ಅಂದು 1910 ಮಾರ್ಚ್ 13, ಭಾನುವಾರ. ಆ ವ್ಯಕ್ತಿ ಪ್ಯಾರಿಸ್ ನಿಂದ ಲಂಡನ್ನಿನ ಕಡೆಗೆ ಹೊರಡುವ ರೈಲು ಹತ್ತಿದ್ದರು. ಲಂಡನ್ನಿನ ವಿಕ್ಟೋರಿಯಾ ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ರಾತ್ರಿ 2 ಗಂಟೆ. ನಾಲ್ಕಾರು ಗುಪ್ತಚರರು ಧಡಧಡನೆ ಬಂದು ಅವರನ್ನು ಬಂಧಿಸಿದರು.

ರಾಜದ್ರೋಹ, ಜಾಕ್ಸನ್ ಕೊಲೆಗೆ ನೆರವಾದ ಅಪರಾಧ, ಲಂಡನ್ನಿನಲ್ಲಿ ಶಸ್ತ್ರಾಸ್ತ್ರ ಶೇಖರಣೆ, ಭಾರತ ಹಾಗೂ ಲಂಡನ್ನಿನಲ್ಲಿ ಮಾಡಿದ ರಾಜದ್ರೋಹ ಭಾಷಣಗಳು, ಪರಾರಿ ಹೀಗೆ ಹತ್ತಾರು ಆರೋಪಗಳ ಅಡಿಯಲ್ಲಿ ಅವರನ್ನು ಬಂಧಿಸಿದರು. ಜೂನ್ ಪ್ರಾರಂಭದಲ್ಲಿ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್ ಇವರನ್ನು ಭಾರತ ಸರಕಾರಕ್ಕೆ ಒಪ್ಪಿಸಬೇಕಾಗಿ ತೀರ್ಪು ಹೊರಹಾಕಿತು. ಜುಲೈ ಮೊದಲ ದಿನ ಆ ವ್ಯಕ್ತಿಯನ್ನು ಹೊತ್ತ ಠಮೊರಿಯಾ ಹಡಗು ಭಾರತದ ಕಡೆ ಚಲಿಸಿತು.
ಇವರ ಸಾಮಥ್ಯವನ್ನು ಅರಿತಿದ್ದ ಬ್ರಿಟಿಷರು, ಕೈ ಕಾಲುಗಳನ್ನು ಕಟ್ಟಿ ಆಚೀಚೆ ಅಲುಗಾಡಲೂ ಸಾಧ್ಯವಿಲ್ಲದಂತಹ ಸಣ್ಣ ಕೋಣೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಹಡಗಿನ ಯಂತ್ರದಲ್ಲಿ ಏನೋ ಅಡಚಣೆಯ ಕಾರಣ ಮಾರ್ಸೆಲ್ ನಲ್ಲಿ ನಿಲ್ಲಿಸಲಾಯಿತು. ಭಾರತವನ್ನು ಸೇರಿದ ಮೇಲೆ ತನ್ನ ಗತಿ ಏನಾಗಬಹುದೆಂದು ಮೊದಲೇ ಅರಿತಿದ್ದ ಆ ವ್ಯಕ್ತಿ ಶೌಚಾಲಯಕ್ಕೆ ಹೋಗಿ ಬರುವೆನೆಂದು ಕೇಳಿ ಕೈಕೊಳಗಳನ್ನು ಬಿಚ್ಚಿಸಿಕೊಂಡು ಹಡಗಿನ ಶೌಚಾಲಯವನ್ನು ಪ್ರವೇಶಿಸಿ, ಅಲ್ಲಿದ್ದ ಸಣ್ಣ ಕಿಟಕಿಯನ್ನು ಒಡೆದು ತಮ್ಮ ದೇಹವನ್ನು ಅದರಲ್ಲಿ ತೂರಿಸಿ ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ ಎಂದು ಹೇಳುತ್ತಾ ಸಮುದ್ರಕ್ಕೆ ಜಿಗಿದೇ ಬಿಟ್ಟರು. ಶೌಚಾಲಯದಿಂದ ಎಷ್ಟು ಹೊತ್ತಾದರೂ ಹೊರಕ್ಕೆ ಬಾರದಿದ್ದನ್ನು ಗಮನಿಸಿದ ಸೈನಿಕರು ಅನುಮಾನದಿಂದ ಬಾಗಿಲನ್ನು ಒಡೆದು ನೋಡಿದರೆ ಸಣ್ಣ ಕಿಟಕಿಯ ರಂಧ್ರದಲ್ಲಿ ಆರೋಪಿ ನುಸಳುತ್ತಿದ್ದಾನೆ. ಅವರನ್ನು ಹಿಡಿಯುವಷ್ಟರಲ್ಲಿಯೇ ಆತ ಸಮುದ್ರಕ್ಕೆ ಹಾರಿಯಾಗಿತ್ತು. ಮೈ ಕೈಯೆಲ್ಲಾ ತರಚಿದ ಗಾಯಗಳಾಗಿ ರಕ್ತ ಸೋರುತ್ತಲಿತ್ತು. ರಕ್ತ ಸಿಕ್ತ ದೇಹಕ್ಕೆ ಸಮುದ್ರ ಉಪ್ಪು ನೀರು ತಾಗಿದ ಕೂಡಲೇ ಯಮಯಾತನೆ, ಆದರೆ ಅವರನ್ನು ಹಿಡಿಯಲು ಹಿಂದೆ ಸೈನಿಕರು ಬರುತ್ತಿದ್ದ ಕಾರಣ, ದೇಹದ ಮೇಲಿನ ಗಾಯ ಮತ್ತು ನೋವನ್ನು ಲೆಕ್ಕಿಸದೆ ಒಂದೇ ಸಮನೇ ಈಜುತ್ತಾ ದಡ ಸೇರಿದರಾದರೂ, ವಿಧಿ ಅವರ ಪಾಲಿಗೆ ಕ್ರೂರವಾಗಿತ್ತು. ಸ್ಥಳೀಯ ಪೋಲೀಸರ ಅಲಕ್ಷದಿಂದಾಗಿ ಅವರನ್ನು ಪುನಃ ಹಡಗಿನಿಂದ ಹಿಡಿಯಲು ಬಂದಿದ್ದವರಿಗೇ ಒಪ್ಪಿಸಲಾಗಿ, ಅವರ ಕೈ ಕಾಲುಗಳಿಗೆ ಬೇಡಿ ಹಾಕಿ ಮತ್ತೆ ಹಡಗಿಗೆ ಎಳೆದೊಯ್ದರು. ಈ ರೀತಿ ದೇಶದ ಸ್ವಾತಂತ್ಯ್ರಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿದವರೇ ವಿನಾಯಕ ದಾಮೋದರ ಸಾವರರ್ಕರ್ (ವೀರ ಸಾವರ್ಕರ್)
ಜುಲೈ 22 ರಂದು ಮುಂಬೈಗೆ ಕರೆತಂದು ನಾಸಿಕದ ಜೈಲಿಗೆ ಸೇರಿಸಿದರು. ಕೆಲ ದಿನಗಳ ನಂತರ ಯರವಡಾ ಜೈಲಿಗೆ ವರ್ಗಾವಣೆ ಮಾಡಿ ಸೆಪ್ಟೆಂಬರ್ 15 ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಸಮುದ್ರದ ಮಧ್ಯದಲ್ಲಿಯೇ ತಪ್ಪಿಸಿ ಕೊಂಡ ಈ ವ್ಯಕ್ತಿ ನೆಲದ ಸುಮ್ಮನಿರುವವನೇ ಎಂದು ವಿಶೇಷ ಪೊಲೀಸ್ ಪಹರೆ ಒದಗಿಸಲಾಗಿತ್ತು. 24.12.1910 ಶನಿವಾರ ತೀರ್ಪು ಹೊರಬಿತ್ತು: 25 ವರ್ಷಗಳ ಕಾಲಾಪಾನಿ ( ಕರಿನೀರಿನ) ಶಿಕ್ಷೆ ಹಾಗೂ ಆಸ್ತಿ ಪಾಸ್ತಿಗಳ ಜಪ್ತಿ. ಮತ್ತೆ 30.01.1911 ರಂದು ಜಾಕ್ಸನ್ ಕೊಲೆಗೆ ನೆರವಾದ ಆರೋಪಕ್ಕಾಗಿ ಮತ್ತೊಂದು ಆ ಜನ್ಮ ಕಾರಾವಾಸದ ತೀರ್ಪು ಹೊರಬಂದಿತು. ಒಟ್ಟಿನಲ್ಲಿ 50 ವರ್ಷಗಳ ಕಾಲ ಕರಿನೀರಿನ ಶಿಕ್ಷೆಗೆ ವೀರ ಸಾವರ್ಕರ್ ಅವರನ್ನು ಗುರಿ ಪಡಿಸಲಾಯಿತು.







