ಸಾಮಾನ್ಯವಾಗಿ ಮಹಿಳೆಯನ್ನು ಗುರುತಿಸುವುದು, ಅವಳ ತಂದೆಯ ಹೆಸರಿನಿಂದ, ಗಂಡನ ಹೆಸರಿನಿಂದ, ನಂತರ ಮಕ್ಕಳ ಸಾಧನೆಯಿಂದ, ಆದರೆ ತನ್ನ ಅಂತರಾಳದಲ್ಲಿ ಅವಳು ಸದಾ ತನ್ನತನವನ್ನು ಬಿಂಬಿಸಿಕೊಳ್ಳಲು ಇಷ್ಟಪಡುತ್ತಾಳೆ, ತನ್ನ ವೈಯಕ್ತಿಕ ಸಾಧನೆಯನ್ನು ಬಯಸುತ್ತಾಳೆ. ಅಂತಹ ಒಬ್ಬ ಮಹಿಳೆಯೇ ಬೆಂಗಳೂರಿನ ಸುನೀತಾ!

ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವಂತೆ ಈಕೆಯಲ್ಲಿ ಮೊದಲಿನಿಂದಲೂ ಉದ್ಯಮಿಯಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿದ್ದವು. ಚಿಕ್ಕಂದಿನಿಂದಲೂ ಷೇರು ವ್ಯಾಪಾರದಲ್ಲಿ ಆಸಕ್ತಿ ಇತ್ತು, ತಂದೆಯ ಸಹಕಾರದಿಂದ ಸ್ವಲ್ಪ ಮಟ್ಟಿಗೆ ಅದನ್ನು ನಡೆಸುತ್ತಲೂ ಇದ್ದರು. ಆದರೆ ಹೆಣ್ಣುಮಕ್ಕಳಿಗೆ ಮದುವೆ ಆಯಿತೆಂದರೆ ಅವರ ಜೀವನದ ದಿಕ್ಕೇ ಬದಲಾಗಿಬಿಡುತ್ತದೆ. ಮದುವೆಯಾದ ವರ್ಷಕ್ಕೆ ಮಗು ಕೈಗೆ ಬಂತು. ಆಗ ಇವರಿಗೆ ತಮ್ಮ ಮಗುವನ್ನು ಬೆಳೆಸುವ ಹಂತದಲ್ಲಿ ಮರಿಯಾ ಮಾಂಟೆಸರಿ ಅವರ ಪುಸ್ತಕ `ಅಬ್ಸಾರ್ಬೆಂಟ್‌ ಮೈಂಡ್‌’ ಸಿಕ್ಕಿತು. ಅದನ್ನು ಓದುವಾಗ ನಾನು ಮಾಂಟೆಸರಿ ಕೋರ್ಸ್‌ ಮಾಡಿದರೆ ನನ್ನ ಮಗನನ್ನು ಬೆಳೆಸಲು ಅನುಕೂಲ ಎನ್ನುವ ಭಾವ ಬಂದಿತು.

ಮನಸ್ಸಿನಲ್ಲಿ ಬಂದುದನ್ನು ಮಾಡುವ ಹಠ ಸುನೀತಾ ಅವರದು. ಕೋರ್ಸ್‌ಗೆ ಸೇರಿಕೊಂಡರು. ಅಲ್ಲಿ ಅವರು ಜೀವನವನ್ನು ನೋಡುವ ದೃಷ್ಟಿಯೇ ಬದಲಾಯಿತಂತೆ. ಅದು ನನ್ನ ಜೀವನದ ಮುಖ್ಯ ತಿರುವು ಎನ್ನಬಹುದು ಎನ್ನುತ್ತಾರೆ.

`ನನ್ನ ಮಗನನ್ನೂ ನೋಡಿಕೊಂಡು, ನನ್ನ ಅತ್ತೆಮನೆಯಲ್ಲಿ ಒಟ್ಟು ಕುಟುಂಬವಾದುದರಿಂದ ಅಲ್ಲಿಯೂ ಮನೆಯಲ್ಲಿ ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ನಾನು ಮನೆಯ ಕೆಲಸಗಳಿಗೂ ಗಮನ ನೀಡಬೇಕಾಗುತ್ತಿತ್ತು. ನನ್ನ ದಿನಚರಿ ಮುಂಜಾನೆ ನಾಲ್ಕೂವರೆಗೇ ಆರಂಭವಾಗುತ್ತಿತ್ತು. ಬಹಳ ಶ್ರಮದಾಯಕ ದಿನಗಳವು. ನನ್ನ ಕೋರ್ಸ್‌ ಬಗ್ಗೆ ನನಗೆಷ್ಟು  ಇಷ್ಟವಿತ್ತೆಂದರೆ ಯಾವುದೂ ಕಷ್ಟ ಎನಿಸಲೇ ಇಲ್ಲ. ಅದನ್ನು ಮುಗಿಸುವುದಷ್ಟೇ ನನ್ನ ಗುರಿಯಾಗಿತ್ತು,’ ಎನ್ನುತ್ತಾರೆ. ಕೋರ್ಸ್‌ ಮುಗಿಸಿ ನಂತರ ಬಹಳ ಕಷ್ಟಪಟ್ಟು ಹೇಗೋ ಹಣ ಹೊಂದಿಸಿ ಬಹಳ ಉತ್ಸಾಹದಿಂದಲೇ ಶಿಶುಧಾಮ ಶಾಲೆಯನ್ನು ಪ್ರಾರಂಭಿಸಿದರು. ಆದರೆ ಕುಟುಂಬದ ಒತ್ತಡಗಳ ಕಾರಣ ಇಷ್ಟವಿಲ್ಲದಿದ್ದರೂ ಅದನ್ನು ಮುಚ್ಚಬೇಕಾಯಿತು. ಸುನೀತಾ ಅವರು ಹಾಕಿದ ಹಣ ವ್ಯರ್ಥವಾಯಿತು. ಈ ರೀತಿ ಹೆಜ್ಜೆ ಹೆಜ್ಜೆಗೂ ಅಡಚಣೆಗಳು ಅವರಿಗೆ ಕಾದು ನಿಂತಿರುತ್ತಿದ್ದವು. ನಂತರ ಮಾಂಟೆಸರಿ ಎಲಿಮೆಂಟರಿ ತರಬೇತಿ ಪಡೆದು ಮತ್ತೊಂದು  ಶಾಲೆಯಲ್ಲಿ ಉದ್ಯೋಗ ಮಾಡಿದರು. ಅಲ್ಲಿ ಸ್ವಲ್ಪ ಮಟ್ಟಿಗೆ ಅವರ ವಿಚಾರಗಳಿಗೆ ಗೌರವ ದೊರಕಿತು.

ಬೇರೆ ಶಾಲೆಗಳಿಂದ ಉದ್ಯೋಗದ ಕರೆ ಬಂದರೂ ತಮ್ಮದೇ ಆದ ಶಾಲೆಯೊಂದನ್ನು ಮಾಡುವ ಕನಸು ಅವರದಾಗಿತ್ತು. ಕುಟುಂಬದ ಒತ್ತಡ, ಮಗನ ಜವಾಬ್ದಾರಿ, ಜೊತೆಯಲ್ಲಿ ತಾಯಿಯ ಅನಾರೋಗ್ಯ, ಮಗಳಾಗಿ ಅವರ ಋಣ ತೀರಿಸುವ ಭಾರ ಇವರದಾಗಿತ್ತು. ಹೀಗೆಯೇ ಆರು ವರ್ಷ ಕಳೆಯಿತು, ನಂತರ ಕುಟುಂಬದವರ ಸಹಭಾಗಿತ್ವದಲ್ಲಿ ಶಾಲೆಯೊಂದನ್ನು ಪ್ರಾರಂಭ ಮಾಡಿದರು. `ಶಾಲೆಯ ಕೆಲಸದ ಜೊತೆಗೆ ತಾಯಿಯ ಅನಾರೋಗ್ಯ ಗಮನಿಸಬೇಕಿತ್ತು. ಅವರಿಗೆ ನಡೆಯಲೂ ಆಗುತ್ತಿರಲಿಲ್ಲ. ಅವರನ್ನು ಮಗುವಿನಂತೆ ನೋಡಿಕೊಂಡೆ. ಆದರೆ ಅವರು ನನಗೆ ಮಾಡಿದ್ದನ್ನು ಮರೆಯಲುಂಟೆ? ನಾನು ಇಷ್ಟು ವಿದ್ಯಾವಂತಳಾಗಲು ಅವರೇ ಮುಖ್ಯ ಕಾರಣ. ನಮ್ಮ ತಾಯಿ ಯಾವಾಗಲೂ ಹೇಳುತ್ತಿದ್ದರು, ನಿನ್ನ ಹಣ, ಆಸ್ತಿಯನ್ನು ಯಾರಾರೂ ನಿನಗೆ ಮೋಸ ಮಾಡಿ ತೆಗೆದುಕೊಳ್ಳಬಹುದು. ಆದರೆ ನಿನ್ನ ವಿದ್ಯೆಯನ್ನು ಯಾರೂ ಕದಿಯಲಾರರು. ಅವರು ಚಿಕ್ಕಂದಿನಲ್ಲಿ ಹೇಳಿದ ಮಾತೇ ನನಗೆ ಈಗಲೂ ಪ್ರೇರಣೆಯಾಗಿದೆ,’ ಎನ್ನುವ ಸುನೀತಾ ಯಾವುದೇ ಮಗನಿಗೆ ಕಡಿಮೆ ಇಲ್ಲದಂತೆ ತಾಯಿಯನ್ನು ನೋಡಿಕೊಂಡರು. ಹೆಣ್ಣುಮಕ್ಕಳನ್ನು ಬೇಡವೆನ್ನುವವರು ನಿಜಕ್ಕೂ ದಡ್ಡರಷ್ಟೆ.

`ನನ್ನ ಶಾಲೆ ಸಿದ್ಧವಾಗುವತನಕ ಇತರ ಶಾಲೆಗಳಿಗೆ ಮಾಂಟೆಸರಿ ಮೆಟೀರಿಯಲ್ಸ್ ನ್ನು ಒದಗಿಸುತ್ತಿದ್ದೆವು. ಅವರಿಗೆ ಸಿಲಬಸ್‌ ಮಾಡಿಕೊಡುತ್ತಿದ್ದೆ. ತಂದೆಗೆ ಹೃದಯಾಘಾತ, ನನ್ನ ಒಡವೆಗಳನ್ನು ಮಾರಿ ನಾನೊಂದು ಫ್ಲಾಟ್‌ ತೆಗೆದುಕೊಂಡು ಅವರನ್ನು ನನ್ನ ಹತ್ತಿರವೇ ಇರಿಸಿಕೊಂಡೆ. ಈ ಒತ್ತಡಗಳ ಮಧ್ಯೆ ನನ್ನ ಮಗ ಸ್ಕೇಟಿಂಗ್‌ ಮತ್ತು ಬ್ಯಾಡ್ಮಿಂಟ್‌ನಲ್ಲಿ ರಾಷ್ಟ್ರೀಯ ಮತ್ತು ತಾಲ್ಲೂಕ್‌ ಲೆವೆಲ್‌ ನಲ್ಲಿದ್ದ. ಆದರೆ ನನಗೆ ಅವನನ್ನು ಸರಿಯಾಗಿ ಗಮನಿಸಿಕೊಳ್ಳಲಾಗದೆ ಅವು ಹಾಗೆಯೇ ಉಳಿದವು. ಅಂತೂ ನನ್ನ ಕನಸಿನ ಶಾಲೆ ಪ್ರಾರಂಭಾಯಿತು. ಆದರೆ ವಾರದಲ್ಲೆ ನನಗೆ ಡಿಸ್ಕ್ ಫ್ರ್ಯಾಕ್ಚರ್‌ ಆಗಿ ನಾನು ಸರ್ಜರಿಗೆ ಒಳಗಾಗಬೇಕಾಯಿತು.

`ಆದರೆ ನನ್ನ ಮನೋಬಲವಿರಬಹದು. ಬಹಳ ಬೇಗ ಚೇತರಿಸಿಕೊಂಡು ಶಾಲೆಗೆ ಹೋಗಲು ಆರಂಭಿಸಿದೆ. ಶಾಲೆ ಪ್ರವರ್ಧಮಾನಕ್ಕೆ ಬಂದಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅಲ್ಲಿಂದಲೂ ನಾನು ಹೊರಬರಬೇಕಾಯಿತು. ಆದರೆ ನಾನು ಛಲ ಬಿಡದ ತ್ರಿವಿಕ್ರಮನಂತೆ ಸ್ವಂತವಾಗಿ ಮತ್ತೊಂದು ಶಾಲೆ ಶುರು ಮಾಡಿದೆ. ಅದು ಯಶಸ್ಸನ್ನು ಪಡೆಯಿತು! ನಾನು ಗುರಿ ತಲುಪಲು ಸಾಧ್ಯವಾದ ಶಾಲೆಗೆ `ಏಮ್ಸ್ ಮಾಂಟೆಸರಿ’ ಎಂದು ನಾಮಕರಣ ಮಾಡಿದೆ. ನಾನು ನನ್ನ ಶಾಲೆಯಲ್ಲಿ ಕೆಲವು ಮಕ್ಕಳನ್ನು ಯಾವುದೇ ಶುಲ್ಕವಿಲ್ಲದೆ ಸೇರಿಸಿಕೊಳ್ಳುತ್ತೇನೆ.

`ಮೂರು ವರ್ಷ ನನ್ನ ಶಾಲೆಯಲ್ಲಿ ಅವರು ಓದುತ್ತಾರೆ. ಈ ಮಕ್ಕಳ ತಂದೆ ತಾಯಿಯರಿಗೆ ತಮ್ಮ ಮಕ್ಕಳನ್ನು ಓದಿಸಲು ಸಹಕಾರಿಯಾಗಲು ಅವರಿಗಿರುವ ಸೌಲಭ್ಯಗಳ ಬಗ್ಗೆ ಗೊತ್ತಿರುವುದಿಲ್ಲ. ನನ್ನ ಶಾಲೆ ಬಿಟ್ಟ ನಂತರ ಅವರು ಬೇರೆ ಶಾಲೆಯಲ್ಲಿ ಆರ್‌.ಟಿ.ಇ. ಸೀಟು ಪಡೆಯಲು ಅಗತ್ಯವಾದ ದಾಖಲೆಗಳನ್ನು (ಡಾಕ್ಯುಮೆಂಟ್ಸ್) ತಯಾರಿಸಲು ಸಹಕರಿಸುತ್ತೇನೆ. ಮುಂದೆಯೂ ಅವರು ಒಳ್ಳೆಯ ಶಿಕ್ಷಣ ಪಡೆಯಲೆನ್ನುವ ಆಸೆ ನನ್ನದು.

`ನನ್ನಲ್ಲಿ ಕೆಲಸ ಮಾಡುವ ಸ್ಟಾಫ್‌ ಅಂದರೆ ಸೆಕ್ಯೂರಿಟಿ, ಆಯಾ ಅವರಿಗೆಲ್ಲಾ ಬ್ಯಾಂಕಿನಲ್ಲಿ ಅವರದೊಂದು ಪ್ರತ್ಯೇಕ ಖಾತೆಯನ್ನು ತೆರೆದು, ಸಂಬಳದ ಒಂದಷ್ಟು ಹಣವನ್ನು ಅಲ್ಲಿ ಜಮಾ ಮಾಡುವಂತೆ ಪ್ರೇರೇಪಿಸುತ್ತೇನೆ. ಆದ್ದರಿಂದ ನನ್ನ ಶಾಲೆಯ ನಂತರ ಅವರಿಗೆ ಮಕ್ಕಳ ಫೀಸ್‌ ಕೊಡಲು ಅನುಕೂಲವಾಗುತ್ತದೆ.

`ಈಗ ಪ್ರಸ್ತುತ ಸರ್ಕಾರಿ ಶಾಲೆಯೊಂದಕ್ಕೆ ಪಾಠದ ರೂಪುರೇಷೆಗಳನ್ನು ಸಿದ್ಧ ಮಾಡಿಕೊಡುತ್ತಿದ್ದೇನೆ. ಅಲ್ಲಿಯ ಮಕ್ಕಳಿಗೆ ಪಾಠವನ್ನು ಕಲಿಸಲು ಉತ್ಸಾಹಿ ಸರ್ಕಾರೇತರ ಸಂಸ್ಥೆಯೊಂದು ಈ ಜವಾಬ್ದಾರಿಯನ್ನು ಹೊತ್ತಿದೆ. ನಮ್ಮ ದೇಶದ ಮಕ್ಕಳು ಬೇರೆಲ್ಲ ಅಭಿೃದ್ಧಿಶೀಲ ದೇಶದ ಮಕ್ಕಳಿಗಿಂತ ಬುದ್ಧಿವಂತರು ಮತ್ತು ಕಷ್ಟಪಡುವಂತವಹರು.

`ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯ. ಈ ನಿಟ್ಟಿನಲ್ಲಿ ನನ್ನಿಂದ ಸಾಧ್ಯವಾದ ಸೇವೆಯನ್ನು ಮಾಡುವ ಉದ್ದೇಶ ನನ್ನದು. ನಾನು ಜೀವನದಲ್ಲಿ ಎಷ್ಟೇ ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ ನನ್ನದೇ ಆದ ಶಾಲೆಯೊಂದನ್ನು ಪ್ರಾರಂಭ ಮಾಡುವ ನನ್ನ ಗುರಿಯನ್ನು ತಲುಪಿದ್ದೇನೆನ್ನುವ ಸಮಾಧಾನ ನನ್ನದು. ಆದರೆ ಈ ಎಲ್ಲವೂ ಸಾಧ್ಯವಾದದ್ದು ನನ್ನ ಪತಿ ಮತ್ತು ಮಗನ ಸಹಕಾರದಿಂದ ಎನ್ನುವುದನ್ನು ಮರೆಯಲಾಗದು,’ ಎಂದು ನಿಟ್ಟುಸಿರು ಬಿಡುತ್ತಾರೆ ಸುನೀತಾ.

– ಮಂಜುಳಾ ರಾಜ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ