ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಪ್ರವೇಶಿಸಿದ ಮೊದಲ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರನಾದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳು ಭೂಮಿಗೆ ಮರಳುವ ಪ್ರಕ್ರಿಯೆಗೆ ಸೋಮವಾರ ಚಾಲನೆ ದೊರೆತಿದೆ.

ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಡ್ರ್ಯಾಗನ್‌ ಗ್ರೇಸ್‌ ನೌಕೆಯು ಸುರಕ್ಷಿತವಾಗಿ ಧರೆಯಲ್ಲಿ ಇಳಿಯಲಿ ಎಂದು ಕೋಟ್ಯಂತರ ಭಾರತೀಯರು ಹಾರೈಸಿದ್ದು, ಶುಭಾಂಶು ಅವರ ಅನುಭವ ಹಾಗೂ ಅಧ್ಯಯನವು ಭಾರತದ ಮಾನವ ಸಹಿತ ಗಗನಯಾನ ಯೋಜನೆಗಳಿಗೆ ಬಲ ತುಂಬಲಿದೆ.

ಆ್ಯಕ್ಸಿಯಂ-4 ಮಿಷನ್‌ನಡಿ ಐಎಸ್‌ಎಸ್‌ನಲ್ಲಿ 18 ದಿನ ತಂಗಿದ್ದ ನಾಲ್ವರು ಗಗನಯಾತ್ರಿಗಳು ಅನೇಕ ಅಧ್ಯಯನ ಹಾಗೂ ಸಂಶೋಧನೆಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದರು. ಶುಭಾಂಶು ಅವರು ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ಮೆಂತ್ಯೆ ಹಾಗೂ ಹೆಸರುಕಾಳು ಮೊಳಕೆ ಬರಿಸುವ ಯಶಸ್ವಿ ಪ್ರಯೋಗವನ್ನು ಧಾರಾವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದೊಂದಿಗೆ ಕೈಗೊಂಡಿದ್ದರು. ನಾಲ್ವರಿಂದ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳು ನಡೆದಿವೆ.18 ದಿನಗಳ ಅಂತರಿಕ್ಷಯಾನ ಯಶಸ್ವಿಗೊಳಿಸಿರುವ ಶುಭಾಂಶು ಮತ್ತು ಮೂವರು ಸಹಪಾಠಿಗಳಿರುವ ಡ್ರ್ಯಾಗನ್‌ ನೌಕೆಯು ಸೋಮವಾರ ಸಂಜೆ ಭಾರತೀಯ ಕಾಲಮಾನ ಸಂಜೆ 4.45 ಸುಮಾರಿಗೆ ಭೂಯಿಯತ್ತ ಪ್ರಯಾಣ ಆರಂಭಿಸಿದೆ. ನೌಕೆಯು ಬಾಹ್ಯಾಕಾಶ ನಿಲ್ದಾಣದಿಂದ 4.35ರ ಸುಮಾರಿಗೆ ಬೇರ್ಪಡಬೇಕಿತ್ತು. ಆದರೆ ಕೆಲವು ತಾಂತ್ರಿಕ ಕಾರ್ಯಾಚರಣೆ ಪರಿಶೀಲನೆ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತಲೂ 10 ನಿಮಿಷ ತಡವಾಗಿ ಪಯಣ ಆರಂಭಿಸಿತು ಎಂದು ನಾಸಾ ಹೇಳಿದೆ.

ನೌಕೆಯು ಭಾರತೀಯ ಕಾಲಮಾನ ಮಧ್ಯಾಹ್ನ 3.01 ಗಂಟೆಗೆ ಅಮೆರಿಕದ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಸಮುದ್ರಕ್ಕೆ ಬೀಳಲಿದೆ. ಈ ಪಯಣವು ಸುಮಾರು 22 ಗಂಟೆ 30 ನಿಮಿಷ ಕಾಲ ಇರಲಿದೆ ಎಂದು ನಾಸಾ ತಿಳಿಸಿದೆ.

ನೌಕೆಯು ಈ ನಾಲ್ವರು ಗಗನಯಾತ್ರಿಗಳ ಜತೆಗೆ 250 ಕೆ.ಜಿಗೂ ಅಧಿಕ ತೂಕದ ಸರಕು, ಉಪಕರಣಗಳು ಮತ್ತು ಹಲವು ಪ್ರಯೋಗಗಳ ಮಾದರಿಗಳನ್ನು ತೆಗೆದುಕೊಂಡು ಹೋಗಿತ್ತು. ಜೂನ್‌ 25ರಂದು ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್‌ ನೌಕೆಯನ್ನು ಹೊತ್ತ ಫಾಲ್ಕನ್‌ 9 ರಾಕೆಟ್‌ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಆರಂಭಿಸಿತ್ತು.

1,600 ಡಿಗ್ರಿ ಸೆಲ್ಸಿಯಸ್‌ ತಾಪಮಾನ: ಅಂತಿಮ ಸಿದ್ಧತೆಗಳಲ್ಲಿ ಕ್ಯಾಪ್ಸುಲ್‌ನ ಟ್ರಂಕ್‌ ಬೇರ್ಪಡಿಸುವುದು ಮತ್ತು ವಾತಾವರಣದ ಪ್ರವೇಶಕ್ಕೆ ಮುಂಚಿತವಾಗಿ ಹೀಟ್‌ ಶೀಲ್ಡ್‌ ತೆರೆಯುವಂತೆ ಮಾಡುವುದು ಸೇರಿದೆ. ಈ ಪ್ರಕ್ರಿಯೆಯು ಬಾಹ್ಯಾಕಾಶ ನೌಕೆಯನ್ನು 1,600 ಡಿಗ್ರಿ ಸೆಲ್ಸಿಯಸ್‌ ತಾಪಮಾನಕ್ಕೆ ಒಡ್ಡಲಿದೆ. ನೌಕೆಯು ಭೂಮಿಗೆ ಎರಡು ಕಿ.ಮೀ ಎತ್ತರದಲ್ಲಿದ್ದ ವೇಳೆ ಪ್ರಮುಖ ಪ್ಯಾರಾಚೂಟ್‌ಗಳು ಓಪನ್‌ ಆಗಲಿವೆ.

ನಾಲ್ವರು ಗಗನಯಾತ್ರಿಗಳು: ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ, ಕಮಾಂಡರ್‌ ಅಮೆರಿಕದ ಪೆಗ್ಗಿ ವಿಟ್ಸನ್‌, ಮಿಷನ್‌ ಸ್ಪೆಷಲಿಸ್ಟ್‌ ಪೋಲೆಂಡ್‌ನ ಸ್ಲಾವೋಸ್ಟ್‌ ಉಜ್ನಾನ್ಸ್ಕಿ ವಿಸ್ನಿವ್ಸ್ಕಿ, ಹಂಗೇರಿಯ ಟಿಬೋರ್‌ ಕಾಪು. ಇಸ್ರೊ ಶುಭಾಂಶು ಸಿದ್ದತೆ ಮತ್ತು ಪ್ರಯಾಣಕ್ಕೆ ಸುಮಾರು 550 ಕೋಟಿ ರೂ. ವ್ಯಯಿಸಿದೆ.
ವಾರ ಕಾಲ ಕ್ವಾರಂಟೈನ್‌: ಭೂಮಿಗೆ ಮರಳಿದ ನಂತರ ಗಗನಯಾನಿಗಳನ್ನು ಒಂದು ವಾರ ಕಾಲ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಅವರ ಆರೋಗ್ಯದಲ್ಲಿ ಆಗಿರುವ ಬದಲಾವಣೆಗಳ ಮೇಲೆ ನಿಗಾ ಇರಿಸಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ನುರಿತ ವೈದ್ಯರ ಮೇಲ್ವಿಚಾರಣೆಯಲ್ಲಿ ಪುನರ್ವಸತಿ ಕಾರ್ಯಕ್ರಮಕ್ಕೆ ಒಳಪಡಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ