ಹಾಡುಗಾರಿಕೆಯಲ್ಲಿ ಅಂಬೆಗಾಲಿಡುತ್ತಾ, ಕನ್ನಡ ಖಾಸಗಿ ವಾಹಿನಿಯ ಮೂಲಕ ಈ ಕ್ಷೇತ್ರದಲ್ಲಿ ಗುರುತಿಸಿಕೊಂಡ ಪೂಜಾ ಪ್ರಕಾಶ್ ಮುಂದೆ ಖ್ಯಾತಿ ಪಡೆದದ್ದು ಹೇಗೆ........?
ಹಾಸನ ಜಿಲ್ಲೆಯು ಬಹಳಷ್ಟು ಪ್ರಖ್ಯಾತಿಗಳಿಗೆ ಹೆಸರುವಾಸಿ. ಇಂತಹ ಒಬ್ಬ ದೇಸೀ ಪ್ರತಿಭೆ, ಹಾಡುಗಾರ್ತಿ, ಮಿಮಿಕ್ರಿ ಹಾಗೂ ಡಬ್ಬಿಂಗ್ ಕಲಾವಿದೆ ಪೂಜಾ ಪ್ರಕಾಶ್.
ಸಂಧ್ಯಾ ಹಾಗೂ ಪ್ರಕಾಶ್ ಎಸ್.ರವರಿಗೆ ಇಬ್ಬರು ಸುಪುತ್ರಿಯರು. ಜ್ಯೇಷ್ಠ ಪುತ್ರಿ ನಿವೇದಿತಾ ಸಂದೀಪ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದ್ವೀತಿಯ ಪುತ್ರಿಯಾಗಿ ಪೂಜಾ ಚನ್ನರಾಯಪಟ್ಟಣದಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿ ಸಂಗೀತದಲ್ಲಿ ಆಸಕ್ತಿ ಇರಲಿಲ್ಲ. ಮನೆಯ ಮಟ್ಟಿಗೆ ದೇವರ ಮುಂದೆ ಹಾಡುವ ತಾಯಿಯ ಆಸೆ, ಮಗಳು ಹಾಡುಗಾರ್ತಿಯಾಗಲೆಂದು. 4ನೇ ತರಗತಿ ಓದುತ್ತಿದ್ದ ಮಗಳನ್ನು ಸಂಗೀತ ತರಗತಿಗೆ ಸೇರಿಸಿದರು. ಆ ಶಾಲಾ ದಿನಗಳಲ್ಲಿ ಮಲ್ಲಕಂಬದ ಹುಚ್ಚು ಈ ಹುಡುಗಿಗೆ. ಅದ್ಭುತವಾಗಿ ಪ್ರದರ್ಶನ ನೀಡಿ ಹೆಸರು ಮಾಡಿದ್ದರು. ಶಾಲಾ ವಾರ್ಷಿಕೋತ್ಸವಗಳಲ್ಲಿ ನೃತ್ಯ ಹಾಗೂ ಮಲ್ಲಕಂಬಗಳಲ್ಲಿ ಇವರದೇ ಮುಂಚೂಣಿಯ ಹೆಸರಂತೆ.
ಬೆಂಗಳೂರಿಗೆ ಬಂದ ನಂತರ ಪೂಜಾ ಪ್ರಕಾಶ್ ಮೌಂಟ್ ಕಾರ್ಮಲ್ ಕಾಲೇಜಿನ ವಿದ್ಯಾರ್ಥಿನಿಯಾದರು. ಬಿ.ಎಸ್ಸಿ 2ನೇ ವರ್ಷ ಸ್ನೇಹಿತೆ ಹಾಗೂ ಮೆಂಟರ್ ಎಂದರೆ ತಪ್ಪಾಗಲಾರದು. ಸಂಗೀತದಲ್ಲಿ ವಿದ್ವತ್ ಮುಗಿಸಿದ್ದ ಹರಿಪ್ರಿಯ ನಾರಾಯಣ್ ರ ಸಹಾಯ ಹಾಗೂ ಪ್ರೋತ್ಸಾಹದಿಂದ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಸಂಗೀತ ಇವರಿಗೆ ಒಲಿದದ್ದು ಅಭ್ಯಾಸ ಬಲದಿಂದ. ಆದರೆ ಅಭೂತಪೂರ್ವ ಪ್ರತಿಭೆ, ಕಾಲೇಜಿನ ಆ ದಿನಗಳಲ್ಲಿ ಭೈರವಿ ಬ್ಯಾಂಡ್ ಒಂದನ್ನು ಕಟ್ಟಿಕೊಂಡು ಸ್ನೇಹಿತರೆಲ್ಲ ಒಡಗೂಡಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಬಂದರು. ಆ ಸಮಯದಲ್ಲಿ ಇಂಡಿಯನ್ಮ್ಯೂಸಿಕ್ ಬ್ಯಾಂಡ್ ನವರು ಆಯೋಜಿಸಿದ್ದ ಆಡಿಷನ್ಸ್ ನಡೆಯುತ್ತಿತ್ತು. ಅಲ್ಲಿಗೆ ಈ ಸ್ನೇಹಿತೆಯರು ಪೂಜಾರನ್ನು ಕರೆದುಕೊಂಡು ಹೋದರಂತೆ. ಅಲ್ಲಿಂದೀಚೆಗೆ ಹಿಂತಿರುಗಿ ನೋಡಲೇ ಇಲ್ಲ. ಅಂತರ ಕಾಲೇಜು ಸ್ಪರ್ಧೆಗಳೆಂದರೆ ಎಲ್ಲಿಲ್ಲದ ಆಸೆ. ಲೆಕ್ಕವಿಲ್ಲದಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುವುದೇ ಒಂದು ಸಾಧನೆಯ ಹಾದಿಯಾಯಿತು.
ಇದೇ ಸಮಯದಲ್ಲಿ ತಮ್ಮ ಇನ್ ಸ್ಟ್ರಾಗಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದ ಕ್ಲಿಷ್ಟಕರವಾದ ಹಾಡೊಂದನ್ನು ಬಹಳ ಸುಲಲಿತವಾಗಿ ಹಾಡಿದ್ದನ್ನು ಕಂಡ ಕಲರ್ಸ್ ಕನ್ನಡದ ಮುಖ್ಯಸ್ಥರೊಬ್ಬರು ಫೋನಾಯಿಸಿ ಹಾಡಿನ ವಿಡಿಯೋ ಒಂದನ್ನು ಕಳುಹಿಸಲು ತಿಳಿಸಿದರಂತೆ.
ಕೆಲವು ಹಂತಗಳು ದಾಟುವವರೆಗೂ ಅದು ಯಾವ ಶೋ ಎಂದು ತಿಳಿದಿರಲಿಲ್ಲ. ನಂತರ ತಿಳಿಯಿತು ಅದು ವಿಶ್ವವಿಖ್ಯಾತ `ಎದೆ ತುಂಬಿ ಹಾಡುವೆನು' ಎಂದು. ಈ ಶೋಗೆ ಆಯ್ಕೆಯಾಗಿ ಬೃಹತ್ ವೇದಿಕೆಗೆ ಪಾದಾರ್ಪಣೆ ಮಾಡಿದ ಹಿರಿಮೆ ಇವರದು. ಅಲ್ಲಿ ಹಾಡಿದ್ದು, ಜನಪ್ರಿಯತೆ ಗಳಿಸಿದ್ದು ಒಂದು ಸಾಧನೆಯೇ ಹೌದು. ಬಹು ದಿನಗಳ ಕನಸೊಂದು ಈ ವೇದಿಕೆಯಲ್ಲಿ ಸಾಕಾರಗೊಂಡಿದ್ದೂ ಕೂಡ ಒಂದು ಸವಿನೆನಪಾಗೇ ಉಳಿಯಿತು. ಅಲ್ಲಿ ರಾಜೇಶ್ ಕೃಷ್ಣನ್ ಸಾರ್ ಜೊತೆಗೆ `ಮನಸೇ ಮನಸೇ ಥ್ಯಾಂಕ್ಯೂ.....' ಹಾಡನ್ನು ಇವರೊಟ್ಟಿಗೆ ಹಾಡಿದ್ದು ರೋಮಾಂಚನವಾಯಿತು. ಗುರುಕಿರಣ್ ಹಾಗೂ ರಘು ದೀಕ್ಷಿತ್ ಕೂಡಾ ಇಲ್ಲಿ ಜಡ್ಜ್ ಗಳಾಗಿದ್ದು, ಮುಂದೆ ಇವರುಗಳ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡು ಸದವಕಾಶ ಒದಗಿ ಬಂದದ್ದು ತಮ್ಮ ಸುಕೃತವೇ ಹೌದೆನ್ನುತ್ತಾರೆ.