ಸಾಧಾರಣ ರಂಗೋಲಿಯಿಂದ ಆರಂಭಿಸಿ ಚಿತ್ರಕಲೆಯಲ್ಲಿ ಅದ್ಭುತ ಪ್ರಾವೀಣ್ಯತೆ ಸಾಧಿಸಿದ ಕಲಾವಿದೆ ಹೇಮಾ ವಿನಾಯಕ್ ಪಾಟೀಲರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ.....?
`ಎಂಥಾ ಶ್ರೀಮಂತಾನಂತೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ.....' ಹಿನ್ನೆಲೆಯಲ್ಲಿ ಸುಶ್ರಾವ್ಯವಾದ ಹಾಡು, ಎದುರಿಗೆ ಚಕಚಕನೆ ಈ ಹಾಡಿನ ರಚನೆಕಾರ, ದಾಸವರೇಣ್ಯರಲ್ಲಿ ಪ್ರಮುಖರಾದ ಪ್ರಸನ್ನ ವೆಂಕಟೇಶ ದಾಸರ ಚಿತ್ರ ಥ್ರೆಡ್ ಪೇಂಟಿಂಗ್ ನಲ್ಲಿ ಮೂಡತೊಡಗಿದೆ.
ನೋಡ ನೋಡುತ್ತಿದ್ದಂತೆ ದಾಸರೇ ತನ್ಮಯದಿಂದ ಹಾಡುತ್ತಿರುವರೇನೋ ಎಂದು ಭ್ರಮಿಸುವಂಥ ಚಿತ್ರ! ಕಲಾ ರಸಿಕರಿಗೆ ಉಣಿಸಿದ್ದ ಕಲಾವಿದೆಯ ಮೊಗದಲ್ಲೊಂದು ತೃಪ್ತ ಭಾವ!
ಹಿಂದೆಯೇ `ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಾನ......' ಜಾನಪದ ಗೀತೆಗೆ ತಲೆದೂಗುತ್ತಿರುವಂತೆ ಬಳೆಗಳ ರಾಶಿ ಹೆಗಲಿಗೆ ಧರಿಸಿ ಹೆಣ್ಣುಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಬಳೆಗಾರನ ಚಿತ್ರ ಬಿಳೀ ಹಾಳೆಯಲ್ಲಿ ಮೂಡಿ ಸಭಿಕರ ಮನ ಗೆದ್ದಿತ್ತು. ಬೆಂಗಳೂರಿನ ನಯನ ಸಭಾಂಗಣ, ಕನ್ನಡ ಭವನದಲ್ಲಿ ಹೀಗೊಂದು ಕಲಾ ಪ್ರದರ್ಶನ!
ಕೆಲವೇ ನಿಮಿಷಗಳಲ್ಲಿ ದಾರದಿಂದ ಚಿತ್ರ ಬಿಡಿಸುವ ವಿಶೇಷ ಕೌಶಲ್ಯದಿಂದ ಕನ್ನಡ ತಾಯಿ ಭುವನೇಶ್ವರಿ, ಭಾರತಾಂಬೆಯ ದೇವರು ದೇವತೆಗಳು, ಪ್ರಕೃತಿ ಸೌಂದರ್ಯ ಇತ್ಯಾದಿ ಪ್ರಕಾರಗಳು ಹಾಡನ್ನು ಅಂದಿಸುತ್ತಲೇ ಚಿತ್ರಗಳನ್ನು ಬಿಡಿಸುವ ಅದ್ಭುತ ಕಲಾವಿದೆ ಹೇಮಾ ವಿನಾಯಕ ಪಾಟೀಲ್.
ತಾವು ಕಲಿತಿರುವ ವಿದ್ಯೆಯನ್ನು ಇತರರಿಗೂ ಕಲಿಸುತ್ತಾ, ಹುದುಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತ ಸಾಗಿರುವ ಕಲಾ ದರ್ಪಣ ಆರ್ಟ್ ರೆಫ್ಲೆಕ್ಟ್ಸ್ ಸಂಸ್ಥೆಯ ಸಂಸ್ಥಾಪಕಿ. ಇವರ ಕಲಾ ಸಾಧನೆಯ ಹಾದಿಯನ್ನು ಅವರ ಮಾತುಗಳಲ್ಲೇ ಕೇಳೋಣ.....

ಕಲೆ ಬೆಳೆದ ಪರಿ
ಚಿಕ್ಕಂದಿನಲ್ಲಿ ಗೌರಿ ಗಣೇಶನ ಹಬ್ಬಗಳಂದು ಮಣ್ಣಿನಲ್ಲಿ ಗಣೇಶನನ್ನು ಮಾಡುವುದು, ಇಟ್ಟಿಗೆಯ ಮೇಲೆ ಗೌರಿ, ಮದುವೆ ಮನೆಗಳಲ್ಲಿ ಅಲಂಕಾರಿಕವಾಗಿ ದೊಡ್ಡ ದೊಡ್ಡ ರಂಗೋಲಿಗಳನ್ನು ಬಿಡಿಸುತ್ತಿದ್ದೆ. ಬಾಲ್ಯದಲ್ಲಿ ಚಿತ್ರಕಲೆಯನ್ನು ಕಲಿಯುವ ಆಸಕ್ತಿ ಇತ್ತು. ಇದರಲ್ಲಿ ಹೇಳಿಕೊಳ್ಳುವಂಥ ಅವಕಾಶವಿಲ್ಲ, ಪ್ರಯೋಜನವಿಲ್ಲ, ಎಂದು ಅನೇಕರು ತಣ್ಣೀರೆರಚುವ ಮಾತುಗಳಾಡಿದ ಮಾತುಗಳಿಂದ ಅದು ಕಮರಿ ಹೋಗಿತ್ತು.
ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೆ ಮನೆ ಮುಂದೆ ಹಾಕುತ್ತಿದ್ದ ರಂಗೋಲಿ, ಭಾರತ ಮಾತೆ, ಕನ್ನಡ ತಾಯಿ ಭುವನೇಶ್ವರಿ ಇತ್ಯಾದಿ ನಾನು ಬಿಡುಸುತ್ತಿದ್ದ ಚಿತ್ರಗಳನ್ನು ನೋಡಿ ನೆರೆಹೊರೆಯವರು ತಮ್ಮ ಮಕ್ಕಳಿಗೂ ಡ್ರಾಯಿಂಗ್ ಕಲಿಸಿ ಎಂಬ ಕೋರಿಕೆ ಇಟ್ಟಾಗ ಹೊಸ ಉತ್ಸಾಹ ಮೂಡಿತ್ತು.

ಗುರುಗಳ ಪ್ರೋತ್ಸಾಹ
ಸಾಂಪ್ರದಾಯಿಕವಾಗಿ ಕಲಿತಿರದ ಕಾರಣ, ಒಂದಷ್ಟು ದಿನ ಯಾರ ಬಳಿಯಲ್ಲಾದರೂ ಕಲಿಯುವುದು ಎಂದು ನಿರ್ಧರಿಸಿ, ಗುರುವಿಗಾಗಿ ಹುಡುಕಾಟ ನಡೆಸಿದೆ. ಆ ಸಮಯದಲ್ಲಿ ನನ್ನ ಪೆನ್ಸಿಲ್ ಸ್ಕೆಚ್ ಗಳನ್ನು ನೋಡಿದ ಹಿರಿಯ ಕಲಾವಿದರಾದ, ರವೀಂದ್ರ ಎಸ್ ಹಾಲಿಜೋಳ, `ನೀವು ಎಕ್ಸಿಬಿಷನ್ ವರೆಗೆ ಹೋಗಬಹುದು, ಚೆನ್ನಾಗಿ ಮಾಡಿದ್ದೀರಿ,' ಎಂದು ಮೆಚ್ಚುಗೆಯಿಂದ ಹೇಳಿದರು.
ಅವರು ಹಾಗೆ ಹೇಳಿದಾಗ, ಎಕ್ಸಿಬಿಷನ್ ಎಂದರೇನು ಎಂಬ ಅರಿವು ಸಹ ಇರಲಿಲ್ಲ. ಆದರೆ ಏನಾದರೂ ಸಾಧನೆ ಮಾಡಬೇಕು ಎಂಬ ಸ್ಛೂರ್ತಿ ಹುಟ್ಟಿತು. ಮಿತ್ರರೊಂದಿಗೆ ಚಿತ್ರಸಂತೆಗೆ ಒಮ್ಮೆ ಹೋಗಿ ಬನ್ನಿ. ನಿಮಗೊಂದು ಐಡಿಯಾ ಸಿಗುತ್ತದೆ ಎಂದು ಸಲಹೆ ನೀಡಿದರು. ಅಲ್ಲಿಗೆ ಭೇಟಿ ನೀಡಿದೆ. ಅಂದು ಅಲ್ಲಿ ನಡೆಯಲಿದ್ದ ಪೇಂಟಿಂಗ್ ಕಾಂಪಿಟಿಷನ್ ಬಗ್ಗೆ ತಿಳಿದು ನಾನೂ ಭಾಗವಹಿಸಿ, ಬಹುಮಾನ ಗಳಿಸಿದೆ.





