ಆರೋಗ್ಯ ಮತ್ತು ಶಿಕ್ಷಣ ನಮ್ಮೆಲ್ಲರಿಗೂ ಅತ್ಯಗತ್ಯವಾಗಿದೆ. ಇದರ ಮೂಲಕವೇ ಸುಸ್ಥಿತ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಮುಖ್ಯ ಗುರಿ. ಈ ನಿಟ್ಟಿನಲ್ಲಿ ನಾವು ಸಮರ್ಪಕವಾಗಿ ಹೆಜ್ಜೆ ಹಾಕುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್‌ ಆರ್. ಪಾಟೀಲ್ ಹೇಳಿದ್ದಾರೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 30ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಅವಧೂತರಾದ ವಿನಯ್‌ ಗುರೂಜಿ ಸಮ್ಮುಖದಲ್ಲಿ ಮಾತನಾಡಿದ ಸಚಿವರು, ಒಂದು ನಾಡು ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಅಡಿಪಾಯ ಗಟ್ಟಿಯಾಗಿರಬೇಕು. ಈ ನಿಟ್ಟಿನಲ್ಲಿ ದೂರದೃಷ್ಟಿಯನ್ನಿಟ್ಟುಕೊಂಡು ಜವಾಹರಲಾಲ್‌ ನೆಹರೂ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು ಎಂದು ತಿಳಿಸಿದರು.

ಅಲಹಾಬಾದ್ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದ ಸಂದರ್ಭದಲ್ಲಿ- ವಿಶ್ವವಿದ್ಯಾಲಯವು ಮಾನವತಾವಾದಕ್ಕಾಗಿ, ಸಹಿಷ್ಣುತೆಗಾಗಿ, ಸತ್ಯದ ಹುಡುಕಾಟಕ್ಕಾಗಿ ನಿಂತಿದೆ ಎಂದು ನಮ್ಮ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹೇಳಿದ್ದನ್ನು ನಾವು ಸ್ಮರಿಸುತ್ತೇನೆ. ಅಂದಿನಿಂದ ಇಂದಿನವರೆಗೂ ನಾಡಿನ ಅಭಿವೃದ್ಧಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಸಚಿವರು ತಿಳಿಸಿದರು.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (SDG) ವಿವರಿಸಿರುವ ಜಾಗತಿಕ ಆದ್ಯತೆಗಳೊಂದಿಗೆ ನಾವು ನಮ್ಮನ್ನು ಹೊಂದಿಸಿಕೊಳ್ಳುವುದು ಅತ್ಯಗತ್ಯ. ಉತ್ತಮ ಆರೋಗ್ಯ, ಯೋಗಕ್ಷೇಮ, ಗುಣಮಟ್ಟದ ಶಿಕ್ಷಣವು ಇದಕ್ಕೆ ಪೂರಕವಾಗಿರಬೇಕು. ಆರೋಗ್ಯ ಮತ್ತು ಶಿಕ್ಷಣ ಕೇವಲ ಗುರಿಗಳಲ್ಲ. ಅವು ಮಾನವ ಘನತೆಯಾಗಿದೆ ಎಂದು ವಿವರಿಸಿದರು.

ಡಿಜಿಟಲ್ ಆರೋಗ್ಯ, ಟೆಲಿಮೆಡಿಸಿನ್ ಮತ್ತು AI-ಚಾಲಿತ ರೋಗನಿರ್ಣಯಗಳನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ನಾವೀನ್ಯತೆಯೊಂದಿಗೆ ಸಾರ್ವಜನಿಕ ಅಗತ್ಯವನ್ನು ಪೂರೈಸುವ ಮತ್ತು ಜ್ಞಾನವು ಕಾರ್ಯರೂಪಕ್ಕೆ ತರುವ ಕೇಂದ್ರವಾಗಿದೆ ಎಂದು ತಿಳಿಸಿದರು.

ಅವದೂತ ವಿನಯ್‌ ಗುರೂಜಿ ಜೀವನ ಶೈಲಿ ನಿರ್ವಹಣೆ ಮತ್ತು ಆಧ್ಯಾತ್ಮಿಕ ಚಿಂತನೆ ವಿಷಯದ ಕುರಿತು ಮಾತನಾಡಿದರು. ನೈಸರ್ಗಿಕ ಪೌಷ್ಟಿಕ ತಜ್ಞರಾದ ಡಾ. ಗೌರಿ ರೊಕ್ಕಮ್ ಆಹಾರ ಮತ್ತು ಪೌಷ್ಟಿಕತೆ ಬಗ್ಗೆ ಮಾತನಾಡಿದರು. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಉಪ ಕುಲಪತಿ ಡಾ. ಭಗವಾನ್‌, ಪಿ.ಆರ್‌.ಶಿವಪ್ರಸಾದ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ