ಸಾಮಾಜಿಕ ವಿಕೃತಿಯೇ ಆಗಿರುವ ಈ ಅಪರಾಧ ಎಸಗುವ ಅಪರಾಧಿಗಳು ಮನೆಯೊಳಗಡೆಯೇ ಇದ್ದರೆ ಅವರನ್ನು ಹೇಗೆ ಕಟಕಟೆಯಲ್ಲಿ ನಿಲ್ಲಿಸುವುದು?

ದಿನಪತ್ರಿಕೆಯೊಂದರಲ್ಲಿ ಒಂದು ವ್ಯಂಗ್ಯ ಚಿತ್ರ ಪ್ರಕಟವಾಗಿತ್ತು. ಅದರಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಕೇಳುತ್ತಾನೆ, “ವಾಹನಗಳು ಬಗೆಬಗೆಯ ಧ್ವಜ ಹಾಕಿಕೊಂಡು ಎಲ್ಲಿಗೆ ಹೊರಟಿವೆ?’

‘ಇನ್ನೊಬ್ಬ ವ್ಯಕ್ತಿ ಅದಕ್ಕೆ ಉತ್ತರಿಸುತ್ತಾನೆ, “ಬಹುಶಃ ಎಲ್ಲೋ ರೇಪ್‌ ಘಟನೆ ನಡೆದಿರಬಹುದು.”

ದೇಶಾದ್ಯಂತ ನಡೆಯುತ್ತಿರುವ ಬಲಾತ್ಕಾರಗಳ ಬಗ್ಗೆ ಮಾಡಿದ ಈ ಹಾಸ್ಯ ಚಟಾಕಿ ಒಂದು ಕಹಿ ಸತ್ಯವನ್ನು ಬಿಂಬಿಸುತ್ತದೆ. ದೇಶದ ಆಡಳಿತ ನಡೆಸುತ್ತಿರುವ ಅಧಿಕಾರಿಗಳು ಈ ಘಟನೆಗಳ ಬಗ್ಗೆ ತನಿಖೆ ನಡೆಸಲು ಬಾಯಿ ಬಾಯಿ ಬಿಡುತ್ತಿರುವಾಗ ಇತರೆ ಅಭಿವೃದ್ಧಿ ಕೆಲಸಗಳಿಗೆ ಅವರು ಹೇಗೆ ಸ್ಪಂದಿಸಲು ಸಾಧ್ಯ?

ಉತ್ತರಪ್ರದೇಶದ ಬದಾಯುನಲ್ಲಿ ಇಬ್ಬರು ಹುಡುಗಿಯರ ಮೇಲೆ ಗ್ಯಾಂಗ್‌ ರೇಪ್‌ ನಡೆಸಿ ಅವರನ್ನು ಮರಕ್ಕೆ ನೇತು ಹಾಕಲಾಗಿತ್ತು. ಅದೇ ರಾಜ್ಯದ ಬರೇಲಿ ಜಿಲ್ಲೆಯಲ್ಲಿ ಯುವತಿಯೊಬ್ಬಳ ಮೇಲೆ ಬಲಾತ್ಕಾರ ಮಾಡಿ ಬಳಿಕ ಆಕೆಯನ್ನು ಹತ್ಯೆಗೈಯಲಾಗಿತ್ತು. ಅಷ್ಟೇ ಅಲ್ಲ, ಆಕೆಯ ಗುರುತು ಸಿಗದಿರಲೆಂದು ಆ್ಯಸಿಡ್‌ನಿಂದ ಮುಖವನ್ನು ಸುಟ್ಟುಹಾಕಲಾಗಿತ್ತು.

ಇದು ಕೇವಲ ಉತ್ತರ ಪ್ರದೇಶದ್ದೊಂದೇ ಕಥೆ ಅಲ್ಲ. ಇಡೀ ಭಾರತದಾದ್ಯಂತ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಅತ್ಯಾಚಾರಿಗಳು ಎಳೆಯ ವಯಸ್ಸಿನ ಹುಡುಗಿಯರ ಮೇಲೆ ಈ ತೆರನಾದ ಕೃತ್ಯ ಎಸಗಿದಾಗ ಅಲ್ಲೋಲ ಕಲ್ಲೋಲದ ವಾತಾವರಣ ಸೃಷ್ಟಿಯಾಗುತ್ತದೆ.

ಬಾಪೂಜಿಯ ಎಚ್ಚರಿಕೆ

ಇಲ್ಲಿ ಮಹಾತ್ಮ ಗಾಂಧಿಯವರಿಗೆ ಸಂಬಂಧಪಟ್ಟ ಒಂದು ಸುದ್ದಿಯನ್ನು ತಿಳಿಸುವುದು ಸೂಕ್ತ ಎನಿಸುತ್ತದೆ. ಗುಜರಾತಿ ಭಾಷೆಯಲ್ಲಿ ಅವರು ಬರೆದ 3 ಪತ್ರಗಳನ್ನು ಬ್ರಿಟನ್ನಿನಲ್ಲಿ ಹರಾಜು ಮಾಡಲಾಗುತ್ತಿತ್ತು. ಅದರಲ್ಲಿ ಜೂನ್‌ 1935ರ ಒಂದು ಪತ್ರದಲ್ಲಿ ಗಾಂಧೀಜಿಯವರು ತಮ್ಮ ಮಗ ಹರಿಲಾಲ್‌ಗೆ ಹೀಗೆ ಬರೆದಿದ್ದರು. “ಮನು ನಿನ್ನ ಬಗ್ಗೆ  ಸಾಕಷ್ಟು ಅಪಾಯಕಾರಿ ವಿಷಯ ತಿಳಿಸಿದ್ದಾಳೆ. 8 ವರ್ಷಕ್ಕೂ ಕಡಿಮೆ ವಯಸ್ಸಿನ ಅವಳ ಬಗ್ಗೆ ನೀನು ಕೆಟ್ಟದಾಗಿ ನಡೆದುಕೊಂಡೆಯಂತೆ. ಅವಳ ಆ ನೋವು ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ಅವಳಿಗೆ ಚಿಕಿತ್ಸೆ ನೀಡುವ ಸ್ಥಿತಿ ಉಂಟಾಯಿತು.”

ಮಹಾತ್ಮ ಗಾಂಧಿಯವರು ಈ ಮಾತನ್ನು  ಹರಿಲಾಲ್‌ನ ಮಗಳು ಮನುವಿನ ಕುರಿತಂತೆ ಹೇಳಿದ್ದರು. ಆದರೆ ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್‌ ಗಾಂಧಿ ಮಾಧ್ಯಮಗಳಲ್ಲಿ ಬಂದ ಸುದ್ದಿಯ ಕುರಿತಂತೆ ಹೇಳಿಕೆ ನೀಡಿ, “ಅವೆಲ್ಲ ಸುಳ್ಳು ಸುದ್ದಿ,” ಎಂದು ಹೇಳಿದ್ದರು. ಮಹಾತ್ಮ ಗಾಂಧಿಯವರು ಗುಜರಾತಿ ಭಾಷೆಯಲ್ಲಿ ಬರೆದ ಪತ್ರಗಳ ಅನುವಾದ ಅತ್ಯಂತ ಕೆಳಮಟ್ಟದಲ್ಲಿತ್ತು. ಏಕೆಂದರೆ ಮಹಾತ್ಮ ಗಾಂಧಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ತಮ್ಮ ಮಗ ಹರಿಲಾಲ್‌‌ಗೆ ಬರೆದ ಚೀಟಿಯಲ್ಲಿ ಬಾಲ ವಿಧವೆ (ಹೆಂಡತಿಯ ತಂಗಿ)ಯ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಛೀಮಾರಿ ಹಾಕಿದ್ದರು. ಚೀಟಿಯಲ್ಲಿ ಬಾಪೂಜಿಯವರು ಹರಿಲಾಲ್ ಚಿಕ್ಕಪ್ಪ ತಮ್ಮ ದಿವಂಗತ ಹೆಂಡತಿಯ ತಂಗಿಯ ಜೊತೆಗಿನ ಸಂಬಂಧದ ಬಗ್ಗೆ ವಿರೋಧಿಸಿದ್ದರು. ಬಳಿಕ ಹರಿಲಾಲ್ ಅವರನ್ನು ವಿವಾಹ ಕೂಡ ಆಗಿದ್ದರು. ಬಾಪೂಜಿ ಜೊತೆಗೆ ವರ್ಧಾದಲ್ಲಿರುವ ಸೇವಾ ಗ್ರಾಮದಲ್ಲಿದ್ದ ಹರಿಲಾಲ್ ‌ಮಗಳು ಮನು ಅವರಿಗೆ ತಿಳಿಸಿದ್ದೇನೆಂದರೆ, ಹರಿಲಾಲ್ ‌ಬಾಲ ವಿಧವೆಯ ಜೊತೆಗೆ ದುರ್ವರ್ತನೆ ತೋರಿದ್ದರು. ಆಕೆಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು.

ತುಷಾರ್‌ ಗಾಂಧಿಯವರ ಮಾತಿನಲ್ಲಿ ಸತ್ಯಾಂಶ ಇರಬಹುದು. ಹರಿಲಾಲ್ ತನ್ನ ಪುತ್ರಿ ಮನು ಜೊತೆ ಕೆಟ್ಟದಾಗಿ ನಡೆದುಕೊಂಡಿರಲಿಕ್ಕಿಲ್ಲ. ಆದರೆ ಹೆಂಡತಿಯ ತಂಗಿ ಬಾಲ ವಿಧವೆಯ ಜೊತೆ ಕೆಟ್ಟದಾಗಿ ನಡೆದುಕೊಂಡಿರಬಹುದು. ಕೆಟ್ಟದಾಗಿ ನಡೆದುಕೊಂಡಿರುವುದು ಮಾತ್ರ ಸತ್ಯ. ಮಹಾತ್ಮ ಗಾಂಧಿ ಮತ್ತು ಮಗ ಹರಿಲಾಲ್‌‌ಗೆ ಹೊಂದಾಣಿಕೆ ಆಗುತ್ತಿರಲಿಲ್ಲ ಎಂಬುದನ್ನು ಇತಿಹಾಸವೇ ಸಾರಿ ಸಾರಿ ಹೇಳುತ್ತದೆ.

ಅಪ್ರಾಪ್ತ ವಯಸ್ಸಿನವರ ಜೊತೆಗೆ ಲೈಂಗಿಕ ಶೋಷಣೆ ನಡೆಯುವ ಬಗ್ಗೆ ಜಗತ್ತಿನ ಹೆಸರಾಂತ ಸೆಲೆಬ್ರಿಟಿಗಳು ತಮ್ಮ ಕಹಿ ಅನುಭವ ಹೇಳಿಕೊಂಡಿದ್ದಾರೆ.

ತಸ್ಲೀಮಾ ನಸ್ರೀನ್ನೋ

ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್‌ ಯಾರಿಗೆ ತಾನೆ ಗೊತ್ತಿಲ್ಲ? ತಮ್ಮ ಕಾದಂಬರಿ `ಲಜ್ಜಾ’ದಲ್ಲಿ ಸಾಂಪ್ರದಾಯಿಕ ವಿಷಯದ ನಿಕೃಷ್ಟ ರೂಪವನ್ನು ಪ್ರಸ್ತುತಪಡಿಸಿದ ಈ ದಿಟ್ಟ ಮಹಿಳೆ ಬಾಲ್ಯದಲ್ಲಿ ತನ್ನ ಜೊತೆಗೆ ನಡೆದ ಲೈಂಗಿಕ ಶೋಷಣೆಗೆ ಅಕ್ಷರ ರೂಪ ಕೊಟ್ಟರು.

ತಸ್ಲೀಮಾ 5 ವರ್ಷದವಳಿದ್ದಾಗ ಆಕೆಯ ಮಾವ ಆಕೆಯ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದ. ಅವನ ಕಪಿಮುಷ್ಠಿಯಿಂದ ಪಾರಾಗಿ ಬಂದ ಆಕೆಗೆ ಎಚ್ಚರಿಕೆ ಕೊಡುತ್ತಾ, “ನೀನೇನಾದರೂ ಈ ವಿಷಯ ಬಾಯಿಬಿಟ್ಟರೆ ನೀನು ಸರ್ವನಾಶವಾಗಿ ಹೋಗುತ್ತೀ,” ಎಂದು ಎಚ್ಚರಿಕೆ ಕೊಟ್ಟಿದ್ದ.

ನಾಚಿ ತಲೆ ತಗ್ಗಿಸುವ ಇವರ ಕಥೆ ಹಾಲಿವುಡ್‌ನ ನಟ ಮತ್ತು ನಿರ್ಮಾಪಕಿ ಓಪ್ರಾ ವಿನ್‌ಫ್ರೆ ಜೊತೆಗೂ ಇದಕ್ಕಿಂತಲೂ ಘೋರ ಘಟನೆ ನಡೆದಿತ್ತು. “ತಾನು 9 ವರ್ಷದವಳಿದ್ದಾಗ ಕುಟುಂಬದ ಒಬ್ಬ ವ್ಯಕ್ತಿ ತನ್ನ ಮೇಲೆ ಬಲಾತ್ಕಾರ ಎಸಗಿದ್ದ. 4 ವರ್ಷದತನಕ ಲೈಂಗಿಕ ಶೋಷಣೆ ನಡೆಯುತ್ತಲೇ ಇತ್ತು ಎಂದು ವಿನ್‌ ಫ್ರೇ ಹೇಳಿದ್ದಳು. ಈ ಕಾರಣದಿಂದಾಗಿ ಆಕೆ 14ರ ಎಳೆಯ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಳು. ಮಗು ಹುಟ್ಟುತ್ತಲೇ ತೀರಿಹೋಯಿತು.

ಅದೇ ರೀತಿ ಹೆಸರಾಂತ ಪಾಪ್‌ ಸಿಂಗರ್‌ ಮಡೊನಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ನ್ಯೂಯಾರ್ಕ್‌ಗೆ ಬಂದಾಗ ಚಾಕು ತೋರಿಸಿ ತನ್ನ ಮೇಲೆ ಕೆಲವರು ಅತ್ಯಾಚಾರ ನಡೆಸಿದ್ದರು ಎಂದಿದ್ದರು.

ಟಿ.ವಿ. ಶೋ ಬಿಗ್‌ ಬಾಸ್‌ ಮುಖಾಂತರ ಬಾರಿ ಚರ್ಚೆಗೆ ಬಂದ ಸೋಫಿಯಾ ಹಯಾತ್‌ ಮತ್ತು ಅನಿತಾ ಅಡ್ವಾಣಿಯ ಕಥೆ ಕೂಡ ಹೆಚ್ಚುಕಡಿಮೆ ಹೀಗೆಯೇ ಇದೆ.

ಸೋಫಿಯಾ ಹಯಾತ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ತಾನು 10 ವರ್ಷದವಳಿದ್ದಾಗ ಒಬ್ಬ ಅಂಕಲ್ ತನ್ನ ಮೇಲೆ ರೇಪ್ ಮಾಡಿದ್ದ ಎಂದು ಹೇಳಿಕೊಂಡಿದ್ದಳು.

ಹೆಸರಾಂತ ಬಾಲಿವುಡ್‌ ನಟ ರಾಜೇಶ್‌ ಖನ್ನಾ ಜೊತೆಗೆ 33 ವರ್ಷಗಳ ಕಾಲ ಲಿವ್ ‌ಇನ್‌ ರಿಲೇಶನ್‌ ಶಿಪ್‌ ಹೊಂದಿದ್ದ ಅನಿತಾ ಅಡ್ವಾಣಿ ಹೇಳಿದ್ದೇನೆಂದರೆ, “ತಾನು 13 ವರ್ಷದವಳಿದ್ದಾಗ ರಾಜೇಶ್‌ ಖನ್ನಾ ತನ್ನನ್ನು ಅಪ್ಪಿಕೊಂಡು ಕಿಸ್‌ ಕೊಟ್ಟಿದ್ದರು. ಆ ಬಳಿಕ  ಅಪ್ರಾಪ್ತ ವಯಸ್ಸಿನಲ್ಲಿಯೇ ಲೈಂಗಿಕ ಶೋಷಣೆ ಮಾಡಿದ್ದರು.”

`ಭಾರತ ರತ್ನ’  ಗೌರವ ಪಡೆದ ಪಂಡಿತ್‌ ರವಿಶಂಕರ್‌ ಅವರ ಪುತ್ರಿ ಅನುಷ್ಕಾ ಶಂಕರ್‌ ಮೇಲೆ ಲೈಂಗಿಕ ಶೋಷಣೆ ಮಾಡಿದ ವ್ಯಕ್ತಿ ಆ ಕುಟುಂಬಕ್ಕೆ ಎಷ್ಟು ಹತ್ತಿರನಾಗಿದ್ದನೆಂದರೆ, ಆಕೆಯ ತಂದೆತಾಯಿ ಕಣ್ಣುಮುಚ್ಚಿ ಅವನನ್ನು ನಂಬಿಬಿಟ್ಟಿದ್ದರು.

ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಸರುವಾಸಿಯಾದ ಮಹಿಳೆಯರ ಹೊರತಾಗಿ ಅನೇಕ ಮಹಿಳೆಯರು ಬಾಲ್ಯದಲ್ಲಿಯೇ ಲೈಂಗಿಕ ಶೋಷಣೆಗೆ ತುತ್ತಾಗಿದ್ದರು. ಅವರು ಇಷ್ಟೊಂದು ವರ್ಷಗಳ ಬಳಿಕ ತಮ್ಮ ಮೇಲೆ ನಡೆದ ಕಹಿ ಘಟನೆಯನ್ನು ಹೇಳುವ ಕಾರಣವಾದರೂ ಏನು? ಚರ್ಚೆಯಲ್ಲಿರಲುವ ಈ ರೀತಿಯ ಪ್ರಚಾರ ತಂತ್ರ ಅನುಸರಿಸುತ್ತಿರಬಹುದೆ?

ಯಾವುದೇ ಒಂದು ಮಗುವಿನ ಜೊತೆ ಲೈಂಗಿಕ ಶೋಷಣೆಯ ಬಗ್ಗೆ ಹೇಳಬೇಕೆಂದರೆ, ಹೀಗೆ ಮಾಡುವವರ ಮನಸ್ಸಿನಲ್ಲಿ ವಾಸ್ತವದಲ್ಲಿ ಏನು ನಡೆಯುತ್ತದೆ ಎಂದು ಹೇಳುವುದು ಕಷ್ಟ. ಇಂತಹ ಮಾನಸಿಕ ವಿಕೃತಿಯುಳ್ಳ ಜನರಿಗೆ ಆಂಗ್ಲ ಭಾಷೆಯಲ್ಲಿ `ಪಿಡೊಫಿಲ್’ ಎಂದು ಕರೆಯಲಾಗುತ್ತದೆ. ಅಂಥವರು 5 ರಿಂದ ಹಿಡಿದು 8-10 ವರ್ಷಗಳ ಮಕ್ಕಳ ಜೊತೆ ಲೈಂಗಿಕ ಸಂಬಂಧ ನಡೆಸುತ್ತಾರೆ. ಒಬ್ಬ ಸಾಮಾನ್ಯ ವ್ಯಕ್ತಿ ವಿರುದ್ಧ ಲಿಂಗಿಯನ್ನು ನೋಡಿದಾಗ ಯಾವ ರೀತಿ ಅವನ ಮೆದುಳಿನಲ್ಲಿ ಲೈಂಗಿಕ ಭಾವನೆ ಉಂಟಾಗುತ್ತೊ, `ಪಿಡೊಫಿಲ್‌’ ವ್ಯಕ್ತಿತ್ವದ ಜನರಿಗೆ ಮಕ್ಕಳನ್ನು ನೋಡಿದಾಗ ಈ ರೀತಿಯ ಭಾವನೆ ಉಂಟಾಗುತ್ತದೆ. ಅಂದಹಾಗೆ ಮಕ್ಕಳನ್ನು ಪುಸಲಾಯಿಸಿ ತಮ್ಮ ಕೆಲಸಕ್ಕೆ ಸುಲಭವಾಗಿ ಬಳಸಿಕೊಳ್ಳಬಹುದು ಎಂದು ಅವರು ನಂಬಿರುತ್ತಾರೆ. ಕೆಲವು ಮನೋವಿಜ್ಞಾನಿಗಳು ಹೇಳುವುದೇನೆಂದರೆ, `ಫಿಡೊಫಿಲ್‌’ ವ್ಯಕ್ತಿಗಳಿಗೆ ಬೇರೆಯವರನ್ನು ಸತಾಯಿಸುವುದೆಂದರೆ ಬಹಳ ಖುಷಿ. ಅವರು ಮೊದಲು ಮಕ್ಕಳ ಮೇಲೆ ಆತ್ಯಾಚಾರದಂತಹ ಹೀನಕೃತ್ಯ ಎಸಗುತ್ತಾರೆ, ಬಳಿಕ ಅವರು ಘಟನೆಯ ಬಗ್ಗೆ ಯಾರ ಮುಂದಾದರೂ ಹೇಳಿದರೆ ಏನು ಗತಿ ಎಂದು ಅವರನ್ನು ತೀವ್ರವಾಗಿ ಗಾಯಗೊಳಿಸುತ್ತಾರೆ. ಇಲ್ಲಿ ಜೀವಕ್ಕೆ ಕುತ್ತು ತಂದುಬಿಡುತ್ತಾರೆ.

ಮಾನಸಿಕ ರೋಗ

ಮನೋವಿಶ್ಲೇಷಕ ಹೆಲ್ಯಾಕ್‌ ಎಲಿಸ್‌ ಹೀಗೆ ಹೇಳುತ್ತಾರೆ, ಸೆಕ್ಸ್ ಆನಂದದ ಒಂದು ವಿಧಾನ. ಆದರೆ ವಿಕೃತ ಸೆಕ್ಸ್ ವ್ಯವಹಾರ ಸಮಾಜದಲ್ಲಿ ಸೆಕ್ಸ್ ಅಪರಾಧದಲ್ಲಿ ಹೆಚ್ಚಳವನ್ನುಂಟು ಮಾಡಿದೆ.

ಇಂತಹ ಸೆಕ್ಸ್ ವರ್ತನೆಯನ್ನು ಹೇಗೆ ತಡೆಯವುದು?

ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಅವಶ್ಯವಾಗಿ ತಿಳಿಸಿ ಹೇಳಬೇಕೆಂದು ನಾವು ಆಗಾಗ ಹೇಳುತ್ತಲೇ ಇರುತ್ತೇವೆ. ತಂದೆ ತಾಯಿ ಹಾಗೂ ಶಿಕ್ಷಕರು ಮಕ್ಕಳಿಗೆ ಅವರ ದೈಹಿಕ ಬದಲಾವಣೆಯ ಬಗ್ಗೆ ಮಾಹಿತಿ ನೀಡಬೇಕಾದುದು ಅವರ ಕರ್ತವ್ಯ. ಇದೆಲ್ಲ ಸರಿ. ಆದರೆ ಅವರಿಗೆ ಲೈಂಗಿಕ ಶಿಕ್ಷಣ ಕೊಡುವವರು ಯಾರು? ಅವರು ಇದನ್ನು ಹೀನ ಕೆಲಸ ಎಂದು ಭಾವಿಸುತ್ತಾರೆ. ತಮ್ಮ ವಿಕೃತ ಸೆಕ್ಸ್ ಮೇಲೆ ನಿಯಂತ್ರಣ ಹೇರುವ ಕಲೆಯನ್ನು ಕರಗತ ಮಾಡಿಕೊಳ್ಳುವ ಸಂಸ್ಥೆಗಳು ಎಲ್ಲಿಯಾದರೂ ತೆರೆಯುತ್ತಿಯೇ?

ಬಹುಶಃ ಇಲ್ಲ. ಹಾಗೆಂದೇ ಪ್ರತಿಯೊಬ್ಬ ಅತ್ಯಾಚಾರಿ ವ್ಯಕ್ತಿಗೂ ಎಷ್ಟು ಸಾಧ್ಯವೋ ಅಷ್ಟು ಕಠಿಣ ಶಿಕ್ಷೆ ವಿಧಿಸಲು ಒತ್ತಾಯಗಳು ಕೇಳಿಬರುತ್ತವೆ. ತ್ವರಿತ ನ್ಯಾಯಾಲಯದಲ್ಲಿ ಆ ಪ್ರಕರಣವನ್ನು ತೆಗೆದುಕೊಂಡು ಹೋಗಿ ಶೀಘ್ರ ತೀರ್ಪು ನೀಡುವಂತಾಗಬೇಕು ಎಂದೆಲ್ಲ ಒತ್ತಾಯಗಳು ಕೇಳಿಬರುತ್ತವೆ.

ಮಕ್ಕಳ ಜೊತೆ ಲೈಂಗಿಕ ಶೋಷಣೆ ಮಾಡುವವರಿಗೆ ಕೆಮಿಕಲ್ ಮುಖಾಂತರ  ಸಂತಾನ ನಿರೋಧ ಮಾಡುವುದರ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ. ಕೆಮಿಕಲ್ ಸಂತಾನ ನಿಯಂತ್ರಣದಲ್ಲಿ ವಿಶಿಷ್ಟ ಬಗೆಯ ಚುಚ್ಚುಮದ್ದು ಹಾಕಲಾಗುತ್ತದೆ. ಅದರ ಪರಿಣಾಮವೆಂಬಂತೆ ಕೆಲವೇ ದಿನಗಳಲ್ಲಿ ಅವರ ಲೈಂಗಿಕ ಜೀವನ ನಿಷ್ಕ್ರಿಯವಾಗಿಬಿಡುತ್ತದೆ.

ದ. ಕೊರಿಯಾದಲ್ಲಿ ಈ ಪ್ರಸ್ತಾವ 2011ರಲ್ಲಿ ಅಂಗೀಕಾರ ಪಡೆದಿವೆ. ಈ ರೀತಿಯ ಉಗ್ರ ಕ್ರಮಕ್ಕೆ ಮುಂದಾದ ಏಷ್ಯದ ಪ್ರಥಮ ದೇಶವಾಗಿದೆ. ಇದರ ಹೊರತಾಗಿ ಅಮೆರಿಕದ ಹಲವು ರಾಜ್ಯಗಳು ಪೋಲಂಡ್‌, ರಷ್ಯಾ ಸಹಿತ ಹಲವು ರಾಷ್ಟ್ರಗಳಲ್ಲಿ ಈ ಕಾನೂನು ಜಾರಿಗೆ ಬಂದಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರ ಧೋರಣೆಯೂ ಗಮನಾರ್ಹವಾದುದಾಗಿರುತ್ತದೆ. ಅದನ್ನು ನಾವು ಪ್ರತಿಯೊಬ್ಬ ಮಹಿಳೆಯ ರಕ್ಷಣೆ ಮಾಡಲಾಗುವುದಿಲ್ಲ ಎಂಬ ಯೋಚನೆಯಿಂದ ಹೊರಬರಬೇಕಾಗುತ್ತದೆ. ಇಂತಹ ಪ್ರತಿಯೊಂದು ಪ್ರಕರಣವನ್ನು ನಾವು ಘೋರ ಎಂದು ಭಾವಿಸಿ ಕಾರ್ಯಪ್ರವೃತ್ತರಾಗಬೇಕು.

ಎಚ್ಚರಿಕೆಯಿಂದಿರುವುದು ಅಗತ್ಯ

ಯಾವ ಮಹಿಳೆಯ ಜೊತೆ ಬಲಾತ್ಕಾರ ಸಂಭವಿಸಿದೆಯೊ, ಅದರಲ್ಲಿ ಅವಳದ್ದೇನೂ ತಪ್ಪಿಲ್ಲ. ಅವಳಿಗೆ ದೇಹದ ಜೊತೆಗೆ ಮನಸ್ಸಿನ ಮೇಲೂ ಗಾಯವಾಗಿದೆ. ಆ ಗಾಯ ವಾಸಿಯಾಗಲು ಸ್ವಲ್ಪ ಸಮಯ ತಗಲುತ್ತದೆ. ಒಮ್ಮೊಮ್ಮೆ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಗೆ ಮನೋತಜ್ಞರ ಸಲಹೆ ಕೂಡ ಬೇಕಾಗುತ್ತದೆ.

ಇತ್ತೀಚೆಗಷ್ಟೇ ಬಂದ ಇಮ್ತಿಯಾಜ್‌ ಅಲಿಯವರ ಚಲನಚಿತ್ರ `ಹೈವೇ’ನಲ್ಲಿ ಪೋಷಕರು ಮಕ್ಕಳಲ್ಲಿ ಹೊರಗಿನ ಜಗತ್ತಿನ ಅಪಾಯದ ಬಗ್ಗೆ ಏನೋ ಎಚ್ಚರಿಸುತ್ತಾರೆ. ಆದರೆ ಮನೆಯಲ್ಲಿ ಇರುವ ಅಪಾಯದ ಬಗ್ಗೆ ಎಚ್ಚರಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸಲಾಗಿದೆ. ಈ ಚಿತ್ರದ ನಾಯಕಿ ಮೀರಾ (ಆಲಿಯಾ ಭಟ್‌) ಬಾಲ್ಯದಲ್ಲಿ ತನ್ನ ದೊಡ್ಡಪ್ಪನಿಂದಲೇ ಲೈಂಗಿಕ ಶೋಷಣೆಗೆ ಒಳಗಾಗಿರುತ್ತಾಳೆ. ಈ ನೋವು ಅವಳನ್ನು ಸತಾಯಿಸುತ್ತಾ ಇರುತ್ತದೆ. ಒಂದು ದಿನ ಆಕೆ ತನ್ನ ದೊಡ್ಡಪ್ಪನ ವಿರುದ್ಧ ಜ್ವಾಲಾಮುಖಿಯಂತೆ ತಿರುಗಿ ಬೀಳುತ್ತಾಳೆ. ತನ್ನ ಮನಸ್ಸಿನ ಆಕ್ರೋಶವನ್ನೆಲ್ಲ ಹೊರಹಾಕುತ್ತಾಳೆ. ಹೀಗಾಗಿ ಪ್ರತಿಯೊಬ್ಬ ತಂದೆ ತಾಯಿಗಳು ಮಕ್ಕಳು ಯಾವುದಾದರೂ ಘಟನೆಯ ಬಗ್ಗೆ ಹೇಳಲು ಬಂದರೆ ಸಮಾಜದ ಭಯದಿಂದ ಅವರ ಮಾತನ್ನು ಕೇಳಿಸಿಕೊಳ್ಳದೇ ಇರಬೇಡಿ. ಅಗತ್ಯಬಿದ್ದರೆ ಈ ಕುರಿತಂತೆ ಬೇರೆಯವರ ಜೊತೆಗೂ ಮಾತುಕಥೆ ನಡೆಸಿ.

ಸುನೀತಾ ಶರ್ಮ 

ಲೈಂಗಿಕ ಶೋಷಣೆಗೆ ತುತ್ತಾದ ಮಕ್ಕಳ ಲಕ್ಷಣಗಳು

ಅವರಲ್ಲಿ ಭ್ರಮೆಯ ಸ್ಥಿತಿ ಇರುತ್ತದೆ.

ನಿದ್ರೆಗೆ ಭಂಗ ಉಂಟಾಗುತ್ತದೆ.

ಒಂದುವೇಳೆ ನಿದ್ರೆ ಬಂದರೂ, ಕೆಟ್ಟ ಕನಸು ಬಿದ್ದು ಬೆಚ್ಚಿ ಬೀಳುತ್ತಾರೆ.

ತಲೆ ನೋವಿನ ಬಗ್ಗೆ ಹೇಳುತ್ತಲೇ ಇರುತ್ತಾರೆ.

ಒಮ್ಮೊಮ್ಮೆ ಮಗು ಹೆಚ್ಚೆಚ್ಚು ಆಹಾರ ಸೇವಿಸತೊಡಗುತ್ತದೆ.

ಅದು ಸದಾ ಒತ್ತಡದಲ್ಲಿರುತ್ತದೆ. ಒಮ್ಮೊಮ್ಮೆ ಖಿನ್ನತೆಗೂ ತುತ್ತಾಗುತ್ತದೆ.

ಮಾತುಮಾತಿಗೂ ಕೋಪ ತೋರಿಸುತ್ತದೆ.

ಏಕಾಂಗಿಯಾಗಿರುವುದು ಹೆಚ್ಚು ಇಷ್ಟವಾಗುತ್ತದೆ.

ಅನುಷ್ಕಾ ಶಂಕರ್ಓಪ್ರಾ ವಿನ್ಫ್ರೆ  ಮಡೊನಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ