ಹೆಚ್ಚಿನ ವ್ರತಗಳು ಗಂಡ, ಮಗನ ದೀರ್ಘಾಯುಷ್ಯಕ್ಕಾಗಿಯೂ, ಧನ ಸಂಪತ್ತು ಅಥವಾ ಆರೋಗ್ಯ ಕರುಣಿಸಬೇಕೆಂಬ ಕಾರಣಕ್ಕಾಗಿಯೂ ಆಚರಿಸಲ್ಪಡುತ್ತವೆ. ಕೆಲವೊಂದು ವ್ರತಗಳು ಸ್ವಯಂಪ್ರೇರಣೆಯಿಂದಲೋ, ಮತ್ತೆ ಕೆಲವೊಂದು ವ್ರತಗಳು ಸಮಾಜದ ಭಯದಿಂದ! ಅವನ್ನು ಆಚರಿಸದ ಮಹಿಳೆ ಸಮಾಜದ ಕೋಪಕ್ಕೆ ತುತ್ತಾಗಬೇಕಾಗುತ್ತದೆ.

ಅಂಜಲಿಯ ಮದುವೆಯಾಗಿ 6 ತಿಂಗಳಷ್ಟೇ ಆಗಿತ್ತು. ಅಷ್ಟರಲ್ಲಾಗಲೇ ಅವಳು ಮುದುಡಿದ ತಾವರೆಯಂತಾಗಿದ್ದಳು. ಅವಳ ಮುಖದ ಕಾಂತಿ ಹಾಗೂ ನಗು ಹೊರಟು ಹೋಗಿತ್ತು. ಆಕೆ ಮದುವೆಯಾಗಿ ಬಂದಾಗಿನಿಂದಲೂ ಅವಳ ಸ್ವಾತಂತ್ರ್ಯದ ಮೇಲೆಯೇ ಅಂಕುಶ ಹಾಕಲಾಗಿತ್ತು. ಅವಳು ಮದುವೆಗೆ ಮುಂಚೆ ಹೇಗೆ ಇರುತ್ತಿದ್ದಳೊ, ಹಾಗೆ ಇರಲು ಅವಳಿಗೆ ಅವಕಾಶ ಕೊಡುತ್ತಿರಲಿಲ್ಲ. ಅವಳ ಮಾತುಕತೆ, ಉಡುಗೆ ತೊಡುಗೆ ಎಲ್ಲದರ ಮೇಲೂ ಅತ್ತೆಮನೆಯಲ್ಲಿ ನಿರ್ಬಂಧ ಹೇರಲಾಗಿತ್ತು.

ಅಂಜಲಿಯ ಮದುವೆಯಾಗಿ 1 ತಿಂಗಳ ತನಕ ಎಲ್ಲ ಸರಿಯಾಗಿತ್ತು. ಹನಿಮೂನ್‌, ಸಂಬಂಧಿಕರ ಮನೆಗೆ ಹೋಗುವುದು ಬರುವುದರಲ್ಲಿ 1 ತಿಂಗಳು ಹೋಗಿದ್ದೇ ಗೊತ್ತಾಗಲಿಲ್ಲ. ಆ ಬಳಿಕ ನಿರ್ಬಂಧಗಳು ಒಂದೊಂದಾಗಿ ಹೇರಲ್ಪಡಲು ಶುರುವಾದವು. ಅಂತಹ ನಿರ್ಬಂಧಗಳನ್ನು ಅವಳು ಮುರಿದದ್ದೇ ಅವಳಿಗೆ ಮುಳುವಾಯಿತು. ಇಂದು ಆ ದೇವರ ವ್ರತ, ನಾಳೆ ಇನ್ಯಾವುದೊ ದೇವರ ಪೂಜೆ. ಗಂಡನ ದೀರ್ಘಾಯುಷ್ಯಕ್ಕಾಗಿ ಒಂದು ವ್ರತ ಮಾಡಿದರೆ, ಸ್ತ್ರೀ ಗೌರವ ಹೆಚ್ಚಿಸಿಕೊಳ್ಳಲು ಮತ್ತೊಂದು ವ್ರತ. ಪ್ರತಿವಾರ ಒಂದೆರಡು ವ್ರತಗಳಾದರೂ ಬರುತ್ತಲೇ ಇದ್ದವು.

ರೀತಿ ನೀತಿಗಳು ಅವಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದ್ದವು. ಜೀನ್ಸ್ ಧರಿಸಬಾರದು ಎನ್ನುವುದೊಂದು ನಿರ್ಬಂಧ. ಇದಕ್ಕೆ ಅವರು ಕೊಟ್ಟ ಕಾರಣ ನೀನೀಗ ಮದುವೆಯಾಗಿದ್ದೀಯಾ, ಸೀರೆ ಉಡು, ಕುಂಕುಮ ಹಚ್ಚಿಕೊ, ತಲೆಯ ಮೇಲೆ ಸೆರಗು ಹೊದ್ದುಕೊ. ಇವೆಲ್ಲ ನಿರ್ಬಂಧಗಳು ಅವಳ ಹಕ್ಕನ್ನು ಮೊಟಕುಗೊಳಿಸುತ್ತ ಹೋದವು. ಅಂದಹಾಗೆ ವ್ರತ, ಹಬ್ಬಗಳು, ರೀತಿನೀತಿಗಳು ಮರ್ಯಾದೆ, ಸಂಸಾರ ಮುಂತಾದ ಸ್ತ್ರೀಯರ ಮೇಲೆ ಕಡಿವಾಣ ಹಾಕುವ ಪ್ರಮುಖ ಅಸ್ತ್ರಗಳಾಗಿವೆ. ಅವುಗಳಲ್ಲಿ ಸಿಲುಕಿ ಅವಳ ಸ್ವಾತಂತ್ರ್ಯ ಹರಣವಾಗುತ್ತದೆ. ಮದುವೆಯಾಗಿ 10 ದಿನ, 1 ತಿಂಗಳು, ಆ ಬಳಿಕ 1 ವರ್ಷ ಪೂರ್ತಿಗೊಂಡ ಪ್ರಯುಕ್ತ ಆಕೆ ಒಂದಿಲ್ಲೊಂದು ವ್ರತ ಉಪವಾಸ ಮಾಡಬೇಕಾಗುತ್ತದೆ. ಅವಳ ಸ್ಥಿತಿ ಜೈಲಿನ ಕೈದಿಯಂತಾಗುತ್ತದೆ.

ನಿರ್ಬಂಧದಲ್ಲಿ ಮಹಿಳೆಯರು

ಇವೆಲ್ಲವುಗಳಿಂದ ಅವಳಿಗೆ ಮಾತನಾಡಲು ಖುಷಿಯಿಂದ ಕಾಲ ಕಳೆಯಲು ಅಷ್ಟೇ ಏಕೆ ಊಟತಿಂಡಿಯ ಮೇಲೂ ನಿರ್ಬಂಧಗಳು ಹಾಕಲ್ಪಡುತ್ತವೆ. ಅವಳಿಗೆ ತನ್ನ ಅಸ್ತಿತ್ವವೇ ಇಲ್ಲ ಎಂದು ಅನಿಸತೊಡಗುತ್ತದೆ. ಬಹಳಷ್ಟು ಕುಟುಂಬಗಳು ಮದುವೆಯಾಗಿ ಬಂದ ಹುಡುಗಿ ಎಷ್ಚೇ ಆಧುನಿಕ ಮನೋಭಾವದಳಾಗಿದ್ದರೂ ಆಕೆಗೆ ಸೀರೆ ಉಡಲು ಒತ್ತಡ ಹೇರಲಾಗುತ್ತದೆ. ಇದೆಲ್ಲದರಿಂದ ಆಕೆಯ ಪ್ರತಿಭೆ ಹಾಗೂ ಆಸಕ್ತಿಗಳು ಕ್ರಮೇಣ ದೂರವಾಗುತ್ತ ಹೋಗುತ್ತವೆ. ಹಲವು ನಿರ್ಬಂಧಗಳ ಸಂಕೋಲೆಯಲ್ಲಿ ಬಂಧಿಸಲ್ಪಟ್ಟ ಮಹಿಳೆ ಅದಕ್ಕೆ ಎಷ್ಟು ಅಡಿಕ್ಟ್ ಆಗಿಬಿಡುತ್ತಾಳೆಂದರೆ ಅವಳಿಗೆ ಏನನ್ನಾದರೂ ಮಾಡಬೇಕೆಂಬ ಹುಮ್ಮಸ್ಸು ಹೊರಟುಹೋಗುತ್ತದೆ. ಹಿಂದೂ ಸಮಾಜ ಮೊದಲಿನಿಂದಲೂ ಪುರುಷ ಪ್ರಧಾನವಾಗಿದೆ. ಯಾವುದಾದರೊಂದು ಕಾರಣದಿಂದ ಪುರುಷ ತನ್ನನ್ನು ತಾನು ಪರಂಪರೆ, ರೀತಿನೀತಿ, ವ್ರತ ಉಪಾಸಗಳಿಂದ ದೂರ ಇಟ್ಟುಕೊಳ್ಳುತ್ತಾನೆ. ಅದೊಂದು ಕಾಲವಿತ್ತು, ಆಗ ಪುರುಷರೆಲ್ಲರೂ ಜುಬ್ಬಾ ಪಂಚೆ ಧರಿಸುತ್ತಿದ್ದರು. ಆದರೆ ಈಗ ಎಲ್ಲರೂ ಪ್ಯಾಂಟ್‌ ಶರ್ಟ್‌ ಧರಿಸುತ್ತಾರೆ. ಪುರುಷ ಹೊರಗೆ ಹೋಗಿ ದುಡಿದು ಬರುತ್ತಾನೆ ಎಂದು ಅದಕ್ಕೆ ಕಾರಣ ಕೊಡಲಾಗುತ್ತದೆ. ಅವರ ಪ್ರಕಾರ, ಮೊದಲ ಸ್ವಾತಂತ್ರ್ಯ ಹೊರಗೆ ಹೋಗಿ ಹಣ ಗಳಿಸುವುದರಿಂದ ದೊರೆಯುತ್ತದೆ. ಅದು ಪುರುಷರಿಗೆ ದೊರೆತಿದೆ, ಮಹಿಳೆ ಅದಕ್ಕೆ ಹಕ್ಕುದಾರಳಲ್ಲ ಎಂದು ಭಾವಿಸಲಾಗುತ್ತದೆ.

ಇದೇ ಸರಣಿ ವಿಸ್ತರಿಸುತ್ತ ಹೋಗಿ ಎಲ್ಲ ಕ್ಷೇತ್ರದಲ್ಲೂ ಪುರುಷರ ಸ್ವಾತಂತ್ರ್ಯ ವ್ಯಾಪ್ತಿ ಹೆಚ್ಚುತ್ತ ಹೋಗುತ್ತದೆ. ಅದೇ ಮಹಿಳೆಯನ್ನು ಆರ್ಥಿಕವಾಗಿ ಸ್ವತಂತ್ರಳಾಗಲು ಮದುವೆಯ ಬಳಿಕ ಹೊರಗೆ ಹೋಗಲು ಅವಕಾಶ ಕೊಡುವುದಿಲ್ಲ. ಅವಳಿಗೆ ಮನೆ ಕೆಲಸ ನೋಡಿಕೊಳ್ಳಲು, ಮಕ್ಕಳು ಹಾಗೂ ಮನೆಯ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿರುತ್ತದೆ. ಹಗಲು ರಾತ್ರಿ ಮನೆಯಲ್ಲಿದ್ದರೂ ಕೂಡ ಅವಳನ್ನು ನಿರುದ್ಯೋಗಿಗಳ ಲೆಕ್ಕದಲ್ಲಿ ಪರಿಗಣಿಸಲಾಗುತ್ತದೆ. ಇದೇ ಮಾನಸಿಕತೆಯಿಂದಾಗಿ ಇಂದು ಬಹಳಷ್ಟು ಮಹಿಳೆಯರು ಮನೆ ನೋಡಿಕೊಳ್ಳುವ ಜವಾಬ್ದಾರಿಯನ್ನೇ ನಿಭಾಯಿಸಬೇಕಾಗುತ್ತದೆ.

ಅರ್ಹತೆಗಿಲ್ಲ ಬೆಲೆ

ಗಳಿಸಲು ಮತ್ತು ಮನೆ ನಡೆಸಿಕೊಂಡು ಹೋಗಲು ಹಣ ಬೇಕಿರುವ ಕಾರಣದಿಂದ ಪುರುಷರು ತಮ್ಮ ಇಚ್ಛೆಗೆ ತಕ್ಕಂತೆ ಕೆಲಸ ಮಾಡಲು ಸ್ವತಂತ್ರರಾಗಿರುತ್ತಾರೆ. ಆದರೆ ಮಹಿಳೆಯರು ಎಲ್ಲ ಕೆಲಸ ಕಾರ್ಯಗಳಿಗಾಗಿ ಗಂಡಸರ ಮೇಲೆಯೇ ಅವಲಂಬಿತರಾಗಿರಬೇಕಾಗುತ್ತದೆ. ಪುರುಷರ ಮೇಲೆ ಅವಲಂಬಿತರಾಗಿರುವುದೇ ಅವಳನ್ನು ದುರ್ಬಲಳನ್ನಾಗಿಸುತ್ತದೆ. ಪುರುಷವಾದಿ ಯೋಚನೆಯನ್ನು ಮಹಿಳೆಯರ ಮೇಲೆ ಹೇರಲು ಪುರುಷರಿಗೆ ಇದೊಂದು ಒಳ್ಳೆಯ ವಿಧಾನವಾಗಿದೆ. ಮಹಿಳೆಯ ಅರ್ಹತೆಯನ್ನು ಆಕೆ ಮಾಡಿದ ಊಟ ತಿಂಡಿಗಳಿಂದ, ಮನೆಯ ಸ್ವಚ್ಛತಾ ಕೆಲಸಗಳಿಂದ ಅಳೆಯಲಾಗುತ್ತದೆ. ಅವುಗಳಲ್ಲಿ ಯಾವುದೇ ತಪ್ಪು ಆಗಬಾರದು. ಇಲ್ಲದಿದ್ದರೆ ಆಕೆ ಅನೇಕ ಕಟು ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

ವೈಷ್ಣವಿ ಮದುವೆಯಾಗುವ ಹೊತ್ತಿಗೆ ಪದವಿ ಪೂರೈಸಿದ್ದಳು. ಅದರ ಜೊತೆ ಜೊತೆಗೆ ಆಕೆ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಸಹ ಪೂರೈಸಿದ್ದಳು. ಆದರೆ ಮದುವೆಯ ಬಳಿಕ ಆಕೆಯ ಓದಿಗೆ ಯಾವುದೇ ಬೆಲೆ ಬರಲಿಲ್ಲ. ಬುಟಿಕ್‌ ತೆರೆಯಬೇಕೆನ್ನುವ ಅವಳ ಕನಸು ಕೂಡ ನನಸಾಗಲಿಲ್ಲ. ಏಕೆಂದರೆ ಆಕೆಯ ಗಂಡ ಅದಕ್ಕೆಲ್ಲ ನಿರ್ಬಂಧ ಹೇರಿದ್ದ. `ಬುಟಿಕ್‌ ತೆರೆದು ಏನು ಮಾಡುವೆ? ಹಣ ಗಳಿಸುವ ಅಪೇಕ್ಷೆ ನಿನಗಿದ್ದರೆ ಅದನ್ನು ನಾನೇ ಮಾಡುತ್ತಿರುವೆ. ನಮ್ಮ ಕುಟುಂಬದಲ್ಲಿ ಮಹಿಳೆಯರಾರೂ ಕೆಲಸ ಮಾಡುವುದಿಲ್ಲ.’

ಅಂದಹಾಗೆ ಪುರುಷವಾದಿ ಅಹಂಗೆ ದಬ್ಬಲ್ಪಟ್ಟಿರುವ ಭಾರತೀಯ ಸಮಾಜದಲ್ಲಿ ಸ್ತ್ರೀಯ ಅರ್ಹತೆಗೆ ಯಾವುದೇ ಬೆಲೆಯಿಲ್ಲ.

ಸ್ತ್ರೀ ಈವರೆಗಿನ ತನ್ನ ಜೀವನದಲ್ಲಿ ಏನೇನು ಸಾಧಿಸಿದ್ದಾಳೆ, ಮುಂದೆ ಏನೇನು ಸಾಧನೆ ಮಾಡಲು ನಿರ್ಧರಿಸಿದ್ದಾಳೆ ಎಂಬುದು ಗಣನೆಗೆ ಬರುವುದೇ ಇಲ್ಲ. ಪುರುಷ ಕೇವಲ ಮಾತನಾಡುವುದರ ಮೂಲಕ ಶಭಾಷ್‌ಗಿರಿ ಪಡೆದುಕೊಳ್ಳುತ್ತಾನೆ. ಹಣ ಕೊಡುವುದಷ್ಟೇ ತನ್ನ ಅಸ್ತಿತ್ವದ ನಿರ್ವಹಣೆ ಎಂದು ಭಾವಿಸುತ್ತಾನೆ.

ಮದುವೆಗೂ ಮುಂಚೆ ನಗುನಗುತ್ತ ಓಡಾಡುತ್ತಿದ್ದ, ಕೀಟಲೆಯಲ್ಲಿ ತಲ್ಲೀನಳಾಗಿದ್ದ ಹುಡುಗಿ ಮದುವೆಯಾಗುತ್ತಿದ್ದಂತೆ ಆಕೆಯ ಪ್ರಪಂಚವೇ ಬದಲಾಗಿ ಬಿಡುತ್ತದೆ. ಅವಳ ದಿನಚರ್ಯೆ ಹೇಗಾಗಿಬಿಡುತ್ತದೆ  ಎಂದರೆ, ಅವಳಿಗೆ ನೆಮ್ಮದಿಯಿಂದ ಕುಳಿತುಕೊಳ್ಳಲು ಕೂಡ ಆಗುವುದಿಲ್ಲ. ಆಗಾಗ ಬರುವ ವ್ರತ ಉಪವಾಸಗಳು ಆಕೆಯ ನೆಮ್ಮದಿಯನ್ನು ಭಂಗ ಮಾಡುತ್ತವೆ. ಒಮ್ಮೊಮ್ಮೆ ಆರೋಗ್ಯವನ್ನು ಏರುಪೇರುಗೊಳಿಸುತ್ತವೆ.

ವ್ರತದ ಹೆಸರಿನಲ್ಲಿ ಹಿಂಸೆ

ಸ್ನೇಹಾ 3 ತಿಂಗಳ ಗರ್ಭಿಣಿ. ಒಂದು ದಿನ ಆಕೆಯ ಹಿರಿಯ ಓರಗಿತ್ತಿ, “ನಾಡಿದ್ದು ವ್ರತಾಚರಣೆ ಮಾಡಬೇಕು. ಅಂದು ನೀನು ಇಡೀ ದಿನ ಉಪವಾಸ ಇರಬೇಕು. ನೀರೂ ಸಹ ಕುಡಿಯಬಾರದು. ಈ ವ್ರತವನ್ನು ಪತಿಯ ದೀರ್ಘಾಯುಷ್ಯಕ್ಕಾಗಿ ಕೈಗೊಳ್ಳಲಾಗುತ್ತದೆ,” ಎಂದಳು.

ಆ ಮಾತು ಕೇಳಿ ಸ್ನೇಹಾ, “ಇದೇನಕ್ಕಾ, ನೀನೇ ಗೊತ್ತಿದ್ದರು ಹೀಗೆ ಹೇಳಿದರೆ ಹೇಗೆ?” ಎಂದಳು. ಆದರೆ ಕುಟುಂಬದವರ ಒತ್ತಡದ ಮೇರೆಗೆ ಆಕೆ ಆ ವ್ರತ ಮಾಡಲೇಬೇಕಾಯಿತು. ಅದರ ಪರಿಸ್ಥಿತಿ ಏನಾಯಿತೆಂದರೆ ಸಂಜೆ ಹೊತ್ತಿಗೆ ಉಪವಾಸದಿಂದ ನಿತ್ರಾಣಳಾದ ಅವಳನ್ನು ಆಸ್ಪತ್ರೆಗೆ ಸೇರಿಸಬೇಕಾದ ಪರಿಸ್ಥಿತಿ ಎದುರಾಯಿತು.

ಜನ್ಮಾಷ್ಟಮಿಯ ವ್ರತದ ಉದಾಹರಣೆಯನ್ನೇ ತಗೊಳ್ಳಿ. ಅದನ್ನು ಕೃಷ್ಣನ ಹುಟ್ಟಿದ ಹಬ್ಬದ ಪ್ರಯುಕ್ತ ಆಚರಿಸಲಾಗುತ್ತದೆ. ಯಾರದ್ದೋ ಹುಟ್ಟುಹಬ್ಬದ ಪ್ರಯುಕ್ತ ಇನ್ಯಾರೋ ಉಪವಾಸ ಮಾಡುವ ಔಚಿತ್ಯವಾದರೂ ಏನು? ಮನೆಯಲ್ಲಿನ ಎಲ್ಲರೂ ಸೇರಿ ಆ ವ್ರತ ಮಾಡುತ್ತಿದ್ದರೆ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಅದರ ದುಷ್ಪರಿಣಾಮವನ್ನು ಮಹಿಳೆಯೊಬ್ಬಳೇ ಅನುಭವಿಸಬೇಕಾಗುತ್ತದೆ. ಅವಳು ತನ್ನ ವ್ರತ ಉಪವಾಸದ ಜೊತೆಗೆ ವಿಶೇಷ ಬಗೆಯ ಆಹಾರಗಳನ್ನು ತಯಾರಿಸಬೇಕಾಗುತ್ತದೆ. ಇದರಿಂದ ಆಕೆಯ ಕೆಲಸದ ಒತ್ತಡ ಹೆಚ್ಚುತ್ತದೆ.

ಕೆಲವೊಂದು ಬಗೆಯ ವ್ರತಗಳಂತೂ ಮಹಿಳೆಯರಿಗೆ ಭಯ ಹುಟ್ಟಿಸುತ್ತವೆ. ಹೇಗಾದರೂ ಆ ವ್ರತ ಚೆನ್ನಾಗಿ ನೆರವೇರಿದರೆ ಸಾಕು ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿರುತ್ತಾಳೆ. ಇಂತಹ ವ್ರತ ಉಪವಾಸ ಮಾಡಿದ ಮಹಿಳೆಯರು ತಲೆನೋವು ಹಾಗೂ ನಿಶ್ಶಕ್ತಿಯಿಂದಾಗಿ ಹಾಸಿಗೆ ಹಿಡಿಯುತ್ತಾರೆ. ಆಗಲೂ ಸಹ ಆಕೆ ವಿಶ್ರಾಂತಿ ಪಡೆದು ಮನೆಯ ಕೆಲಸ ಕಾರ್ಯಗಳಿಗೆ ಎದ್ದು ಕುಳಿತುಕೊಳ್ಳಬೇಕಾಗುತ್ತದೆ.

ಇಬ್ಬಗೆಯ ಜವಾಬ್ದಾರಿ

ಹಬ್ಬಗಳಲ್ಲಿ ಕೆಲವು ವಿಶಿಷ್ಟ ತಿಂಡಿಗಳನ್ನು ತಯಾರಿಸುವುದನ್ನು ಅನಿವಾರ್ಯಗೊಳಿಸಲಾಗಿದೆ. ಅವುಗಳ ಹೊರತಾಗಿ ಹಬ್ಬದ ಆಚರಣೆ ಅಪೂರ್ಣ ಎಂದೇ ಭಾವಿಸಲಾಗುತ್ತದೆ. ದೀಪಾವಳಿ ಯುಗಾದಿಗೆ ವಿಶೇಷ ಸಿಹಿತಿಂಡಿಗಳು, ಗಣೇಶನ ಹಬ್ಬಕ್ಕೆ ಬೇರೆ ಬೇರೆ ತೆರನಾದ ತಿಂಡಿಗಳು ಸಂಕ್ರಾಂತಿಗೆ ವಿಶೇಷ ಬಗೆಯ ರೊಟ್ಟಿಗಳನ್ನು ತಯಾರಿಸಲಾಗುತ್ತದೆ. ಈ ಎಲ್ಲ ವಿಶೇಷ ಅಡುಗೆಯ ಜವಾಬ್ದಾರಿ ಸ್ತ್ರೀಯರ ಮೇಲೆಯೇ ಬೀಳುತ್ತದೆ.

ಇದೆಲ್ಲದರ ಹೊರತಾಗಿ ಪ್ರತಿಯೊಂದು ಹಬ್ಬದ ಪೂರ್ವ ತಯಾರಿ ಎಂಬಂತೆ ಸ್ವಚ್ಛತೆಯ ಕೆಲಸವನ್ನು ಕೂಡ ಮಹಿಳೆಯರೇ ನಿರ್ವಹಿಸಬೇಕಾಗುತ್ತದೆ. ಮನೆಯಲ್ಲಿ ಎಲ್ಲರೂ ಇರುತ್ತಾರೆ. ಆದರೆ ಅದನ್ನು ವ್ಯವಸ್ಥಿತವಾಗಿಡಲು ಮಹಿಳೆಯರು ಮಾತ್ರ ಹೆಣಗಾಡಬೇಕಾಗುತ್ತದೆ.

ಸಾಮಾಜಿಕ ಜೇಡರ ಬಲೆ!

ವ್ರತ ಹಬ್ಬಗಳ ಸಂದರ್ಭದ ಹೊರತು ಶ್ರಾದ್ಧ ಅಥವಾ ಪಿತೃಪಕ್ಷದ ಸಂದರ್ಭದಲ್ಲಂತೂ ಆಕೆಗೆ ಉಸಿರಾಡಲು ಸಹ ಪುರಸತ್ತು ಇರುವುದಿಲ್ಲ. ಈ ಸಂದರ್ಭದಲ್ಲಿ ಪುರೋಹಿತರಿಗೆ, ಬ್ರಾಹ್ಮಣರಿಗೆ ಉಣಬಡಿಸಲು ಬಗೆಬಗೆಯ ಅಡುಗೆ ಸಿದ್ಧಪಡಿಸಬೇಕಾಗುತ್ತದೆ. ಅದೆಷ್ಟೋ ಸಂಬಂಧಿಕರನ್ನು ಆಹ್ವಾನಿಸಬೇಕಾಗುತ್ತದೆ.

ವ್ಯಕ್ತಿಯೊಬ್ಬರು ನಿಧನರಾದಾಗ ಕೆಲವು ವಿಶೇಷ ದಿನಗಳಂದು ತಿಥಿ ಕಾರ್ಯಕ್ರಮ ನಡೆಸಲಾಗುತ್ತದೆ. ಎಷ್ಟೋ ಮನೆಗಳಲ್ಲಿ ಹೊರಗಿನಿಂದ ಅಡುಗೆ ತರಿಸಿ ಬಂದ ಜನರಿಗೆ ಊಟ ಹಾಕಿಸುವುದು ನಿಷೇಧ. ಇಲ್ಲಿ ಮಹಿಳೆಯರೇ ಎಲ್ಲ ಅಡುಗೆ ಸಿದ್ಧ ಮಾಡುವುದು ಅನಿವಾರ್ಯ. ಇದರಲ್ಲಿ ಪುರುಷರಾರೂ ನೆರವು ನೀಡುವುದಿಲ್ಲ.

ಮಹಿಳೆಯರ ಜೀವನದ ಸತ್ಯ ಇದೇ ಆಗಿದೆ. ಅವರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಇಲ್ಲದ ಕಾರಣದಿಂದ ಪುರುಷ ಪ್ರಧಾನ ಸಮಾಜ ಹೆಣೆದ ಬಲೆಯಲ್ಲಿ ಸಿಲುಕಿಕೊಂಡು ತಮ್ಮ ಜೀವ ಸವೆಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ