“दाने दाने पर लिखा है खाने वाले का नाम”
“ಪ್ರತಿಯೊಂದು ಅನ್ನದ ಕಾಳಿನ ಮೇಲೂ ಅದನ್ನು ತಿನ್ನುವವನ ಹೆಸರನ್ನು ದೇವರು ಬರೆದಿರುತ್ತಾನೆ” ಎಂಬ ಅರ್ಥವನ್ನು ನೀಡುವ ಈ ಹಿಂದಿ ಮಾತು ಕೇವಲ ಒಂದು ಗಾದೆಯಲ್ಲ. ಅದರೊಳಗೆ ಬದುಕಿನ ಒಂದು ದೊಡ್ಡ ಸತ್ಯ ಅಡಗಿದೆ. ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ, ಸಾವಿರಾರು ಕೋಟಿ ರೂಪಾಯಿ ಸಂಪತ್ತಿನ ಒಡೆಯನಾಗಿರಲಿ, ಹೊಟ್ಟೆ ಹಸಿದಿರುವಾಗ ಒಂದು ತುತ್ತು ಅನ್ನ ಸಿಗದಿದ್ದರೆ ಆ ಸಂಪತ್ತಿನ ಬೆಲೆ ಎಷ್ಟು? ಅನ್ನವೆಂದರೆ ಕೇವಲ ಹೊಟ್ಟೆ ತುಂಬಿಸುವ ಆಹಾರವಲ್ಲ. ಅದು ಕೆಲವೊಮ್ಮೆ ಹಸಿವಿನ ದಿನಗಳ ನೆನಪು, ಅವಮಾನವನ್ನು ಸಹಿಸಿಕೊಂಡ ದಿನಗಳ ನೆನಪು, ಹೋರಾಟದ ದಿನಗಳ ನೆನಪು ಮತ್ತು ನಮ್ಮನ್ನು ಬೆಳೆಸಿದವರ ಋಣದ ನೆನಪು ಕೂಡ ಆಗಿರುತ್ತದೆ. ಭಾರತೀಯ ಸಂಗೀತ ಲೋಕದ ಇಬ್ಬರು ದಿಗ್ಗಜರಾದ ಕೆ. ಜೆ. ಜೇಸುದಾಸ್ ಮತ್ತು ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ (ಎಸ್. ಪಿ. ಬಾಲಸುಬ್ರಹ್ಮಣ್ಯಂ) ಅವರ ನಡುವೆ ನಡೆದಿತ್ತೆಂದು ಹೇಳಲಾಗುವ ಒಂದು ಹೃದಯಸ್ಪರ್ಶಿ ಪ್ರಸಂಗ ಇದೇ ಸತ್ಯವನ್ನು ಬಹಳ ಸುಂದರವಾಗಿ ಹೇಳುತ್ತದೆ.
ಹೊಟ್ಟೆ ತುಂಬಿದವರಿಗೂ ಹಸಿವಿನ ದಿನಗಳು ಮರೆಯುವುದಿಲ್ಲ

ಒಮ್ಮೆ ಜೇಸುದಾಸ್ ಮತ್ತು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ವಿದೇಶವೊಂದರಲ್ಲಿ ಸಂಗೀತ ಕಾರ್ಯಕ್ರಮಕ್ಕಾಗಿ ತೆರಳಿದ್ದರು. ಕಾರ್ಯಕ್ರಮ ಸಂಜೆ ನಡೆಯಬೇಕಿತ್ತು. ಹೊರಡುವ ಮುನ್ನ ಜೇಸುದಾಸ್ ಕಾರ್ಯಕ್ರಮದ ವ್ಯವಸ್ಥಾಪಕರಿಗೆ, “ಕಾರ್ಯಕ್ರಮ ಮುಗಿಸಿ ನಾವು ರೂಮಿಗೆ ಬಂದ ನಂತರ ಊಟ ತಂದುಕೊಡಿ” ಎಂದು ತಿಳಿಸಿ ಎಸ್.ಪಿ.ಬಿ ಅವರೊಂದಿಗೆ ಕಾರ್ಯಕ್ರಮಕ್ಕೆ ತೆರಳಿದರು.
ಎಸ್.ಪಿ.ಬಿ ಅವರಿಗೆ ಊಟದ ವಿಷಯದಲ್ಲಿ ಅಷ್ಟೊಂದು ಚಿಂತೆ ಇರಲಿಲ್ಲ. ಅವರು ಕಟ್ಟುನಿಟ್ಟಿನ ಸಸ್ಯಾಹಾರಿಯಾಗಿದ್ದರು. ವಿದೇಶ ಪ್ರವಾಸಗಳಲ್ಲಿಯೂ ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಹಲವು ಸಂದರ್ಭಗಳಲ್ಲಿ ಅವರ ಪತ್ನಿ ಸಾವಿತ್ರಿಯವರು ಜೊತೆಯಲ್ಲಿದ್ದು, ಅಗತ್ಯವಾದ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಜೇಸುದಾಸ್ ಅವರ ಆಹಾರ ಪದ್ಧತಿ ಮಾತ್ರ ಅದಕ್ಕಿಂತ ಭಿನ್ನವಾಗಿತ್ತು.
ಸಮಯ ರಾತ್ರಿ ಹನ್ನೊಂದೂವರೆ… ಊಟ ಮಾತ್ರ ಬರಲಿಲ್ಲ!
ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು. ಇಬ್ಬರೂ ಹೋಟೆಲ್ಗೆ ಮರಳಿದರು. ಸಾವಿತ್ರಿಯವರು ಎಸ್.ಪಿ.ಬಿ ಅವರಿಗಾಗಿ ಆಹಾರ ಸಿದ್ಧಪಡಿಸಿದರು. ಆದರೆ ಜೇಸುದಾಸ್ ಅವರ ರೂಮಿಗೆ ಮಾತ್ರ ಊಟ ಬರಲಿಲ್ಲ. ಸಮಯ ಕಳೆಯುತ್ತಲೇ ಹೋಯಿತು. ರಾತ್ರಿ ಹನ್ನೊಂದೂವರೆ! ಆದರೂ ರೂಮ್ ಸರ್ವೀಸ್ನಿಂದ ಯಾವುದೇ ಊಟ ಬರಲಿಲ್ಲ. ಎಸ್.ಪಿ.ಬಿ ಅವರಿಗೆ ಜೇಸುದಾಸ್ ಅವರ ಹಸಿವಿನ ಬಗ್ಗೆ ಕಾಳಜಿ ಉಂಟಾಯಿತು. ಅವರು ಕಾರ್ಯಕ್ರಮದ ಮ್ಯಾನೇಜರ್ಗೆ ದೂರವಾಣಿ ಕರೆ ಮಾಡಿ, ಜೇಸುದಾಸ್ ಅವರ ಊಟ ಇನ್ನೂ ಬಂದಿಲ್ಲವಲ್ಲ? ಎಂದು ವಿಚಾರಿಸಿದರು. ಆದರೆ ಅಲ್ಲಿಂದ ಬಂದ ಉತ್ತರ ಸ್ಪಷ್ಟವಾಗಿರಲಿಲ್ಲ. ಇನ್ನು ಕಾಯುವುದು ಸರಿಯಲ್ಲ ಎಂದು ಅರಿತ ಎಸ್.ಪಿ.ಬಿ ತಮ್ಮ ರೂಮಿನಲ್ಲಿ ತಯಾರಿಸಿದ್ದ ಅನ್ನ-ಸಾಂಬಾರನ್ನು ತೆ
“ಏಂಟಪ್ಪಾ… ಇಷ್ಟು ಹೊತ್ತಿನಲ್ಲಿ?”

ಬಾಗಿಲು ತೆರೆದ ಜೇಸುದಾಸ್ ಆಶ್ಚರ್ಯದಿಂದ, “ಏಂಟಪ್ಪಾ ಬಾಲು… ಇಷ್ಟು ಹೊತ್ತಿನಲ್ಲಿ ಹೀಗೆ?” ಎಂದು ಕೇಳಿದರು. ಎಸ್.ಪಿ.ಬಿ ಸ್ವಲ್ಪ ಸಂಕೋಚದಿಂದ, “ನಿಮ್ಮ ರೂಮಿಗೆ ಊಟ ಬಂದಿಲ್ಲವಲ್ಲ. ಅದಕ್ಕಾಗಿ ನಮ್ಮ ರೂಮಿನಲ್ಲಿ ಮಾಡಿದ್ದ ಊಟವನ್ನು ನಿಮಗಾಗಿ ತಂದೆ. ನಿಮಗೆ ಇಷ್ಟವಾಗುತ್ತದೋ ಇಲ್ಲವೋ ಗೊತ್ತಿಲ್ಲ…” ಎಂದರು. ಜೇಸುದಾಸ್ ಆ ಊಟದ ತಟ್ಟೆಯನ್ನು ತೆಗೆದುಕೊಂಡರು. ಟೇಬಲ್ ಮೇಲೆ ಕುಳಿತು ಮೊದಲ ತುತ್ತನ್ನು ಬಾಯಿಗೆ ಹಾಕಿದರು. ಆ ಕ್ಷಣ… ಅವರ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಹರಿಯತೊಡಗಿತು. ಅದು ಕೇವಲ ಹಸಿವಿನ ಕಣ್ಣೀರಾಗಿರಲಿಲ್ಲ. ಅದು ನೆನಪುಗಳ ಕಣ್ಣೀರು.
“ಬಾಲು… ನಾನು ಬಹಳ ಕಷ್ಟಪಟ್ಟು ಬೆಳೆದವನು”

ಜೇಸುದಾಸ್ ಕಣ್ಣೀರು ಹಾಕುತ್ತಲೇ ಬಾಲು ಅವರತ್ತ ತಿರುಗಿ ಹೇಳಿದರು ಎನ್ನಲಾಗುತ್ತದೆ:
“ಬಾಲು… ಜೀವನದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿ ಬೆಳೆದವನು ನಾನು. ಕೆಲವೊಮ್ಮೆ ದೇವಸ್ಥಾನದ ಪ್ರಸಾದವೇ ನನ್ನ ಊಟವಾಗಿತ್ತು. ಯಾರಾದರೂ ನನ್ನನ್ನು ಭಿಕ್ಷುಕ, ಎಂದುಕೊಳ್ಳುತ್ತಾರೋ ಎಂಬ ಅಳುಕಿನಿಂದ, ಕೆಲವು ದೇವಸ್ಥಾನಗಳ ಮುಂದೆ ದೇವರ ಹಾಡು ಹಾಡಿ, ನಂತರ ಸಿಗುತ್ತಿದ್ದ ಪ್ರಸಾದವನ್ನು ತೆಗೆದುಕೊಂಡು ತಿಂದು ಬದುಕಿದ್ದ ದಿನಗಳಿವೆ.”
ಆ ಮಾತು ಕೇಳಿದ ಎಸ್.ಪಿ.ಬಿ ಅವರಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಅಳಬೇಡಿ ಅಣ್ಣಾ… ಎಂದು ಮಾತ್ರ ಸಮಾಧಾನಪಡಿಸಿದರು. ಆಗ ಜೇಸುದಾಸ್ ಹೇಳಿದ ಮಾತು ಇನ್ನೂ ಆಳವಾದದ್ದು:
“ಈಗ ನಾನು ಕಣ್ಣೀರು ಹಾಕುತ್ತಿರುವುದು ದುಃಖದಿಂದಲ್ಲಪ್ಪಾ. ಇಂದು ಬೇಕೆಂದರೆ ನಾನು ಇರುವ ಈ ಹೋಟೆಲ್ನ್ನೇ ಖರೀದಿಸಬಹುದು. ಆದರೆ ಹಳೆಯ ದಿನಗಳನ್ನು ಹೇಗೆ ಮರೆಯಲಿ? ಈ ಕಣ್ಣೀರಿನ ಪ್ರತಿಯೊಂದು ಹನಿಯೂ ನನ್ನ ಜೀವನದ ಹಳೆಯ ಮೆಟ್ಟಿಲುಗಳ ಒಂದೊಂದು ನೆನಪು. ಇಂತಹ ಒಂದು ತುತ್ತು ಅನ್ನ ಕೆಲವೊಮ್ಮೆ ನಮ್ಮನ್ನು ನಮ್ಮ ಹಿಂದಿನ ಬದುಕಿನ ಮುಂದೆ ನಿಲ್ಲಿಸುತ್ತದೆ.”
ಎಷ್ಟು ದೊಡ್ಡ ಸಾಧನೆ ಮಾಡಿದರೂ, ಹಸಿವಿನ ದಿನಗಳಲ್ಲಿ ಸಿಕ್ಕ ಒಂದು ತುತ್ತು ಅನ್ನದ ಋಣವನ್ನು ಮನುಷ್ಯ ಮರೆಯುವುದಿಲ್ಲ ಎಂಬುದನ್ನು ಈ ಪ್ರಸಂಗ ಎಷ್ಟು ಸುಂದರವಾಗಿ ಹೇಳುತ್ತದೆ!
ಕಷ್ಟ ಕಲಿಸಿದ ಮತ್ತೊಂದು ಪಾಠ – ರವೀಂದ್ರ ಜೈನ್
ಜೇಸುದಾಸ್ ತಮ್ಮ ಬದುಕಿನಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡುವಾಗ ಮತ್ತೊಂದು ಘಟನೆಯನ್ನು ನೆನಪಿಸಿಕೊಂಡರು ಎನ್ನಲಾಗುತ್ತದೆ. ಹಿಂದಿ ಚಿತ್ರರಂಗಕ್ಕೆ ಅವರನ್ನು ಪರಿಚಯಿಸಿದ ಖ್ಯಾತ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಅವರೊಂದಿಗೆ ರೆಕಾರ್ಡಿಂಗ್ ನಡೆಯುತ್ತಿದ್ದ ಒಂದು ಸಂದರ್ಭದಲ್ಲಿ, ರವೀಂದ್ರ ಜೈನ್ ಅವರ ತಂದೆ ನಿಧನರಾದ ಸುದ್ದಿ ಬಂದಿತಂತೆ. ಆದರೂ ರವೀಂದ್ರ ಜೈನ್ ರೆಕಾರ್ಡಿಂಗ್ ಅನ್ನು ಅರ್ಧದಲ್ಲೇ ನಿಲ್ಲಿಸಿ ಹೊರಟುಹೋಗಲಿಲ್ಲ. ಮೊದಲು ತಮ್ಮ ವೃತ್ತಿಪರ ಕರ್ತವ್ಯವನ್ನು ಪೂರ್ಣಗೊಳಿಸಿ ನಂತರ ಹೊರಟರು. ಜೇಸುದಾಸ್ ಅವರ ಮಾತಿನಲ್ಲಿ,
“ಇಂತಹವರಿಂದಲೇ ಕಠಿಣ ಪರಿಶ್ರಮ ಎಂದರೇನು, ವೃತ್ತಿಯ ಮೇಲಿನ ಬದ್ಧತೆ ಎಂದರೇನು ಎಂಬುದನ್ನು ಕಲಿತಿದ್ದೇನೆ.”
ಎಂಬ ಭಾವವಿತ್ತು. ಜೀವನದಲ್ಲಿ ಯಶಸ್ಸು ಎಂದರೆ ಕೇವಲ ಪ್ರತಿಭೆಯ ಫಲವಲ್ಲ. ಪ್ರತಿಭೆ + ಪರಿಶ್ರಮ + ಶಿಸ್ತು + ಅವಕಾಶ + ನಿರಂತರ ಪ್ರಯತ್ನ ಇವೆಲ್ಲವೂ ಸೇರಿದಾಗ ಮಾತ್ರ ದೊಡ್ಡ ಸಾಧನೆ ಸಾಧ್ಯ.
ನಿನ್ನ ಧ್ವನಿ ಬಾವಿಯೊಳಗಿಂದ ಕೂಗಿದ ಹಾಗೆ ಇದೆ!
ಜೇಸುದಾಸ್ ಅವರ ಆರಂಭದ ದಿನಗಳ ಮತ್ತೊಂದು ಪ್ರಸಂಗವೂ ಬಹಳ ಪ್ರಸಿದ್ಧವಾಗಿದೆ. ಯುವಕರಾಗಿದ್ದಾಗ ಅವಕಾಶಕ್ಕಾಗಿ ಅವರು ತಿರುವನಂತಪುರಂನ ಆಲ್ ಇಂಡಿಯಾ ರೇಡಿಯೋದಲ್ಲಿದ್ದ ಒಬ್ಬ ಸಂಗೀತ ನಿರ್ದೇಶಕರನ್ನು ಭೇಟಿಯಾಗಿದ್ದರೆಂದು ಹೇಳಲಾಗುತ್ತದೆ. ಒಂದು ಅವಕಾಶ ಕೊಡಿ ಎಂದು ಕೇಳಿಕೊಂಡರು. ಅವರ ಎರಡು ಸಾಲುಗಳ ಸ್ವರ ಪರೀಕ್ಷೆಯನ್ನು ಕೇಳಿದ ನಂತರ ಆ ಸಂಗೀತ ನಿರ್ದೇಶಕ ಜೇಸುದಾಸ್ ಅವರ ಧ್ವನಿಯನ್ನು ಹೀಯಾಳಿಸಿ,
“ನಿನ್ನ ಧ್ವನಿ ಬಾವಿಯೊಳಗೆ ಬಿದ್ದು ಕೂಗಿಕೊಂಡವರ ತರಹ ಇದೆ. ಹೋಗು… ಯಾವುದಾದರೂ ಸೋಪ್ ಜಾಹೀರಾತಿನಲ್ಲಿ ಮಾತನಾಡಲು ಮಾತ್ರ ನಿನ್ನ ಧ್ವನಿ ಸರಿಹೋಗಬಹುದು!”
ಎಂದು ಹೇಳಿ ಕಳುಹಿಸಿದರೆಂದು ಈ ಪ್ರಸಂಗದಲ್ಲಿ ಹೇಳಲಾಗುತ್ತದೆ. ಒಬ್ಬ ಯುವ ಗಾಯಕನಿಗೆ ಇದು ಎಷ್ಟು ದೊಡ್ಡ ಅವಮಾನವಾಗಿರಬಹುದು? ಆದರೆ ಜೇಸುದಾಸ್ ಆ ಮಾತುಗಳನ್ನು ತಮ್ಮ ಬದುಕಿನ ಅಂತ್ಯವನ್ನಾಗಿ ಮಾಡಿಕೊಳ್ಳಲಿಲ್ಲ. ಅದೇ ಮಾತುಗಳನ್ನು ತಮ್ಮ ಬದುಕಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡರು. “ಒಂದು ದಿನ ಇದೇ ಧ್ವನಿಯ ಮೂಲಕ ನಿನ್ನ ಮುಂದೆ ಮತ್ತೆ ಬರುತ್ತೇನೆ” ಎಂಬ ಹಠ ಅವರೊಳಗೆ ಮೂಡಿತು. ಮುಂದೆ ನಡೆದದ್ದು ಭಾರತೀಯ ಸಂಗೀತ ಇತಿಹಾಸವೇ.
ಹೀಯಾಳಿಕೆಯನ್ನೇ ಮೆಟ್ಟಿಲಾಗಿಸಿಕೊಂಡ ಗಾಯಕ
ಜೇಸುದಾಸ್ ಅವರ ಜೀವನದ ಈ ಪ್ರಸಂಗ ನಮಗೆ ಒಂದು ಬಹಳ ದೊಡ್ಡ ಪಾಠ ಕಲಿಸುತ್ತದೆ. ಯಾರಾದರೂ ನಮ್ಮನ್ನು ಟೀಕಿಸಿದಾಗ ಅಥವಾ ಹೀಯಾಳಿಸಿದಾಗ ಎರಡು ದಾರಿಗಳಿರುತ್ತವೆ.
ಒಂದು—ನೊಂದು ಅಲ್ಲೇ ನಿಂತುಬಿಡುವುದು.
ಇನ್ನೊಂದು—ಅದೇ ಅವಮಾನವನ್ನು ಇಂಧನವನ್ನಾಗಿ ಮಾಡಿಕೊಂಡು ಮುಂದೆ ಸಾಗುವುದು.
ಜೇಸುದಾಸ್ ಎರಡನೇ ದಾರಿಯನ್ನು ಆಯ್ಕೆ ಮಾಡಿಕೊಂಡರು. ಅವರ ಸಾಧನೆಯ ಪಯಣ ಅಂತಿಮವಾಗಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮವಿಭೂಷಣ ಸೇರಿದಂತೆ ಪದ್
“ನೀನು ಸಾಧ್ಯವಿಲ್ಲ” ಎಂಬ ಮಾತಿಗೆ “ನಾನು ಮಾಡಿಯೇ ತೋರಿಸುತ್ತೇನೆ” ಎಂದು ಉತ್ತರಿಸಿದ ಒಬ್ಬ ಕಲಾವಿದನ ಕಥೆ.
ಘಂಟಸಾಲ ಅವರಿಗೂ ಆಗಿತ್ತು ಇಂತಹದ್ದೇ ಅನುಭವ!
ಇದೇ ರೀತಿಯ ಹೀಯಾಳಿಕೆಯನ್ನು ದಕ್ಷಿಣ ಭಾರತದ ಮತ್ತೊಬ್ಬ ಮಹಾನ್ ಗಾಯಕ ಘಂಟಸಾಲ ಅವರೂ ಎದುರಿಸಿದ್ದರೆಂಬ ಪ್ರಸಂಗಗಳಿವೆ. ಒಂದು ಕಾಲದಲ್ಲಿ HMV ಗ್ರಾಮೋಫೋನ್ ಕಂಪನಿಯಿಂದಲೂ ಅವರಿಗೆ ನಿರಾಶಾದಾಯಕ ಪ್ರತಿಕ್ರಿಯೆ ದೊರೆತಿತ್ತೆಂದು ಹೇಳಲಾಗುತ್ತದೆ. ಆದರೆ ಇತಿಹಾಸ ತೋರಿಸುವ ಸಂಗತಿ ಒಂದೇ: ಅಂದು ಅವಕಾಶ ನೀಡದವರು ನಂತರ ಅವರ ಧ್ವನಿಯನ್ನು ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ. ಇದು ಪ್ರತಿಭೆಯ ಒಂದು ವಿಚಿತ್ರ ಗುಣ. ಅದನ್ನು ತಡೆಯಬಹುದು. ತಡಮಾಡಬಹುದು. ಅವಮಾನಿಸಬಹುದು. ಆದರೆ ನಿಜವಾದ ಪ್ರತಿಭೆ ಮತ್ತು ಪರಿಶ್ರಮವನ್ನು ಶಾಶ್ವತವಾಗಿ ನಿಲ್ಲಿಸಲು ಸಾಧ್ಯವಿಲ್ಲ.
ಎರಡು ಭಾಷೆ ಹೊರತುಪಡಿಸಿ ಬಹುತೇಕ ಭಾರತೀಯ ಭಾಷೆಗಳಲ್ಲಿ ಹಾಡಿದ ಗಾಯಕ!

ಜೇಸುದಾಸ್ ಅವರ ಸಂಗೀತ ಪಯಣದ ಮತ್ತೊಂದು ವಿಶೇಷ ಸಂಗತಿಯೆಂದರೆ, ಅವರು ಭಾರತದ ಬಹುತೇಕ ಪ್ರಮುಖ ಭಾಷೆಗಳಲ್ಲಿ ಹಾಡಿದ್ದಾರೆ. ಬರವಣಿಗೆಯ ಪರಂಪರೆ ಸೀಮಿತವಾಗಿರುವ ಕೆಲವು ಭಾಷೆಗಳಲ್ಲಿಯೂ ಹಾಡಿರುವ ಅಪರೂಪದ ದಾಖಲೆ ಅವರ ಹೆಸರಿನಲ್ಲಿದೆ ಎಂದು ಹೇಳಲಾಗುತ್ತದೆ. ಅವರ ಧ್ವನಿ ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ, ಬೆಂಗಾಳಿ, ಒಡಿಯಾ ಸೇರಿದಂತೆ ಹಲವು ಭಾರತೀಯ ಭಾಷೆಗಳ ಗಡಿ ದಾಟಿದೆ. ಅದರಲ್ಲೂ ವಿಭಿನ್ನ ರಾಜ್ಯಗಳಿಂದ ಅತ್ಯುತ್ತಮ ಗಾಯಕನ ಪ್ರಶಸ್ತಿಗಳನ್ನು ಅನೇಕ ಬಾರಿ ಪಡೆದಿರುವುದು ಅವರ ಬಹುಭಾಷಾ ಸಂಗೀತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಅವರು ಹಾಡಿದ ಹಾಡುಗಳು ಭಾಷೆಯ ಗಡಿಗಳನ್ನು ದಾಟಿ ಜನರ ಹೃದಯಕ್ಕೆ ತಲುಪಿವೆ.
ಒಂದು ತುತ್ತು ಅನ್ನದಿಂದ ಆರಂಭವಾದ ನೆನಪು…
ಆ ರಾತ್ರಿ ಎಸ್.ಪಿ.ಬಿ ತಂದಿದ್ದ ಅನ್ನ-ಸಾಂಬಾರದ ಒಂದು ತುತ್ತು ಜೇಸುದಾಸ್ ಅವರ ಕಣ್ಣಲ್ಲಿ ನೀರು ತರಿಸಿತು. ಆ ಒಂದು ತುತ್ತು ಅವರಿಗೆ ದೇವಸ್ಥಾನದ ಪ್ರಸಾದದ ದಿನಗಳನ್ನು ನೆನಪಿಸಿತು. ಆ ಹಸಿವು ಅವರಿಗೆ ತಮ್ಮ ಆರಂಭದ ದಿನಗಳನ್ನು ನೆನಪಿಸಿತು. ಆ ನೆನಪುಗಳು ಅವರಿಗೆ ಎದುರಿಸಿದ ಅವಮಾನಗಳನ್ನು ನೆನಪಿಸಿತು. ಆ ಅವಮಾನಗಳು ಅವರಿಗೆ ತಮ್ಮ ಹಠವನ್ನು ನೆನಪಿಸಿತು. ಮತ್ತು ಆ ಹಠವೇ ಅವರನ್ನು ಭಾರತೀಯ ಸಂಗೀತ ಲೋಕದ ಶಿಖರಕ್ಕೆ ಕೊಂಡೊಯ್ದಿತು. ಹೀಗಾಗಿ “ಅನ್ನದ ಋಣ” ಎಂದರೆ ಕೇವಲ ನಾವು ತಿಂದ ಅನ್ನದ ಋಣವಲ್ಲ. ಅದು ನಮ್ಮನ್ನು ಹಸಿವಿನಿಂದ ಉಳಿಸಿದವರ ಋಣ. ನಮ್ಮ ಮೇಲೆ ನಂಬಿಕೆ ಇಟ್ಟವರ ಋಣ. ನಮ್ಮ ಕೈ ಹಿಡಿದವರ ಋಣ. ಅವಕಾಶ ನೀಡಿದವರ ಋಣ. ಮತ್ತು ನಮ್ಮ ಕಷ್ಟದ ದಿನಗಳನ್ನು ಮರೆಯದಂತೆ ಮಾಡಿದ ಪ್ರತಿಯೊಂದು ನೆನಪಿನ ಋಣ.
ಯಶಸ್ಸಿನ ಎತ್ತರಕ್ಕೆ ಹೋದರೂ ಬೇರುಗಳನ್ನು ಮರೆಯಬಾರದು
ಇಂದು ಒಬ್ಬ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದಿರಲಿ, ಅವರ ಹಿಂದೆ ನಿಂತಿರುವ ಹಳೆಯ ದಿನಗಳೇ ಅವರ ನಿಜವಾದ ಗುರುಗಳು.
ಹಸಿವನ್ನು ಅನುಭವಿಸಿದವನೇ ಅನ್ನದ ಬೆಲೆ ಅರಿಯುತ್ತಾನೆ.
ಅವಮಾನವನ್ನು ಅನುಭವಿಸಿದವನೇ ಗೌರವದ ಬೆಲೆ ಅರಿಯುತ್ತಾನೆ.
ಸೋಲನ್ನು ಕಂಡವನೇ ಗೆಲುವಿನ ಸಾರ್ಥಕತೆ ಅರಿಯುತ್ತಾನೆ.
ಕಷ್ಟವನ್ನು ಅನುಭವಿಸಿದವನೇ ಯಶಸ್ಸಿನ ಮೌಲ್ಯ ಅರಿಯುತ್ತಾನೆ.
ಜೇಸುದಾಸ್ ಅವರ ಕಥೆ ನಮಗೆ ಇದೇ ಸಂದೇಶ ನೀಡುತ್ತದೆ. ಯಾರಾದರೂ ನಿಮ್ಮ ಧ್ವನಿಯನ್ನು ಹೀಯಾಳಿಸಿದರೆ, ನಿಮ್ಮ ಪ್ರತಿಭೆಯನ್ನು ಪ್ರಶ್ನಿಸಿದರೆ ಅಥವಾ ನಿಮ್ಮ ಸಾಮರ್ಥ್ಯವನ್ನು ಕಡಿಮೆ ಅಂದಾಜಿಸಿದರೆ—ಅದನ್ನು ನಿಮ್ಮ ದೌರ್ಬಲ್ಯವನ್ನಾಗಿ ಮಾಡಿಕೊಳ್ಳಬೇಡಿ.
ಅದೇ ಮಾತನ್ನು ನಿಮ್ಮ ಮೆಟ್ಟಿಲನ್ನಾಗಿ ಮಾಡಿಕೊಳ್ಳಿ.
ಒಂದು ದಿನ ನಿಮ್ಮ ಸಾಧನೆಯೇ ನಿಮ್ಮ ಪರವಾಗಿ ಮಾತನಾಡುತ್ತದೆ.
ಕೊನೆಯ ಮಾತು
ಜೀವನದಲ್ಲಿ ನಾವು ತಿನ್ನುವ ಪ್ರತಿಯೊಂದು ತುತ್ತಿಗೂ ಒಂದು ಕಥೆಯಿರುತ್ತದೆ. ಕೆಲವು ತುತ್ತುಗಳು ಹಸಿವನ್ನು ನೀಗಿಸುತ್ತವೆ. ಕೆಲವು ತುತ್ತುಗಳು ದೇಹಕ್ಕೆ ಶಕ್ತಿ ಕೊಡುತ್ತವೆ. ಆದರೆ ಕೆಲವೇ ಕೆಲವು ತುತ್ತುಗಳು… ನಮ್ಮ ಸಂಪೂರ್ಣ ಬದುಕನ್ನೇ ನೆನಪಿಗೆ ತರುತ್ತವೆ. ಎಸ್.ಪಿ.ಬಿ ಪ್ರೀತಿಯಿಂದ ತಂದ ಅನ್ನ-ಸಾಂಬಾರದ ಆ ಒಂದು ತುತ್ತು ಜೇಸುದಾಸ್ ಅವರಿಗೆ ಅಂತಹದ್ದೇ ಒಂದು ತುತ್ತಾಗಿತ್ತು ಎನ್ನಲಾಗುತ್ತದೆ. ಅದು ಹೊಟ್ಟೆ ತುಂಬಿಸಿದ ಅನ್ನವಾಗಿರಲಿಲ್ಲ. ಅದು ನೆನಪುಗಳನ್ನು ತುಂಬಿಸಿದ ಅನ್ನವಾಗಿತ್ತು. ಬಹುಶಃ ಅದಕ್ಕೇ ನಮ್ಮ ಹಿರಿಯರು ಹೇಳುತ್ತಿದ್ದರೇನೋ,
**“ಅನ್ನವನ್ನು ವ್ಯರ್ಥ ಮಾಡಬೇಡಿ.
ಅನ್ನದ ಋಣವನ್ನು ಮರೆಯಬೇಡಿ. ಏಕೆಂದರೆ ಪ್ರತಿಯೊಂದು ಕಾಳಿನ ಮೇಲೂ ತಿನ್ನುವವನ ಹೆಸರಿರುತ್ತದೆ. ಮತ್ತು ಬದುಕಿನಲ್ಲಿ ಎಷ್ಟೇ ಎತ್ತರಕ್ಕೆ ಹೋದರೂ…
ನಮ್ಮ ಹಸಿವಿನ ದಿನಗಳನ್ನು, ನಮ್ಮನ್ನು ಊಟ ಮಾಡಿಸಿದವರನ್ನು ಮತ್ತು ನಮ್ಮ ಕೈ ಹಿಡಿದವರನ್ನು ಎಂದಿಗೂ ಮರೆಯಬಾರದು. ಅದೇ ನಿಜವಾದ ಅನ್ನದ ಋಣಅಲ್ವೇ?
ಏನಂತೀರೀ?
ನಿಮ್ಮವನೇ,
ಉಮಾಸುತ





