ಸಾಮಾನ್ಯವಾಗಿ ಬಲಾತ್ಕಾರಕ್ಕೆ ತುತ್ತಾದ ಮಹಿಳೆ, ತನ್ನೊಂದಿಗೆ ನಡೆದ ದುರ್ದೈವಿ ಘಟನೆ ಬಳಿಕ ಜೀವನದ ಬಗ್ಗೆ ನಕಾರಾತ್ಮಕ ಧೋರಣೆ ತಾಳುತ್ತಾಳೆ. ಇಂತಹ ಸಂದರ್ಭದಲ್ಲಿ ಆಕೆ ವಾಸ್ತವ ಜಗತ್ತಿಗೆ ಮರಳಲು, ಜೀವನದಲ್ಲಿ ಇನ್ನೂ ಬಹಳಷ್ಟಿದೆ ಎಂಬುದನ್ನು ಆಕೆಗೆ ತಿಳಿಹೇಳುವುದು ಹೇಗೆ……?

ಯಾವುದೇ ವ್ಯಕ್ತಿ ಮಹಿಳೆಯೊಬ್ಬಳ ಮೇಲೆ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಬಂಧ ಬೆಳೆಸಿದರೆ, ಅದನ್ನು `ಅತ್ಯಾಚಾರ’ ಅಥವಾ `ರೇಪ್‌’ ಎಂದು ಹೇಳಲಾಗುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ)ದ ಅಂಕಿಅಂಶಗಳು ಹೇಳುವ ಪ್ರಕಾರ, 2015ರಲ್ಲಿ ನಮ್ಮ ದೇಶದಲ್ಲಿ ಒಟ್ಟು 34,615 ಅತ್ಯಾಚಾರದ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 33,098 ಪ್ರಕರಣಗಳು ಅತ್ಯಾಚಾರ ಎಸಗಿದವರು ಸಂತ್ರಸ್ತೆಯ ಪರಿಚಿತರೇ ಆಗಿದ್ದರು.

ದ್ವೇಷದ ಭಾವನೆಯಿಂದ ಹುಡುಗಿಯರ ಮೇಲೆ ಅತ್ಯಾಚಾರ ಎಸಗಲಾಗುತ್ತದೆ. ಆದರೆ ನಮ್ಮ ಸಮಾಜ ಮಾತ್ರ ಹುಡುಗಿಯರ ಚಾರಿತ್ರ್ಯದ ಮೇಲೆಯೇ ಸಂದೇಹಪಡುತ್ತದೆ. ಇದೆಲ್ಲ ಏಕೆ? ಈಗ ಮಗಳನ್ನು ಬಾಹ್ಯ ಸಂಪರ್ಕದಿಂದ ದೂರ ಇಟ್ಟು ಅವಳನ್ನು ಸಂಕುಚಿತ ಮನೋಭಾದವಳನ್ನಾಗಿಸುವುದು ಬಹುದೊಡ್ಡ ತಪ್ಪು. ಅವಳಿಗೆ ಅವಳ ಇತಿಮಿತಿಗಳ ಅರಿವು ಮೂಡಿಸುವುದು ಅತ್ಯಗತ್ಯ.

ಸಂತ್ರಸ್ತೆ ಧೈರ್ಯಶಾಲಿಯಾಗಿರಬೇಕು

ಯಾವುದೇ ಹುಡುಗಿಯ ಜೊತೆ ಅತ್ಯಾಚಾರದ ಘಟನೆ ನಡೆದಾಗ, ಸಮಾಜ ಅವಳ ನೋವನ್ನು ಆಲಿಸದೆ ಅವಳನ್ನೇ ತಪ್ಪಿತಸ್ಥೆ ಎಂದು ರೂಪಿಸುತ್ತದೆ. ಅಷ್ಟೇ ಅಲ್ಲ, ಅವಳ ಚಾರಿತ್ರ್ಯದ ಮೇಲೂ ಬೆರಳು ತೋರಿಸಲಾಗುತ್ತದೆ. ಇಂತಹ ಘಟನೆಗಳಿಂದ ಜೀವನವೇನೂ ಅಂತ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಧೈರ್ಯಗುಂದಬಾರದು ಸಂಕಷ್ಟಕ್ಕೂ ಕುಗ್ಗಬಾರದು, ಜನರ ಮಾತುಗಳಿಗೆ ತಲೆಕೆಡಿಸಿಕೊಳ್ಳಬಾರದು.

– ಡಾ. ಸುಬೋಧ್‌ ಗುಪ್ತಾ  ಎಂ.ಡಿ. ಮೆಡಿಸಿನ್‌ ಫಿಸಿಶಿಯನ್‌

ಫೋನ್‌, ಇಂಟರ್‌ನೆಟ್‌, ಫ್ಯಾಷನೆಬಲ್ ಡ್ರೆಸ್‌, ಆಧುನಿಕ ಸುಖ ಸೌಲಭ್ಯಗಳು…. ಹೀಗೆ ಏನೆಲ್ಲ ಅವರವರ ಜೇಬಿನ ಶಕ್ತಿಗನುಗುಣವಾಗಿ ಲಭ್ಯ ಇವೆ. ಆದರೆ ಅವರ ವಿಚಾರದಲ್ಲಿ ಮಾತ್ರಾ ಏನೇನೂ ಬದಲಾವಣೆ ಆಗಿಲ್ಲ. ಹಿಂದೆ ಎಲ್ಲಿದ್ದೆವೋ, ಅಲ್ಲಿಯೇ ಇದ್ದೇವೆ. ಯಾವುದೇ ಹುಡುಗಿಯನ್ನು ದಾರಿಯಲ್ಲಿ ನೋಡುತ್ತಿದ್ದಂತೆಯೇ ಸಿನಿಮಾ ಸ್ಟೈಲ್‌ನಲ್ಲಿ ಹಾಡು ಗುನುಗುನಿಸತೊಡಗುತ್ತಾರೆ. ಕೆಲವರು ಅವಕಾಶ ಸಿಕ್ಕರೆ ಹುಡುಗಿಯ ಮೇಲೆ ಅತ್ಯಾಚಾರ ಮಾಡಿಬಿಡುತ್ತಾರೆ. ಆದರೆ ಹುಡುಗಿಯದೇ ತಪ್ಪು ಎಂದು ಅವಳ ತಂದೆ ತಾಯಿಯರು, ಪರಿಚಿತರು ಗೂಬೆ ಕೂರಿಸುತ್ತಾರೆ. ಇಂದು ಮಹಿಳೆಯರು ಎಲ್ಲೂ ಸುರಕ್ಷಿತರಲ್ಲ. ಅಪನಿಂದೆಯ ಹೆದರಿಕೆಯಿಂದ ಅತ್ಯಾಚಾರಕ್ಕೊಳಗಾದವಳು ಆತ್ಮಹತ್ಯೆಗೂ ಕೂಡ ಪ್ರಯತ್ನಿಸುತ್ತಾಳೆ.

ಇಂದು ಮಹಿಳೆಯರಲ್ಲಿ ಶಿಕ್ಷಣದ ಕಾರಣದಿಂದ ಬಹಳಷ್ಟು ಬದಲಾವಣೆಗಳು ಬಂದಿವೆಯೇನೊ ಎಂಬುದು ನಿಜ. ಈಗ ಹುಡುಗಿಯರು ತಮ್ಮ ಸ್ವಾತಂತ್ರ್ಯವನ್ನು ಎಂಜಾಯ್‌ ಮಾಡುತ್ತಿದ್ದಾರೆ. ತಮ್ಮ ಇಚ್ಛೆಗನುಗುಣವಾಗಿ ಎಕ್ಸ್ ಪೋಸ್‌ ಮಾಡಿಕೊಂಡು ಸ್ವತಂತ್ರವಾಗಿ ಜೀವಿಸುತ್ತಿದ್ದಾರೆ.

ಈಗ ಹುಡುಗರ ಜೊತೆ ಮಾತುಕತೆ, ಅವರ ಜೊತೆ ಸ್ನೇಹ ಸಾಮಾನ್ಯ ಸಂಗತಿ. ಆದರೆ ಹುಡುಗಿಯರು ತಮ್ಮ ಸುರಕ್ಷತೆಯ ಬಗೆಗೂ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಬ್ಲ್ಯಾಕ್‌ ಪೆಪ್ಪರ್‌ ಸ್ಪ್ರೇ ಇಟ್ಟುಕೊಳ್ಳುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಅಂದರೆ ಹುಡುಗಿಯರು ಮಾನಸಿಕವಾಗಿ ಹೆಚ್ಚು ಸದೃಢವಾಗಿದ್ದಾರೆ. ಈಗ ಅವರ ಮೇಲೆ ಕಣ್ಣು ಹಾಕುವ ಮುನ್ನ 10 ಸಲ ಯೋಚಿಸಬೇಕು. ಈಗ ಅವರು ಹುಡುಗರ ದೃಷ್ಟಿಕೋನವನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ.

ಇಂದಿನ ತಂದೆ ತಾಯಂದಿರು ಕೂಡ ಹೆಚ್ಚು ಜಾಗೃತರಾಗಿದ್ದಾರೆ. ಅವರು ತಮ್ಮ ಹೆಣ್ಣುಮಕ್ಕಳಿಗೆ ಜ್ಯೂಡೋ, ಕರಾಟೆಯಂಥವನ್ನು ಕೂಡ ಕಲಿಸುತ್ತಿದ್ದಾರೆ. ಈಗ ಹುಡುಗಿಯರ ಯೋಚನೆಯಲ್ಲೂ ಸಾಕಷ್ಟು ಪರಿವರ್ತನೆ ಉಂಟಾಗಿದೆ. ಯಾರ ಜೀವನದಲ್ಲಾದರೂ ಇಂತಹ ದುರ್ದೈವಿ ಘಟನೆ ಘಟಿಸಿದಲ್ಲಿ ಅವರ ಜೀವನ ಅಲ್ಲಿಗೇ ಕೊನೆಗೊಳ್ಳುವುದಿಲ್ಲ. ಅಲ್ಲಿಂದ ಆಕೆ ಮೊದಲಿನಂತೆಯೇ ಮುಂದುವರಿಯುತ್ತಾಳೆ.

ನಮ್ಮ ನ್ಯಾಯಾಂಗ ವ್ಯವಸ್ಥೆ ಕೂಡ ಹುಡುಗಿಯರ ಧೈರ್ಯ ಹೆಚ್ಚಿಸಿದೆ. ಹಾಗೆಂದೇ ಹುಡುಗಿಯರ ದೂರುಗಳನ್ನಾಧರಿಸಿ ಕೆಪಿಎಸ್‌ ಗಿಲ್‌, ಆಸಾರಾಮ್, ಗಾಯತ್ರಿ ಪ್ರಜಾಪತಿ, ರಾಮ್ ರಹೀಮ್ ಇಂಥವರನ್ನು ನ್ಯಾಯಾಂಗ ಜೈಲಿಗಟ್ಟಿತು. ಮುಗ್ಧ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪ ಇವರ ಮೇಲಿತ್ತು.

ಮಾಧ್ಯಮಗಳು ಈಗ ಬಹಳ ಪ್ರಭಾವಶಾಲಿಯಾಗಿವೆ. ಯಾವುದೇ ದುರ್ಘಟನೆಗೆ ಒಂದಿಲ್ಲೊಂದು ಹೆಲ್ಪ್ ಲೈ‌ನ್‌ನ ಸಹಾಯ ಸಿಕ್ಕೇ ಸಿಗುತ್ತದೆ. ಸಾಮಾಜಿಕ ಸಂಸ್ಥೆಗಳು ಕೂಡ ಸಂತ್ರಸ್ತೆಯ ಸಹಾಯಕ್ಕೆ ಧಾವಿಸುತ್ತಿವೆ. ಜೊತೆಗೆ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.

ಉತ್ಸಾಹದಿಂದ ಮುಂದುವರಿಯಿರಿ

ನಮ್ಮ ದೇಹ ಒಂದು ಮನೆ. ಡ್ರಾಯಿಂಗ್‌ ರೂಮಿನಲ್ಲಿ ಮಗು ಅಥವಾ ಬೇರೆ ಯಾರಾದರೂ ಗಲೀಜು ಮಾಡಿದರೆ ಅದು ಶೌಚಾಲಯ ಆಗಿಬಿಡುತ್ತದೆಯೇ? ಅದೇ ರೀತಿ ಯಾರೊ ಒಬ್ಬರು ಹುಡುಗಿಯೊಬ್ಬಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ, ಆ ರೀತಿ ನಡೆದುಕೊಳ್ಳಲು ಕಾರಣ ಹುಡುಗಿ ಅವನಿಗಿಂತ ದುರ್ಬಲಳಾಗಿರುತ್ತಾಳೆ. ಇದರಲ್ಲಿ ಅವಳ ತಪ್ಪೇನೂ ಇಲ್ಲ. ಅದು ಅವಳ ಇಚ್ಛೆಗೆ ವಿರುದ್ಧವಾಗಿ ನಡೆದದ್ದು. ಅದರ ಬಗ್ಗೆ ಅಪರಾಧಪ್ರಜ್ಞೆ ತಾಳದೆ ಹಿಂದೆ ಹೇಗಿದ್ದಳೊ, ಹಾಗೆಯೇ ಮುಂದುವರಿಯಬೇಕು. ದೇಹಕ್ಕೆ ಏನಾದರೂ ಗಾಯವಾಗಿದ್ದರೆ ಅದಕ್ಕೆ ಚಿಕಿತ್ಸೆ ಪಡೆದು ಹೊಸ ಉತ್ಸಾಹದಿಂದ ಜೀವನ ನಡೆಸಬೇಕು. ಅತ್ಯಾಚಾರ ಜೀವನದ ಅಂತ್ಯವಲ್ಲ. ಅದೊಂದು ದರ್ಘಟನೆ. ಅದನ್ನು ಮರೆತು ಜೀವನದಲ್ಲಿ ಮುನ್ನಡೆಯಬೇಕು.

ಬಾಲ್ಯದಿಂದಲೇ ಹುಡುಗಿಯರು ಹುಡುಗರೊಂದಿಗೆ ಆಟ ಆಡುತ್ತಾರೆ, ಓದುತ್ತಾರೆ. ಹೀಗಾಗಿ ಹುಡುಗಿಯರ ಜೀವನದಲ್ಲಿ ಅಂತಹದೊಂದು ಘಟನೆ ನಡೆದರೆ ಎಲ್ಲಕ್ಕೂ ಮೊದಲು ಅವಳದೇ ತಪ್ಪು ಎಂದು ಗೂಬೆ ಕೂರಿಸಲು ಹೋಗಬೇಡಿ. ಆ ಸ್ಥಿತಿಯಲ್ಲಿ ಆ ಹುಡುಗಿಗೆ, ಮಗಳು, ಸೋದರಿ, ಪತ್ನಿ, ಸ್ನೇಹಿತೆಯ ಅವಶ್ಯಕತೆ ಇರುತ್ತದೆ.  ಏಕೆಂದರೆ ಆಕೆಯನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಅವಶ್ಯಕತೆ ಇರುತ್ತದೆ. ಏಕೆಂದರೆ ಅವಳು ಸಾಮಾನ್ಯ ಜೀವನಕ್ಕೆ ಮರಳುವ ಅಗತ್ಯತೆ ಇರುತ್ತದೆ. ಮಗಳ ಜೊತೆ ನಡೆದ ದುರಾದೃಷ್ಟಕರ ಅನ್ಯಾಯದ ಬಗ್ಗೆ ನೀವು ಸ್ವತಃ ಗಾಬರಿಯಾಗಬೇಡಿ. ಆ ಸಂದರ್ಭದಲ್ಲಿ ಆಕೆಗೆ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಲು ಪ್ರಯತ್ನಿಸಿ.

ಲೈಂಗಿಕ ಶಿಕ್ಷಣ ಎಷ್ಟು ಅಗತ್ಯ?

ಇಂದು ಹೆಚ್ಚಿನ ತಂದೆತಾಯಿಯರು ಉದ್ಯೋಗಸ್ಥರು. ಅವಿಭಕ್ತ ಕುಟುಂಬ ಪದ್ಧತಿ ಹೆಚ್ಚು ಕಡಿಮೆ ಕೊನೆಗೊಳ್ಳುತ್ತಾ ಸಾಗಿದೆ. ಚಿಕ್ಕ ಮಕ್ಕಳು ಮನೆಯಲ್ಲಿ ಕೆಲಸದವರ ಜೊತೆ ಇರುತ್ತಾರೆ. ಕೆಲವು ಮಕ್ಕಳು ಬಾಲ್ಯದಲ್ಲಿಯೇ ಕೆಟ್ಟ ಅಭ್ಯಾಸ ಮಾಡಿಕೊಂಡುಬಿಡುತ್ತಾರೆ. ಪೋಷಕರಿಗೆ ಗೊತ್ತಾಗುವ ಹೊತ್ತಿಗೆ ತುಂಬಾ ತಡವಾಗಿಬಿಟ್ಟಿರುತ್ತದೆ. ಹುಡುಗಿಯರು ಇಂದು ಎಲ್ಲ ಕ್ಷೇತ್ರದಲ್ಲೂ ಇದ್ದಾರೆ. ಹೆಜ್ಜೆ ಹೆಜ್ಜೆಗೂ ಅವರು ಪುರುಷ ಸಹೋದ್ಯೋಗಿಗಳ ಜೊತೆ ಸ್ಪರ್ಧೆಯೊಡ್ಡಿ ಕೆಲಸ ಮಾಡಬೇಕಾಗುತ್ತದೆ. ಕೆಲವರು ಈ ಸುರಕ್ಷತೆಯ ಆಧಾರದ ಮೇಲೆ ಮೋಜುಮಜ ಮಾಡುವುದುಂಟು. ಆದರೆ ಅವರು ತಮ್ಮನ್ನು ತಾವು ಬ್ಲ್ಯಾಕ್‌ ಮೇಲ್ ಆಗುವುದರಿಂದ ರಕ್ಷಿಸಿಕೊಳ್ಳಬೇಕು.

ಮಕ್ಕಳಿಗೆ ತಿಳಿ ಹೇಳಿ

ಲೈಂಗಿಕ ಚಟವಟಿಕೆಯ ಬಳಿಕ ದೇಹದ ಹಾರ್ಮೋನುಗಳಲ್ಲಿ ಬದಲಾವಣೆ ಉಂಟಾಗುತ್ತದೆ. ದೇಹದ ಅಂಗಗಳಲ್ಲೂ  ಬದಲಾವಣೆ ಉಂಟಾಗುತ್ತದೆ. ಯಾವುದೇ ಹುಡುಗಿಯ ಲೈಂಗಿಕ ಸಂಬಂಧದ ಬಗ್ಗೆ ಗೊತ್ತಾದರೆ ಜನರು ಅವಳ ಬಗ್ಗೆ ಹೇಗ್ಹೇಗೊ ಆಡಿಕೊಳ್ಳುತ್ತಾರೆ. ಎಷ್ಟೋ ಸಲ ಮದುವೆಯ ಸಮಯದಲ್ಲಿ ಹುಡುಗಿಯ ಈ ವಿಷಯ ಗೊತ್ತಾದರೆ ಅವಳ ಮದುವೆಯೇ ಸಂಕಷ್ಟಕ್ಕೆ ಸಿಲುಕುತ್ತದೆ.

– ಮುಕ್ತ ಲೈಂಗಿಕತೆಯಿಂದ ಹಲವು ಬಗೆಯ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಏಕೆಂದರೆ ಸಂಗಾತಿ ಅದೆಷ್ಟು ಜನರ ಜೊತೆ ಸಂಪರ್ಕ ಬೆಳೆಸಿದ್ದಾನೆ ಎಂಬುದು ಗೊತ್ತೇ ಆಗುವುದಿಲ್ಲ.

– ಹುಡುಗಿಯರಿಗೆ ಗರ್ಭಿಣಿಯರಾಗುವ ಭಯ ಇರುತ್ತದೆ. ಆವೇಶ ಮತ್ತು ಉತ್ತೇಜನದಿಂದ ಮಾಡಿದ ಒಂದು ತಪ್ಪು ಅವರನ್ನು ಜೀವನವಿಡೀ ತೊಂದರೆಗೆ ಸಿಲುಕಿಸುತ್ತದೆ.

– ಮದುವೆಗೂ ಮುಂಚಿನ ಸಂಬಂಧಗಳ ತೊಂದರೆಯನ್ನು ಹುಡುಗಿಯರೇ, ಅನುಭವಿಸಬೇಕಾಗುತ್ತದೆ. ಸಂಬಂಧ ಮುರಿದು ಬಿದ್ದ ಬಳಿಕ ಜೀವನ ಖಿನ್ನತೆ, ಹತಾಶೆಗೆ ಒಳಗಾಗುತ್ತದೆ.

ಸಂತ್ರಸ್ತೆಯ ಬೆಂಬಲಕ್ಕೆ ನಿಲ್ಲಬೇಕು

ಬಲಾತ್ಕಾರಕ್ಕೆ ತುತ್ತಾದ ಹುಡುಗಿ ಯಾವ ರೀತಿಯ ನೋವಿನಿಂದ ಬಳಲುತ್ತಿದ್ದಾಳೆ ಎಂಬುದು ಸ್ವತಃ ಆಕೆಗಷ್ಟೇ ಗೊತ್ತು. ಬದಲಾಗುತ್ತಿರುವ ಕಾಲದ ಜೊತೆಗೆ ಹುಡುಗಿಯರು ಧೈರ್ಯಶಾಲಿಗಳಾಗಿ ಕಾನೂನಿನ ನೆರವು ಪಡೆದುಕೊಳ್ಳುತ್ತಾರೆ. ಭಾರತೀಯ ಸಮಾಜದ ಯೋಚನೆ ಈಗ ಸಾಕಷ್ಟು ಬದಲಾಗಿದೆ. ನಿರ್ಭಯಾ ಪ್ರಕರಣದಲ್ಲಿ ಇಡೀ ದೇಶವೇ ಅವಳ ಬೆಂಬಲಕ್ಕೆ ನಿಂತಿತು. ಈ ಘಟನೆಯನ್ನು ಇಡೀ ದೇಶ ಖಂಡಿಸಿತು. ಬಲಾತ್ಕಾರ ಒಂದು ದುರ್ಘಟನೆಯಾಗಿದ್ದು, ನಾವು ಸಂತ್ರಸ್ತೆಯ ಬಗ್ಗೆ ಸಹಾನುಭೂತಿ ಇಟ್ಟುಕೊಳ್ಳಬೇಕು.

ಡಾ. ಕಲ್ಪನಾ ರಾವ್, ಸಾಮಾಜಿಕ ಚಿಂತಕರು.

ಯೋಚನೆ ಬದಲಾಗಬೇಕು

ಈಗಲೂ ಎಷ್ಟೋ ಹುಡುಗಿಯರ ಮೇಲೆ ದ್ವೇಷದ ಭಾವನೆಯಿಂದ ಅತ್ಯಾಚಾರ ನಡೆಸಲಾಗುತ್ತದೆ. ಆದರೂ ನಮ್ಮ ಸಮಾಜ ಹುಡುಗಿಯರ ಮೇಲೆಯೇ ತಪ್ಪು ಹೊರಿಸುತ್ತದೆ. ಅಪರಾಧಿ ಸೇಡು ತೀರಿಸಿಕೊಂಡು ತೃಪ್ತನಾಗುತ್ತಾನೆ. ಇಂತಹ ಸ್ಥಿತಿಯಲ್ಲಿ ಹುಡುಗಿಯ ತಾಯಿ ಬಹಳ ತಿಳಿವಳಿಕೆಯಿಂದ ಕಾರ್ಯಪ್ರವೃತ್ತಳಾಗಬೇಕು. ಅಂತಹ ಸ್ಥಿತಿಯಲ್ಲಿ ಅವಳು ಮಗಳಿಗೆ ಬೆಂಬಲವಾಗಿ ನಿಂತು ಆಪಾದನೆಯಿಂದ ಮುಕ್ತವಾಗಲು ಹಾಗೂ ಅಪರಾಧಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಮಹಿಳೆಯೊಬ್ಬಳು ಮುಂದೆ ಸಾಗುತ್ತಿರುವುದು ಕೆಲವು ಪುರುಷರ ಅಹಂಗೆ ಪೆಟ್ಟು ತಗುಲುತ್ತದೆ. ಕೆಲವೊಮ್ಮೆ ಈ ಕಾರಣದಿಂದಲೂ ಆಕೆ ಅತ್ಯಾಚಾರಕ್ಕೆ ಬಲಿಪಶುವಾಗುತ್ತಾಳೆ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ `ಸೆಕ್ಸ್’ ಶಬ್ದ ಕೇಳುತ್ತಿದ್ದಂತೆಯೇ ಜನರು ಗಲಿಬಿಲಿಗೊಳ್ಳುತ್ತಾರೆ. ಅದೊಂದು ನೈಸರ್ಗಿಕ ಕ್ರಿಯೆ. ಅದರ ಶಿಕ್ಷಣ ಕೊಡುವುದರ ಅಗತ್ಯ ಏನಿದೆ ಎಂದು ಪ್ರಶ್ನಿಸುತ್ತಾರೆ. ಪ್ರಾಣಿಗಳು ಕೂಡ ಈ ಕ್ರಿಯೆಯನ್ನು ತಮ್ಮಷ್ಟಕ್ಕೆ ತಾವೇ ಕಲಿಯುತ್ತವೆ. ಹುಡುಗಿಯರಿಗೆ ಪರಿಣಾಮಕಾರಿ ರೀತಿಯಲ್ಲಿ ತಿಳಿಹೇಳಿದರೆ, ಅದರ ದುಷ್ಪರಿಣಾಮಗಳ ಬಗ್ಗೆ ಅರಿಯುತ್ತಾರೆ.

ಕೆಲವು ವರ್ಷಗಳ ಹಿಂದಿನ ತನಕ ಸೆಕ್ಸ್ ನ ನಿಶ್ಚಿತ ಪರಿಣಾಮ ಗರ್ಭ ಧರಿಸುವುದು ಎಂದಾಗಿತ್ತು. ಆ ಕಾರಣದಿಂದ ಹುಡುಗಿಯೊಬ್ಬಳ ಪಾವಿತ್ರ್ಯತೆಯ ಮಾನದಂಡ ಸೆಕ್ಸ್ ಆಗಿತ್ತು. ಈಗ ಹಾಗಿಲ್ಲ. ಹುಡುಗಿಯರ ಬಳಿ ಗರ್ಭ ನಿರೋಧಕವೆಂಬ ಅಸ್ತ್ರವಿದೆ.

ಅತ್ಯಾಚಾರದ ಸಂದರ್ಭದಲ್ಲಿ ದೈಹಿಕ ಗಾಯವನ್ನು ನಿವಾರಿಸಿದ ಬಳಿಕ `ಜೀವನವಿನ್ನೂ ಬಾಕಿ ಇದೆ,’ ಎಂದು ಆಕೆಯಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಬೇಕು.

ತಂದೆ ತಾಯಿಯರು ಹಾಗೂ ಹೆಣ್ಣುಮಕ್ಕಳು ತಮ್ಮ ಮಾನಸಿಕತೆಯನ್ನು ಬದಲಿಸಿಕೊಳ್ಳುವ ಅಶ್ಯಕತೆಯಿದೆ. ಯಾವುದೇ ಒಂದು ದುರಂತದ ಬಳಿಕ ಜೀವನ ಮುಗಿದುಹೋಗುವುದಿಲ್ಲ. ಜೀವನ ಮುಂದುವರಿಸಿಕೊಂಡು ಹೋಗುವುದೇ ತಿಳಿವಳಿಕೆಯ ಲಕ್ಷಣ. ಇಂತಹದೊಂದು ಘಟನೆಯ ಬಳಿಕ ಸಂತ್ರಸ್ತೆಗೆ ಆತ್ಮಹತ್ಯೆಗೆ ಚಿತಾವಣೆ ನೀಡುವ ಸಮಾಜದ ಮನಸ್ಥಿತಿಯನ್ನು ನಾವು ನೀವೆಲ್ಲ ಬದಲಿಸುವ ಅವಶ್ಯಕತೆ ಇದೆ. ಇದೇ ಯೋಚನೆಯ ಕಾರಣದಿಂದ ಒಂದಾದ ಬಳಿಕ ಒಂದರಂತೆ ಅತ್ಯಾಚಾರದ ಘಟನೆಗಳು ನಡೆಯುತ್ತಿವೆ. ಅತ್ಯಾಚಾರಿ ಪುರುಷರು ಎಲ್ಲೆಲ್ಲೂ ಇರುತ್ತಾರೆ. ಅವರು ಸಂಬಂಧಿಕರು, ಪರಿಚಯದವರು ಅಥವಾ ಅಪರಿಚಿತರೇ ಆಗಿರಬಹುದು ಎಂದೆಲ್ಲ ಹೆಣ್ಣುಮಕ್ಕಳಿಗೆ ತಾಯಿಯಾದವಳು ತಿಳಿ ಹೇಳಬೇಕು. ಅಪರಿಚಿತರು, ದುಷ್ಟರಿಂದ ನಾವು ದೂರ ಇರಬೇಕು. ಎಲ್ಲಕ್ಕೂ ಮುಂಚೆ ನಮ್ಮ ಹತ್ತಿರವೇ ಇರುವ ಪರಿಚಿತರ ಬಗ್ಗೆ ಸದಾ ಎಚ್ಚರವಾಗಿರಬೇಕು.

ಎಚ್ಚರಿಕೆ ಅವಶ್ಯ

ನಮ್ಮ ಸಮಾಜ ಅತ್ಯಾಚಾರವನ್ನು ಜಗತ್ತಿನ ಅತಿ ದೊಡ್ಡ ಭೀಕರ ಅಪರಾಧ ಎಂಬಂತೆ ಅದನ್ನು ಬಿಂಬಿಸುತ್ತದೆ. ಸಂತ್ರಸ್ತೆ ಅದನ್ನು ಜೀವನವಿಡೀ ಮರೆಯುವುದಿಲ್ಲ. ಅವಳಿಗೆ ಅವಮಾನಕರ ದುಃಖಕರ ಘಟನೆಯೊಂದಿಗೆ ಜೀವಿಸುವುದು ಅನಿವಾರ್ಯವಾಗುತ್ತದೆ. ಇದು ಅಪರಾಧಿಗೆ ನೀಡುವ ಕಾನೂನು ಸಜೆಗಿಂತ ಅದೆಷ್ಟೊ ಪಟ್ಟು ಹೆಚ್ಚು ನೋವು.

ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ತಾಯಿ-ಮಗಳ ಸಂಬಂಧ ಸ್ನೇಹಿತೆಯರಂತಿರಬೇಕು. ಒಂದು ವೇಳೆ ಇಬ್ಬರಲ್ಲೂ ಹೆದರಿಕೆಯ ಗೋಡೆ ಆವರಿಸಿಕೊಂಡಿದ್ದರೆ, ಮಗಳು ಶಿಕ್ಷೆಯ ಭಯದಿಂದ ಚಿಕ್ಕಪುಟ್ಟ ಘಟನೆ ಅಥವಾ ಅಂತಹ ಮಾತುಗಳನ್ನು ಬಚ್ಚಿಡಲು ನೋಡುತ್ತಾಳೆ. ಇದು ಭವಿಷ್ಯದಲ್ಲಿ ಒಂದು ಬಹುದೊಡ್ಡ ಅಪರಾಧವಾಗಿ ಪರಿಣಮಿಸುತ್ತದೆ. ಹೀಗಾಗಿ ತಾಯಿಗೆ ತನ್ನ ಮಗಳು ಯಾರದೋ ಜೊತೆಗೆ ಒಳಗೊಳಗೆ ಸಂಬಂಧ ಇಟ್ಟುಕೊಂಡಿದ್ದರೆ, ಗಾಬರಿಗೊಳಗಾಗುವ ಬದಲು ಅವಳಿಗೆ ಆ ಸಂಬಂಧದ ಒಳಿತು ಕೆಡುಕುಗಳ ಬಗ್ಗೆ ತಿಳಿಹೇಳಬೇಕು.

ಮಗಳನ್ನು ಸಂಕುಚಿತ ಸ್ವಭಾವದವಳನ್ನಾಗಿಸಿ, ಅವಳನ್ನು ಜಗತ್ತಿನಿಂದ ಹೊರಗಿಡುವುದು ಸರಿಯಲ್ಲ. ಅವಳು ತನ್ನ ಇತಿಮಿತಿಗಳನ್ನು ಅರಿತುಕೊಳ್ಳುವಂತಾಗಬೇಕು. ಅವಳು ತನ್ನ ಒಳಿತು ಕೆಡುಕುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು.

ಎದುರಿಸುವ ಧೈರ್ಯ

ಯಾವುದೇ ತಾಯಿ ತನ್ನ ಮಗಳಿಗೆ ಮದುವೆಗೂ ಮುಂಚೆ ಸೆಕ್ಸ್ ನ ರಿಯಾಯಿತಿ ಕೊಡುವುದಿಲ್ಲ. ಆದರೆ ಮಹಾನಗರಗಳ ಇಂದಿನ ಜೀವನದಲ್ಲಿ ಎಕ್ಸ್ ಪೋಷರ್‌ ಅಧಿಕವಾಗಿದೆ. ಬಹಳಷ್ಟು ಕುಟುಂಬಗಳಲ್ಲಿ ಈ ತೆರನಾದ ಪ್ರತಿಬಂಧಗಳೇನೂ ಇಲ್ಲ. ಮಗಳು ಯಾರ ಜೊತೆಗೆ ಎಲ್ಲಿಗೆ ಹೋಗುತ್ತಿದ್ದಾಳೆ ಎಂಬುದನ್ನು ಗಮನಿಸುತ್ತಾ ಇರಿ.

ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಮಗ ಅಥವಾ ಮಗಳಾಗಿರಬಹುದು. ಬಾಲ್ಯದಿಂದಲೇ ಅವರ ಚಟುವಟಿಕೆಗಳ ಬಗ್ಗೆ ಸಂಪೂರ್ಣ ನಿಗಾ ಇಡಿ. ಮಗಳು ಸದಾ ಮೌನವಾಗಿ, ಉದಾಸಳಾಗಿದ್ದರೆ ಅವಳ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ತನ್ನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಆಕೆ ನಿಮ್ಮ ಮುಂದೆ ಬಿಡಿಸಿ ಹೇಳಬಹುದು.

ಮಗನನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ಮಗಳ ಹಾಗೆಯೇ ಶಿಸ್ತಿನಿಂದ ಇಡಲು ಕಲಿಸುವ ಅಗತ್ಯವಿದೆ. ಏಕೆಂದರೆ ನಿಮ್ಮಿಂದ ಕಲಿಸಲ್ಪಟ್ಟ ಶಿಸ್ತು ಅವರನ್ನು ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡಬಹುದು.

ಭವಿಷ್ಯದಲ್ಲಿ ಎಂದಾದರೂ ಅತ್ಯಾಚಾರಿಗಳು ಎದುರಾದಾಗ ಅವರನ್ನು ಎದುರಿಸುವ ಬಗೆ ಹೇಗೆ ಎಂಬುದನ್ನು ಮುಂಚೆಯೇ ತಿಳಿಸಿಕೊಡಿ. ಅವಳಿಗೆ ಆ ಸಂದರ್ಭದಲ್ಲಿ ಅವರೊಂದಿಗೆ ಹೋರಾಡುವ ಸಾಮರ್ಥ್ಯ, ಅಲ್ಲಿಂದ ಪಾರಾಗುವುದು ಹೇಗೆ ಎಂಬುದು ತಿಳಿದಿರಬೇಕು.

ನಮ್ಮೆದುರು ಇಬ್ಬರು ಹುಡುಗಿಯರ ಜ್ವಲಂತ ಉದಾಹರಣೆ ಇದೆ. ಅದು ರಾಮ ರಹೀಮ್ ಗೆ ಸಂಬಂಧಪಟ್ಟಿದೆ. ಇಬ್ಬರು ಹುಡುಗಿಯರ ಸಾಹಸ ಹಾಗೂ ಸಮಯಪ್ರಜ್ಞೆ ರಾಮ್ ರಹೀಮ್ ನನ್ನು ಜೈಲಿಗಟ್ಟಲು ಸಾಧ್ಯವಾಯಿತು.

– ಜಿ. ಪದ್ಮಜಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ