ತಮ್ಮ ಛಲ ಹಾಗೂ ಉತ್ಕಟ ಬಲದ ಆಧಾರದ ಮೇಲೆ ಸೋನಾ ಚೌಧರಿ ಕೇವಲ ಫುಟ್‌ಬಾಲ್‌ನಲ್ಲಷ್ಟೇ ಮಿಂಚದೆ, ತಮ್ಮ ಅದ್ಭುತ ಆಟದ ಬಲದಿಂದ ಭಾರತೀಯ ಮಹಿಳಾ ಫುಟ್‌ಬಾಲ್ ತಂಡದ ನಾಯಕಿಯಾಗಿಯೂ ಮಿಂಚಿದರು. ಹರಿಯಾಣ ರಾಜ್ಯದ ಒಂದು ಪುಟ್ಟ ಹಳ್ಳಿಯ ರೈತ ಕುಟುಂಬದಿಂದ ಬಂದ ಸೋನಾ ಫುಟ್‌ಬಾಲ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದು ವಿಚಿತ್ರವಾದರೂ ನಿಜ. 80ರ ದಶಕದಲ್ಲಿ ಮಹಿಳೆಯರಿಗೆ ಫುಟ್‌ಬಾಲ್‌ ಆಡಲು ಪ್ರತ್ಯೇಕ ಮೈದಾನ ಕೂಡ ಇರಲಿಲ್ಲ. ಆದರೆ ಅವರ ಉಸಿರಲ್ಲಿ ಫುಟ್‌ಬಾಲ್ ಬೆರೆತು ಹೋಗಿತ್ತು.

ಹೀಗಾಗಿ ಸೋನಾ ಸೋಲು ಒಪ್ಪಿಕೊಳ್ಳಲಿಲ್ಲ. ತಮ್ಮ ಅಪಾರ ಪರಿಶ್ರಮ ಹಾಗೂ ಛಲದ ಬಲದಿಂದಾಗಿ ಅವರು ಮೊದಲು ಹರಿಯಾಣ (1992-96) ಹಾಗೂ ಆ ಬಳಿಕ ಭಾರತ ತಂಡದ (1996-98) ಮಹಿಳಾ ಫುಟ್‌ಬಾಲ್‌ ತಂಡದ ನಾಯಕಿಯಾಗಿ ಮಿಂಚಿದರು. ಅವರ ನೇತೃತ್ವದಲ್ಲಿ ಭಾರತೀಯ ಮಹಿಳಾ ತಂಡ ನೇಪಾಳ ಹಾಗೂ ಬಾಂಗ್ಲಾ ದೇಶಕ್ಕೆ ಹೋಗಿ ಆಡಿತ್ತು.

ಕಷ್ಟದ ದಾರಿ ಹಾಗೂ ಯಶಸ್ಸು

`ಮಹಿಳಾ ಆಟಗಾರ್ತಿಗೆ ಆಟ ಹಾಗೂ ಸಮಾಜಕ್ಕೆ ಸಂಬಂಧಪಟ್ಟಂತೆ ಯಾವ ಯಾವ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ?’ ಈ ಪ್ರಶ್ನೆಗೆ ಸೋನಾ ಚೌಧರಿ ಉತ್ತರಿಸಿದ್ದು ಹೀಗೆ, “ನಾನು ಆ ಕ್ರೀಡೆಯನ್ನು ಏಕೆ ಒಪ್ಪಿಕೊಂಡೆನೆಂದರೆ, ಅದರ ಬಗ್ಗೆ ನನಗೆ ಅಪಾರ ಪ್ರೀತಿಯಿತ್ತು. ನನ್ನ ಛಲ ಹಾಗೂ ಉತ್ಕಟ ಅಭಿಲಾಷೆ ನನ್ನನ್ನು ಫುಟ್‌ಬಾಲ್ ಆಟಗಾರ್ತಿ ಆಗಿಸಿತ್ತು. ಆಗ ನನಗೆ ಯಾರೋ ಒಬ್ಬರು, “ನೀನು ಹುಡುಗಿ, ಹೀಗಾಗಿ ನೀನು ಫುಟ್‌ಬಾಲ್ ಆಡಲು ಆಗುವುದಿಲ್ಲ,” ಎಂದಿದ್ದರು. ಆ ಮಾತು ನನ್ನನ್ನು ಬಹಳ ಘಾಸಿಗೊಳಿಸಿತ್ತು. ಆಗ ನಾನು ದಿಟ್ಟ ಹೆಜ್ಜೆ ಇಟ್ಟೆ. ಆ ಬಳಿಕ ನಾನು ಎಷ್ಟು ದೂರ ಕ್ರಮಿಸಿದೆನೆಂದರೆ, ಅದು ನನ್ನ ಊಹೆಗೂ ಮೀರಿದ್ದಾಗಿತ್ತು. ಆಗ ಭಾರತ ತಂಡದಲ್ಲಿ ಆಡುವುದೆಂದರೆ ಒಲಿಂಪಿಕ್‌ ಕ್ರೀಡೆಯಲ್ಲಿ ಭಾಗಹಿಸಿದಂತಿತ್ತು.“

ಈ ಕ್ರೀಡೆಯಿಂದ ನನಗೆ ದೊರೆತ ಜನರ ಪ್ರೀತಿ ಎಲ್ಲಕ್ಕೂ ದೊಡ್ಡ ಸಾಧನೆಯಂತಿತ್ತು. ನಾವು ಎಲ್ಲಿಯೇ ಆಡಲು ಹೋದರೂ ಜನರು ನಮ್ಮ ಬಗ್ಗೆ ಅಪಾರ ಗೌರವ ಸೂಚಿಸುತ್ತಿದ್ದರು. ಆ ಕ್ಷಣಗಳನ್ನು ನಾನಿನ್ನೂ ಮರೆತಿಲ್ಲ. ಅವು ನನ್ನನ್ನು ರೋಮಾಂಚನಗೊಳಿಸುತ್ತವೆ.”

ಅವರು ಮುಂದುವರಿದು ಹೇಳುತ್ತಾರೆ, “ಮಹಿಳೆಯೊಬ್ಬಳು ಕ್ರೀಡೆಯಲ್ಲಿ ಭಾಗಿಯಾಗುವುದು ಈಗ ಸಾಮಾನ್ಯ ಸಂಗತಿ ಎನಿಸುತ್ತದೆ. ಆದರೆ ನಾವು ಆಡುವಾಗ ಅದು ಬಹಳ ವಿಶೇಷತೆ ಎನಿಸುತ್ತಿತ್ತು. ಆಗ ಕುಟುಂಬದವರೇ ಸಹಕಾರ ಕೊಡುವುದು ಅಪರೂಪ. ಯಾರೇ ಭೇಟಿಯಾದರೂ ಹುಡುಗಿಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎಂಬಂತೆ ಹೇಳುತ್ತಿದ್ದರು.

“ನನ್ನ ಅಣ್ಣನ ಎಷ್ಟೋ ಸ್ನೇಹಿತರು ನಾನು ಹುಡುಗರ ಜೊತೆ ಏಕೆ ಫುಟ್‌ಬಾಲ್‌ ಆಡುತ್ತಿದ್ದೆ ಎಂದು ಪ್ರಶ್ನಿಸುತ್ತಿದ್ದರು. ಒಂದು ಕಹಿ ಸತ್ಯವೆಂದರೆ, ಜನರು ಹೇಳಿದ್ದನ್ನು ಕೇಳಿಸಿಕೊಳ್ಳಲೂ ಬೇಕು. ಅವರೊಂದಿಗೆ ಹೋರಾಡುವುದೂ ಗೊತ್ತಿರಬೇಕು. ಆ ನಿಟ್ಟಿನಲ್ಲಿ ನಾನು ಬಹಳಷ್ಟು ನೋವು ಉಂಡಿರುವೆ. ಮನೆಯನ್ನು ನಿರ್ವಹಿಸುತ್ತಲೇ ಮುಂದೆ ಮುಂದೆ ಸಾಗಿದೆ.”

ಗೇಮ್ ಇನ್‌ ಗೇಮ್

ಅವರು ತಮ್ಮ `ಗೇಮ್ ಇನ್‌ ಗೇಮ್’ ಪುಸ್ತಕದಲ್ಲಿ ಮಹಿಳಾ ಕ್ರೀಡಾಪಟುಗಳ ಜೊತೆ ಮಾಡಲಾಗುವ ಭೇದಭಾವದ ಬಗ್ಗೆ ಬಹಳ ವಿವರವಾಗಿ ಬರೆದಿದ್ದಾರೆ. “ಮಹಿಳೆಯರು ಕ್ರೀಡೆಯಲ್ಲಿ ಮುಂದೆ ಬರಲು ಹೊಂದಾಣಿಕೆ ಮಾಡಿಕೊಳ್ಳುವ ಆಫರ್‌ಗಳು ಬರುತ್ತಿವೆಯೇ?” ಎಂಬ ಪ್ರಶ್ನೆಗೆ ಅವರು ಹೀಗೆ ಹೇಳುತ್ತಾರೆ, “ಬಹಳಷ್ಟು ಸಲ ಅಂತಹ ಜನರ ಮುಖಾಮುಖಿಯಾಗುತ್ತದೆ. ಅವರು ಮಾತುಮಾತಿನಲ್ಲಿಯೇ ನಿಮ್ಮನ್ನು ಪುಸಲಾಯಿಸುತ್ತಾರೆ. ಅವರ ಮಾತುಗಳು ನಿಮಗೆ ಅಸಹಜ ಎನ್ನಿಸಬಹುದು. ಆದರೆ ಅವರು ಎಷ್ಟೊಂದು ಚತುರರಾಗಿರುತ್ತಾರೆಂದರೆ, ನಿಮ್ಮ ಮೇಲೆ ಜಾಲ ಹರಡುತ್ತಾರೆ.

“ನಾನು ನನ್ನ ಎತ್ತರದ ಕಾಯದಿಂದಾಗಿ ಸಾವಿರಾರು ಹುಡುಗಿಯರಲ್ಲೂ ವಿಭಿನ್ನವಾಗಿ ಕಂಡೆ. ಕೆಲವರು ಕೆಟ್ಟ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೆ ಅವರು ಯಶಸ್ವಿ ಆಗದೇ ಇರುವಂತೆ ನೋಡಿಕೊಳ್ಳುವುದು ನನ್ನ ಕೈಯಲ್ಲಿಯೇ ಇತ್ತು. ವಾಸ್ತವದ ಸಂಗತಿಯೇನೆಂದರೆ, ಹುಡುಗಿಯರು ತಮ್ಮ ಕ್ರೀಡಾ ಜೀವನದಲ್ಲಿ ಹಲವು ತೆರನಾದ ಸಂಘರ್ಷಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಅವರಲ್ಲಿ ಬಹಳಷ್ಟು ಹುಡುಗಿಯರು ಬಾಯಿ ಬಿಡುವುದೇ ಇಲ್ಲ. ಏಕೆಂದರೆ ಅತ್ತ ದರಿ ಇತ್ತ ಪುಲಿ ಎಂಬಂತಿರುತ್ತದೆ. ಮೊದಲು ಅವರು ಮನೆಯವರೊಂದಿಗೆ ಹೋರಾಡಿ ಕ್ರೀಡೆಗೆ ಎಂಟ್ರಿ ಕೊಟ್ಟಿರುತ್ತಾರೆ. “ಬಳಿಕ ಕ್ರೀಡಾರಂಗದಲ್ಲಿ ನಡೆಯುತ್ತಿರುವ ಯಾವುದಾದರೂ ಘಟನೆಗಳ ಬಗ್ಗೆ ಬಾಯಿ ಬಿಟ್ಟರೆ ನಾನು ನಿನಗೆ ಮೊದಲೇ ಹೇಳಿರಲಿಲ್ವಾ? ಎಂದು ಗೂಬೆ ಕೂರಿಸಲು ಹಿಂದೆ ಮುಂದೆ ನೋಡುವುದಿಲ್ಲ. ಇನ್ಮುಂದೆ ನೀನು ಮನೆಯಲ್ಲಿಯೇ ಕೂತಿರು, ಹೊರಗೆಲ್ಲೂ ಹೋಗುವುದು ಬೇಡ ಎಂದು ಹೇಳಿಬಿಡುತ್ತಾರೆ. ಹೀಗಾಗಿ ಹುಡುಗಿಯರು ಮೌನಕ್ಕೆ ಮೊರೆ ಹೋಗುತ್ತಾರೆ.

“ಆದರೆ ನನಗೆ ಒಬ್ಬರ ತಪ್ಪು ಮಾತು ಸರಿಯೆನಿಸಲಿಲ್ಲ. ಹೀಗಾಗಿ ನಾನು ನನ್ನ ರಾಜ್ಯವನ್ನೇ ತೊರೆಯಬೇಕಾಯಿತು. ಆ ಬಳಿಕ ನಾನು ಉತ್ತರಪ್ರದೇಶ ತಂಡದಲ್ಲಿ ಆಡಿದೆ. ನಾನು ಭಾರತ ತಂಡಕ್ಕೆ ಬಂದಾಗ ಉತ್ತರಪ್ರದೇಶ ತಂಡದ ನಾಯಕಿಯಾಗಿದ್ದೆ.

“ಕೊನೆಯಲ್ಲಿ ನಾನು ಹೇಳುವುದಿಷ್ಟೆ, ನೀವು ಹೊಂದಾಣಿಕೆ ಮಾಡಿಕೊಳ್ಳುತ್ತೀರೋ ಅಥವಾ ಮೋಸಗಾರರೊಂದಿಗೆ ಹೋರಾಡುತ್ತೀರೋ ಅದು ನಿಮ್ಮನ್ನು ಅವಲಂಬಿಸಿದೆ. ಆದರೆ ಇಂದಿನ ಹೊಸ ಪೀಳಿಗೆಯವರಿಗೆ ಯಾರನ್ನು ನಮ್ಮವರು, ಯಾರನ್ನು ಪರರು ಎಂದುಕೊಳ್ಳಬೇಕು ಎನ್ನುವುದೇ ಗೊತ್ತಾಗುವುದಿಲ್ಲ. ನನ್ನ `ಗೇಮ್ ಇನ್‌ ಗೇಮ್’ ಪುಸ್ತಕದಲ್ಲಿ ಇದನ್ನೆಲ್ಲ ಉಲ್ಲೇಖಿಸಿರುವೆ. ಬಹಳಷ್ಟು ಜನರ ಭ್ರಮೆ ಏನೆಂದರೆ, ನಾನು ಇದನ್ನೆಲ್ಲ ಬರೆದಿದ್ದೇನೆಂದರೆ, ನನ್ನೊಂದಿಗೂ ಅದು ಘಟಿಸಿದೆ ಎಂದು. ಆದರೆ ಅದು ನನ್ನೊಳಗೆ ಅವಿತಿರುವ ಎಂತಹ ಒಂದು ನೋವೆಂದರೆ, ಅದು ನನ್ನ ಲೇಖನಿಯಿಂದ ಇದನ್ನೆಲ್ಲ ಹೊರಹೊಮ್ಮಿಸಿತು.”

ಪನೀರ್‌ ಅಭಿಮಾನಿ

ಮಾಡೆಲಿಂಗ್‌ನಲ್ಲೂ ತಮ್ಮ ಚಾತುರ್ಯ ಮೆರೆದಿರುವ ಸೋನಾ ಚೌಧರಿ, ಹಾಡು ಕೇಳುವುದಷ್ಟೇ ಅಲ್ಲ, ಹಾಡು ಸಹ ಗುನುಗುನಿಸುತ್ತಾರೆ. ಲತಾ ಮಂಗೇಶ್ಕರ್‌ ಇವರ ಮೆಚ್ಚಿನ ಗಾಯಕಿ. `ತುಮ್, ಮುಝೆ ಯು ಭೂಲ್ ನಾ ಪಾವೋಂಗೆ…..’ ಇದು ಅವರ ಹೃದಯಕ್ಕೆ ಹತ್ತಿರವಾದ ಗೀತೆಯಾಗಿದೆ.

ಹಾಗೆಯೇ ಪನೀರ್‌ ಕೂಡ ಅವರ ಹೃದಯಕ್ಕೆ ಅಷ್ಟೇ ಹತ್ತಿರವಾಗಿದೆ. ಪನೀರ್‌ ಐಟಂಗಳನ್ನು ನೋಡಿ ಅವರು ಮುಗಿಬೀಳುತ್ತಾರೆ. ಅಂತಹ ಒಂದು ಘಟನೆಯನ್ನು ಅವರೇ ವಿವರಿಸುತ್ತಾರೆ, “ನಾವು ಆಗ ಹಾಸ್ಟೆಲ್‌ನಲ್ಲಿ ಇದ್ದೆವು. ವಾರದಲ್ಲಿ ಒಂದು ದಿನ ನಮಗೆ ಪನೀರ್‌ ಸಿಗುತ್ತಿತ್ತು. ನಮ್ಮ ಅಡುಗೆಯ ಪನೀರ್‌ನಲ್ಲಿ ಹಸಿ ಮೆಣಸಿನಕಾಯಿಯನ್ನು ಹೆಚ್ಚಾಗಿಯೇ ಹಾಕುತ್ತಿದ್ದರು. ಏಕೆಂದರೆ ನಾವು ಪನೀರ್‌ ಕಡಿಮೆ ತಿನ್ನಬೇಕು ಎಂದು. ನಾನು ಅದರಲ್ಲಿ ಚತುರೆ! ಪನೀರ್‌ ತುಂಡುಗಳನ್ನು ನಲ್ಲಿಗೆ ಹಿಡಿದು ಬಳಿಕ ಅದಕ್ಕೆ ಉಪ್ಪು ಬೆರೆಸಿ ತಿನ್ನುತ್ತಿದ್ದೆ.

”ಉಪ್ಪಿನಿಂದ ಒಂದು ಸಂಗತಿ ನೆನಪಾಯಿತು. ಸೋನಾ ಚೌಧರಿಯವರ ಜೀವನಸಾಗರ ಉಪ್ಪಿನಿಂದ ಕೂಡಿದ್ದರೂ ಬೇರೆಯವರೊಂದಿಗೆ ಸಿಹಿ ಬೆರೆಸುತ್ತ ಹೊರಟಿದ್ದಾರೆ. ಅವರು ಮೌನಿ ಆಗಿರಬಹುದು, ಅವರು ಬರೆದ ಸಾಲುಗಳು ಅವರ ಧ್ವನಿ ಹೊರಡಿಸುತ್ತವೆ.

–  ಸುನೀತಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ