2026ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಟ – ರಾಜಕಾರಣಿ ವಿಜಯ್ ತಮಿಳುನಾಡು ಪ್ರವಾಸ ನಡೆಸುತ್ತಿದ್ದು, ಕರೂರ್ನಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಭೀಕರ ದುರಂತ ಸಂಭವಿಸಿದೆ.
ಕಾಲ್ತುಳಿತದಲ್ಲಿ ಮಹಿಳೆಯರು. ಮಕ್ಕಳು ಸೇರಿದಂತೆ 40 ಮಂದಿ ಸಾವನ್ನಪ್ಪಿದ್ದು, 60 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಸುಬ್ರಮಣಿಯನ್ ದೃಢಪಡಿಸಿದ್ದಾರೆ.
ಮೃತಪಟ್ಟ ವಯಸ್ಕರೆಲ್ಲರೂ ವಿಜಯ್ ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ (ಟಿವಿಕೆ) ಬೆಂಬಲಿಗರಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು, ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು. ಈ ವೇಳೆಗಾಗಲೇ ವಿಪರೀತ ಜನಸಂದಣಿ ಮತ್ತು ಬಿಸಿಲಿನ ಬೇಗೆಯಿಂದಾಗಿ ಹಲವರು ಮೂರ್ಛೆ ಬಿದ್ದ ಘಟನೆಗಳು ನಡೆದಿದ್ದವು. ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ನೆರವಿಗಾಗಿ ಪೊಲೀಸರಿಗೆ ಮನವಿ ಮಾಡಿದರು. ಅವರು ವೇದಿಕೆಯಿಂದಲೇ ಜನರಿಗೆ ನೀರಿನ ಬಾಟಲಿಗಳನ್ನು ಎಸೆದು ಸಹಾಯ ಮಾಡಲು ತೀವ್ರ ಪ್ರಯತ್ನ ನಡೆಸಿದರು. ಇದರ ನಡುವೆಯೇ ಕಾಲ್ತುಳಿತ ಸಂಭವಿಸಿದೆ.
ತೀವ್ರ ಜನಸಂದಣಿಯಿಂದಾಗಿ ಆಂಬುಲೆನ್ಸ್ ಸ್ಥಳಕ್ಕೆ ಬರಲು ಪರದಾಡುವಂತಾಯಿತು. ವರದಿಗಳ ಪ್ರಕಾರ ಕರೂರ್ನ ವಿಜಯ್ ರ್ಯಾಲಿಯಲ್ಲಿ ಸುಮಾರು 30,000 ಜನರು ಪಾಲ್ಗೊಂಡಿದ್ದರು.
ಆಘಾತ ವ್ಯಕ್ತಪಡಿಸಿದ ಸ್ಟಾಲಿನ್: ಕಾಲ್ತುಳಿತ ಘಟನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ಈ ಸುದ್ದಿ ತೀವ್ರ ಆತಂಕಕಾರಿಯಾಗಿದೆ. ಕಾಲ್ತುಳಿತದಿಂದಾಗಿ ಆಸ್ಪತ್ರೆಗೆ ದಾಖಲಾದ ಸಾರ್ವಜನಿಕರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದೇನೆ,” ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪರಿಸ್ಥಿತಿಯನ್ನು ಅವಲೋಕಿಸಲು ಕರೂರ್ ಜಿಲ್ಲಾ ಉಸ್ತುವಾರಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ಸೂಚನೆ ನೀಡಿದ್ದು, ರಾಜ್ಯ ಆರೋಗ್ಯ ಸಚಿವ ಎಂ ಸುಬ್ರಮಣಿಯನ್ ಅವರು ಕೂಡಲೇ ಕರೂರ್ಗೆ ಧಾವಿಸಿದ್ದಾರೆ.
ಕರೂರ್ಗೆನತ್ತ ಸ್ಟಾಲಿನ್ : ಕಾಲ್ತುಳಿತ ಘಟನೆಯ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದಲ್ಲಿ ಆಯೋಗ ರಚಿಸಲಾಗಿದ್ದು, ಸಿಎಂ ಸ್ಟಾಲಿನ್ ಸಾವಿಗೀಡಾದವರ ಕುಟುಂಬಕ್ಕೆ ತಲಾ 10 ಲಕ್ಷ ರೂ., ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.