ಅಕ್ರಮ ಚಿನ್ನಸಾಗಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ಅವರನ್ನು ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಲು ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿದೆ.
ಮೂರು ದಿನಗಳ ಕಾಲ ಅಂದರೆ ಜೂನ್ 13ರ ವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿಚಾರಣೆ ನಡೆಸಲು ನ್ಯಾಯಾಲಯವು ಅನುಮತಿ ನೀಡುತ್ತಿದ್ದಂತೆ, ಐಟಿ ಅಧಿಕಾರಿಗಳು ರನ್ಯಾ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ಧಾರೆ.
ವಿಚಾರಣೆ ನಡೆಸುವಾಗ ಆರೋಪಿಯ ಒಪ್ಪಿಗೆ ಪಡೆದುಕೊಂಡೇ ಸಂಪೂರ್ಣ ವಿಡಿಯೋಗ್ರಫಿ ಮಾಡಿಕೊಳ್ಳಬೇಕು. ಅವರನ್ನು ಬೆದರಿಸಿ ಹೇಳಿಕೆ ಪಡೆಯಕೂಡದು. ಆರೋಪಿಯು ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿ ನ್ಯಾಯಾಲಯ ಆದೇಶ ವಿಧಿಸಿದ್ದರಿಂದ ಅಧಿಕಾರಿಗಳು ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ದುಬೈನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರನ್ಯಾ ರಾವ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಸುಮಾರು 12 ಕೋಟಿ ರೂ. ಮೌಲ್ಯದ 14.2 ಕೆ.ಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು. ಅಕ್ರಮದ ಹಿಂದೆ ಹವಾಲಾ ದಂಧೆ ಆರೋಪವಿದ್ದು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಜೂನ್ 13ರ ವರೆಗೆ ಆರೋಪಿಯ ವಿಚಾರಣೆ ನಡೆಸಲಿದ್ದಾರೆ.
ರನ್ಯಾರಾವ್ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯಡಿ (ಕಾಫಿಪೋಸಾ) ಬಂಧಿತರಾಗಿರುವುದರಿಂದ ಒಂದು ವರ್ಷದವರೆಗೂ ಜಾಮೀನು ಸಿಗುವುದಿಲ್ಲ. ಇದನ್ನು ಪ್ರಶ್ನಿಸಿ ರನ್ಯಾ ರಾವ್ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.