ಅದೊಂದು  ಕಾಲ ಇತ್ತು…. ಜ್ಯೋತಿಲಕ್ಷ್ಮೀ ವೈಯಾರದಿಂದ ಬಳಕುತ್ತ ನಾನು ಬೆಳ್ಳಿಯ ಮಿಂಚು….ಕಣ್ಣು ಕತ್ತಿಯ ಅಂಚು…. ಎನ್ನುತ್ತ ತಿರುಗಿ ನೋಡಿದರೆ ಅಂದಿನ ರಸಿಕ ಎದೆಗಳಲ್ಲಿ ಪುಳಕ ಆಗುತ್ತಿತ್ತು. ಇಂದಿನ ಯುವ ಪ್ರೇಕ್ಷಕರ ಹೃದಯಗಳಲ್ಲಿ ಅಂಥ ರೋಮಾಂಚನ ಹಾಗೂ ಮೆಚ್ಚಿಗೆಯನ್ನು ಉಂಟು ಮಾಡುತ್ತ ನೃತ್ಯಲೋಕದ ರಾಣಿ ಆಗುತ್ತಿದ್ದಾಳೆ….. ಪಲ್ಲವಿ ಬಳ್ಳಾರಿ ಎಂಬ ಪೋರಿ!

ಪಲ್ಲವಿ ಇಂದು ಈ ಜನಪ್ರಿಯತೆಯ ದಾರಿಯಲ್ಲಿ ಸಾಗಲು ಕಾರಣ….. ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಎಂಬಂತೆ ಪಲ್ಲವಿಗೆ ಗುರುವಾಗಿ ನಿಂತಿದ್ದಾರೆ ಜ್ಯೋತಿ ಬಳ್ಳಾರಿಯವರು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಆರ್ಕೆಸ್ಟ್ರಾ ಹಾಗೂ ಕರ್ನಾಟಕದ ರಂಗಭೂಮಿಗಳಲ್ಲಿ ಜ್ಯೋತಿ ಬಳ್ಳಾರಿಯವರು ತಮ್ಮ ಸುಂದರ ಮೈಮಾಟ ಹಾಗೂ ನವಿಲಿನ ಕುಣಿತದಿಂದ ರಸಿಕ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದ್ದರು. ಇವರ ಸೌಂದರ್ಯ ಹಾಗೂ ನೃತ್ಯಕ್ಕೆ ಮೋಡಿಗೊಳಗಾದ ಪ್ರೇಕ್ಷಕರು ಜ್ಯೋತಿಯವರಿಗೆ ಜ್ಯೂನಿಯರ್‌ ಖುಷ್ಬು ಎಂದು ಕರೆದಿದ್ದರು.

ಅಂಥ ಖ್ಯಾತ ನೃತ್ಯತಾರೆ ಜ್ಯೋತಿ ಬಳ್ಳಾರಿಯವರ ಮಗಳು ಪಲ್ಲವಿ ಇಂದು ಈ ಚಿಕ್ಕ ವಯಸ್ಸಿನಲ್ಲೇ…. ತಾಯಿಯಂತೆ ಜನಪ್ರಿಯತೆ ಪಡೆದಿದ್ದಾಳೆ ಎಂದರೆ ಅದು ಅತಿಶಯೋಕ್ತಿ ಏನಲ್ಲ, ಏಕೆಂದರೆ ಸೌಂದರ್ಯ, ಪ್ರತಿಭೆ ಎರಡರಲ್ಲೂ ಪಲ್ಲವಿ  ತಾಯಿಯಂತೆ ಹೆಸರು ಮಾಡುತ್ತಿದ್ದಾಳೆ.

ಪಲ್ಲವಿಗೆ ಬಾಲ್ಯದಲ್ಲಿ ಶಾಲೆಗಿಂತಲೂ ನವಿಲಿನ ನೃತ್ಯ ಪ್ರಿಯವಾಯಿತು. ಅಂತೆಯೇ  ಬಾಲ್ಯದಲ್ಲೇ ಕಲುಬುರ್ಗಿಯ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ `ಏನ ಕೊಡಾ ಏನ ಕೊಡಾನಾ…..’ ಎಂಬ ಜಾನಪದ ನೃತ್ಯಕ್ಕೆ ಆಕೆ ಹಾಕಿದ ಹೆಜ್ಜೆ….. ಇಂದಿಗೂ ಪ್ರೇಕ್ಷಕರ ಕಣ್ಣೆದುರು ಪುಟ್ಟ ಶಾಂತಿ ಕುಣಿದಂತಿದೆ. ಅಂತೆಯೇ ಇಂದು ಸೋಶಿಯಲ್, ಜನಪದ, ಕ್ಲಾಸಿಕ್‌ ಎಲ್ಲ ಡ್ಯಾನ್ಸ್ ಗಳಿದ್ದರೂ ಪ್ರೇಕ್ಷಕರು ಪಲ್ಲವಿ ಬಳ್ಳಾರಿಯ ಹೆಸರು ಇದ್ದರೆ ಪ್ರೀತಿ ಅಭಿಮಾನದಿಂದ ಧಾವಿಸಿ ಆಕೆಯ ಕಾರ್ಯಕ್ರಮ ನೋಡುತ್ತಾರೆ…. ಪ್ರೋತ್ಸಾಹ ನೀಡುತ್ತಾರೆ. ಪಲ್ಲವಿ ಈಗಾಗಲೇ ದುರ್ಗಾಶಕ್ತಿ ನಾಟ್ಯ ಸಂಘ ಬಳ್ಳಾರಿ, ಈ ಸಂಘದ ಮುಖಾಂತರ ಕರ್ನಾಟಕದ ಎಲ್ಲಾ ಕಡೆಗಳಲ್ಲಿ  ನೃತ್ಯ ಪ್ರದರ್ಶನ ಮಾಡಿ ಹೆಸರು ಮಾಡಿದ್ದಾಳೆ. ಚಿತ್ರನಟ ಶಿವರಾಜ್‌ ಕುಮಾರ್‌ರವರ 100ನೇ ಚಿತ್ರದ ಸ್ಮರಣೋತ್ಸವ ಹಾಗೂ ದಿ. ಪುಟ್ಟರಾಜ ಗವಾಯಿಗಳ ಸ್ಮರಣಾರ್ಥ ಜರುಗಿದ ಕಾರ್ಯಕ್ರಮದಲ್ಲಿ ಖ್ಯಾತ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ರವರ ಜೋಗದ ಸಿರಿ ಬೆಳಕಿನಲ್ಲಿ…… ಹಾಡಿಗೆ ಸೌಂದರ್ಯ ನೀಡುವಂತೆ ನರ್ತಿಸಿ ರಂಗಮಿತ್ರರಿಂದ `ರಂಗ ಗಂಧರ್ವ’ ಪ್ರಶಸ್ತಿ ಪಡೆದಿದ್ದಾಳೆ.

ಕನ್ನಡ ರಂಗಭೂಮಿಯ ಕ್ಷೇತ್ರದಲ್ಲಿ ಪಲ್ಲವಿ ಬಳ್ಳಾರಿ ಬಿಡುವಿಲ್ಲದ ನೃತ್ಯತಾರೆ, ಇದೀಗ ರಂಗಭೂಮಿಯಿಂದ ಕನ್ನಡ ಚಿತ್ರರಂಗಕ್ಕೆ ಜಿಗಿದಿರುವ ಪಲ್ಲವಿ ಕನ್ನಡ ಚಿತ್ರರಂಗಕ್ಕೊಂದು ಉತ್ತಮ ಕೊಡುಗೆ ಆಗಲಿದ್ದಾಳೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ವೇಷಧಾರಿ ಚಿತ್ರದಲ್ಲಿ ಮನಮೋಹಕ ನೃತ್ಯ ಮಾಡಿರುವ ಪಲ್ಲವಿ ಬಳ್ಳಾರಿ ಕನ್ನಡ ಚಿತ್ರರಂಗದ ನೃತ್ಯ ಲೋಕದಲ್ಲಿ ಅಚ್ಚಳಿಯದ ಸ್ಥಾನದಲ್ಲಿ ರಾರಾಜಿಸಲಿದ್ದಾಳೆ. ಪಲ್ಲವಿಯ ಮನಮೋಹಕ  ಮುದ್ದು ಮುಖ, ಮಾಟವಾದ ದೇಹ ಸಿರಿ… ನಡೆ ನುಡಿಯಲ್ಲಿ ವಿನಯ…. ಇವುಗಳಿಂದ ಪಲ್ಲವಿ ಚಿತ್ರರಂಗಕ್ಕೆ ಉತ್ತಮ ಕೊಡುಗೆ ಆಗುವುದರಲ್ಲಿ ಸಂಶಯವಿಲ್ಲ.

ಪಲ್ಲವಿಯ ಬೆಳವಣಿಗೆಗೆ ಈಕೆಯ ಅಕ್ಕ ದಿವ್ಯಾ ಬಳ್ಳಾರಿ, ಅಣ್ಣ ರಾಘವೇಂದ್ರ ಬಳ್ಳಾರಿ, ಶ್ರೀದೇವಿ ಬಳ್ಳಾರಿ, ಮುಖ್ಯ ವೇದಿಕೆಗೆ ಬಂದು ಶ್ರಮಿಸುತ್ತಿದ್ದಾರೆ….. ಜ್ಯೋತಿ ಬಳ್ಳಾರಿಯವರ ತಮ್ಮ ಸಂತೋಷ ಸಿಂದಗಿ ವೇದಿಕೆಯ ಹಿಂದೆ ಇದ್ದು ಹಗಲಿರುಳು ಶ್ರಮಿಸಿ ಜ್ಯೋತಿ ಬಳ್ಳಾರಿ ಹಾಗೂ ಪಲ್ಲವಿ ಬಳ್ಳಾರಿಯರ ಅಭ್ಯುದಯಕ್ಕೆ ಶ್ರಮಿಸುತ್ತಿರುವುದು ಸನಿಹದಿಂದ ಬಲ್ಲವರಿಗೆಲ್ಲ ಗೊತ್ತು.

ಬಳ್ಳಾರಿಯ ಶಿಲಾಬಾಲಿಕೆ ಪಲ್ಲವಿ ಬಳ್ಳಾರಿಗೆ ಬೆಸ್ಟ್ ಆಫ್‌ ಲಕ್‌!

– ಬಸರಾಜ ಪಟ್ಟಣಶೆಟ್ಟಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ