ಖರ್ಚು ನಿಭಾಯಿಸಿದಾಗ, ಮನೆಯವರೆಲ್ಲರ ಹೊಟ್ಟೆ ಬಟ್ಟೆಗೆ ಕೊರತೆಯಿಲ್ಲದಂತೆ ಗಮನಿಸಿಕೊಂಡಾಗ, ಎಲ್ಲರಿಗೂ ಮರ್ಯಾದೆಯಿಂದ 2 ಹೊತ್ತಿನ ಊಟ ಒದಗಿಸಿದಾಗ, ತಲೆಗೊಂದು ಸೂರಿನ ರಕ್ಷಣೆ ತೋರಿಸಿದಾಗ…. ಇವೆಲ್ಲವನ್ನೂ ಯಾವ ಧರ್ಮದ ಯಾವ ಗುರು, ಬಾಬಾ, ಮುಲ್ಲಾಗಳೂ ಒದಗಿಸಲಾರರು! ತಮ್ಮ ಸ್ವಂತ ಪರಿಶ್ರಮದಿಂದ ಮಾನವರು ಈ ಸಮಾಜದಲ್ಲಿ ಗೌರವ ಸ್ಥಾನ ಹೊಂದಬೇಕಷ್ಟೆ.

ಆದರೆ ಹೊಟ್ಟೆಬಟ್ಟೆ ಕಟ್ಟಿಯಾದರೂ ಈ ಎಲ್ಲಾ ಧರ್ಮದ ದಲ್ಲಾಳಿಗಳಿಗೆ ತಮ್ಮ ಸ್ವಂತ ಹಣವನ್ನು ಏಕೆ ಕೊಡಬೇಕು? ಅವರಿಗೆ ಕೊಡುವ ಅದೇ ಹಣವನ್ನು ಮಕ್ಕಳ ಉನ್ನತ ವ್ಯಾಸಂಗ, ಕೊರೋನಾದಂಥ ಹೆಮ್ಮಾರಿಯ ಕಾಟದಿಂದ ರಕ್ಷಣೆ ಪಡೆಯಲು ಬಳಸಿದರೆ ಇವರ ಸ್ಥಿತಿ ಎಷ್ಟೋ ಪಟ್ಟು ಸುಧಾರಿಸಿತು. ಆಗ ಕೊರೋನಾದ ಕಬಂಧ ಬಾಹುಗಳಿಗೆ ಇಷ್ಟು ಜೀವಗಳು ಬಲಿಯಾಗುತ್ತಿರಲಿಲ್ಲವೇನೋ….? ಯಾವ ರೋಗಯೇ ಇರಲಿ, ಶೀಘ್ರದಲ್ಲಿ ಅದಕ್ಕೆ ಉತ್ತಮ ಚಿಕಿತ್ಸೆ ಕೊಡಿಸದಿದ್ದರೆ, ಬೀದಿ ಬೀದಿಗಳಲ್ಲಿ ಜನ ಕೊರೋನಾದ ಮರಣ ಮೃದಂಗಕ್ಕೆ ತುತ್ತಾಗುತ್ತಿರಲಿಲ್ಲ.

ಇಂಥ ಧರ್ಮದ ರಾಜಕೀಯ ದಂಧೆ ನಡೆಸುವ ಮಂದಿಗೆ ಸಾಧಾರಣ ಜನ ಕೇವಲ ತೊಗಲುಗೊಂಬೆ ಮಾತ್ರ! ತಮ್ಮ ಮನಸ್ಸು ಬಂದಂತೆ ಅವರು ಈ ಪ್ರಜೆಗಳನ್ನು ಕುಣಿಸುತ್ತಾ ಇರುತ್ತಾರೆ, ಈ ಮುಗ್ಧರನ್ನು ಧರ್ಮದ ಗುಲಾಮಗಿರಿಗೆ ದೂಡುತ್ತಾರೆ. ಇದು ಈ ತಲೆಕೆಟ್ಟ ಮಂದಿಯ ಕುತಂತ್ರ, ಷಡ್ಯಂತ್ರವೆಂದರೂ ಉತ್ಪ್ರೇಕ್ಷೆಯಲ್ಲ. ಸದಾ ಬೆಳ್ಳಿ ರೊಟ್ಟಿ ಸವಿಯುವ, ಸುವರ್ಣ ಸಿಂಹಾಸನದಲ್ಲೇ ಮೆರೆಯುವ ಇವರಿಗೆ ಸಾಧಾರಣ ಪ್ರಜೆಗಳ ಕಷ್ಟಸುಖದ ಅರಿವು ಎಲ್ಲಿಂದ ಆದೀತು?

ಸಾಧಾರಣ ಭಕ್ತರನ್ನು ಸದಾ ನರಕದ ಭಯವೊಡ್ಡಿ ಸಂಕಟಪಡಿಸುವ ಈ ಮಹಾಶಯರು, ಅದೆಷ್ಟು ಸಲ ಆಕಾಶಕ್ಕೆ ಏಣಿ ಹಾಕಿ ಸ್ವರ್ಗ ನರಕಗಳನ್ನು ಕಂಡು ಬಂದಿದ್ದಾರಂತೆ?

ಧರ್ಮದ ಹೆಸರು ಹೇಳಿಕೊಂಡು ಸದಾ ದುರಹಂಕಾರವೆಂಬ ಮಾರ್ಗದಲ್ಲಿ ಒಂದೇ ಬದಿ ಮೆರೆಯುವ ಈ ಮಂದಿ, ಸದಾ ಮುಗ್ಧರ ಪರಿಶ್ರಮದ ಹಣವನ್ನು ಬಾಚಿ ದೋಚಿಕೊಂಡು ತಮ್ಮ ತಿಜೋರಿ ತುಂಬಿಸಿಕೊಳ್ಳುವ ಈ ಧರ್ಮದ ದಲ್ಲಾಳಿಗಳು, ತಮಗೂ ಒಂದು ದಿನ ಎಲ್ಲರಂತೆಯೇ ನೋವು ರೋಗರುಜಿನ, ಹಿಂಸಕಾರಕ ಸಾವು ಬರುತ್ತದೆ ಎಂಬುದನ್ನು ಏಕೆ ಮರೆಯುತ್ತಾರೆ? ಇವರು ಮಾಡುವ ಈ ದುಷ್ಟಟಗಳಿಗೆ ಇವರಿಗೆ ಶಿಕ್ಷೆ ಆಗುವುದಿಲ್ಲವೇ? ಸದಾ ಹಣ ಹೆಂಡದ ಹುಚ್ಚು ಹೊಳೆಯಲ್ಲಿ ಮಿಂದೇಳುವ ಈ ಮಹನೀಯರು, ಅದು ಹೇಗೆ ಸಾಧಾರಣ ಭಕ್ತರನ್ನು ಈ ಭವಸಾಗರದಿಂದ ಕಾಪಾಡಬಲ್ಲರು? ಈ ಬಗ್ಗೆ ನೀವು ಎಂದಾದರೂ ವಿಚಾರಿಸಿದ್ದೀರಾ?

ಧರ್ಮ ಎಂಬುದನ್ನು ಈ ದಲ್ಲಾಳಿಗಳು, ತಮ್ಮ ರಾಜಕೀಯವೆಂಬ ಶಾಲೆನಲ್ಲಿ ಸುತ್ತಿಕೊಂಡು ಅಮಾಯಕರ ಮೇಲೆ ಬೀಸುತ್ತಿರುತ್ತಾರೆ, ಮುಗ್ಧಭಕ್ತರು ಅದಕ್ಕೆ ಬಲಿಯಾಗುತ್ತಾ ಸದಾ ತಮ್ಮದೆಲ್ಲವನ್ನೂ ಕಳೆದುಕೊಳ್ಳುತ್ತಾ ಇರುತ್ತಾರೆ. ರಾಜಕೀಯವನ್ನೇ  ಧರ್ಮವಾಗಿಸಿಕೊಂಡ ಈ ದಲ್ಲಾಳಿಗಳು ಯಾರ ನೀತಿನಿಜಾಯಿತಿಗಳಿಗೆ ಬೆಲೆ ಕೊಟ್ಟಾರು? ಇಂಥವರ ಮುಂದೆ ಪ್ರಾಮಾಣಿಕತೆ, ನ್ಯಾಯ, ನೀತಿಗಳಿಗೆ ಬೆಲೆ ಎಲ್ಲಿ?

ರಾಜಕೀಯ ಪುಢಾರಿಗಳಿಗಂತೂ ಸದಾ ತಮ್ಮ ಅಧಿಕಾರದ ಕುರ್ಚಿಗಳನ್ನು ಉಳಿಸಿಕೊಳ್ಳುವುದರತ್ತ ಮಾತ್ರ ಗಮನವಿರುತ್ತದೆ. ಹಾಗಾಗಿ ಅವರು ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಧರ್ಮದ ಮೊರೆ ಹೋಗುತ್ತಾರೆ, ಅಮಾಯಕ ಭಕ್ತರ ಪ್ರಾಣದ ಜೊತೆ ಚೆಲ್ಲಾಟವಾಡಿ ತಮ್ಮ ಹಿತ ಕಾಯ್ದುಕೊಳ್ಳುತ್ತಾರೆ. ಹೀಗೆ ಧರ್ಮದ ಆಧಾರದಿಂದ ಅಧಿಕಾರದ ಗದ್ದುಗೆ ಹಿಡಿದವರು, ಅದನ್ನು ಶಾಶ್ವತವಾಗಿ ಉಳಿಸಿಕೊಂಡು ಸುಖಪಡಲು ಸಾಧ್ಯವೇ? ಹಾಗಾಗಿಯೇ ಆ ಅಧಿಕಾರದ ಅವಧಿ ಶಾಶ್ವತವಾಗಿರಲೆಂದು, ಅಮಾಯಕರನ್ನು ಬಲಿ ಹಾಕಲು ಧರ್ಮದ ಹೆಸರಿನಲ್ಲಿ ಎಲ್ಲರನ್ನೂ ಲೂಟಿ ಮಾಡುತ್ತಲೇ ಇರುತ್ತಾರೆ.

ಧರ್ಮದ ಹೆಸರಿನಲ್ಲಿ ದೊಡ್ಡ ಹುಂಡಿ ಇರಿಸಿ ಅದನ್ನು ಅಮಾಯಕರ ಹಣದಿಂದ ತುಂಬಿಸಿಕೊಳ್ಳುವುದೇ ಈ ಎಲ್ಲಾ ಧರ್ಮಾಂಧರ ಮುಖ್ಯ ಗುರಿ. ಅಮಾಯಕ ಮುಗ್ಧ ಜನರನ್ನು ತಮ್ಮ ಮರುಳು ಮಾತುಗಳಿಂದ ಮೋಸಗೊಳಿಸುತ್ತಾ, ಈ ಹುಂಡಿ ತುಂಬಿಸಿಕೊಳ್ಳುವುದೇ ಇವರ ಮೂಲಧರ್ಮ!

ಇನ್ನು ಈ ಭಕ್ತಗಣದ ಗೋಳನ್ನು ಕೇಳುವವರಾರು? ಇದ್ದುದೆಲ್ಲವನ್ನೂ ಅವರ ಹುಂಡಿ ತುಂಬಿಸಲು ನೀಡಿ, ಬರಿಗೈ ದಾಸರಾಗಿ ಈ ಮುಗ್ಧಮಂದಿ ಅಸಹಾಯಕತೆಯಿಂದ ಕಂಬನಿ ಸುರಿಸುತ್ತಾರಷ್ಟೆ. ಯಾವಾಗ ಇವರು ಏನೂ ಇಲ್ಲದ ಬರಿಗೈನವರಾದರೆಂದು ಆ ಮಹನೀಯರಿಗೆ ತಿಳಿಯುತ್ತದೋ, ಇವರನ್ನು ಯಾವ ಧರ್ಮದ ಗುತ್ತಿಗೆದಾರರೂ ತಮ್ಮ ಹತ್ತಿರ ಸೇರಿಸಿಕೊಳ್ಳುವುದಿಲ್ಲ.

ಒಟ್ಟಾರೆ ಸಾರಾಂಶ ಅಂದ್ರೆ, ಧರ್ಮದ ರಾಜಕೀಯವೇ ಇರಲಿ ಅಥವಾ ರಾಜಕೀಯದ ಧರ್ಮವೇ ಆಗಲಿ, ಅದಕ್ಕೆ ಬಲಿಯಾಗುವವರು ಮಾತ್ರ ಅಮಾಯಕರ ಮುಗ್ಧ ಪ್ರಜೆಗಳು. ಇದು ಬೇಲಿ ಮೇಲೆ ಸೀರೆ ಬಿದ್ದರೂ, ಸೀರೆಗೆ ಬೇಲಿಯ ಮುಳ್ಳು ತಗುಲಿದರೂ ಒಂದೇ ಎಂಬ ಸೂತ್ರದಂತಿದೆ. ಇಲ್ಲಿ ಅಮಾಯಕರು ತಮ್ಮ ತನುಮನಧನಗಳನ್ನು ಈ ಲೂಟಿಕೋರರೆಂಬ ಕಂಬಂಧ ಬಾಹುಗಳಿಂದ ಸದಾ ಸಂರಕ್ಷಿಸಿಕೊಳ್ಳಬೇಕಾದುದು ಅವರವರ ವಿವೇಕಕ್ಕೆ ಬಿಟ್ಟದ್ದು.

ಇಲ್ಲಿ ಮೂಢನಂಬಿಕೆ, ಅಂಧಶ್ರದ್ಧೆ, ಕುರುಡು ವಿಚಾರಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿರುವವರು ಮುಗ್ಧರಾದ ನಮ್ಮ ನಿಮ್ಮಂಥ ಪ್ರಜೆಗಳು. ಕಣ್ಣಿಗೆ ಪಟ್ಟಿ ಕಟ್ಟಿಕೊಂಡು, ಕಂಡವರು ಹೇಳಿದ ಹಳ್ಳವನ್ನು ಇರುಳಲ್ಲೇ ಕಂಡಿದ್ದರೂ ಅದಕ್ಕೆ ಹಗಲಲ್ಲಿ ಹಾರಿಕೊಳ್ಳುವಂಥ ಅವಿವೇಕಿಗಳಾಗಬಾರದು.

ಒಬ್ಬ ಗಾಂಧಾರಿ ಕಣ್ಣಿಗೆ ಕಟ್ಟಿಕೊಂಡ ಪಟ್ಟಿಯಿಂದಾಗಿ, ಕುರುಡು ಪತಿ ಧೃತರಾಷ್ಟ್ರನನ್ನು ಅನುಸರಿಸಿದ ತಪ್ಪಿಗಾಗಿ, ಅವಳ 100 ಮಕ್ಕಳು ಮಹಾಭಾರತದ ಘನಘೋರ ಯುದ್ಧಕ್ಕೆ ದುಮುಕುವಂತಾದರು, ಹಾಗಿರುವಾಗ ನಮ್ಮ ಇಡೀ ಭಾರತ ದೇಶದ ಕಲಿತ/ಕಲಿಯದ ಹೆಣ್ಣುಮಕ್ಕಳು ಧರ್ಮ ಎಂಬ ಕುರುಡುಪಟ್ಟಿಯನ್ನು ಕಣ್ಣಿಗೆ ಕಟ್ಟಿಕೊಂಡು, ಮೂಗೆತ್ತಿನಂತೆ ದುಡಿಯುತ್ತಾ, ಈ ದಲ್ಲಾಳಿಗಳ ರಕ್ತಪಿಪಾಸುತನಕ್ಕೆ ತಮ್ಮ ಪರಿಶ್ರಮದ ಧಾರೆ ಎರೆಯುತ್ತಿದ್ದರೆ, ಈ ದೇಶದಲ್ಲಿ ಮುಂದೆ ಇನ್ನೂ ಅದೆಷ್ಟು ಭೀಕರ ಯುದ್ಧಗಳಾಗಬೇಕಿದೆಯೋ…?ಹಾಗಾದರೆ….. ಇದಕ್ಕೆ ಪರಿಹಾರವಾದರೂ ಏನು? ಮೂಢನಂಬಿಕೆ, ಅಂಧಶ್ರದ್ಧೆ, ಕುರುಡುಭಾವನೆಗಳೆಂಬ ಧರ್ಮದ ವ್ಯಾಮೋಹ ತ್ಯಜಿಸಿ ವಿವೇಕ, ಬುದ್ಧಿವಂತಿಕೆ, ವಿಜ್ಞಾನಗಳೆಂಬ ಆಧುನಿಕ ಅಸ್ತ್ರ ಹಿಡಿದು, ವಾಸ್ತವತೆ ಎಂಬ ಎದುರಾಳಿಯನ್ನು ಧ್ವಂಸ ಮಾಡಲು ದಿನದಿನ ಎಲ್ಲರೂ ಸಿದ್ಧರಾಗಲೇಬೇಕು. ಆಗ ಮಾತ್ರ ಧರ್ಮದ ದಲ್ಲಾಳಿಗಳ ಕಪಿಮುಷ್ಟಿಯಿಂದ ನಮಗೆ ನಿಜವಾದ ಸ್ವಾತಂತ್ರ್ಯ ಲಭಿಸಲು ಸಾಧ್ಯ!

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ